ಶಿರಾಡಿಘಾಟ್‌ನಲ್ಲಿ 23 ಕಿಲೋಮೀಟರ್ ಸುರಂಗ ಮಾರ್ಗ; ಕೇಂದ್ರದಿಂದ ಸಿಕ್ತು ಗ್ರೀನ್ ಸಿಗ್ನಲ್..

ಇಲ್ಲಿ ರಸ್ತೆ ನಿರ್ಮಾಣವೂ ಕಷ್ಟ ಎನ್ನೋದನ್ನ ಅರಿತ ಸರ್ಕಾರ ಈ ಮಾರ್ಗದಲ್ಲಿ 23 ಕಿಲೊಮೀಟರ್‌ನ ಸುರಂಗ ನಿರ್ಮಿಸಲು ಅಣಿಯಾಗಿದೆ. ಈ ಯೋಜನೆಗೆ ನಿತಿನ್ ಗಡ್ಕರಿಯವರೇ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಶಿರಾಡಿಘಾಟ್‌ನಲ್ಲಿ 23 ಕಿಲೋಮೀಟರ್ ಸುರಂಗ ಮಾರ್ಗ; ಕೇಂದ್ರದಿಂದ ಸಿಕ್ತು ಗ್ರೀನ್ ಸಿಗ್ನಲ್..
ಸಾಂದರ್ಭೀಕ ಚಿತ್ರ
Follow us
| Updated By: ರಶ್ಮಿ ಕಲ್ಲಕಟ್ಟ

Updated on: Jan 03, 2021 | 12:04 PM

ಹಾಸನ: ರಾಜಧಾನಿ ಬೆಂಗಳೂರು ಹಾಗೂ ಬಂದರು ನಗರಿ ಮಂಗಳೂರು ನಡುವೆ ಉತ್ತಮ ರಸ್ತೆ ನಿರ್ಮಾಣವಾಗಬೇಕು, ಸರಕು ಸಾಗಾಟ ಸೇರಿ ಜನ ಸಂಚಾರಕ್ಕೆ ಸುಸಜ್ಜಿತ ರಸ್ತೆ ಮಾರ್ಗಬೇಕು ಅನ್ನೋದು ದಶಕಗಳ ಬೇಡಿಕೆ. ಈ ಬೇಡಿಕೆ ಈಗ ನೆರವೇರುವ ಕಾಲ ಬಂದಿದೆ. ಶಿರಾಡಿಘಾಟ್‌ನಲ್ಲಿ ಸುಗಮ ಸಂಚಾರಕ್ಕೆ ಯೋಜನೆಯೊಂದು ಸಿದ್ಧವಾಗಿ, ಅದಕ್ಕೆ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದೆ.

ಭಾರತ್ ಮಾಲಾ ಯೋಜನೆಯಡಿ ಕಾಮಗಾರಿಗೆ ಗ್ರೀನ್ ಸಿಗ್ನಲ್

ಅಂತೂ ಇಂತು ಶಿರಾಡಿ ಘಾಟ್‌ನ ಮಹತ್ವದ ಯೋಜನೆಗೆ ಹಸಿರು ನಿಶಾನೆ ಸಿಕ್ಕಿದೆ. 2018ರಲ್ಲಿ ರೂಪಿತವಾಗಿದ್ದ ಯೋಜನೆಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಅಂದಹಾಗೆ, ಬೆಂಗಳೂರಿನಿಂದ ಮಂಗಳೂರು ನಡುವೆ ಪ್ರಯಾಣ ಮಾಡಲು ಶಿರಾಡಿಘಾಟ್ ಹೊರತು ಪಡಿಸಿ ಉಳಿದೆಡೆ ಚತುಷ್ಪಥ ರಸ್ತೆ ಇದೆ. ಆದ್ರೆ ಶಿರಾಢಿಘಾಟ್ ಪಶ್ಚಿಮ ಘಟ್ಟ ಪ್ರದೇಶ. ಎತ್ತ ನೋಡಿದರೂ ಗಿರಿ ಶಿಖರಗಳು ಸಾಲು ಇರೋದ್ರಿಂದ ಇಲ್ಲಿ ನಾಲ್ಕು ಪಥದ ರಸ್ತೆ ಮಾಡಿದ್ರೆ ಲಕ್ಷಾಂತರ ಮರಗಳನ್ನ ಕಡಿಯಬೇಕಾಗುತ್ತೆ.

ಅಷ್ಟೇ ಅಲ್ಲ ಇಲ್ಲಿ ರಸ್ತೆ ನಿರ್ಮಾಣವೂ ಕಷ್ಟ ಎನ್ನೋದನ್ನ ಅರಿತ ಸರ್ಕಾರ ಈ ಮಾರ್ಗದಲ್ಲಿ 23 ಕಿಲೊಮೀಟರ್‌ನ ಸುರಂಗ ನಿರ್ಮಿಸಲು ಅಣಿಯಾಗಿದೆ. ಈ ಯೋಜನೆಗೆ ನಿತಿನ್ ಗಡ್ಕರಿಯವರೇ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಏಳು ಸೇತುವೆ ಹಾಗೂ ಆರು ಸುರಂಗಗಳುಳ್ಳ, ಸುರಂಗ ಮಾರ್ಗ ನಿರ್ಮಿಸಲು 12 ಸಾವಿರ ಕೋಟಿ ರೂಪಾಯಿ ಮೊತ್ತದ ಯೋಜನೆ ರೂಪಿಸಲಾಗಿದೆ.

ಹಾಸನ ಜಿಲ್ಲೆಯ ಮಾರನಹಳ್ಳಿ ಬಳಿಯಿಂದ ಗುಂಡ್ಯವರೆಗೂ ಸುರಂಗ ಮಾರ್ಗ ನಿರ್ಮಾಣವಾಗಲಿದೆ, ಅಡ್ಡಹೊಳೆ, ಗುಂಡ್ಯ, ಎಡಕುಮೇರಿ, ಕಡಗರವಳ್ಳಿ, ಮಾರನಹಳ್ಳಿ ಮೂಲಕ ಸುರಂಗ ಮಾರ್ಗ ಸಾಗಲಿದೆ. ಇದರಿಂದ ಸರಕು ಸಾಗಣೆ ಸೇರಿದಂತೆ ಇತರೆ ವಾಹನ ಸಂಚಾರಕ್ಕೂ ಅನುಕೂಲ ಆಗಲಿದೆ.

ಅಂದಹಾಗೆ ಎತ್ತಿನಹೊಳೆ ಸೇರಿದಂತೆ ಹಲವು ಕಿರು ಜಲವಿದ್ಯುತ್ ಯೋಜನೆಗಳಿಂದ ಅಪಾರ ಪ್ರಮಾಣದ ಪರಿಸರ ಹಾನಿಯಾಗಿದೆ. ಇಲ್ಲಿನ ಸಾವಿರಾರು ಜೀವ ಪ್ರಭೇದಗಳಿಗೆ ಸಮಸ್ಯೆಯಾಗಿದೆ. ಅದನ್ನ ತಪ್ಪಿಸೋಕೆ ಕಡಿಮೆ ಹಾನಿಯ ಸುರಂಗ ಮಾರ್ಗ ನಿರ್ಮಾಣವೇ ಹೆಚ್ಚು ಒಳ್ಳೆಯದು ಅನ್ನೋ ಅಭಿಪ್ರಾಯ ಪರಿಸರ ತಜ್ಞರದ್ದು.

ಒಟ್ನಲ್ಲಿ ಹೆಚ್ಚು ಹೆಚ್ಚು ವಾಹನಗಳು ಸಂಚರಿಸೋ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬೃಹತ್ ಸುರಂಗ ಮಾರ್ಗದ ರಸ್ತೆ ನಿರ್ಮಾಣಕ್ಕೆ ಯೋಜನೆಯೇನೋ ಸಿದ್ದಗೊಂಡಿದ್ದೆ. ಈ ಯೋಜನೆ  ಶೀಘ್ರವಾಗಿ ಜಾರಿಯಾದರೆ ಈ ಮಾರ್ಗದಲ್ಲಿ ಸಂಚಾರ ಮಾಡೋ ವಾಹನ ಸವಾರರಿಗೆ ಸುಗಮ ಸಂಚಾರದ ಜೊತೆಗೆ ಸಮಯವೂ ಉಳಿತಾಯವಾಗಲಿದೆ.

ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಮಾರ್ಗಕ್ಕೆ ಪ್ರಧಾನಿ ಚಾಲನೆ