AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್​​ ಕಚೇರಿಗಳಿಗಾಗಿ ಕರ್ನಾಟಕದಲ್ಲಿ ಸಿಎ ಸೈಟ್​​ಗಳ ಬಳಕೆ: ದೆಹಲಿಯಲ್ಲೂ ಸದ್ದು ಮಾಡಿದ ವಿವಾದ

ಕರ್ನಾಟಕದಲ್ಲಿ ಕಾಂಗ್ರೆಸ್ ಕಚೇರಿಗಳಿಗಾಗಿ ಸಿಎ ಸೈಟ್‌ಗಳ ಬಳಕೆ ವಿಚಾರ ವಿವಾದ ಸೃಷ್ಟಿಸಿದೆ. ಬಿಜೆಪಿ ನಾಯಕರು 48 ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ದೆಹಲಿಯಲ್ಲೂ ಧ್ವನಿ ಎತ್ತಿದ್ದಾರೆ. ಸಾರ್ವಜನಿಕ ಉಪಯೋಗಕ್ಕೆ ಮೀಸಲಾಗಿದ್ದ 24 ಸೈಟ್‌ಗಳನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ವರ್ಗಾಯಿಸಲಾಗಿದೆ ಎಂಬುದು ಪ್ರಮುಖ ಆರೋಪವಾಗಿದೆ. ಇದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದು, ಹಿಂದಿನ ಬಿಜೆಪಿ ಸರ್ಕಾರ ನೀಡಿರುವ ಜಾಗದ ಲೆಕ್ಕ ಹೇಳಿದ್ದಾರೆ.

ಕಾಂಗ್ರೆಸ್​​ ಕಚೇರಿಗಳಿಗಾಗಿ ಕರ್ನಾಟಕದಲ್ಲಿ ಸಿಎ ಸೈಟ್​​ಗಳ ಬಳಕೆ: ದೆಹಲಿಯಲ್ಲೂ ಸದ್ದು ಮಾಡಿದ ವಿವಾದ
ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದ ಮೇಲೆ ಮುಗಿಬಿದ್ದ ಬಿಜೆಪಿImage Credit source: Google
ಪ್ರಸನ್ನ ಹೆಗಡೆ
|

Updated on:Feb 18, 2026 | 4:27 PM

Share

ಬೆಂಗಳೂರು, ಫೆಬ್ರವರಿ 18: ಕಾಂಗ್ರೆಸ್​​ ಕಚೇರಿಗಳಿಗಾಗಿ ಕರ್ನಾಟಕದಲ್ಲಿ ಸಿಎ ಸೈಟ್​​ಗಳನ್ನು ಪಡೆದುಕೊಳ್ಳುತ್ತಿದೆ ಎಂಬ ಬಿಜೆಪಿಯ ಆರೋಪವೀಗ ದೆಹಲಿಯಲ್ಲೂ ಸದ್ದು ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಗೌರವ್ ಭಾಟಿಯಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರವು ನಾಗರಿಕ ಸೌಲಭ್ಯಗಳಿಗಾಗಿ ಮೀಸಲಾಗಿದ್ದ 24 ಜಾಗಗಳನ್ನು ಕಾಂಗ್ರೆಸ್ ಪಕ್ಷದ ಕಚೇರಿಗಳಿಗಾಗಿ ಬಳಸಲು ಹೊರಟಿರುವುದು ಏಕೆ? ಈ 24 ಜಾಗಗಳನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಹಸ್ತಾಂತರಿಸಲಾಗಿದೆ. ಅವುಗಳ ಮೌಲ್ಯ ಸುಮಾರು 50 ಕೋಟಿ ರೂಪಾಯಿ. ಆದರೆ ಭ್ರಷ್ಟಾಚಾರಕ್ಕೆ ಪ್ರಸಿದ್ಧವಾದ ಕಾಂಗ್ರೆಸ್‌ಗೆ ಅವುಗಳನ್ನು ಕೇವಲ 2 ಕೋಟಿಗೆ ನೀಡಲಾಗಿದೆ. ಇಲ್ಲಿ ಸ್ಪಷ್ಟವಾಗಿ 48 ಕೋಟಿ ರೂಪಾಯಿಗಳ ಭ್ರಷ್ಟಾಚಾರ ಗೋಚರಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಈ ವರ್ಗಾವಣೆಯ ಉದ್ದೇಶವೇನು? 100 ಕಾಂಗ್ರೆಸ್ ಭವನಗಳನ್ನು ನಿರ್ಮಿಸುವುದೇ? ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಮತ್ತು ದೇಶದ ಜನರು ಮಹತ್ವದವರಲ್ಲ. ಕಾಂಗ್ರೆಸ್ ಪಕ್ಷದ ಡಿಎನ್‌ಎಯೇ ಹೀಗಿದೆ . ಅವರು ‘ನಕಲಿ ಗಾಂಧಿ ಕುಟುಂಬ’ವನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ.  ಸಾರ್ವಜನಿಕ ಜಮೀನಿಗೆ ಮಾರುಕಟ್ಟೆ ಮೌಲ್ಯವನ್ನು ಸರ್ಕಾರಕ್ಕೆ ನೀಡದೇ ಕಾಂಗ್ರೆಸ್ ಆಸ್ತಿಯನ್ನಾಗಿ ಮಾಡಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರವಾನಗಿ ಸಿಗುತ್ತದೆಯೇ ಎಂದವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಸರ್ಕಾರದಿಂದಲೇ ಭೂಕಬಳಿಕೆ; ಜಿಲ್ಲೆಜಿಲ್ಲೆಗಳಲ್ಲಿ ಕಾಂಗ್ರೆಸ್​ ಭವನಕ್ಕೆ ಭೂಮಿ ನೀಡಿದ ದಾಖಲೆ ಸಮೇತ ಬಿಜೆಪಿ ಗಂಭೀರ ಆರೋಪ

ನಿನ್ನೆ ಇದೇ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿದ್ದ ವಿಧಾನ ಪರಿಷತ್​​ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ದಾಖಲೆಗಳೊಂದಿಗೆ ಕಾಂಗ್ರೆಸ್​​ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ರಾಜ್ಯದ ವಿವಿಧ ಜಿಲ್ಲೆಗಳು, ತಾಲೂಕು ಮತ್ತು ಪಂಚಾಯತ್ ಮಟ್ಟದಲ್ಲಿ ಕಾಂಗ್ರೆಸ್ ಕಚೇರಿಗಳಿಗೆ ಭೂಮಿ ಪಡೆದುಕೊಳ್ಳಲಾಗುತ್ತಿದೆ. ಬಡವರಿಗೆ ಮನೆ ಭೂಮಿ ನೀಡದೇ ಸರ್ಕಾರವೇ ಭೂ ಕಬಳಿಕೆಯಲ್ಲಿ ತೊಡಗಿದೆ ಎಂದು ಗಂಭೀರ ಆರೋಪ ಮಾಡಿದ್ದರು.

ಕೌಂಟರ್​​ ಕೊಟ್ಟಿದ್ದ ಡಿಸಿಎಂ ಡಿಕೆಶಿ

ಆದರೆ ಬಿಜೆಪಿ ಆರೋಪಗಳಿಗೆ ಕೌಂಟೆರ್​ ಕೊಟ್ಟಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್​, ಬಿಜೆಪಿಯವರು RSS ಕಚೇರಿಗೆ ನೂರಾರು ಎಕರೆ ಕೊಟ್ಟಿಲ್ವೇ? ಚಾಣಕ್ಯ ವಿವಿ, RSS ಕಚೇರಿಗೆ ಜಮೀನು ನೀಡಿಲ್ಲವೇ ಎಂದು ಪ್ರಶ್ನಿಸಿದ್ದರು. ಬಿಜೆಪಿ ಅವಧಿಯಲ್ಲಿ ಬೆಂಗಳೂರಲ್ಲಿ 100ಕ್ಕೂ ಹೆಚ್ಚು ಕಡೆ ವಿವಿಧ ಟ್ರಸ್ಟ್​ಗಳ ಹೆಸರಿನಲ್ಲಿ ಜಾಗವನ್ನು ಪಡೆದಿದ್ದಾರೆ. ಚಾಣಕ್ಯ ವಿವಿಗೆ ನೀಡಿರುವ ಜಾಗ ಪ್ರತಿ ಎಕರೆಗೆ 10 ಕೋಟಿ. ಆದ್ರೆ, ಬಿಜೆಪಿಗರು ಎಕರೆಗೆ 50 ಲಕ್ಷದ ದರದಲ್ಲಿ 100 ಎಕರೆ ಮಂಜೂರು ಮಾಡಿದ್ದಾರೆ.ಇಂತಹ ನೂರಾರು ಉದಾಹರಣೆಗಳನ್ನು ನಾನು ನೀಡಬಲ್ಲೆ. ಹೀಗಾಗಿ ಬಿಜೆಪಿಯವರು ನಮಗೆ ಬೋಧನೆ ಮಾಡುವ ಅಗತ್ಯವಿಲ್ಲ. ಅವರು ಏನಾದರೂ ಆರೋಪಗಳನ್ನ ಮಾಡಿಕೊಳ್ಳಲಿ. ಎಲ್ಲ ಮಾನದಂಡಗಳ ಆಧಾರದ ಮೇಲೆ ಜಾಗ ಮಂಜೂರು ಮಾಡಲಾಗಿದ್ದು, ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರುವುದಾದರೆ ಹೋಗಲಿ ಎಂದು ಸವಾಲು ಹಾಕಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 4:26 pm, Wed, 18 February 26