ಇದೆಂಥಾ ದುರ್ದೈವ! ಕ್ರಿಕೆಟ್ ಆಡುತ್ತಿರುವಾಗಲೇ ಕುಸಿದು ಬಿದ್ದು ಆಟಗಾರ ಸಾವು
KSCA ಲೀಗ್ ಪಂದ್ಯದ ವೇಳೆಯೇ ಕ್ರಿಕೆಟಿಗ ಹೃದಯಾಘಾತವಾಗಿ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರಿನ ಬೊಮ್ಮಸಂದ್ರದ ಎಸ್ಎಲ್ಎಸ್ ಮೈದಾನದಲ್ಲಿ ನಡೆದಿದೆ. ನೀರು ಕುಡಿಯುತ್ತಿದ್ದಾಗ ಸ್ಥಳದಲ್ಲೇ ಕುಸಿದುಬಿದ್ದಿದ್ದ ಕ್ರಿಕೆಟಿಗ ನನ್ನು ಆಸ್ಪತ್ರೆಗೆ ಸಾಗಿಸುವಾಗಿ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಕ್ರಿಕೆಟಿಗ ರಣಜಿ ಪಂದ್ಯಗಳನ್ನು ಆಡಿದ ಅನುಭವ ಕೂಡ ಹೊಂದಿದ್ದರು.

ಬೆಂಗಳೂರು, ಮೇ 24: ರಾಜಧಾನಿಯಲ್ಲಿ ಭಾನುವಾರ ಅತ್ಯಂತ ದಾರುಣ ಘಟನೆಯೊಂದು ಸಂಭವಿಸಿದೆ. ಕೆಎಸ್ಸಿಎ (KSCA) ಲೀಗ್ ಪಂದ್ಯಾವಳಿ ವೇಳೆ ರಣಜಿ ಅನುಭವಿ ಕ್ರಿಕೆಟ್ ಆಟಗಾರ ಹೃದಯಾಘಾತದಿಂದ (Heart Attack) ಮೃತಪಟ್ಟಿರುವಂತಹ ಘಟನೆ ಬೆಂಗಳೂರಿನ ಬೊಮ್ಮಸಂದ್ರದ ಎಸ್ಎಲ್ಎಸ್ ಮೈದಾನದಲ್ಲಿ ನಡೆದಿದೆ. ಎಸ್.ಎಲ್. ಅಕ್ಷಯ್ (36) ಮೃತ ಕ್ರಿಕೆಟ್ ಆಟಗಾರ. ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮುಖ್ಯಾಂಶಗಳು
- KSCA ಲೀಗ್ ಪಂದ್ಯದ ವೇಳೆ ಆಘಾತಕಾರಿ ಘಟನೆ
- ಶಿವಮೊಗ್ಗ ಮೂಲದ ಕ್ರಿಕೆಟ್ ಆಟಗಾರನಿಗೆ ಹೃದಯಾಘಾತ
- ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
ನಡೆದಿದ್ದೇನು?
ಬೆಂಗಳೂರಿನ ಬೊಮ್ಮಸಂದ್ರದ ಎಸ್ಎಲ್ಎಸ್ ಕ್ರೀಡಾಂಗಣದಲ್ಲಿ ಕೆಎಸ್ಸಿಎ ನಸೂರ್ ಸ್ಮಾರಕ ಶೀಲ್ಡ್ ಏಕದಿನ ಲೀಗ್ ಪಂದ್ಯಾವಳಿ ನಡೆಯುತ್ತಿತ್ತು. ಮೂಲತಃ ಶಿವಮೊಗ್ಗದ ಅಕ್ಷಯ್ ಪಂದ್ಯದ ವೇಳೆ ಎಂದಿನಂತೆ ಉತ್ಸಾಹದಿಂದಲೇ ಪಾಲ್ಗೊಂಡು 4 ಓವರ್ ಬೌಲಿಂಗ್ ಮಾಡಿದ್ದರು. ಆದರೆ, ಆ ಬಳಿಕ ತಮಗೆ ಸ್ವಲ್ಪ ಆರೋಗ್ಯ ಸಮಸ್ಯೆ ಕಾಡುತ್ತಿದೆ ಎಂದು ಹೇಳಿ ಮೈದಾನದಿಂದ ಅರ್ಧಕ್ಕೆ ಹೊರಬಂದಿದ್ದರು. ಕ್ರೀಡಾಂಗಣದ ಹೊರಗೆ ಬಂದು ನೀರು ಕುಡಿಯುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.
ಇದನ್ನೂ ಓದಿ: ದಾವಣಗೆರೆ: ಗೋಗುದ್ದು ಗ್ರಾಮದಲ್ಲಿ ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿ ಸಾವು
ತಕ್ಷಣ ಅಕ್ಷಯ್ರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ. ಸದ್ಯ ಮೃತದೇಹವನ್ನು ಅವಲಹಳ್ಳಿಯ ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಘಟನೆ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ರಣಜಿ ಪಂದ್ಯಾವಳಿಗಳನ್ನು ಆಡಿದ ಉತ್ತಮ ಅನುಭವ ಹೊಂದಿದ್ದ ಪ್ರತಿಭಾವಂತ ಆಟಗಾರನೊಬ್ಬ ಪಂದ್ಯದ ಮಧ್ಯೆಯೇ ಹೀಗೆ ಇಹಲೋಕ ತ್ಯಜಿಸಿರುವುದು ಸದ್ಯ ತೀವ್ರ ಆಘಾತ ಉಂಟುಮಾಡಿದೆ.
ಹೃದಯಾಘಾತದಿಂದ ಉದ್ಯೋಗ ಖಾತ್ರಿ ಕಾರ್ಮಿಕ ಸಾವು
ಹೃದಯಾಘಾತದಿಂದ ಉದ್ಯೋಗ ಖಾತ್ರಿ ಕಾರ್ಮಿಕ ಸಾವನ್ನಪ್ಪಿರುವಂತಹ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ನಾಗಪ್ಪ(51) ಮೃತ ಕಾರ್ಮಿಕ. ನಾಗಪ್ಪ ಇಂದು ಬೆಳಗ್ಗೆ ಎಂದಿನಂತೆ ನರೇಗಾ ಕೆಲಸಕ್ಕೆ ಹೋಗಿದ್ದರು. ಗಿಡಗಂಟಿಗಳನ್ನ ಕಡಿಯುವಾಗ ಎದೆನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.





