ಅಧಿವೇಶನ ಆರಂಭಕ್ಕೂ ಮುನ್ನವೇ ಜಟಾಪಟಿ: ಸಭಾಪತಿ ಹೊರಟ್ಟಿಗೆ ಶಾಕ್​​ ಕೊಡುತ್ತಾ ಕಾಂಗ್ರೆಸ್​​?

ಕರ್ನಾಟಕ ವಿಧಾನಮಂಡಲದ ಮಳೆಗಾಲದ ಅಧಿವೇಶನ ಆರಂಭಕ್ಕೆ ಮುನ್ನವೇ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಬದಲಾವಣೆಯ ಕುರಿತು ಚರ್ಚೆ ಆರಂಭವಾಗಿದೆ. ಬಿಜೆಪಿಯಿಂದ ಆಯ್ಕೆಯಾದವರನ್ನ ನಾವು ಒಪ್ಪಲು ಸಾಧ್ಯವಿಲ್ಲ ಎಂದು ಕಾಂಗ್ರೆಸಿಗರು ಹೇಳಿದ್ದರೆ, ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೇಳಿದರೆ ತಕ್ಷಣ ನೀಡುತ್ತೇನೆ, ಕುರ್ಚಿಗೆ ಅಂಟಿಕೊಂಡು ಕೂರುವುದಿಲ್ಲ ಎಂದು ಹೊರಟ್ಟಿ ತಿಳಿಸಿದ್ದಾರೆ.

ಅಧಿವೇಶನ ಆರಂಭಕ್ಕೂ ಮುನ್ನವೇ ಜಟಾಪಟಿ: ಸಭಾಪತಿ ಹೊರಟ್ಟಿಗೆ ಶಾಕ್​​ ಕೊಡುತ್ತಾ ಕಾಂಗ್ರೆಸ್​​?
ಬಸವರಾಜ ಹೊರಟ್ಟಿ
Image Credit source: PTI

Updated on: Jul 30, 2026 | 1:54 PM

ಮುಖ್ಯಾಂಶಗಳು

  • ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಡ?
  • ವದಂತಿಗಳ ಬಗ್ಗೆ ಬಸವರಾಜ ಹೊರಟ್​ಟಿ ಹೇಳಿದ್ದೇನು?
  • ಬಿಜೆಪಿಗರನ್ನು ಒಪ್ಪಲ ಎಂದ ನಾಗರಾಜ್​​ ಯಾದವ್​​

ಬೆಂಗಳೂರು, ಜುಲೈ 30: ಕರ್ನಾಟಕದಲ್ಲಿ ಮಳೆಗಾಲದ ವಿಧಾನಮಂಡಲ ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದ್ದು, ಆಗಸ್ಟ್ 13ರಿಂದ ಆಗಸ್ಟ್ 27ರವರೆಗೆ 10 ದಿನಗಳ ಕಾಲ ಅಧಿವೇಶನ ನಡೆಯಲಿದೆ. ಈ ನಡುವೆ ಸಭಾಪತಿ ಬದಲಾವಣೆಯ ವಿಚಾರ ಭಾರಿ ಚರ್ಚೆಯಾಗುತ್ತಿದ್ದು, ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಸವರಾಜ ಹೊರಟ್ಟಿ ಅವರಿಗೆ ಸಿಎಂ ಡಿಕೆ ಶಿವಕುಮಾರ್​​ ಮನವಿ ಮಾಡಿದ್ದಾರೆಂಬ ಸುದ್ದಿ ಹರಿದಾಡತೊಡಗಿದೆ. ಆದರೆ ಈ ವದಂತಿಗಳಿಗೆ ಸ್ವತಃ ಹೊರಟ್ಟಿ ಅವರೇ ಸ್ಪಷ್ಟನೆ ನೀಡಿದ್ದು, ನಾನು ಆಸ್ಪತ್ರೆಯಲ್ಲಿದ್ದಾಗ ಆರೋಗ್ಯ ವಿಚಾರಿಸಲು ಸಿಎಂ ಕರೆ ಮಾಡಿದ್ದರು. ಆದ್ರೆ ರಾಜೀನಾಮೆ ಬಗ್ಗೆ ಸಿಎಂ ಡಿಕೆಶಿ ಮಾತನಾಡಿಲ್ಲ ಎಂದು ತಿಳಿಸಿದ್ದಾರೆ.

‘ರಾಜೀನಾಮೆ ಕೇಳಿದರೆ ತಕ್ಷಣ ನೀಡುತ್ತೇನೆ’

ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೇಳಿದರೆ ತಕ್ಷಣ ನೀಡುತ್ತೇನೆ, ಕುರ್ಚಿಗೆ ಅಂಟಿಕೊಂಡು ಕೂರುವುದಿಲ್ಲ. 1956ರಿಂದ ಇಲ್ಲಿಯವರೆಗೆ ಎಲ್ಲರೂ ತಮ್ಮ ಅವಧಿ ಮುಗಿಸಿದ್ದಾರೆ. ಸರ್ಕಾರ ಬದಲಾವಣೆ ಆದಾಗ ಸಭಾಪತಿ ಬದಲಾವಣೆ ಮಾಡಿಲ್ಲ.
2028ರ ಜುಲೈವರೆಗೂ ನನ್ನ ಅವಧಿ ಇದೆ. ಸಭಾಪತಿ ವಿರುದ್ಧ ಅವಿಶ್ವಾಸ ಮಂಡಿಸಿದ ಉದಾಹರಣೆ ಇಲ್ಲ. ಇಬ್ಬರು ವಿಧಾನಪರಿಷತ್​ನ ಸಭಾಪತಿ ಸ್ಥಾನದ ಮೇಲೆ ಕಣ್ಣಿಟ್ಟದ್ದು, ಅವರೇ ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ. ಆದ್ರೆ ಅವರು ಸಭಾಪತಿ ಆಗಲ್ಲ ಎಂದು ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ಇದನ್ನೂ ಓದಿ: ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್; ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ

ಇದೇ ವಿಚಾರವಾಗಿ ನಿನ್ನೆಯೂ ಪ್ರತಿಕ್ರಿಯಿಸಿದ್ದ ಹೊರಟ್ಟಿ, ಸಭಾಪತಿಯಾದವರು ಯಾವುದೇ ಪಕ್ಷದವರಾದರೂ ಸಂವಿಧಾನದ ಪ್ರಕಾರ ನಡೆಯಬೇಕಾಗುತ್ತದೆ. ತಾನು ಭಾರತ ದೇಶದಲ್ಲಿಯೇ ಅತ್ಯಂತ ಹಿರಿಯ ಸಭಾಪತಿಯಾಗಿದ್ದು, 48 ವರ್ಷ ಸುದೀರ್ಘವಾದಂತ ಅನುಭವವಿದೆ. ನನ್ನನ್ನು ಅವರು ಚೇಂಜ್ ಮಾಡುತ್ತಾರೆಂದರೆ, ಮಾಡಲಿ. ಅವಿಶ್ವಾಸ ನಿರ್ಣಯ ಏತಕ್ಕೆ ಮಂಡಿಸುತ್ತಾರೆ ಎಂದಾದರೆ ಕಾರಣ ಬೇಕಲ್ಲ? ಸಾಂವಿಧಾನಿಕ ಹುದ್ದೆಯಲ್ಲಿದ್ದವರು ಒಂದು ಭ್ರಷ್ಟಾಚಾರ ಮಾಡಿರಬೇಕು, ಪಕ್ಷಪಾತ ಮಾಡಿರಬೇಕು. ಈ ಕಾರಣರಿಂದ ನಿಮ್ಮ ಮೇಲೆ ನಮಗೆ ವಿಶ್ವಾಸ ಇಲ್ಲ, ಹೀಗಾಗಿ ನಿಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡುತ್ತೇವೆ ಎನ್ನಬಹುದು. ಆದರೆ ನನ್ನ ಮೇಲೆ ಯಾವ ಆರೋಪ ಮಾಡುತ್ತೀರಿ ಎಂದವರು ಪ್ರಶ್ನಿಸಿದ್ದರು.

‘ಬಿಜೆಪಿಯಿಂದ ಆಯ್ಕೆಯಾದವರನ್ನ ಒಪ್ಪಲ್ಲ’

ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ಪರಿಷತ್​​ನ ಕಾಂಗ್ರೆಸ್​​ ಸದಸ್ಯ ನಾಗರಾಜ್​​ ಯಾದವ್​​, ಸಭಾಪತಿಗಳು ರಾಜಕೀಯ ಹೇಳಿಕೆಯನ್ನ ಕೊಟ್ಟಿದ್ದಾರೆ. ಸಭಾಪತಿ ಸ್ಥಾನಕ್ಕೆ ಯಾರು ಅವಿಶ್ವಾಸ ಮಂಡನೆ ಮಾಡಿಲ್ಲ ಅನ್ನೋದು ಸತ್ಯಕ್ಕೆ ದೂರವಾದದ್ದು. 2015ರಲ್ಲಿ ಡಿ.ಎಚ್ ಶಂಕರಮೂರ್ತಿ ವಿರುದ್ಧ ಅವಿಶ್ವಾಸ ಮಂಡಿಸಲಾಗಿತ್ತು. ಬಿಜೆಪಿಯಿಂದ ಆಯ್ಕೆಯಾಗಿರುವ ಹೊರಟ್ಟಿಯವರು ಮೆಜಾರಿಟಿ ಇಲ್ಲದಿದ್ದಾಗ ರಾಜೀನಾಮೆ ಕೊಡುವುದು ಒಳ್ಳೆಯದು. ಬಿಜೆಪಿಯಿಂದ ಆಯ್ಕೆಯಾದವರನ್ನ ನಾವು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 1:41 pm, Thu, 30 July 26

Loading...
Unable to load recommendations.
Follow Us