ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಯುವಕನಿಗೆ ವಿಶಿಷ್ಟ ಶಿಕ್ಷೆ ವಿಧಿಸಿದ ಕೋರ್ಟ್: ಏನದು?
ಚಾಮರಾಜನಗರ ನ್ಯಾಯಾಲಯವು ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಯುವಕನಿಗೆ ವಿನೂತನ ಶಿಕ್ಷೆ ನೀಡಿದೆ. ಸೈಬರ್ ಕ್ರೈಂ ಠಾಣೆಯಲ್ಲಿ ಮ್ಯೂಲ್ ಖಾತೆ ಪರಿಶೀಲನೆ ವೇಳೆ ಅಸಭ್ಯವಾಗಿ ನಡೆದುಕೊಂಡಿದ್ದ ಯುವಕನಿಗೆ ಎರಡು ದಿನಗಳ ಕಾಲ ಠಾಣೆಯಲ್ಲಿ ಸಮುದಾಯ ಸೇವೆ ಸಲ್ಲಿಸುವಂತೆ ಆದೇಶಿಸಿದೆ. ಆ ಮೂಲಕ ಹೊಸ ತಹಬದಿಗೆ ನಾಂದಿ ಹಾಡಲಾಗಿದೆ.

ಚಾಮರಾಜನಗರ, ಏಪ್ರಿಲ್ 12: ಪೊಲೀಸರ ಜೊತೆ ಅನುಚಿತ ವರ್ತನೆ ತೋರಿದ ಹಿನ್ನಲೆ ಚಾಮರಾಜನಗರ (Chamarajanagar) ಸತ್ರ ನ್ಯಾಯಾಲಯ ಆರೋಪಿ ಯುವಕನಿಗೆ ಠಾಣೆಯಲ್ಲಿ ಎರಡು ದಿನ ಸಮುದಾಯ ಸೇವೆ ಸಲ್ಲಿಸಲು ಸೂಚನೆ ನೀಡಿದೆ. ಆ ಮೂಲಕ ಮಾಡಿದ ತಪ್ಪಿಗೆ ವಿನೂತನ ಶಿಕ್ಷೆ ನೀಡುವುದರ ಜೊತೆಗೆ ಹೊಸ ತಹಬದಿಗೆ ನಾಂದಿ ಹಾಡಿದೆ.
ವಿನೂತನ ಶಿಕ್ಷೆಗೆ ಗುರಿಯಾದ ಯುವಕ
ಚಾಮರಾಜನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಮ್ಯೂಲ್ ಖಾತೆ ನೈಜತೆ ಪರಿಶೀಲನೆ ಸಂಬಂಧ ಹಾಜರಾಗಿದ್ದ ವೇಳೆ ಯುವಕ ಆನಂದ್ ಅಸಂಬದ್ಧವಾಗಿ ಹಾಗೂ ಏರು ಧ್ವನಿಯಲ್ಲಿ ಮಾತನಾಡಿದ್ದಾನೆ. ಅಷ್ಟೇ ಅಲ್ಲದೆ ಖಾತೆಗೆ ಸಂಬಂಧಿಸಿದ ಸಮರ್ಪಕ ದಾಖಲಾತಿ ನೀಡಲು ಹಿಂಜರಿದಿದ್ದಾನೆ. ಹೀಗಾಗಿ ನಗರದ ಸಿ.ಜೆ.ಎಂ ನ್ಯಾಯಾಲಯವು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎರಡು ದಿನ ಸಮುದಾಯ ಸೇವೆಗಾಗಿ ಪೊಲೀಸರಿಗೆ ಸಹಾಯ ಮಾಡುವಂತೆ ವಿನೂತನ ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ: ವಯೋವೃದ್ದರು, ಮಹಿಳೆಯರ ಪಾಲಿಗೆ ‘ಆಸರೆ’: ಒಂಟಿ ಬದುಕಿಗೆ ಬೆನ್ನೆಲುಬಾದ ಪೊಲೀಸ್ ಭರವಸೆ
ಮೂಲತಃ ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ನಿವಾಸಿ ಆನಂದ್, ಪೊಲೀಸರ ಜೊತೆ ಅನುಚಿತವಾಗಿ ವರ್ತಿಸಿದ ಹಿನ್ನೆಲೆ ಕರ್ನಾಟಕ ಪೊಲೀಸ್ ಕಾಯ್ದೆ ಅನ್ವಯ 1965 ಲಘು ಪ್ರಕರಣ ಕಲಂ ಒ ಆ್ಯಂಡ್ ಕ್ಯೂ ಅಡಿ ದಾಖಲಿಸಲಾಗಿತ್ತು.
ಪೊಲೀಸ್ ಠಾಣೆಯಲ್ಲಿ ಕೆಲಸ
ಪ್ರಕರಣ ಸಂಬಂಧ ಸಿ.ಜೆ.ಎಂ ನ್ಯಾಯಾಲಯವು ಆನಂದ್ಗೆ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಎರಡು ದಿನಗಳ ಕಾಲ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಠಾಣೆಗೆ ಬರುವವರನ್ನು ಬರ ಮಾಡಿಕೊಂಡು ಸೌಜನ್ಯಯುತವಾಗಿ ವ್ಯವಹರಿಸಿ, ಪೊಲೀಸರಿಗೆ ನೆರವಾಗುವ ಮೂಲಕ ಸಮುದಾಯ ಸೇವೆ ಸಲ್ಲಿಸುವಂತೆ ನ್ಯಾಯಾಲಯವು ಆದೇಶಿಸಿದೆ.
ಇದನ್ನೂ ಓದಿ: ವಿಜಯಪುರ: 21 ವರ್ಷಗಳ ಕಳ್ಳ-ಪೊಲೀಸ್ ಆಟಕ್ಕೆ ಬ್ರೇಕ್: ಪೆರೋಲ್ ಮೇಲೆ ಎಸ್ಕೇಪ್ ಆಗಿದ್ದ ಕೈದಿ ಅಂದರ್
ಒಟ್ಟಿನಲ್ಲಿ ಪೊಲೀಸರ ವಿಚಾರಣೆ ವೇಳೆ ದುರಹಂಕಾರ ತೋರಿದ ಯುವಕನಿಗೆ ನ್ಯಾಯಾಲಯ ವಿನೂತನ ಶಿಕ್ಷೆ ವಿಧಿಸಿ ಮತ್ತೆ ಯಾರು ಈ ರೀತಿ ವರ್ತಿಸದಂತೆ ತಕ್ಕ ಪಾಠ ಕಲಿಸಿದ್ದು ಮಾತ್ರ ವಿಶೇಷ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



