AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಪಿಎಸ್​​​​ಸಿ ಹಗರಣ: ಸಿಐಡಿ ಮುಂದೆ ಮತ್ತಷ್ಟು ಅಭ್ಯರ್ಥಿಗಳ ತಪ್ಪೊಪ್ಪಿಗೆ, ಸಿಎಂ ಡಿಕೆಶಿ ಮಹತ್ವದ ಹೇಳಿಕೆ

KPSC ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣದಲ್ಲಿ CID ತನಿಖೆ ತೀವ್ರಗೊಂಡಿದೆ. ಬಂಧಿತ ಮೊಹಮ್ಮದ್ ಸುಹೇಲ್ ನಂತರ, 7 ಅಭ್ಯರ್ಥಿಗಳು ₹40-80 ಲಕ್ಷ ನೀಡಿ ಹುದ್ದೆ ಗಿಟ್ಟಿಸಲು ಯತ್ನಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಈ ಕುರಿತು ಸಿಎಂ ಡಿ.ಕೆ. ಶಿವಕುಮಾರ್ NDA ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಹಗರಣಕ್ಕೆ ಅವರೇ ಪಿತಾಮಹರೆಂದರು. ತನಿಖೆಯಲ್ಲಿ ಯಾವುದೇ ಮಧ್ಯಪ್ರವೇಶವಿಲ್ಲವೆಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ಕೆಪಿಎಸ್​​​​ಸಿ ಹಗರಣ: ಸಿಐಡಿ ಮುಂದೆ ಮತ್ತಷ್ಟು ಅಭ್ಯರ್ಥಿಗಳ ತಪ್ಪೊಪ್ಪಿಗೆ, ಸಿಎಂ ಡಿಕೆಶಿ ಮಹತ್ವದ ಹೇಳಿಕೆ
KPSC ಹಗರಣImage Credit source: Tv9 kannada
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on:Sep 02, 2026 | 2:51 PM

Share

ಬೆಂಗಳೂರು, ಸೆ.2: ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಹೊಸ ತಿರುವು ಲಭ್ಯವಾಗುತ್ತಿದ್ದು, ತನಿಖೆ ತೀವ್ರಗೊಂಡಿದೆ. ಸಿಐಡಿ (CID) ಅಧಿಕಾರಿಗಳ ತನಿಖೆಯ ವೇಳೆ ಹಗರಣದ ಗಂಭೀರತೆ ಮತ್ತಷ್ಟು ಮುನ್ನಲೆಗೆ ಬಂದಿದೆ.

ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಸುಹೇಲ್ ಬಂಧನದ ಬೆನ್ನಲ್ಲೇ, ನಿನ್ನೆ ವಿಚಾರಣೆಗೆ ಹಾಜರಾಗಿದ್ದ ಮತ್ತೂ ೭ ಅಭ್ಯರ್ಥಿಗಳು ಸಿಐಡಿ ಅಧಿಕಾರಿಗಳ ಮುಂದೆ ಹಣ ನೀಡಿ ಹುದ್ದೆ ಗಿಟ್ಟಿಸಿಕೊಳ್ಳಲು ಯತ್ನಿಸಿದ್ದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ವಿಚಾರಣೆ ವೇಳೆ ಪ್ರತಿಯೊಬ್ಬ ಅಭ್ಯರ್ಥಿಗೂ ಒಂದೊಂದು ದರ ನಿಗದಿಯಾಗಿರುವುದು ತಿಳಿದುಬಂದಿದೆ. ಹುದ್ದೆಗಾಗಿ 40 ಲಕ್ಷ ರೂಪಾಯಿಯಿಂದ 80 ಲಕ್ಷ ರೂಪಾಯಿವರೆಗೆ ಹಣ ನೀಡಿರುವುದಾಗಿ ಅಭ್ಯರ್ಥಿಗಳು ಒಪ್ಪಿಕೊಂಡಿದ್ದಾರೆ.

ಕೆಲ ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಗೂ ಮುನ್ನವೇ ಮುಂಗಡ ಹಣ (Advance) ಪಾವತಿಸಿದ್ದರೆ, ಇನ್ನು ಕೆಲವರು ಸಂಪೂರ್ಣ ಆಯ್ಕೆ ಪ್ರಕ್ರಿಯೆ ಮುಗಿದ ನಂತರ ಪೂರ್ಣ ಹಣ ಪಾವತಿಸಿರುವುದಾಗಿ ಬಾಯ್ಬಿಟ್ಟಿದ್ದಾರೆ. ನೇಮಕಾತಿ ಹಗರಣದ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ಬಿಜೆಪಿ ಹಾಗೂ ಎನ್‌ಡಿಎ ಒಕ್ಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

“ಕೆಪಿಎಸ್‌ಸಿಯಲ್ಲಿನ ಹಗರಣಗಳಿಗೆ ಎನ್‌ಡಿಎ (NDA) ಸರ್ಕಾರವೇ ಪಿತಾಮಹ. KPSC ಅಧ್ಯಕ್ಷರನ್ನು ನೇಮಕ ಮಾಡಿದ್ದವರು ಯಾರು? ಅವರ ಜೊತೆ ಸಂಪರ್ಕ ಇಟ್ಟುಕೊಂಡಿದ್ದವರು ಯಾರು? ಎಂಬುದು ಎಲ್ಲರಿಗೂ ಗೊತ್ತಿದೆ. ಈ ಪ್ರಕರಣದಲ್ಲಿ ತನಿಖೆ ನಡೆಸಲು ಗೃಹ ಸಚಿವರಿಗೆ ಹಾಗೂ ತನಿಖಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಿದ್ದೇವೆ. ನಾನಂತೂ ಇದರಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಸದ್ಯಕ್ಕಿನ್ನೂ ತನಿಖಾ ವರದಿ ನನ್ನ ಕೈಸೇರಿಲ್ಲ.” ಎಂದು ಹೇಳಿದ್ದಾರೆ.

ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆಯನ್ನು “ನಾಚಿಕೆಗೇಡಿನ ಪಾದಯಾತ್ರೆ” ಎಂದು ಬಣ್ಣಿಸಿದ ಸಿಎಂ, ಇದು ರಾಜ್ಯದ ಹಿತಕ್ಕಾಗಿ ನಡೆಸುತ್ತಿರುವ ಯಾತ್ರೆಯಲ್ಲ, ಬದಲಾಗಿ ತಮ್ಮ ಪಕ್ಷದ ಆಂತರಿಕ ಬಿಕ್ಕಟ್ಟು ಮತ್ತು ಜಗಳವನ್ನು ಮುಚ್ಚಿಹಾಕಲು ಮಾಡುತ್ತಿರುವ ಪ್ರಯತ್ನ ಎಂದರು. “ನಾವು ಸುಮ್ಮನೆ ಕೂರುವುದಿಲ್ಲ, ರಾಜಕಾರಣ ಮಾಡುವ ಸಮಯದಲ್ಲಿ ನಾವೂ ಸೂಕ್ತ ರಾಜಕೀಯ ಉತ್ತರ ನೀಡುತ್ತೇವೆ” ಎಂದು ಎಚ್ಚರಿಸಿದರು.

ಇದನ್ನೂ ಓದಿ: KPSC Scam: ‘ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು’: ಜ್ಞಾನೇಂದ್ರ ಹೊಸ ವರಸೆ!

ಲಂಚದ ಹಣದಲ್ಲಿ 60:40 ಪರ್ಸಂಟೇಜ್ ಪಾಲು ಬಿಚ್ಚಿಟ್ಟ CID ತನಿಖೆ:

400 ಪಶು ವೈದ್ಯಾಧಿಕಾರಿಗಳ ಅಕ್ರಮ ನೇಮಕಾತಿ ಪ್ರಕರಣದ ತನಿಖೆಯನ್ನು ಸಿಐಡಿ (CID) ಅಧಿಕಾರಿಗಳು ತೀವ್ರಗೊಳಿಸಿದ್ದು, ಭ್ರಷ್ಟಾಚಾರದ ಮತ್ತಷ್ಟು ಆಘಾತಕಾರಿ ಸತ್ಯಗಳು ಹೊರಬಂದಿವೆ. ಅಭ್ಯರ್ಥಿಗಳಿಂದ ಕೋಟ್ಯಾಂತರ ರೂಪಾಯಿ ಲಂಚ ವಸೂಲಿ ಮಾಡಿ ಅದನ್ನು ‘ಪರ್ಸಂಟೇಜ್’ ಲೆಕ್ಕದಲ್ಲಿ ಹಂಚಿಕೊಳ್ಳಲಾಗುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಓರ್ವ ಅಭ್ಯರ್ಥಿಯಿಂದ ಪಶು ವೈದ್ಯಾಧಿಕಾರಿ ಹುದ್ದೆಗೆ ಬರೋಬ್ಬರಿ 70 ರಿಂದ 80 ಲಕ್ಷ ರೂಪಾಯಿ ಲಂಚದ ಹಣವನ್ನು ನಿಗದಿಪಡಿಸಲಾಗುತ್ತಿತ್ತು. ವಸೂಲಿಯಾದ ಲಂಚದ ಹಣದಲ್ಲಿ ಉನ್ನತ ಅಧಿಕಾರಿಗಳು, ಕೆಪಿಎಸ್‌ಸಿ ಸದಸ್ಯರು ಹಾಗೂ ಮಧ್ಯವರ್ತಿಗಳ ನಡುವೆ 60:40 ಅನುಪಾತದಲ್ಲಿ ಹಣ ಹಂಚಿಕೆಯಾಗುತ್ತಿತ್ತು ಎಂಬುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:45 pm, Wed, 2 September 26

Follow Us