ಚಿಕ್ಕಬಳ್ಳಾಪುರ: ನಂದಿಬೆಟ್ಟದ ವಾಹನ ನಿಲುಗಡೆ ಸ್ಥಳದಲ್ಲಿ ಬೆಟ್ಟ ಕುಸಿದ ಘಟನೆ ಸಂಭವಿಸಿದೆ. ಬೆಟ್ಟ ಕುಸಿದ ಸ್ಥಳದಲ್ಲೇ ಸಿಬ್ಬಂದಿಯ ಕೊಠಡಿ ಇದೆ. ಆದರೆ, ಅದೃಷ್ಟವಶಾತ್ ಸಿಬ್ಬಂದಿಗೆ ಯಾವುದೇ ತೊಂದರೆ ಆಗಿಲ್ಲ. ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮದಲ್ಲಿ ಘಟನೆ ಸಂಭವಿಸಿದೆ. ರಾತ್ರಿಯಿಡೀ ಸುರಿದ ಮಳೆಗೆ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗಿರಿಧಾಮದ ಗುಡ್ಡಗಳು ಕುಸಿದಿವೆ. ಇದರಿಂದಾಗಿ ರಸ್ತೆ ಸಂಚಾರ ಬಂದ್ ಆಗಿದೆ. ಪರಿಣಾಮ ಈ ವಾರದ ಕೊನೆಗೆ ನಂದಿ ಗಿರಿಧಾಮ ನೋಡಲು ಹೋಗುವವರಿಗೆ ನಿರಾಸೆಯಾಗಿದೆ.
ನಂದಿಬೆಟ್ಟದ ವಾಹನ ನಿಲುಗಡೆ ಸ್ಥಳದಲ್ಲಿ ಬೆಟ್ಟ ಕುಸಿದಿದೆ. ಬೆಟ್ಟ ಕುಸಿದ ಸ್ಥಳದಲ್ಲೇ ಸಿಬ್ಬಂದಿಯ ಕೊಠಡಿ ಇದೆ. ಆದರೆ, ಸಿಬ್ಬಂದಿಗೆ ಯಾವುದೇ ತೊಂದರೆ ಉಂಟಾಗಿಲ್ಲ. ರಾತ್ರಿ ಸುರಿದ ಧಾರಾಕಾರ ಮಳೆಗೆ ನಂದಿಗಿರಿಧಾಮ ತತ್ತರ. ಗಿರಿಧಾಮದ ಮೇಲೆಯೂ ಬೆಟ್ಟ ಕುಸಿತವಾಗಿದೆ. ವಾಹನಗಳ ನಿಲುಗಡೆ ಸ್ಥಳದಲ್ಲಿಯೂ ಬೆಟ್ಟ ಕುಸಿದಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗುಡ್ಡ ಕುಸಿತದಿಂದ ಗಿರಿಧಾಮದ ರಸ್ತೆ ಕೊಚ್ಚಿ ಹೋಗಿದೆ. ರಸ್ತೆ ಸಂಚಾರಕ್ಕೆ ಪೂರಕವಾಗಿ ಮಾಡಲು ಒಂದು ವಾರ ಸಮಯ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದ ಬಳಿ ತೆರವು ಕಾರ್ಯ
ನಂದಿ ಗಿರಿಧಾಮದ ರಂಗಪ್ಪ ವೃತ್ತದ ಬಳಿ ಗುಡ್ಡ ಕುಸಿತ ಹಿನ್ನೆಲೆ ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಮಣ್ಣು ತೆರವು ಕಾರ್ಯಾಚರಣೆ ಪ್ರಾರಂಭವಾಗಿದೆ. ಸ್ಥಳಕ್ಕೆ ಪಿಡಬ್ಲ್ಯೂಡಿ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಚ್ಚಿ ಹೋದ ರಸ್ತೆಯನ್ನು ಜೆಸಿಬಿ ಮೂಲಕ ದುರಸ್ಥಿ ಮಾಡಲು ಅಧಿಕಾರಿಗಳು ಮುಂದಾಗಿದ್ದು, ಪಿಡಬ್ಲ್ಯೂಡಿ ಇಂಜಿನಿಯರ್ ಸಂತೋಷ ನೇತೃತ್ವದಲ್ಲಿ ರಸ್ತೆ ದುರಸ್ಥಿ ಕಾರ್ಯ ಆರಂಭವಾಗಿದೆ.
ಗಿರಿಧಾಮದ ವಸತಿ ಗೃಹದಲ್ಲಿ ತಂಗಿರುವ ಪ್ರವಾಸಿಗರಿಗೆ ಪರ್ಯಾಯ ವ್ಯವಸ್ಥೆ
ನಂದಿ ಗಿರಿಧಾಮದಲ್ಲಿ ಗುಡ್ಡ ಕುಸಿದು ರಸ್ತೆ ಕೊಚ್ಚಿ ಹೋದ ಹಿನ್ನೆಲೆಯಲ್ಲಿ ಗಿರಿಧಾಮದಿಂದ ಬೆಂಗಳೂರಿಗೆ ಬರಲು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಕಾರುಗಳು ಕೆಳಗೆ ಬರಲಾಗದೆ ಇದ್ದಿದ್ದರಿಂದ ಕಾಲ್ನಡಿಗೆಯಲ್ಲಿ ಸುಲ್ತಾನ ಪೇಟೆ ಮಾರ್ಗವಾಗಿ ಕೆಳಗೆ ಇಳಿಯಲು ಕೆಎಸ್ಟಿಡಿಸಿ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ.
ಇದನ್ನೂ ಓದಿ: ರಾತ್ರಿಯಿಡಿ ಸುರಿದ ಧಾರಾಕಾರ ಮಳೆಗೆ ನಂದಿ ಬೆಟ್ಟದಲ್ಲಿ ಗುಡ್ಡ ಕುಸಿತ: ಪ್ರವಾಸಿಗರನ್ನು ವಾಪಸ್ ಕಳಿಸುತ್ತಿರುವ ಪೊಲೀಸರು
ಗುಡ್ಡ ಕುಸಿತ ಹಿನ್ನೆಲೆ ನಂದಿಬೆಟ್ಟಕ್ಕೆ 20 ದಿನ ಪ್ರವೇಶ ಬಂದ್: ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ