ರಾಜ್ಯದ ರೈತರ ಆರ್ಟಿಸಿಗಳಲ್ಲಿ ವಕ್ಫ್ ಉಲ್ಲೇಖ: ರಾಜ್ಯ ಸರ್ಕಾರದ ಮೇಲೆ ಮುಗಿಬಿದ್ದ ವಿಪಕ್ಷ ನಾಯಕ ಅಶೋಕ್
Waqf Row: ರಾಜ್ಯದಲ್ಲಿ 1.80 ಲಕ್ಷಕ್ಕೂ ಹೆಚ್ಚು ರೈತರ ಆರ್ಟಿಸಿಗಳಲ್ಲಿ (RTC) ವಕ್ಫ್ ಹೆಸರು ಉಲ್ಲೇಖವಾಗಿದೆ ಎಂದು ಆರೋಪಿಸಿರುವ ವಿಪಕ್ಷ ನಾಯಕ ಆರ್. ಅಶೋಕ್, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರದ ಓಲೈಕೆ ಮತ್ತು ತುಷ್ಟೀಕರಣದ ರಾಜಕಾರಣ ಈಗ ನಾಡಿನ ರೈತರ ಅಸ್ತಿತ್ವಕ್ಕೇ ಕುತ್ತು ತರುವ ಹಂತಕ್ಕೆ ತಲುಪಿದೆ. ಅನ್ನ ನೀಡುವ ರೈತನನ್ನು ತನ್ನದೇ ಭೂಮಿಯ ಹಕ್ಕಿಗಾಗಿ ಸರ್ಕಾರಿ ಕಚೇರಿಗಳ ಮುಂದೆ ನಿಲ್ಲಿಸಿದರೆ ಅವರ ಶಾಪ ತಟ್ಟದೇ ಇರದು ಎಂದೂ ಅವರು ಎಚ್ಚರಿಸಿದ್ದಾರೆ.

ಮುಖ್ಯಾಂಶಗಳು
- ರಾಜ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದ 'ವಕ್ಫ್' ವಿವಾದ
- 1.80 ಲಕ್ಷಕ್ಕೂ ಹೆಚ್ಚು ರೈತರ RTCಗಳಲ್ಲಿ ವಕ್ಫ್ ಹೆಸರು
- ರಾಜ್ಯ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ
ಬೆಂಗಳೂರು, ಜೂನ್ 28: ಕರ್ನಾಟಕದ ವಿವಿಧ ಭಾಗಗಳಲ್ಲಿ, ರೈತರು ಹಾಗೂ ಖಾಸಗಿ ವ್ಯಕ್ತಿಗಳ ಜಮೀನುಗಳ ದಾಖಲೆಗಳಲ್ಲಿ ಯಾವುದೇ ಪೂರ್ವಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ ವಕ್ಫ್ ಹೆಸರು ನಮೂದಾಗಿರುವುದು ಈ ಹಿಂದೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಅದೇ ವಿಚಾರವೀಗ ಮತ್ತೆ ಮುನ್ನೆಲೆಗೆ ಬಂದಿದೆ. ರಾಜ್ಯದ 1,80,000ಕ್ಕೂ ಹೆಚ್ಚು ರೈತರ RTCಗಳಲ್ಲಿ ಈಗಾಗಲೇ ವಕ್ಫ್ ಉಲ್ಲೇಖ ದಾಖಲಾಗಿದೆ ಎಂದು ಆರೋಪಿಸಿರುವ ವಿಪಕ್ಷ ನಾಯಕ ಆರ್. ಅಶೋಕ್, ರೈತರ ಭೂಮಿಯನ್ನು ವಕ್ಫ್ ವಿವಾದಕ್ಕೆ ಸಿಲುಕಿಸಿ, ಕಾಂಗ್ರೆಸ್ ಸರ್ಕಾರ ಯಾರ ಹಿತ ಕಾಯುತ್ತಿದೆ? ಎಂದು ಪ್ರಶ್ನಿಸಿದ್ದಾರೆ.
‘ರೈತರ ಅಸ್ತಿತ್ವಕ್ಕೇ ಕುತ್ತು’
ರಾಜ್ಯ ಸರ್ಕಾರದ ಓಲೈಕೆ ಮತ್ತು ತುಷ್ಟೀಕರಣದ ರಾಜಕಾರಣ ಈಗ ನಾಡಿನ ರೈತರ ಅಸ್ತಿತ್ವಕ್ಕೇ ಕುತ್ತು ತರುವ ಹಂತಕ್ಕೆ ತಲುಪಿದೆ. ರಾಜ್ಯದಾದ್ಯಂತ ರೈತರ RTCಗಳ ಕಾಲಂ 11ರಲ್ಲಿ ವಕ್ಫ್ ಉಲ್ಲೇಖಗಳನ್ನು ದಾಖಲಿಸಲಾಗುತ್ತಿದೆ ಎಂಬ ವರದಿಗಳು ಹೊರಬಿದ್ದಿದ್ದು, ಲಕ್ಷಾಂತರ ರೈತರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಇದು ಕೇವಲ ದಾಖಲೆ ಬದಲಾವಣೆಯ ವಿಚಾರವಲ್ಲ. ಇದು ರೈತನ ಮಾಲೀಕತ್ವದ ಹಕ್ಕು, ಬದುಕು ಮತ್ತು ಭವಿಷ್ಯದ ಪ್ರಶ್ನೆ ಎಂದವರು ತಿಳಿಸಿದ್ದಾರೆ.ರಾಜ್ಯದ 1,80,000ಕ್ಕೂ ಹೆಚ್ಚು ರೈತರ RTCಗಳಲ್ಲಿ ಈಗಾಗಲೇ ವಕ್ಫ್ ಉಲ್ಲೇಖ ದಾಖಲಾಗಿದೆ. ಒಟ್ಟು 3,00,000 RTCಗಳನ್ನು ಈ ಪ್ರಕ್ರಿಯೆಯ ವ್ಯಾಪ್ತಿಗೆ ತರಲು ಕ್ರಮ ನಡೆಯುತ್ತಿದೆ ಎನ್ನಲಾಗಿದೆ. 31 ಜಿಲ್ಲೆಗಳ ರೈತರು ಇದರ ಪರಿಣಾಮಕ್ಕೆ ಒಳಗಾಗುವ ಆತಂಕದಲ್ಲಿದ್ದಾರೆ ಎಂದವರು ದೂರಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಮೂಲದ ಶಾಸಕನಿಂದ ಅಡ್ಡಮತದಾನ ಶಂಕೆ, ವರದಿ ಸಲ್ಲಿಕೆ ಮುನ್ನವೇ ಸ್ಫೋಟಕ ಮಾಹಿತಿ ಬಹಿರಂಗ
ಜಿಲ್ಲಾವಾರು ಅಂಕಿ-ಅಂಶ
- ಉತ್ತರ ಕನ್ನಡ – 73,000 RTCಗಳು
- ದಕ್ಷಿಣ ಕನ್ನಡ – 48,000 RTCಗಳು
- ಶಿವಮೊಗ್ಗ – 38,000 RTCಗಳು
- ಬೆಂಗಳೂರು ದಕ್ಷಿಣ – 18,000 RTCಗಳು
- ಕಲಬುರಗಿ – 17,000 RTCಗಳು
- ಬಾಗಲಕೋಟೆ – 17,000 RTCಗಳು
ರೈತರು ತಮ್ಮದೇ ಭೂಮಿಯನ್ನು ಮಾರಾಟ ಮಾಡಲು, ಬ್ಯಾಂಕ್ ಸಾಲ ಪಡೆಯಲು ಅಥವಾ ಮಾಲೀಕತ್ವದ ಹಕ್ಕು ಚಲಾಯಿಸಲು ಅನಿಶ್ಚಿತತೆ ಎದುರಿಸುವ ಪರಿಸ್ಥಿತಿ ಏಕೆ ನಿರ್ಮಾಣವಾಯಿತು? ರೈತರನ್ನು ತಮ್ಮದೇ ಜಮೀನಿನಲ್ಲಿ ಭಿಕ್ಷುಕರನ್ನಾಗಿ ಮಾಡಲು ಹೊರಟಿದ್ದೀರಾ? ಕಾಂಗ್ರೆಸ್ ಸರ್ಕಾರಕ್ಕೆ ರೈತನ ಹಿತ ಮುಖ್ಯವೇ, ಅಥವಾ ತುಷ್ಟೀಕರಣದ ರಾಜಕಾರಣ ಮುಖ್ಯವೇ? ಎಂದು ಅಶೋಕ್ ಪ್ರಶ್ನಿಸಿದ್ದು, ರೈತನು ಅನ್ನ ಬೆಳೆಯುತ್ತಾನೆ. ಇಡೀ ದೇಶದ ಹಸಿವನ್ನು ನೀಗಿಸುತ್ತಾನೆ. ಅಂತಹ ರೈತನನ್ನು ತನ್ನದೇ ಭೂಮಿಯ ಹಕ್ಕಿಗಾಗಿ ಸರ್ಕಾರಿ ಕಚೇರಿಗಳ ಮುಂದೆ ನಿಲ್ಲಿಸಿದರ ಅನ್ನದಾತನ ಶಾಪ ತಟ್ಟದೇ ಇರದು ಎಂದೂ ಅವರು ಎಚ್ಚರಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:14 am, Sun, 28 June 26




