Tipu Jayanti: ಬೆಂಗಳೂರಿನಲ್ಲಿ ಟಿಪ್ಪು ಜಯಂತಿ ವೇಳೆ ಖಡ್ಗ ಝಳಪಿಸಿದ ಕಾಂಗ್ರೆಸ್ ನಾಯಕರು
ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಟಿಪ್ಪು ಜಯಂತಿ ವೇಳೆ ಖಡ್ಗ ಹಿಡಿದು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಬೆಂಗಳೂರು: ಬೆಂಗಳೂರಿನಲ್ಲಿ ಗುರುವಾರ ಟಿಪ್ಪು ಜಯಂತಿ (Tipu Jayanti) ಆಚರಣೆ ವೇಳೆ ಹಲವು ಸ್ಥಳೀಯ ಕಾಂಗ್ರೆಸ್ ಮುಖಂಡರು (Congress Leaders) ಖಡ್ಗ ಝಳಪಿಸುತ್ತಿರುವುದು ಕಂಡುಬಂದಿತು. ಕರ್ನಾಟಕದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಶಸ್ತ್ರಾಸ್ತ್ರಗಳ ಬಳಕೆಯನ್ನು ನಿಷೇಧಿಸಿದ್ದರೂ ಕಾಂಗ್ರೆಸ್ ನಾಯಕರು ಖಡ್ಗ ಪ್ರದರ್ಶಿಸಿರುವುದು ಟೀಕೆಗೆ ಕಾರಣವಾಗಿದೆ. ಗುರುವಾರ ಬೆಂಗಳೂರಿನ ಗುಡ್ಡದಹಳ್ಳಿಯಲ್ಲಿ ಟಿಪ್ಪು ಜಯಂತಿ ಆಚರಣೆಯ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಖಡ್ಗ ಝಳಪಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಟಿಪ್ಪು ಜಯಂತಿ ವೇಳೆ ಖಡ್ಗ ಹಿಡಿದು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವರದಿಯನ್ನು ಸಲ್ಲಿಸುವವರೆಗೂ ಆಡಳಿತಾರೂಢ ಬಿಜೆಪಿ ಟಿಪ್ಪು ಜಯಂತಿಯ ಆಚರಣೆಯಲ್ಲಿ ಕಾಂಗ್ರೆಸ್ ನಾಯಕರು ಖಡ್ಗ ಮಸೆಯುತ್ತಿರುವ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
ಮೈಸೂರಿನ ಹುಲಿ ಎಂದೇ ಜನಪ್ರಿಯವಾಗಿರುವ ಟಿಪ್ಪು ಸುಲ್ತಾನ್ ಕರ್ನಾಟಕದಲ್ಲಿ ವಿವಾದಕ್ಕೆ ಕಾರಣವಾಗಿದ್ದು, ಅದರಲ್ಲೂ 2015ರಲ್ಲಿ 18ನೇ ಶತಮಾನದ ದೊರೆ ಟಿಪ್ಪು ಸುಲ್ತಾನ್ ಜನ್ಮದಿನವನ್ನು ಆಚರಿಸುವ ಅಗತ್ಯತೆ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಜಗಳ ನಡೆದಿತ್ತು.
2017ರಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವೆಂಬರ್ 10ರಂದು ಟಿಪ್ಪು ಜಯಂತಿ ಆಚರಿಸುವುದಾಗಿ ಘೋಷಿಸಿದ್ದರು. ಆದರೆ, 2018ರಲ್ಲಿ ಉತ್ತರ ಕನ್ನಡ ಸಂಸದ ಹಾಗೂ ಅಂದಿನ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರು ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದರು.
ಇತಿಹಾಸದ ಪ್ರಕಾರ, ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿದ್ದರು. 1799ರಲ್ಲಿ ತನ್ನ ರಾಜಧಾನಿ ಶ್ರೀರಂಗಪಟ್ಟಣವನ್ನು ರಕ್ಷಿಸುವ ಸಂದರ್ಭದಲ್ಲಿ ನಿಧನರಾಗಿದ್ದರು. 18ನೇ ಶತಮಾನದ ಆಡಳಿತಗಾರ ಟಿಪ್ಪುವಿನ ಜನ್ಮ ವಾರ್ಷಿಕೋತ್ಸವದ ಆಚರಣೆಯು ಬಿಜೆಪಿಯನ್ನು ಕಾಂಗ್ರೆಸ್ ವಿರುದ್ಧ ಎತ್ತಿಕಟ್ಟಿತು. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಹಲವಾರು ಬಿಜೆಪಿಯ ನಾಯಕರು ಕಾಂಗ್ರೆಸ್ ಪಕ್ಷವನ್ನು ಖಂಡಿಸಿದ್ದರು.




