ಚಿಕ್ಕಬಳ್ಳಾಪುರ: ಕಂಟೇನರ್ ಬಿದ್ದು ತಂದೆ-ಮಗಳು ಸ್ಥಳದಲ್ಲೇ ಸಾವು
ಚಿಕ್ಕಬಳ್ಳಾಪುರ ತಾಲ್ಲೂಕಿನ ಮರಸನಹಳ್ಳಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿ ಕಂಟೇನರ್ ಬೈಕ್ ಮೇಲೆ ಬಿದ್ದ ಪರಿಣಾಮ ತಂದೆ ಮತ್ತು ನಾಲ್ಕು ವರ್ಷದ ಮಗಳು ದೀಕ್ಷಿತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವೆಂಕಟೇಶ್ ಪತ್ನಿ ರೂಪಾ ಅವರ ಸ್ಥಿತಿ ಗಂಭೀರವಾಗಿದೆ. ವಾಹನಗಳ ಅಜಾಗರೂಕ ಚಾಲನೆಯಿಂದ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಚಿಕ್ಕಬಳ್ಳಾಪುರ, ಏಪ್ರಿಲ್ 19: ಬೈಕ್ ಮೇಲೆ ಕಂಟೇನರ್ ಬಿದ್ದು ತಂದೆ-ಮಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ (Chikkballapur) ತಾಲೂಕಿನ ಮರಸನಹಳ್ಳಿ ಬಳಿ ನಡೆದಿದೆ. ಬೈಕ್ನಲ್ಲಿದ್ದ ತಂದೆ ವೆಂಕಟೇಶ್, ಮಗಳು ದೀಕ್ಷಿತಾ (4) ಮೃತ ದುರ್ದೈವಿಗಳು. ಮೃತ ವೆಂಕಟೇಶ್ ಪತ್ನಿ ರೂಪಾ ಸ್ಥಿತಿ ಚಿಂತಾಜನಕವಾಗಿದೆ. ಬೈಕ್ ಸವಾರರು ಚಿಕ್ಕಬಳ್ಳಾಪುರ ತಾಲೂಕಿನ ಬಂಡಹಳ್ಳಿ ನಿವಾಸಿಗಳು ಎಂದು ತಿಳಿದುಬಂದಿದೆ. ಕುಟುಂಬ ಬಂಡಹಳ್ಳಿಯಿಂದ ನಾಯನಹಳ್ಳಿಗೆ ಹೊರಟಿದ್ದಾಗ ದುರ್ಘಟನೆ ಸಂಭವಿಸಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಚಿಕ್ಕಬಳ್ಳಾಪುರ ತಾಲೂಕಿ ಲಿಂಗಶೆಟ್ಟಪುರ ಗೇಟ್ ಬಳಿಯ ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಗೇಪಲ್ಲಿ ಕಡೆಯಿಂದ ಬೆಂಗಳೂರು ಕಡೆಗೆ ಬೈಕ್ ಬರುತ್ತಿತ್ತು. ಬೈಕ್ ಪಕ್ಕದಲ್ಲಿ ಕಂಟೇನರ್ ಸಹ ಬರುತ್ತಿತ್ತು. ಆದರೆ, ಲಿಂಗಶೆಟ್ಟಪುರ ಗೇಟ್ ಬಳಿ ಈಶಾ ಪೌಂಡೇಷನ್ ಕಡೆಯಿಂದ ಬಂದ ಕಾರೊಂದು ರಭಸವಾಗಿ ಹೆದ್ದಾರಿಗೆ ಬಂದಿದೆ. ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಕಂಟೇನರ್ ಚಾಲಕ ಸಡನ್ ಆಗಿ ಬ್ರೇಕ್ ತುಳಿದು, ಕಂಟೇನರ್ ಅನ್ನು ಎಡಕ್ಕೆ ಎಳೆದಿದ್ದಾರೆ. ಕಂಟೇನರ್ ಪಕ್ಕದಲ್ಲೇ ಚಲಿಸುತ್ತಿದ್ದ ಬೈಕ್ ಸವಾರರ ಮೇಲೆ ಬಿದ್ದಿದೆ.
ಬೈಕ್ ಮೇಲೆ ಕಂಟೇನರ್ ಬಿದ್ದ ರಭಸಕ್ಕೆ ವೆಂಕಟೇಶ, ಅವರ ಪತ್ನಿ ರೂಪಾ ಮತ್ತು ಮಗಳು ದೀಕ್ಷಿತಾ ಕಂಟೇನರ್ ಕೆಳಗೆ ಸಿಲುಕಿದ್ದಾರೆ. ವೆಂಕಟೇಶ್ ಹಾಗೂ ದೀಕ್ಷಿತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವೆಂಕಟೇಶ್ ಪತ್ನಿ ರೂಪಾ ಕಾಲುಗಳನ್ನು ಕಳೆದುಕೊಂಡಿದ್ದು, ಸಾವು ಬದುಕಿನ ಮದ್ಯ ಹೋರಾಟ ನಡೆಸುತ್ತಿದ್ದಾರೆ.
ಇದನ್ನೂ ನೋಡಿ: ಡಿವೈಡರ್ಗೆ ಗುದ್ದಿ ಕಾರಿನ ಮೇಲೆ ಕಂಟೇನರ್ ಬೀಳುತ್ತಿರುವ ಭಯಾನಕ ದೃಶ್ಯ ಇಲ್ಲಿದೆ
ಲಿಂಗಶೆಟ್ಟಿಪುರ ಗೇಟ್ ಬಳಿ ಈಶಾ ಪೌಂಡೇಷನ್ಗೆ ಹೋಗಿ ಬರುವ ವಾಹನಗಳು ಅಜಾಗರೂಕತೆಯಿಂದ ರಸ್ತೆಗೆ ನುಗ್ಗುತ್ತಿವೆ. ಇದರಿಂದಾಗಿ ಇಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.