ಮೊದಲ ಎರಡೂವರೆ ವರ್ಷಕ್ಕೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಎಸ್.ರವಿ, ಉಪಾಧ್ಯಕ್ಷರಾಗಿ ಶರಣಗೌಡ ಬಯ್ಯಾಪುರ ಆಯ್ಕೆ: ಲಕ್ಷ್ಮಣ್ ಸವದಿ
ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಎಸ್. ರವಿ ಹಾಗೂ ಉಪಾಧ್ಯಕ್ಷರಾಗಿ ಶರಣಗೌಡ ಬಯ್ಯಾಪುರ ಮೊದಲ ಎರಡೂವರೆ ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಹಕಾರ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ. ಸದ್ಯ ಎರಡೂವರೆ ವರ್ಷದ ವರೆಗೆ ಮಾತ್ರ ತೀರ್ಮಾನಿಸಲಾಗಿದ್ದು, ಬಾಕಿ ಉಳಿದಿರುವ ಇನ್ನೆರಡೂವರೆ ವರ್ಷಗಳ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಅವತ್ತಿನ ದಿನದ ಸಂದರ್ಭ ನೋಡಿಕೊಂಡು ತೀರ್ಮಾನ ಮಾಡುತ್ತೇವೆ ಎಂದವರು ಹೇಳಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 10: ಮೊದಲ ಎರಡೂವರೆ ವರ್ಷಕ್ಕೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಎಸ್.ರವಿ, ಉಪಾಧ್ಯಕ್ಷರಾಗಿ ಶರಣಗೌಡ ಬಯ್ಯಾಪುರ ಅವರನ್ನು ಆಯ್ಕೆ ಮಾಡಿದ್ದೇವೆ ಎಂದು ಬೆಂಗಳೂರಿನಲ್ಲಿ ಸಹಕಾರ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ. ಈ ಬಗ್ಗೆ ಎಲ್ಲಾ ನಿರ್ದೇಶಕರನ್ನು ಕರೆದು ವೈಯಕ್ತಿಕ ಅಭಿಪ್ರಾಯ ಸಂಗ್ರಹಿಸಿದ್ವಿ. ನಾಲ್ವರು ಆಕಾಂಕ್ಷಿಗಳಿದ್ದರು. ಆದರೆ ಇಬ್ಬರನ್ನು ಮಾತ್ರ ಆಯ್ಕೆ ಮಾಡಲು ಸಾಧ್ಯ. ಹೀಗಾಗಿ ಮೊದಲ ಎರಡೂವರೆ ವರ್ಷಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮಾಡಿದ್ದೇವೆ. ಯಾವುದೇ ತೊಂದರೆ ಇಲ್ಲ, ಆತಂಕ ಇಲ್ಲ, ಭಿನ್ನಾಭಿಪ್ರಾಯ ಇಲ್ಲ ಎಂದವರು ತಿಳಿಸಿದ್ದಾರೆ.
ಎರಡೂವರೆ ವರ್ಷದ ಬಳಿಕ ಮುಂದೇನು?
ಸದ್ಯ ಎರಡೂವರೆ ವರ್ಷದ ವರೆಗೆ ಮಾತ್ರ ತೀರ್ಮಾನಿಸಲಾಗಿದ್ದು, ಬಾಕಿ ಉಳಿದಿರುವ ಇನ್ನೆರಡೂವರೆ ವರ್ಷಗಳ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಅವತ್ತಿನ ದಿನದ ಸಂದರ್ಭ ನೋಡಿಕೊಂಡು ತೀರ್ಮಾನ ಮಾಡುತ್ತೇವೆ. ನಮ್ಮೆಲ್ಲರ ಒಪ್ಪಿಗೆ ಮೇಲೆ 2.5 ವರ್ಷಕ್ಕೆ ಆಯ್ಕೆ ಮಾಡಿದ್ದೇವೆ. ಅಧಿಕಾರಾವಧಿ ಮುಗಿದ ಮೇಲೆ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿ ಬೇರೆ ಅವರಿಗೆ ಅವಕಾಶ ನೀಡ್ತಿವಿ ಎಂದು ಇಬ್ಬರೂ ಮಾತು ಕೊಟ್ಟಿದ್ದಾರೆ. ರೂಲ್ಸ್ ಪ್ರಕಾರ ಅಪೆಕ್ಸ್ ಬ್ಯಾಂಕ್ ಅಧಿಕಾರವದಿ ಇರೋದು 5 ವರ್ಷ. ಒಮ್ಮತದ ಅಭಿಪ್ರಾಯದ ಮೇಲೆ ಚುನಾವಣೆ ಮಾಡಿದ್ದೇವೆ ಎಂದು ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಇದನ್ನೂ ಓದಿ: 2,186 ಕೋಟಿ ಅನುದಾನ ಬಾಕಿ: ಕೇಂದ್ರ ಸರ್ಕಾರದ ನಡೆ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗಲು ಕರ್ನಾಟಕ ತೀರ್ಮಾನ
ಕೆ.ಎನ್. ರಾಜಣ್ಣ ಕೈತಪ್ಪಿದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಕೆ.ಎನ್. ರಾಜಣ್ಣಗೆ ಭಾರಿ ನಿರಾಸೆಯಾಗಿದೆ. ಅವಕಾಶ ಕೈತಪ್ಪಿದ ಹಿನ್ನೆಲೆ ರಾಜಣ್ಣ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದ್ದು, ಅಧ್ಯಕ್ಷ ಸ್ಥಾನ ಸಂಬಂಧ ಅವರು ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಾ. ಜಿ. ಪರಮೇಶ್ವರ್ ಮತ್ತು ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಒತ್ತಡ ಹಾಕಿದ್ದರೂ ಪ್ರಯೋಜನವಾಗಿಲ್ಲ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




