
ಬೆಂಗಳೂರು, ಆಗಸ್ಟ್ 24: ವಾಲ್ಮೀಕಿ ನಿಗಮ ಹಗರಣ ಸಂಬಂಧ ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನ ಪರಿಷತ್ನಲ್ಲಿ ಇಂದು ಕೂಡ ಬಿಜೆಪಿ ಪ್ರತಿಭಟನೆ ಮುಂದುವರಿಸಿದೆ. ವಿಧಾನಪರಿಷತ್ ಕಲಾಪ ಆರಂಭವಾಗ್ತಿದ್ದಂತೆ ವಿಪಕ್ಷದ ಹೋರಾಟ ಆರಂಭವಾದ ಕಾರಣ, ಕೈ ಮುಗಿದು ಕೋರಿಕೊಳ್ಳುತ್ತೇನೆ, ಗಲಾಟೆ ನಿಲ್ಲಿಸಿ ಎಂದು ಸಭಾಪತಿ ಸಲೀಂ ಅಹ್ಮದ್ ಮನವಿ ಮಾಡಿದ್ದಾರೆ. ಬಳಿಕ ಸ್ವಲ್ಪ ಗರಂ ಆದ ಸಭಾಪತಿಗಳು, ನನ್ನ ಸೌಮ್ಯ ಸ್ವಭಾವ ನನ್ನ ದೌರ್ಬಲ್ಯ ಅಲ್ಲ. ಆರು ದಿನಗಳಿಂದ ಸದನ ಹಾಳಾಗ್ತಿದೆ, ಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ಖಡಕ್ ಎಚ್ಚರಿಕೆ ನೀಡಿ ಪ್ರಶ್ನೋತ್ತರ ಕಲಾಪ ಪ್ರಾರಂಭಿಸಿದ್ದಾರೆ.
ಸಚಿವರ ಗೈರು ಹಾಜರಿ ಬಗ್ಗೆಯೂ ಸಭಾಪತಿ ಸಲೀಂ ಎಚ್ಚರಿಕೆ ನೀಡಿದ್ದು, ಸಚಿವರಿಗೆ ಕಾಯುವುದಲ್ಲ. ಸಚಿವರು ಬಂದು ಸದನಕ್ಕಾಗಿ ಕಾಯಬೇಕು. ನೀವು ಸರಿಯಾದ ಸಮಯಕ್ಕೆ ಬರಬೇಕು, ಇದು ನಮ್ಮ ಎಚ್ಚರಿಕೆ. ಟೈಮ್ಗೂ ಅರ್ಧ ಗಂಟೆ ಮೊದಲೇ ಸಚಿವರು ಬಂದು ಕಾಯಬೇಕು ಎಂದು ವಿಪಕ್ಷಗಳ ಗದ್ದಲದ ನಡುವೆಯೇ ಸಭಾಪತಿಗಳು ಖಡಕ್ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಯತ್ನ: ವಿಕಾಸಸೌಧದ ಗೇಟ್ ಬಳಿ ಭಾರಿ ಹೈಡ್ರಾಮಾ
ಮತ್ತೊಂದೆಡೆ ವಿರೋಧ ಪಕ್ಷದ ಸದಸ್ಯರುಗಳನ್ನು ನಿಯಮ 327(1)(2)ರ ರೀತ್ಯಾ ಸದನದಿಂದ ಹೊರ ಹಾಕುವ ಪ್ರಸ್ತಾವವನ್ನು ಮಂಡಿಸಬೇಕಾಗಿ ಆಗ್ರಹಿಸಿ ಸಭಾ ನಾಯಕರಿಗೆ ಎಂಎಲ್ಸಿಗಳು ಪತ್ರ ಬರೆದಿದ್ದಾರೆ. ಅಧಿವೇಶನದಲ್ಲಿ ಶಾಸಕರುಗಳಾಗಿ ರಾಜ್ಯದ ನಾಗರೀಕರ ಹಾಗೂ ರೈತರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು . ಸರಕಾರದಿಂದ ಸೂಕ್ತ ಉತ್ತರ ಪಡೆಯಬೇಕಾಗಿರುವುದು ಸದನದ ಎಲ್ಲಾ ಸದಸ್ಯರ ಆದ್ಯ ಕರ್ತವ್ಯವಾಗಿರುತ್ತದೆ. ಭೀಕರ ಬರಗಾಲ ಪರಿಸ್ಥಿತಿಯಿಂದ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾಗಿರುವುದು ತುಂಬಾ ಅತ್ಯವಶ್ಯಕ. ಆದರೆ ಕಳೆದ ಒಂದುವಾರದಿಂದ ವಿರೋಧ ಪಕ್ಷದ ಸದಸ್ಯರುಗಳು ಈ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಾಧ್ಯವಾಗತದಂಹ ಸನ್ನಿವೇಶವನ್ನು ಸೃಷ್ಟಿಸಿದ್ದಾರೆ. ಸದನದಲ್ಲಿ ನಿರಂತರವಾಗಿ ಗದ್ದಲ ಮತ್ತು ಧಿಕ್ಕಾರಗಳನ್ನು ಕೂಗುವುದರ ಮೂಲಕ ನಾವು ಸದನದಲ್ಲಿ ಕರ್ತವ್ಯ ನಿರ್ವಹಿಸಲು ಆಗದಂತಹ ಪರಿಸ್ಥಿತಿಯನ್ನು ಉಂಟುಮಾಡಿರುತ್ತಾರೆ. ಹೀಗಾಗಿ ವಿರೋಧ ಪಕ್ಷದ ಸದಸ್ಯರುಗಳನ್ನುಸದನದಿಂದ ಹೊರ ಹಾಕುವ ಪ್ರಸ್ತಾವವನ್ನು ಮಂಡಿಸಬೇಕಾಗಿ ತಮ್ಮಲ್ಲಿ ಕೋರುತ್ತೇವೆ ಎಂದು ಪತ್ರ ಮುಖೇನ ಆಗ್ರಹಿಸಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.