ತಡವಾಗಿ ಪರೀಕ್ಷಾ ಕೇಂದ್ರ ತಲುಪಿದ್ದಕ್ಕೆ ಎಕ್ಸಾಂಗೆ ನಿರಾಕರಣೆ: ವಿದ್ಯಾರ್ಥಿಯ UPSC ಕನಸು ನುಂಗಿತಾ ಬೆಂಗಳೂರಿನ ರಸ್ತೆಗಳು?
ಬೆಂಗಳೂರಿನ ರಸ್ತೆಗಳ ದುರಾವಸ್ಥೆಯಿಂದಾಗಿ ತಡವಾಗಿ ಪರೀಕ್ಷಾ ಕೇಂದ್ರ ತಲುಪಿದ ವಿದ್ಯಾರ್ಥಿಯೊಬ್ಬ ಯುಪಿಎಸ್ಸಿ ಪರೀಕ್ಷೆಯಿಂದ ವಂಚಿತನಾಗಿರುವ ಗಂಭೀರ ಆರೋಪ ಕೇಳಿಬಂದಿದೆ. ವೈಟ್ಫೀಲ್ಡ್ನ ತನ್ನ ಮನೆಯಿಂದ ಬೆಳಿಗ್ಗೆ 7 ಗಂಟೆಗೆ ಹೊರಟಿದ್ದರೂ ಎಕ್ಸಾಂ ಸೆಂಟರ್ ತಲುಪುವಾಗ ವಿದ್ಯಾರ್ಥಿಗೆ ತಡವಾಗಿದೆ. ಅಷ್ಟರಲ್ಲಾಗಲೇ ಗೇಟ್ ಕ್ಲೋಸ್ ಆಗಿದ್ದರಿಂದ ನಿಯಮಗಳ ಪ್ರಕಾರ ಪರೀಕ್ಷೆ ಬರೆಯಲು ಅಧಿಕಾರಿಗಳು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು, ಮೇ 24: ಸದಾ ಒಂದಿಲ್ಲೊಂದು ಕಾರಣಗಳಿಂದ ಸುದ್ದಿಯಲ್ಲಿರುವ ಬೆಂಗಳೂರಿನ (Bengaluru) ರಸ್ತೆಗಳ ದುರಾವಸ್ಥೆ ಈಗ ಮತ್ತೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ನಗರದ ಕಿತ್ತುಹೋದ ರೋಡ್ಗಳಿಂದ ವಿದ್ಯಾರ್ಥಿಯೋರ್ವ UPSC ಪರೀಕ್ಷೆಯಿಂದ ವಂಚಿತನಾಗಿರುವ ಆರೋಪ ಕೇಳಿಬಂದಿದೆ. ವೈಟ್ಫೀಲ್ಡ್, ಮಹಾದೇವಪುರ ಭಾಗದಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ವಿದ್ಯಾರ್ಥಿ ಚಾಲುಕ್ಯ ಸರ್ಕಲ್ ಆರ್. ಸಿ. ಕಾಲೇಜಿನ ಪರೀಕ್ಷಾ ಕೇಂದ್ರ ತಲುಪುವಷ್ಟರಲ್ಲಿ ಗೇಟ್ ಕ್ಲೋಸ್ ಆಗಿದೆ. ಹೀಗಾಗಿ ಯುಪಿಎಸ್ಸಿ ಪರೀಕ್ಷೆಗಾಗಿ ಸಿದ್ಧತೆ ನಡೆಸಿದ್ದ ವಿದ್ಯಾರ್ಥಿಯ ಶ್ರಮ ನೀರಲ್ಲಿ ಹೋಮ ಮಾಡಿದಂತಾಗಿದೆ ಎಂಬ ಮಾತುಗಳು ಕೇಳಿಬಂದಿವೆ.
ಮುಖ್ಯಾಂಶಗಳು
- ಮತ್ತೆ ಮುನ್ನೆಲೆಗೆ ಬಂದ ಬೆಂಗಳೂರು ರಸ್ತೆಗಳು ದುರಾವಸ್ಥೆ ವಿಚಾರ
- ನಗರದ ರಸ್ತೆಗುಂಡಿಗಳಿಗೆ ವಿದ್ಯಾರ್ಥಿಯ UPSC ಕನಸು ಬಲಿ?
- ವಿದ್ಯಾರ್ಥಿ ಪರೀಕ್ಷಾ ಕೇಂದ್ರ ತಲುಪುವುದರೊಳಗೆ ಗೇಟ್ ಕ್ಲೋಸ್!
ವಿದ್ಯಾರ್ಥಿಯ ಬೇಸರ
ಇನ್ನು ಹದಗೆಟ್ಟ ರಸ್ತೆಗಳ ಕಾರಣ ಪರೀಕ್ಷಾ ಕೇಂದ್ರ ತಲುಪಲು ತಡವಾಗಿ ಪರೀಕ್ಷೆಯಿಂದ ವಂಚಿತರಾಗಿರುವ ವಿದ್ಯಾರ್ಥಿ ಪ್ರಮೋದ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ವೈಟ್ಫೀಲ್ಡ್ನಲ್ಲಿರುವ ತನ್ನ ಮನೆಯಿಂದ ಮುಂಜಾನೆ 7 ಗಂಟೆಗೆ ಹೊರಟಿದ್ದೆ. ಮೆಜೆಸ್ಟಿಕ್ನಿಂದ ಪರೀಕ್ಷಾ ಕೇಂದ್ರದವರೆಗೆ ಆಟೋದಲ್ಲಿ ಬಂದಿದ್ದೇನೆ. ವೈಟ್ಫೀಲ್ಡ್ , ಮಹಾದೇವಪುರ ರಸ್ತೆ ಸರಿಯಿಲ್ಲದ ಕಾರಣ, ಆಟೋಗಳು ಬರಲ್ಲ. ಹೀಗಾಗಿ ಪರೀಕ್ಷಾ ಕೇಂದ್ರ ತಲುಪುವಾಗ ತಡವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಯುಪಿಎಸ್ಸಿ ಪರೀಕ್ಷಾ ಕೇಂದ್ರದ ಮೇಲ್ವಿಚಾರಕ ಅಧಿಕಾರಿಗಳಿಗೂ ಮನವಿ ಮಾಡಿದ್ದೇನೆ. ಬೆಂಗಳೂರಿನ ರೋಡ್ಗಳ ಸ್ಥಿತಿ ಬಗ್ಗೆ ನಿಮಗೆ ಗೊತ್ತಿದೆ. ಹೀಗಾಗಿ ಮನವಿಯನ್ನು ದಯವಿಟ್ಟು ಪರಿಗಣಿಸಿ ಎಂದಿದ್ದೆ. ಆದರೆ ಪ್ರವೇಶದ ಸ್ಕ್ರೀನಿಂಗ್ ಕ್ಲೋಸ್ ಹಿನ್ನಲೆ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿಲ್ಲ ಎಂದು ವಿದ್ಯಾರ್ಥಿ ಅಳಲುತೋಡಿಕೊಂಡಿದ್ದಾರೆ.
ಇದನ್ನೂ ಓದಿ: ತುಮಕೂರು ಮೆಟ್ರೋ ವಿಸ್ತರಣೆ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಗೃಹಸಚಿವ ಡಾ. ಜಿ. ಪರಮೇಶ್ವರ್
ಇನ್ನು ಒಟ್ಟು 6 ವಿದ್ಯಾರ್ಥಿಗಳು ಬೆಂಗಳೂರು ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಬಂದ ಕಾರಣ ಎಕ್ಸಾಂ ವಂಚಿತರಾಗಿದ್ದಾರೆ. 9 ಗಂಟೆಗೆ ಕರೆಕ್ಟ್ ಗೇಟ್ ಕ್ಲೋಸ್ ಮಾಡಿದ್ದು, ಒಂದು ನಿಮಿಷ ತಡವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದ ಕಾರಣ ಯುಪಿಎಸ್ಸಿ ಬರೆಯಲು ಕೆಲವರಿಗೆ ಸಾಧ್ಯವಾಗಿಲ್ಲ. ನೀಟ್ ಪರೀಕ್ಷೆಯ ಗಲಾಟೆ ಗದ್ದಲಗಳ ನಡುವೆ ಬೆಂಗಳೂರು ಸೇರಿ ದೇಶಾದ್ಯಂತ ಯುಪಿಎಸ್ಸಿ ಪ್ರಿಲಿಮ್ಸ್ ಪರೀಕ್ಷೆ ನಡೆದಿದೆ. ಕೇಂದ್ರ ಲೋಕಸೇವಾ ಆಯೋಗ ನಡೆಸುವ UPSC ಪೂರ್ವಭಾವಿ ಪರೀಕ್ಷೆಗೆ ಸೂಕ್ತ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ರಾಜ್ಯದ ಬೆಂಗಳೂರು, ಧಾರವಾಡ ಮತ್ತು ಮೈಸೂರಿನಲ್ಲಿ ಪ್ರಿಲಿಮ್ಸ್ ಪರೀಕ್ಷೆ ನಡೆದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




