ಬಂಡೀಪುರ ಸಫಾರಿಗೆ ಹೋಗುವ ಪ್ರವಾಸಿಗರಿಗೆ ಸಿಹಿ ಸುದ್ದಿ ನೀಡಿದ ಅರಣ್ಯ ಇಲಾಖೆ
ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವುದರಿಂದ, ಅರಣ್ಯ ಇಲಾಖೆ ನಾಲ್ಕು ಹೊಸ ಸಫಾರಿ ವಾಹನಗಳನ್ನು ಖರೀದಿಸಲು ಯೋಜಿಸಿದೆ. ಈಗಾಗಲೇ 27 ವಾಹನಗಳು ಬಳಕೆಯಲ್ಲಿದ್ದು, ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಇದು ಅಗತ್ಯವಾಗಿದೆ. ಬಂಡೀಪುರ ಉದ್ಯಾನವನದಲ್ಲಿ ಹುಲಿ, ಆನೆ, ಚಿರತೆ ಮುಂತಾದ ವನ್ಯಜೀವಿಗಳಿವೆ.

ಚಾಮರಾಜನಗರ, ಮೇ 02: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ (Bandipur National Park) ರಾಜ್ಯದಲ್ಲೇ ಅತಿ ಹೆಚ್ಚು ಹುಲಿ, ಚಿರತೆ ಹಾಗೂ ಆನೆಗಳಿರುವ ತಾಣವಾಗಿದೆ. ಪ್ರತಿ ವರ್ಷ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಲ್ಲಿನ ವನ್ಯ ಸಂಪತ್ತನ್ನು ಕಣ್ತುಂಬಿಕೊಳ್ಳಲು ರಾಜ್ಯವಷ್ಟೇ ಅಲ್ಲ ದೇಶದ ಮೂಲೆ ಮೂಲೆಗಳಿಂದಲೂ ಪ್ರವಾಸಿಗರು ಬರುತ್ತಿದ್ದಾರೆ. ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಮತ್ತೇ ನಾಲ್ಕು ಸಫಾರಿ ವಾಹನ ಖರೀದಿಸಲು ಅರಣ್ಯ ಇಲಾಖೆ ಯೋಜಿಸಿದೆ.
ಸುಮಾರು 1024 ಸಾವಿರ ಚದರ ಕಿಮೀ ವ್ಯಾಪ್ತಿಯಲ್ಲಿ ವಿಸ್ತರಿಸಿರುವ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ದಕ್ಷಿಣ ಭಾರತದ ಅತಿ ದೊಡ್ಡ ಹುಲಿ ಸಂರಕ್ಷಿತ ಪ್ರದೇಶವೂ ಆಗಿದೆ. 191 ಕ್ಕೂ ಹೆಚ್ಚು ಹುಲಿಗಳು, 1116 ಕ್ಕೂ ಹೆಚ್ಚು ಆನೆಗಳು ಸೇರಿದಂತೆ ಚಿರತೆ ಕರಡಿ, ಜಿಂಕೆ, ಕಾಡೆಮ್ಮೆ, ಮೊದಲಾದ ವನ್ಯಜೀವಿಗಳ ಆವಾಸ ಸ್ಥಾನವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಬಂಡೀಪುರದ ಸಫಾರಿ ನಂತರ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು ಪರಿಸರ ಪ್ರವಾಸೋದ್ಯಮವು ಸಾಕಷ್ಟು ಅಭಿವೃದ್ಧಿಯಾಗಿದೆ.
ಸಫಾರಿ ಹಾಗೂ ಹಸಿರು ಪ್ರವೇಶ ಶುಲ್ಕದಿಂದ ಅಧಿಕ ಆದಾಯ ಬರುತ್ತಿದೆ. ಬಂಡೀಪುರದ ಸಫಾರಿಗೆ ಆಗಮಿಸುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಸಫಾರಿಗೆ ಬಂದು ಟಿಕೆಟ್ ಸಿಗದೆ ವಾಪಾಸ್ ಹೋಗುವ ಪ್ರವಾಸಿಗರ ಸಂಖ್ಯೆಯೂ ಇದೆ. ಯಾರಿಗೂ ನಿರಾಶೆ ಮಾಡದ ಆಲೋಚನೆ ಮಾಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ವಾಹನ ಖರೀದಿಸುವ ಆಲೋಚನೆಯಲ್ಲಿದ್ದಾರೆ.
ಇನ್ನು ಬಂಡೀಪುರ ಅಪಾರ ವನ್ಯ ಸಂಪತ್ತನ್ನು ಹೊಂದಿದೆ. ಹುಲಿ, ಚಿರತೆ, ಕರಡಿ, ಆನೆ, ಕಾಡೆಮ್ಮೆ ಸೇರಿದಂತೆ ಅನೇಕ ವನ್ಯ ಪ್ರಾಣಿಗಳನ್ನು ಸಫಾರಿ ವೇಳೆ ಕಣ್ತುಂಬಿಕೊಳ್ಳಬಹುದಾಗಿದೆ. ಕೇರಳ, ತಮಿಳುನಾಡಿನ ಊಟಿಗೆ ಹೋಗುವ ಪ್ರವಾಸಿಗರು ಬಂಡೀಪುರದ ಮೇಲೆ ಹಾದುಹೋಗುವ ಹಿನ್ನೆಲೆಯಲ್ಲಿ ಸಫಾರಿ ನಡೆಸಿ ಹೋಗಲೂ ಇಚ್ಚಿಸುತ್ತಾರೆ. ಬಂಡೀಪುರದ ಸಫಾರಿ ವಾಹನದಲ್ಲಿ 31 ವಾಹನ ಬಳಸಲು ಅನುಮತಿಯಿದೆ. ಆದರೆ ಇಲ್ಲಿಯವರೆಗೂ 27 ವಾಹನಗಳನ್ನಷ್ಟೇ ಬಳಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ವಾಹನಗಳನ್ನು ಖರೀದಿಸಿ ಸಫಾರಿಗೆ ಬಳಸುವ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ, ರಾಯಚೂರು ಡಿಸಿ ಕಚೇರಿ ಸ್ಫೋಟಿಸುವುದಾಗಿ ಬೆದರಿಕೆ ಸಂದೇಶ
ಬಂಡಿಪುರದ ಅರಣ್ಯ ಹಾಗೂ ಇಲ್ಲಿನ ವನ್ಯಜೀವಿಗಳ ವೀಕ್ಷಣೆಗೆಂದು ನಿತ್ಯ ನೂರಾರು ಪ್ರವಾಸಿಗರು ತೆರಳುತ್ತಾರೆ. ಹೀಗೆ ತೆರಳುವ ಪ್ರವಾಸಿಗರಿಗೆ ಇಲ್ಲಿ ಖಂಡಿತ ನಿರಾಸೆಯಾಗುವುದಿಲ್ಲ. ಸಫಾರಿಗೆ ತೆರಳುವ ಪ್ರವಾಸಿಗರು ಹಸಿರ ಸಿರಿಯನ್ನು ಕಣ್ತುಂಬಿಕೊಂಡು ವನ್ಯಜೀವಿಗಳನ್ನು ನೋಡಿ ಖುಷಿಪಡುತ್ತಾರೆ. ಒಟ್ಟಾರೆ ತನ್ನ ವನ್ಯಸಂಪತ್ತಿನಿಂದ ಕಂಗೊಳಿಸುತ್ತಿರುವ ಬಂಡೀಪುರ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದು ವರ್ಷದಿಂದ ವರ್ಷಕ್ಕೆ ಆದಾಯ ಹೆಚ್ಚಾಗುವ ಜೊತೆಗೆ ಬರುವ ಪ್ರವಾಸಿಗರ ಸಂಖ್ಯೆಯೂ ದ್ವಿಗುಣವಾಗುತ್ತಿದೆ.