ಶಾಲಾ ಶಿಕ್ಷಣದಲ್ಲಿ ಎಐ ಬಳಕೆಗೆ ತಜ್ಞರ ವಿರೋಧ: ಸರ್ಕಾರಕ್ಕೆ ಪತ್ರ ಬರೆದು ಆಕ್ಷೇಪ!
ಕರ್ನಾಟಕದ ಶಾಲಾ ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಅಳವಡಿಕೆಗೆ ಶಿಕ್ಷಣ ತಜ್ಞರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮಕ್ಕಳ ಸ್ವತಂತ್ರ ಚಿಂತನೆ ಹಾಗೂ ಮಾನಸಿಕ ಬೆಳವಣಿಗೆಯ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ತಜ್ಞರು ಆತಂಕ ವ್ಯಕ್ತಪಡಿಸಿದ್ದು, ಸಿಎಂ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ. ಈ ಕುರಿತ ಸಂಪೂರ್ಣ ವರದಿ, ಯೂನೆಸ್ಕೋ ಮಾರ್ಗಸೂಚಿ ಮತ್ತು ತಜ್ಞರ ಅಭಿಪ್ರಾಯಗಳು ಇಲ್ಲಿವೆ.

ಮುಖ್ಯಾಂಶಗಳು
- ಶಾಲಾ ಶಿಕ್ಷಣದಲ್ಲಿ ಎಐ ಬಳಕೆಗೆ ಶಿಕ್ಷಣ ತಜ್ಞರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
- ಮಕ್ಕಳ ಸ್ವತಂತ್ರ ಚಿಂತನೆ ಮತ್ತು ಕಲಿಕಾ ಸಾಮರ್ಥ್ಯದ ಮೇಲೆ ಪರಿಣಾಮದ ಆತಂಕವಿದೆ.
- ಪ್ರಾಥಮಿಕ ಹಂತದಲ್ಲಿ ಎಐ ಬಳಕೆಗೆ ಸರ್ಕಾರ ಸ್ಪಷ್ಟ ಮಾರ್ಗಸೂಚಿ ರೂಪಿಸಬೇಕಾಗಿದೆ.
ಬೆಂಗಳೂರು, ಸೆಪ್ಟೆಂಬರ್ 17: ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಅಳವಡಿಸುವ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಶಿಕ್ಷಣ ತಜ್ಞರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಪ್ರಾಥಮಿಕ ಹಾಗೂ ಶಾಲಾ ಹಂತದಲ್ಲೇ ಎಐ ಬಳಕೆಗೆ ಅವಕಾಶ ನೀಡುವ ಮುನ್ನ ಅದರ ಸಾಧಕ-ಬಾಧಕಗಳ ಬಗ್ಗೆ ಸಮಗ್ರ ಸಾರ್ವಜನಿಕ ಚರ್ಚೆ ನಡೆಸಬೇಕು ಎಂದು ತಜ್ಞರು ಮತ್ತು ಸಾಹಿತಿಗಳ ಒಕ್ಕೂಟ ಆಗ್ರಹಿಸಿದೆ.
ಸಿಎಂ ಡಿಕೆ ಶಿವಕುಮಾರ್ಗೆ ಪತ್ರ
ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆದಿರುವ ಒಕ್ಕೂಟ, ನಿರ್ಧಾರ ಕೈಗೊಳ್ಳುವ ಮುನ್ನ ಮಕ್ಕಳ ವಯಸ್ಸು, ಕಲಿಕೆಯ ಹಂತ ಮತ್ತು ಮಾನಸಿಕ ಬೆಳವಣಿಗೆಯನ್ನು ಪರಿಗಣಿಸುವಂತೆ ಮನವಿ ಮಾಡಿದೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಈಗಾಗಲೇ AI ಬಳಕೆಗೆ ಆದ್ಯತೆ ನೀಡಲಾಗುತ್ತಿದ್ದು, ಈ ಬಗ್ಗೆ ಪ್ರಶ್ನಿಸಿದಾಗ “ಈ ವಿಷಯವಾಗಿ ಸದ್ಯಕ್ಕೆ ಸರಿಯಾದ ಮಾಹಿತಿ ಇಲ್ಲ, ಚರ್ಚಿಸಿ ತೀರ್ಮಾನಿಸಲಾಗುವುದು” ಎಂದು ಉನ್ನತ ಶಿಕ್ಷಣ ಇಲಾಖೆಯ ರಾಜಕೀಯ ಮುಖಂಡರು ಹಾಗೂ ಸಚಿವರು ತಿಳಿಸಿದ್ದಾರೆ.
ಮಕ್ಕಳ ಸ್ವತಂತ್ರ ಚಿಂತನೆಯ ಮೇಲೆ ಪರಿಣಾಮದ ಆತಂಕ
ಎಐ ಅತಿಯಾದ ಬಳಕೆಯಿಂದ ಮಕ್ಕಳ ಸ್ವತಂತ್ರ ಚಿಂತನೆ, ವಿಶ್ಲೇಷಣಾ ಸಾಮರ್ಥ್ಯ ಮತ್ತು ಸಮಸ್ಯೆ ಪರಿಹರಿಸುವ ಕೌಶಲ್ಯ ಕುಂಠಿತಗೊಳ್ಳಬಹುದು ಎಂಬ ಆತಂಕ ಶಿಕ್ಷಣ ವಲಯದಲ್ಲಿ ಎದ್ದಿದೆ. ಯೂನೆಸ್ಕೋ ಕೂಡ ಶಿಕ್ಷಣದಲ್ಲಿ ಎಐ ಬಳಸುವಾಗ ಸ್ವತಂತ್ರ ಚಿಂತನೆ , ನೈತಿಕತೆ ಮತ್ತು ಮಾನವಕೇಂದ್ರಿತ ಕಲಿಕೆಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದೆ. ಎಐ ಅನ್ನು ಶಿಕ್ಷಕರಿಗೆ ಪರ್ಯಾಯವಾಗಿ ನೋಡುವ ಬದಲು ಮಾರ್ಗದರ್ಶಿತ ಸಾಧನವಾಗಿ ಬಳಸಬೇಕೆಂಬ ಅಭಿಪ್ರಾಯವಿದೆ.
ಈಗಾಗಲೇ ಹಲವು ವಿದ್ಯಾರ್ಥಿಗಳು ಮನೆಕೆಲಸಗಳಿಗೆ ಎಐ ತಂತ್ರಜ್ಞಾನವನ್ನು ನೇರವಾಗಿ ಬಳಸುತ್ತಿದ್ದು, ಇದರಿಂದ ಸ್ವಯಂ ಕಲಿಕೆ ಮತ್ತು ತಿಳುವಳಿಕೆ ಕೊರತೆಯಾಗುತ್ತಿದೆ. “ಪ್ರಾಥಮಿಕ ಕಲಿಕಾ ಹಂತದಲ್ಲಿ ಎಐ ಪರಿಚಯಿಸುವುದು ಸೂಕ್ತವಲ್ಲ, ಬಳಕೆಯ ಮಿತಿ ಮತ್ತು ಶಿಕ್ಷಕರ ಮೇಲ್ವಿಚಾರಣೆ ಕಡ್ಡಾಯವಾಗಿರಬೇಕು” ಎಂದು ‘ಶಿಕ್ಷಣ ಉಳಿಸಿ’ ಹೋರಾಟಗಾರ್ತಿ ಐಶ್ವರ್ಯ ಅಭಿಪ್ರಾಯಪಟ್ಟಿದ್ದಾರೆ.
ಸ್ಪಷ್ಟ ಮಾರ್ಗಸೂಚಿ ಮತ್ತು ಚೌಕಟ್ಟಿಗೆ ಆಗ್ರಹ
ತಂತ್ರಜ್ಞಾನ ವೇಗವಾಗಿ ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಮಕ್ಕಳನ್ನು ಸಂಪೂರ್ಣವಾಗಿ ಎಐ ಮೇಲೆ ಅವಲಂಬಿತರಾಗದಂತೆ ತಡೆಯುವುದು ಅತ್ಯಗತ್ಯವಾಗಿದೆ. ಶಾಲಾ ಶಿಕ್ಷಣದಲ್ಲಿ ಎಐ ಜಾರಿ ಮಾಡುವ ಮುನ್ನ ಶಿಕ್ಷಕರಿಗೆ ಸೂಕ್ತ ತರಬೇತಿ ನೀಡಬೇಕು ಮತ್ತು ಸ್ಪಷ್ಟ ಮಾರ್ಗಸೂಚಿ ರೂಪಿಸಬೇಕು ಎಂದು ತಜ್ಞರು ಒತ್ತಾಯಿಸಿದ್ದಾರೆ. ಯೂನೆಸ್ಕೋದ ನಿಯಮಾವಳಿಗಳಂತೆ ವಿದ್ಯಾರ್ಥಿಗಳಲ್ಲಿ ನೈತಿಕತೆ ಮತ್ತು ಜವಾಬ್ದಾರಿಯುತ ತಂತ್ರಜ್ಞಾನ ಬಳಕೆಯನ್ನು ಬೆಳೆಸಲು ಸರ್ಕಾರ ಸೂಕ್ತ ಚೌಕಟ್ಟು ರೂಪಿಸಬೇಕಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




