
ಬೆಂಗಳೂರು, ಸೆಪ್ಟೆಂಬರ್ 10: ಕರ್ನಾಟಕದ 50 ತಾಲೂಕು ಆಸ್ಪತ್ರೆಗಳಲ್ಲಿ ಶ್ರವಣ-ಮಾತಿನ ಚಿಕಿತ್ಸಾ ಸೇವೆ ಆರಂಭಕ್ಕೆ ಸರ್ಕಾರ ಆದೇಶಿಸಿದೆ. ಶ್ರವಣ ಹಾಗೂ ಮಾತಿನ ಸಮಸ್ಯೆಗಳಿಗೆ ತಾಲೂಕು ಮಟ್ಟದಲ್ಲೇ ಚಿಕಿತ್ಸೆ ಮತ್ತು ಪರೀಕ್ಷೆ ಲಭ್ಯವಾಗುವ ನಿಟ್ಟಿನಲ್ಲಿ ತಾಲೂಕು ಆಸ್ಪತ್ರೆಗಳಿಗೆ ಆಡಿಯಾಲಜಿ ಉಪಕರಣಗಳ ಖರೀದಿಗೆ ಅನುಮೋದನೆ ನೀಡಲಾಗಿದೆ. ಪ್ರತಿ ಆಸ್ಪತ್ರೆಗೆ ಸುಮಾರು 40.78 ಲಕ್ಷ ರೂಪಾಯಿ ಮೌಲ್ಯದ ಉಪಕರಣಗಳು ಒದಗಿಸಲು ನಿರ್ಧಾರಿಸಲಾಗಿದ್ದು, ಒಟ್ಟು 20.39 ಕೋಟಿ ವೆಚ್ಚ ಇದಕ್ಕಾಗಲಿದೆ.
ಪ್ರತಿ ತಾಲೂಕು ಆಸ್ಪತ್ರೆಗೆ ಒಬ್ಬ ಆಡಿಯಾಲಜಿಸ್ಟ್ ನೇಮಕಕ್ಕೂ ನಿರ್ಧರಿಸಲಾಗಿದ್ದು, ಅವರಿಗೆ ತಿಂಗಳಿಗೆ 30 ಸಾವಿರ ಗೌರವಧನ ನೀಡಲಾಗುವುದು. 50 ಆಡಿಯಾಲಜಿಸ್ಟ್ಗಳಿಗೆ ವಾರ್ಷಿಕ ಸುಮಾರು 1.80 ಕೋಟಿ ವೆಚ್ಚವಾಗಲಿದ್ದು, ಗ್ರಾಮೀಣ ಭಾಗದ ಜನರಿಗೆ ಕಿವಿ ಮತ್ತು ಶ್ರವಣ ಸಮಸ್ಯೆಗಳಿಗೆ ಜಿಲ್ಲಾ ಕೇಂದ್ರಗಳಿಗೆ ಅಲೆದಾಡುವ ಅಗತ್ಯ ಕಡಿಮೆ ಮಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಕರ್ನಾಟಕ ರಾಜ್ಯ ಔಷಧಿ ನಿಗಮ (KSMSCL) ಮೂಲಕ ಅಗತ್ಯ ಉಪಕರಣಗಳ ಖರೀದಿ ನಡೆಯಲಿದ್ದು, KTPP ಕಾಯ್ದೆ ಹಾಗೂ ನಿಯಮಗಳಂತೆ ಟೆಂಡರ್ ಪ್ರಕ್ರಿಯೆ ಮೂಲಕ ಉಪಕರಣ ಖರೀದಿಗೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ನೇಗಿಲ ಯೋಗಿ, ತೇಗ ಸಿರಿ: ರೈತರಿಗಾಗಿ ಹಲವು ಯೋಜನೆ ಜಾರಿಗೆ ಕ್ಯಾಬಿನೆಟ್ ಗ್ರೀನ್ ಸಿಗ್ನಲ್
ರಾಜ್ಯದಲ್ಲಿ ಟೆಲಿ-ICU ಯೋಜನೆ ವಿಸ್ತರಣೆಗೂ ಸರ್ಕಾರದ ಮಹತ್ವದ ಕ್ರಮ ಕೈಗೊಂಡಿದ್ದು, 43 ಪೈಲಟ್ ಕೇಂದ್ರಗಳಲ್ಲಿ ಟೆಲಿ-ICU ಸೇವೆ ಜಾರಿಗೆ ನಿರ್ಧರಿಸಲಾಗಿದೆ. 11 ಹಬ್ಗಳ ಮೂಲಕ 131 ಸ್ಪೋಕ್ ಆಸ್ಪತ್ರೆಗಳಿಗೆ ಟೆಲಿ-ICU ಸಂಪರ್ಕ ಸಿಗಲಿದ್ದು, 6 ವಯಸ್ಕರ ಟೆಲಿ-ICU ಹಬ್ಗಳು, 5 SNCU ಹಬ್ಗಳ ಸ್ಥಾಪನೆಗೆ ನಿರ್ಧರಿಸಲಾಗಿದೆ. 94 ವಯಸ್ಕರ ಟೆಲಿ-ICU ಸ್ಪೋಕ್ ಕೇಂದ್ರ, 23 SNCU/NICU, 14 PICU ಸ್ಪೋಕ್ ಕೇಂದ್ರ ಆರಂಭಕ್ಕೂ ತೀರ್ಮಾನಿಸಲಾಗಿದೆ. ಟೆಲಿ-ICU ಮೂಲಕ ರೋಗಿಗಳಿಗೆ ತಜ್ಞ ವೈದ್ಯರಿಂದ ಮಾರ್ಗದರ್ಶನ ಸಿಗಲಿದೆ.
ಸರ್ಕಾರಿ ಆಸ್ಪತ್ರೆಗಳ ಎಕ್ಸ್ರೇ ಸೇವೆಗೆ AI ಡಿಜಿಟಲ್ ಟಚ್ ಮೂಲಕ ರೋಗ ಪತ್ತೆಗೆ ಹೊಸ ವ್ಯವಸ್ಥೆಗೆ ನಿರ್ಧರಿಸಲಾಗಿದೆ. 162 ಎಕ್ಸ್ರೇ ಯಂತ್ರಗಳ ಡಿಜಿಟಲೀಕರಣಕ್ಕೆ ಸರ್ಕಾರ ಗ್ರೀನ್ಸಿಗ್ನಲ್ ನೀಡಿದೆ. ಈ ಯೋಜನೆಗೆ 40.5 ಕೋಟಿ ರೂಪಾಯಿ ಅನುದಾನ ಸಿಗಲಿದ್ದು, 300 mA, 500 mA ಎಕ್ಸ್ರೇ ಯಂತ್ರಗಳು DR ವ್ಯವಸ್ಥೆಗೆ ಅಪ್ಗ್ರೇಡ್ ಆಗಲಿವೆ. AI ಮೂಲಕ ಎಕ್ಸ್ರೇ ವಿಶ್ಲೇಷಣೆಗೂ ವ್ಯವಸ್ಥೆಗೆ ಚಿಂತನೆ ನಡೆದಿದ್ದು, KDRM ಹಂತ-1 ಅಡಿಯಲ್ಲಿ ಯೋಜನೆ ಜಾರಿಯಾಗಲಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.