ಸರ್ಕಾರದ ವಿರುದ್ಧ ಸಿಡಿದೆದ್ದ ಬೆಂಗಳೂರಿನ ಬೀದಿಬದಿ ವ್ಯಾಪಾರಿಗಳು: ಇವರ ಹಕ್ಕೊತ್ತಾಯಗಳೇನು?
ಜಿಬಿಎ ಅಧಿಕಾರಿಗಳು ಫುಟ್ಪಾತ್ ಅತಿಕ್ರಮಿಸಿದವರನ್ನು ತೆರವು ಮಾಡುವ ಮೂಲಕ ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಇದು ಬೀದಿಬದಿ ವ್ಯಾಪಾರಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟಿಸಿದರು. ನಮಗೆ ಮತ್ತೆ ಅದೇ ಸ್ಥಳವನ್ನು ನೀಡಬೇಕು ಎಂದು ವ್ಯಾಪಾರಿಗಳು ಆಗ್ರಹಿಸಿದ್ದಾರೆ.

ಮುಖ್ಯಾಂಶಗಳು
- ಬೀದಿಬದಿ ವ್ಯಾಪಾರಿಗಳ ತೆರವು ಖಂಡಿಸಿ ಪ್ರತಿಭಟನೆ
- ಫ್ರೀಡಂಪಾರ್ಕ್ನಲ್ಲಿ ಬೀದಿಬದಿ ವ್ಯಾಪಾರಿಗಳಿಂದ ಬೃಹತ್ ಪ್ರತಿಭಟನೆ
- ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ
ಬೆಂಗಳೂರು, ಜುಲೈ 08: ನಗರದಲ್ಲಿ ಫುಟ್ಪಾತ್ ಒತ್ತುವರಿ ತೆರವು (Footpath Encroachment) ಕಾರ್ಯಚರಣೆ ಮುಂದುವರೆದಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಈ ಆಪರೇಷನ್ ಬೀದಿಬದಿ ವ್ಯಾಪಾರಿಗಳ ನಿದ್ದೆಗೆಡಿಸಿದೆ. ಹೀಗಾಗಿ ವ್ಯಾಪಾರ, ವಹಿವಾಟು ಬಂದ್ ಮಾಡಿ ನೂರಾರು ಬೀದಿಬದಿ ವ್ಯಾಪಾರಿಗಳು ಇಂದು ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟಿಸಿದರು. ಒಕ್ಕಲೆಬ್ಬಿಸಿದ ಬೀದಿಬದಿ ವ್ಯಾಪಾರಿಗಳಿಗೆ ಮತ್ತೆ ಅದೇ ಸ್ಥಳವನ್ನು ನೀಡಬೇಕು ಎಂದು ಒತ್ತಾಯಿಸಿದ್ದು ಜೊತೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ್ದಾರೆ.
ಬೀದಿಬದಿ ವ್ಯಾಪಾರಿಗಳಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ
ಫುಟ್ಪಾತ್ ಅತಿಕ್ರಮಿಸಿ ಅಂಗಡಿಗಳನ್ನ ಇಟ್ಟುಕೊಂಡವರಿಗೆ ಜಿಬಿಎ ಅಧಿಕಾರಿಗಳು ತೆರವು ಮಾಡುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಬೆಂಗಳೂರು ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಪಾಲಿಕೆಗಳ ವ್ಯಾಪ್ತಿಯಲ್ಲಿ ಜಿಬಿಎ ಅಧಿಕಾರಿಗಳು ಕಾರ್ಯಾಚರಣೆ ಮಾಡಿ ತೆರವು ಮಾಡುತ್ತಿದ್ದಾರೆ. ಇದು ಬೀದಿಬದಿ ವ್ಯಾಪಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಫುಟ್ಪಾತ್ ತೆರವು ಖಂಡಿಸಿ ಫ್ರೀಡಂಪಾರ್ಕ್ನಲ್ಲಿಂದು ವ್ಯಾಪಾರಿಗಳು ಪ್ರತಿಭಟಿಸಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಪ್ರತಿಭಟನಾಕಾರರು
ಇನ್ನು ಈ ವೇಳೆ ಪ್ರತಿಕ್ರಿಯಿಸಿರುವ ಪ್ರತಿಭಟನಾಕಾರರು, ‘ಫುಟ್ಪಾತ್ ಕಾರ್ಯಾಚರಣೆ ಸದ್ಯಕ್ಕೆ ಸ್ಥಗಿತಗೊಳಿಸಿ, ಸಚಿವ ಕೃಷ್ಣಬೈರೇಗೌಡ ಇಲ್ಲಿಗೆ ಬರಬೇಕು. ಇಲ್ಲವಾದರೆ ನಾವು ಹೋರಾಟ ತೀವ್ರಗೊಳಿಸುವುದಾಗಿ’ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಫುಟ್ಪಾತ್ ತೆರವು ಅಭಿಯಾನ: ಆರ್.ಟಿ. ನಗರದಲ್ಲಿ ಬೀದಿ ಬದಿ ವ್ಯಾಪಾರಿಗಳಿಂದ ಪ್ರತಿಭಟನೆ
ಬೀದಿಬದಿ ವ್ಯಾಪಾರಿಗಳ ಬೇಡಿಕೆಗಳು ಏನು?
- ಒಕ್ಕಲೆಬ್ಬಿಸಿದ ಬೀದಿ ವ್ಯಾಪಾರಿಗಳಿಗೆ ಮತ್ತೆ ಅದೇ ಸ್ಥಳವನ್ನು ನೀಡಬೇಕು.
- ಫುಟ್ಪಾತ್ಗೆ ಅಂಗಡಿ ಅಡ್ಡವಿದ್ದರೆ ಅಷ್ಟೇ ವ್ಯಾಪಾರ ಆಗುವ ಪರ್ಯಾಯ ಸ್ಥಳ ನೀಡಬೇಕು.
- ಜಪ್ತಿ ಮಾಡಲಾದ ಸರಕುಗಳನ್ನು ವಾಪಸ್ ನೀಡಬೇಕು.
- ಬೀದಿಬದಿ ವ್ಯಾಪಾರಿಗಳ ಕಾಯ್ದೆ ಜಾರಿಗೆ ತರಬೇಕು.
- ಸಮಗ್ರ ಸಮೀಕ್ಷೆ ಆಗುವವರೆಗೂ ಎತ್ತಗಂಡಿ ನಿಲ್ಲಿಸಬೇಕು.
- ನಗರದಲ್ಲಿರುವ ಫುಟ್ಪಾತ್ಗಳ ಅಗಲೀಕರಣ ಮಾಡಿಬೇಕು.
- ಹೊಸ ನಗರ ಪಾಲಿಕೆಗಳಲ್ಲಿ ಟೌನ್ ವೆಂಡಿಂಗ್ ಕಮಿಟಿ ರಚಿಸಬೇಕು.
ಇದನ್ನೂ ಓದಿ: ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ: ಜಂಟಿ ಹೋರಾಟ ಸಮಿತಿಯಿಂದ ಸರ್ಕಾರಕ್ಕೆ ಸಪ್ತ ಪ್ರಶ್ನೆ
ಪ್ರತಿಭಟನೆಗೆ ಯಾರೆಲ್ಲಾ ಬೆಂಬಲ
ಇನ್ನು ಬೀದಿಬದಿ ವ್ಯಾಪಾರಿಗಳ ಜಂಟಿ ಹೋರಾಟ ಸಮಿತಿಯಿಂದ ನಡೆದ ಪ್ರತಿಭಟನೆಗೆ ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘ (ರಿ), ಕರುನಾಡು ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟ (ರಿ), ನವ ಕರ್ನಾಟಕ ರಾಜ್ಯ ಬೀದಿಬದಿ ವ್ಯಾಪಾರಿಗಳ ಸಂಘ (ರಿ), ಬೀದಿಬದಿ ವ್ಯಾಪಾರಿಗಳ ಸಂಘ (ರಿ), ಕರ್ನಾಟಕ ರಾಜ್ಯ ರಸ್ತೆ ಬದಿ ವ್ಯಾಪಾರಿಗಳ ಮಹಾಮಂಡಳ (ರಿ) ಮತ್ತು ಕರ್ನಾಟಕ ಮಹಿಳಾ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ (ರಿ)ದಿಂದ ಬೆಂಬಲ ನೀಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




