ಚಾಮರಾಜನಗರದಲ್ಲಿ 5 ಹುಲಿಗಳ ಸಾವು ಕೇಸ್: ಕ್ರಿಮಿನಾಶಕ ಬಳಸಿರುವುದು ವರದಿಯಲ್ಲಿ ದೃಢ
ಚಾಮರಾಜನಗರದ ಮಲೆ ಮಹದೇಶ್ವರ ವನ್ಯಧಾಮದಲ್ಲಿ 5 ಹುಲಿಗಳ ಹತ್ಯೆ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿತ್ತು. ಇದೀಗ ಹುಲಿಗಳ ಹತ್ಯೆಗೆ ಕಾರ್ಬೋಫ್ಯುರಾನ್ ಕೀಟನಾಶಕ ಬಳಸಿರುವುದು ಫೋರೆನ್ಸಿಕ್ ಸೈನ್ಸ್ ಲ್ಯಾಬ್ ವರದಿಯಲ್ಲಿ ದೃಢವಾಗಿದೆ. ಟಿವಿ9ಗೆ ಅರಣ್ಯ ಇಲಾಖೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಚಾಮರಾಜನಗರ, ಜುಲೈ 14: ಮಲೆ ಮಹದೇಶ್ವರ (Male Mahadeshwara) ವನ್ಯಧಾಮದಲ್ಲಿ 5 ಹುಲಿಗಳ (Tigers) ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹುಲಿಗಳ ಹತ್ಯೆಗೆ ‘ಕಾರ್ಬೋಫ್ಯುರಾನ್ ಕೀಟನಾಶಕ’ ಬಳಕೆ ಮಾಡಿರುವುದು ಇನ್ಸಿಟ್ಯೂಟ್ ಆಫ್ ಅನಿಮಲ್ ಹೆಲ್ತ್ & ವೆಟರ್ನರಿ ಬಯೋಲಾಜಿಕಲ್ ಫೋರೆನ್ಸಿಕ್ ಸೈನ್ಸ್ ಲ್ಯಾಬ್ ವರದಿಯಲ್ಲಿ ದೃಢ ಪಟ್ಟಿದೆ. ಈ ಬಗ್ಗೆ ಟಿವಿ9 ಗೆ ಅರಣ್ಯ ಇಲಾಖೆ ಉನ್ನತ ಮೂಲಗಳಿಂದ ಮಾಹಿತಿ ನೀಡಲಾಗಿದೆ. ಉನ್ನತ ಮಟ್ಟದ ತನಿಖಾ ಸಮಿತಿ ಶೀಘ್ರದಲ್ಲೇ ಅಂತಿಮ ವರದಿ ಸಲ್ಲಿಸಲಿದ್ದು, ಆ ಬಳಿಕ ಇನ್ನಷ್ಟು ಮಾಹಿತಿಗಳು ಬಹಿರಂಗವಾಗುವ ಸಾಧ್ಯತೆ ಇದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮೀಣ್ಯಂ ಪ್ರದೇಶದಲ್ಲಿ ರಸ್ತೆ ಪಕ್ಕದ 100 ಮೀಟರ್ ದೂರದಲ್ಲೇ 5 ಹುಲಿಗಳು ಸಾವನ್ನಪ್ಪಿದ್ದವು. ಮೊದಲಿಗೆ ವಿಷಹಾಕಿ ಕೊಂದಿರುವ ಶಂಕೆ ವ್ಯಕ್ತಪಡಿಸಲಾಗಿತ್ತು. ಬಳಿಕ ಹುಲಿಗಳ ಸಾವಿಗೆ ವಿಷಪ್ರಾಶನವೇ ಕಾರಣ ಅನ್ನೋದು ಖಚಿತವಾಗಿತ್ತು. ಆದರೆ ಆ ವಿಷ ಯಾವುದು? ಎಷ್ಟು ಪ್ರಮಾಣದಲ್ಲಿ ಹಾಕಲಾಗಿತ್ತು ಅಂತಾ ತಿಳಿಯಲು ಲ್ಯಾಬ್ಗೆ ಸ್ಯಾಂಪಲ್ ಕಳಿಸಲಾಗಿತ್ತು. ಇದೀಗ ಅದರ ವರದಿ ಪ್ರಕಾರ ಹುಲಿ ಬೇಟೆಗೆ ಒಳಗಾಗಿದ್ದ ಹಸುವಿನ ಶವದ ಮೇಲೆ ಕಾರ್ಬೋಫ್ಯುರಾನ್ ಕೀಟನಾಶಕ ಸಿಂಪಡಣೆ ಮಾಡಿರುವುದು ದೃಢವಾಗಿದೆ.
ಇದನ್ನೂ ಓದಿ: 5 ಹುಲಿಗಳ ಸಾವು ಪ್ರಕರಣ: ಉನ್ನತ ಸಮಿತಿಯ ಪ್ರಾಥಮಿಕ ವರದಿಯಲ್ಲಿ ಸ್ಫೋಟಕ ಅಂಶ ಬಯಲಿಗೆ
ಹಸುವನ್ನು ಕೊಂದಿದ್ದಕ್ಕೆ ಪ್ರತೀಕಾರವಾಗಿ ಹುಲಿ ಹತ್ಯೆಗೆ ಆರೋಪಿಗಳು ಕಾರ್ಬೋಫ್ಯುರಾನ್ ಕೀಟನಾಶಕ ಬಳಕೆ ಮಾಡಿದ್ದಾರೆ. ವಾಸನೆ ರಹಿತವಾಗಿರುವ ಈ ಕಾರ್ಬೋಫ್ಯುರಾನ್ ಕೀಟನಾಶಕವನ್ನು ಕೊಬ್ಬಿನಾಂಶ ಹೆಚ್ಚಿರುವ ಹಸುವಿನ ಹಿಂಭಾಗದಲ್ಲಿ ಸಿಂಪಡಣೆ ಮಾಡಲಾಗಿದ್ದು, ಅದನ್ನು ತಿಂದು ಹುಲಿಗಳ ಸಾವಾಗಿರುವುದು ಉನ್ನತ ಮಟ್ಟದ ತನಿಖೆಯಲ್ಲಿ ದೃಢಪಟ್ಟಿದೆ.
ಪ್ರಕರಣ ಹಿನ್ನಲೆ
ಇತ್ತೀಚೆಗೆ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ತಾಯಿ ಹುಲಿ ಸೇರಿದಂತೆ 3 ಹೆಣ್ಣು ಮತ್ತು 1 ಗಂಡು ಮರಿ ಹುಲಿಗಳು ಅಸಹಜವಾಗಿ ಸಾವನ್ನಪ್ಪಿದ್ದವು. ಹುಲಿಗಳ ಅಸಹಜ ಸಾವು ಪ್ರಕರಣವನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿತ್ತು. ಬಳಿಕ ವಿಷಪ್ರಾಶಣ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿತ್ತು.
ಇದನ್ನೂ ಓದಿ: ಚಾಮರಾಜನಗರ: ಹುಲಿ ಹಂತಕರು 3 ದಿನ ಅರಣ್ಯಾಧಿಕಾರಿಗಳ ಕಸ್ಟಡಿಗೆ
ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಯಾಗುತ್ತಿದ್ದಂತೆ ಸರ್ಕಾರ ಸಮಿತಿ ಕೂಡ ರಚನೆ ಮಾಡಿತ್ತು. ಬಳಿಕ ಪೊಲೀಸರು ಐದು ಹುಲಿಗಳನ್ನ ಕೊಂದ ಮೂವರು ಕಿರಾತಕರನ್ನು ಕೊನೆಗೂ ಅರೆಸ್ಟ್ ಮಾಡಿದ್ದರು. ಪೊಲೀಸರ ವಿಚಾರಣೆಯಲ್ಲಿ ಹಸು ಕೊಂದಿದ್ದಕ್ಕೆ ಪ್ರತೀಕಾರವಾಗಿ ಹುಲಿ ಹತ್ಯೆ ಮಾಡಿರುವುದಾಗಿ ಆರೋಪಿಗಳು ಬಾಯಿಬಿಟ್ಟಿದ್ದರು. ಅಲ್ಲದೇ ಹುಲಿಗಳ ಸಾವಿಗೆ ಅಧಿಕಾರಿಗಳ ಕರ್ತವ್ಯಲೋಪ ಆರೋಪ ಕೂಡ ಕೇಳಿಬಂದಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







