Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಡಾ ಹಗರಣ: ವಾಷಿಂಗ್ ನಿರ್ಮಾ ಪೌಡರ್ ಹಾಕಿ ತೊಳೆದಿದ್ದಾರೆ: ಲೋಕಾಯುಕ್ತ ಕ್ಲೀನ್​ಚಿಟ್​ಗೆ ಅಶೋಕ್ ವ್ಯಂಗ್ಯ

ಭಾರೀ ಸದ್ದು ಮಾಡಿರುವ ಮುಡಾ ಹಗರಣ ಪ್ರಕರಣದ ತನಿಖೆಯನ್ನು ಮೈಸೂರು ಲೋಕಾಯುಕ್ತ ಪೊಲೀಸರು ಪೂರ್ಣಗೊಳಿಸಿ ವರದಿ ಸಿದ್ಧಪಡಿಸಿದ್ದಾರೆ. ಆದ್ರೆ, ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಮುನ್ನ ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ನೋಟಿಸ್​ ನೀಡಿದ್ದು, ಇದು ತನಿಖೆಗೆ ಅರ್ಹವಲ್ಲದ ಪ್ರಕರಣವಾಗಿದೆ ಎಂದು ಸಿಎಂ ಸಿದ್ದರಾಮಯ್ಯನವರಿಗೆ ಕ್ಲೀನ್​ಚಿಟ್ ನೀಡಿದೆ. ಇನ್ನು ಈ ಕ್ಲೀನ್​ಚಿಟ್​ಗೆ ವಿಪಕ್ಷದ ನಾಯಕರು ವ್ಯಂಗ್ಯವಾಡಿದ್ದಾರೆ.

ಮುಡಾ ಹಗರಣ: ವಾಷಿಂಗ್ ನಿರ್ಮಾ ಪೌಡರ್ ಹಾಕಿ ತೊಳೆದಿದ್ದಾರೆ: ಲೋಕಾಯುಕ್ತ ಕ್ಲೀನ್​ಚಿಟ್​ಗೆ ಅಶೋಕ್ ವ್ಯಂಗ್ಯ
Muda Scam
Follow us
ರಮೇಶ್ ಬಿ. ಜವಳಗೇರಾ
|

Updated on: Feb 19, 2025 | 5:25 PM

ಬೆಂಗಳೂರು, (ಫೆಬ್ರವರಿ 19):ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಇತರೆ ಆರೋಪಿಗಳಿಗೆ ಮೈಸೂರು ಲೋಕಾಯುಕ್ತ ಕ್ಲೀಚ್​ಚಿಟ್ ನೀಡಿದೆ. ಇದು ತನಿಖೆಗೆ ಅರ್ಹವಲ್ಲದ ಪ್ರಕರಣವಾಗಿದೆ ಎಂದು ದೂರುದಾರ ಸ್ನೇಹಮಯಿಕೃಷ್ಣ ಅವರಿಗೆ ಲೋಕಾಯುಕ್ತ ತಿಳಿಸಿದೆ. ಇನ್ನು ಲೋಕಾಯುಕ್ತ ವರದಿಗೆ ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಿರೋಧ ಪಕ್ಷದ ನಾಯಕ ಅಶೋಕ್ ಮಾತನಾಡಿ, ಲೋಕಾಯುಕ್ತ ಅಧಿಕಾರಿಗಳು ವರದಿ ನಾಳೆ ಕೊಡುತ್ತಿದ್ದು, ಅವರು ಅಧಿಕಾರಿಗಳ ಮೇಲೆ ಗೂಬೆ ಕೂರಿಸುತ್ತಾರೆ. ಸಿಎಂ ಸಿದ್ದರಾಮಯ್ಯನವರ ಕುಟುಂಬದವರು ಮುಗ್ಧರು. ಕ್ಲೀನ್​ಚೀಟ್ ಅಲ್ಲ, ನಿರ್ಮಾ ಪೌಡರ್ ಹಾಕಿ ತೊಳೆದಿದ್ದಾರೆ ಎಂದು ಲೋಕಾಯುಕ್ತ ವರದಿಗೆ ವ್ಯಂಗ್ಯವಾಡಿದರು.

ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅಶೋಕ್, ಏನು ಇಲ್ಲ ಅಂದ್ರೆ ದುಬಾರಿ ವಕೀಲರನ್ನ ಏಕೆ ಕರೆ ತಂದ್ರಿ? ಹಳ್ಳಿಯ ವಕೀಲರಿಂದ ಕೇಸ್ ಎದುರಿಸಬಹುದಿತ್ತು ಅಲ್ವಾ ? ಇದು ಮುಚ್ಚುಹಾಕುವ ಹುನ್ನಾರ. ಪೊಲೀಸ್ ಅಧಿಕಾರಿಗೆ ವರ್ಗಾವಣೆ, ಪ್ರಮೋಷನ್ ಬೇಕು. ಅದಕ್ಕೆ ಹೀಗೆ ಮಾಡಿದ್ದಾರೆ. ಸಿಬಿಐ ತನಿಖೆಗೆ ಕೊಟ್ರೆ ಮಾತ್ರ ಸತ್ಯ ಹೊರಗಡೆ ಬರುತ್ತೆ. ಲೋಕಾಯುಕ್ತ ಅಧಿಕಾರಿಗಳು ವರದಿ ನಾಳೆ ಕೊಡ್ತಿದ್ದಾರೆ. ಅವರು ಅಧಿಕಾರಿಗಳ ಮೇಲೆ ಗೂಬೆ ಕೂರಿಸುತ್ತಾರೆ. ಸಿಎಂ ಸಿದ್ದರಾಮಯ್ಯನವರ ಕುಟುಂಬದವರು ಮುಗ್ಧರು. ಕ್ಲೀನ್​ಚೀಟ್ ಅಲ್ಲ, ನಿರ್ಮಾ ಪೌಡರ್ ಹಾಕಿ ತೊಳೆದಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ಮುಡಾ ಕೇಸ್‌ನಲ್ಲಿ ಸಿದ್ದರಾಮಯ್ಯಗೆ ಬಿಗ್ ರಿಲೀಫ್‌: ತನಿಖೆಗೆ ಅರ್ಹವಲ್ಲ ಎಂದ ಲೋಕಾಯುಕ್ತ

ಇದು ಪೂರ್ವ ನಿಯೋಜಿತವಾದ ವರದಿ. ತಪ್ಪಿಲ್ಲ ಅಂದರೆ 14 ಸೈಟ್ ಯಾಕೆ ವಾಪಸ್ ಕೊಟ್ಟರು? A1, A2, A3 ತಪ್ಪಿಲ್ಲ ಅಂತ ಲೋಕಾಯುಕ್ತ ಹೇಳುತ್ತೆ. ಲೇಔಟ್ ಅಕ್ರಮ, ಅದು ಅವರಿಗೆ ಗೊತ್ತೇ ಇಲ್ಲ ಅಂತಾರೆ. 50:50 ಸೈಟ್ ಬೇಕು ಅಂದಾಗ ಮಾತ್ರ ನೋಡಿದ್ದಾರೆ. ಸಿದ್ದರಾಮಯ್ಯ ಒಂದು ಫೋನ್ ಕಾಲ್ ಕೂಡ ಮಾಡಿಲ್ಲ. ಸಿದ್ದರಾಮಯ್ಯನವರು ಒಂದು ಪತ್ರ ಕೂಡ ಬರೆದಿಲ್ಲ. ಸಿಎಂ ಸಿದ್ದರಾಮಯ್ಯ ಸಿಕ್ಕಿ ಹಾಕಿಕೊಳ್ಳೋಕೆ‌ ಮೂರ್ಖರಾ? ಎಂದರು.

ಲೋಕಾಯುಕ್ತ ಬಿ ರಿಪೋರ್ಟ್​ನಿಂದ 100% ಬೇಜಾರಾಗಿದೆ. ನಮಗಿಂತ ಜಾಸ್ತಿ 200% ಕಾಂಗ್ರೆಸ್​​ನ ಕೆಲವರಿಗೆ ಬೇಜಾರು. ಸಿಎಂ ಆಗಬೇಕೆಂಬ ಕನಸು ಇಟ್ಟುಕೊಂಡವರಿಗೆ ನಿದ್ರೆ ಇಲ್ಲ. ಸಿಎಂ ಆಗಬೇಕು ಎಂಬುವವರ ಕನಸು ನುಚ್ಚು ನೂರಾಗಿದೆ. ನಾಳೆ ಬೆಂಗಳೂರಿನಲ್ಲಿ ನಾವು 10 ಜನ ಸಭೆ ಸೇರುತ್ತಿದ್ದೇವೆ. ಸಭೆಯಲ್ಲಿ ಮುಡಾ ಪ್ರಕರಣದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ಸಿಬಿಐಗೆ ಕೊಡದಿದ್ರೆ ಸತ್ಯ ಹೊರಗೆ ಬರಲ್ಲ

ಇನ್ನು ಲೋಕಾಯುಕ್ತ ವರದಿ ಬಗ್ಗೆ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಮುಡಾ ಅಕ್ರಮದ ಬಗ್ಗೆ ಸಿಬಿಐ ತನಿಖೆಗೆ ನೀಡಿದರೆ ಬಯಲಾಗುತ್ತದೆ. ಕಾಂಗ್ರೆಸ್​ನವರಿಗೆ ಸಿಬಿಐ ಮೇಲೆ ವಿಶ್ವಾವಿಲ್ಲವೆಂದರೆ ಏನರ್ಥ. ಕಾಂಗ್ರೆಸ್​ನವರು ಕೇಂದ್ರದಲ್ಲಿದ್ದಾಗ ನಡೆದ ತನಿಖೆಗಳ ಸ್ಥಿತಿ ಏನು? ಹಾಗಾದರೆ ಕಾಂಗ್ರೆಸ್​ನವರು ಸಿಬಿಐ ದುರ್ಬಳಕೆ ಮಾಡಿಕೊಂಡಿದ್ದರಾ? ಮುಡಾ ಅಕ್ರಮದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರಲಿದೆ. ಕಾನೂನು ಹೋರಾಟ ಮಾಡುವ ಬಗ್ಗೆ ಪಕ್ಷದಲ್ಲಿ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ನಾವು ಮೈಸೂರಿನವರೆಗೆ ಪಾದಯಾತ್ರೆ ಮಾಡಿದ್ವಿ. ಸಿಎಂ ನನಗೂ ಇದಕ್ಕೂ ಸಂಬಂಧ ಇಲ್ಲ ಅಂದ್ರು. ಆಮೇಲೆ 14 ಸೈಟ್ ವಾಪಸ್ ಕೊಟ್ಟರು. ಇದೀಗ ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟಿದೆ. ಹಾಗಾದ್ರೆ ನ್ಯಾಯ ಯಾರಿಗೆ ಕೊಟ್ಟಿದ್ದಾರೆ? ಇದು ನಮಗೆ ನಿರೀಕ್ಷೆತವೇ. ಯಾವುದೇ ಅನಿರೀಕ್ಷಿತ ಇರಲಿಲ್ಲ. ಸಿಬಿಐಗೆ ಕೊಡದಿದ್ರೆ ಸತ್ಯ ಹೊರಗೆ ಬರಲ್ಲ ಅಂದ್ವಿ. ಇವರು ಧೈರ್ಯ ಇದ್ದಿದ್ದರೆ ಸಿಬಿಐಗೆ ಕೊಡಬೇಕಿತ್ತು. ಸಿಬಿಐ ಕೊಡಬಾರದು ಎಂದು ಕೋರ್ಟ್ ಗೆ ಹೋಗುತ್ತಾರೆ. ಅತ್ಯುನ್ನತ ಅಡ್ವೋಕೇಟ್ ಗಳನ್ನ ಕರೆಯಿಸಿ ವಾದ ಮಾಡಿಸುತ್ತಾರೆ. 14 ಸೈಟುಗಳಿಗೆ ಎಷ್ಟು ಬೆಲೆ ಇತ್ತು? ಅಷ್ಟೇ ಹಣವನ್ನ ಅಡ್ವೋಕೇಟ್ ಗೆ ಕೊಟ್ಟಿದ್ದಾರೆ. ಅಪಾದನೆ‌ ಬರುತ್ತಲೇ ರಾಜೀನಾಮೆ ಕೊಡಬೇಕಿತ್ತು. ಮೈಸೂರಿನಲ್ಲೂ ಅವರಿಗೆ ಬೇಕಾದ ಅಧಿಕಾರಿಗಳು ಇರಬಹುದು. ಅದಕ್ಕೆ ಮುಚ್ಚಿಹಾಕುವ ಕೆಲಸ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ