ನನ್ನ ಮನೆ ಹಾಳು ಮಾಡಿದ್ದೀರಿ, ಸಾಲ ಮಾಡಿದ್ದೇನೆ: ವೇದಿಕೆ ಮೇಲೆ ಗಳಗಳನೇ ಅತ್ತ ಕಾಂಗ್ರೆಸ್ ಶಾಸಕ
ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಅವರು ವೇದಿಕೆಯ ಮೇಲೆ ಭಾವುಕರಾಗಿ ಕಣ್ಣೀರಿಟ್ಟ ಘಟನೆ ನಡೆದಿದೆ. ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಮಾಡಿದ ರಾಜೇಗೌಡ, ಕುಟುಂಬಕ್ಕೆ ಎದುರಾಗಿರುವ ಸಂಕಷ್ಟಗಳನ್ನು ಹೇಳುತ್ತಾ ಅತ್ತರು. ಮಾಜಿ ಸಚಿವ ಡಿಎನ್ ಜೀವರಾಜ್ ಹೆಸರು ಹೇಳದೇ ಆಕ್ರೋಶ ಹೊರಹಾಕಿದ್ದು, ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ.

ಚಿಕ್ಕಮಗಳೂರು, (ಮಾರ್ಚ್ 03): ನನ್ನ ಕುಟುಂಬ ಬೀದಿಗೆ ತಂದಿದ್ದೀರಿ. ದಿನ ನಿತ್ಯ ನ್ಯಾಯಾಲಯಕ್ಕೆ ಆಲೆಯುವಂತೆ ಮಾಡಿದ್ದೀರಿ. ನನ್ನ ಮನೆ ಹಾಳು ಮಾಡಿದ್ದೀರಿ. ಸಾಲ ಮಾಡಿದ್ದೇನೆ ಎಂದು ಶೃಂಗೇರಿ ಶಾಸಕ ಶಾಸಕ ಟಿಡಿ ರಾಜೇಗೌಡ (sringeri congress mla TD Rajegowda) ಬಹಿರಂಗ ಕಾರ್ಯಕ್ರಮದಲ್ಲೇ ಗಳಗಳನೇ ಅತ್ತಿರುವ ಪ್ರಸಂಗ ನಡೆದಿದೆ. ಬಾಳೆಹೊನ್ನೂರಿನಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಿನ್ನೆ (ಮಾರ್ಚ್ 02) ಹಮ್ಮಿಕೊಂಡಿದ್ದ ಶೃಂಗೇರಿ ಕ್ಷೇತ್ರದ ರೈತರ, ಕಾರ್ಮಿಕರ ಮತ್ತು ನೆಲವಾಸಿಗಳ ಸಮಸ್ಯೆ ಕುರಿತು ನಡೆದ ಜನಾಂದೋಲನ ಸಮಾವೇಶದಲ್ಲಿ ಶಾಸಕ ಟಿಡಿ ರಾಜೇಗೌಡ ಅವರು ಬಿಜೆಪಿ ಮಾಜಿ ಸಚಿವ ಡಿಎನ್ ಜೀವರಾಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಇಬ್ಬರೂ ಮುಂದಿನ ಚುನಾವಣೆಗೆ ನಿಲ್ಲುವುದು ಬೇಡ ಎಂದು ಆಕ್ರೋಶ ಹೊರಹಾಕಿದ್ದಾರೆ.
ಜನಾಂದೋಲನ ಸಮಾವೇಶದಲ್ಲಿ ಕಣ್ಣೀರಿಟ್ಟ ಶಾಸಕ
ಮುಂದೆ ಚುನಾವಣೆಗೆ ಸ್ಪರ್ಧಿಸದಿದ್ದರೂ ಜೀವ ಕೊಟ್ಟ ಕ್ಷೇತ್ರದ ಜನರಿಗಾಗಿ ದುಡಿಯುತ್ತೇನೆ. ನನ್ನ ಜೀವ ತಿಂದಿದ್ದೀರ, ನನ್ನ ಕುಟುಂಬ ಬೀದಿಗೆ ತಂದಿದ್ದೀರಿ. ದಿನ ನಿತ್ಯ ನ್ಯಾಯಾಲಯಕ್ಕೆ ಆಲೆಯುವಂತೆ ಮಾಡಿದ್ದೀರಿ. ನನ್ನ ಮನೆ ಹಾಳು ಮಾಡಿದ್ದೀರಿ. ಸಾಲ ಮಾಡಿದ್ದೇನೆ. ನಾನು ಚುನಾವಣೆಗೆ ನಿಲ್ಲುವುದಿಲ್ಲ. ನೀವು ಯಾರಾದರೂ ನಿಲ್ಲಿ ಎಂದು ಗದ್ಗದಿತರಾದ ರಾಜೇಗೌಡ, ಕೆಟ್ಟ ಮನಸ್ಥಿತಿಯ ಮನುಷ್ಯ ಕ್ಷೇತ್ರದಲ್ಲಿ ಮತ್ತೆ ಶಾಸಕನಾಗಬಾರದು. ಆದರೆ ಕ್ಷೇತ್ರಕ್ಕೆ ದೊಡ್ಡ ಮಾರಕ. ಯಾರ ಮನೆ ಹೆಣ್ಣು ಮಕ್ಕಳಿಗೆ ಏನು ಮಾಡುತ್ತಾರೋ ಗೊತ್ತಿಲ್ಲ. ಎಲ್ಲೂ ಮುಕ್ತವಾಗಿ ಯಾರೂ ಓಡಾಡುವಂತಿಲ್ಲ ಎಂದು ಮಾಜಿ ಶಾಸಕ ಡಿ ಎನ್ ಜೀವರಾಜ್ ಹೆಸರು ಹೇಳದೆಯೇ ಕಣ್ಣೀರಿಟ್ಟಿದ್ದಾರೆ.
ಮಾಜಿ ಎಂಎಲ್ಗೆ ಹಾಲಿ ಶಾಸಕ ಸವಾಲ್
ನನ್ನ ಹೆಂಡತಿ, ಮಗನಿಗೆ ತೊಂದರೆ ಕೊಡುತ್ತಿದ್ದಾರೆ, ನಾನು ಈ ಸಮಾವೇಶದ ಮೂಲಕ ಒಂದು ಘೋಷಣೆ ಮಾಡುತ್ತಿದ್ದೇನೆ. ಈ ಕ್ಷೇತ್ರದಲ್ಲಿ ಜನರಿಗೆ ವಿನಾಕಾರಣ ತೊಂದರೆ ಕೊಡುತ್ತಾ, ಮಹಿಳೆಯರಿಗೆ ತೊಂದರೆ ಕೊಟ್ಟಿರುವುದನ್ನು ಮನದಟ್ಟು ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸಲ್ಲ ಅಂತ ಘೋಷಣೆ ಮಾಡಲಿ ಎಂದು ಜೀವರಾಜ್ ಹೆಸರು ಹೇಳದೇ ಶಾಸಕ ರಾಜೇಗೌಡ ಸವಾಲು ಹಾಕಿದರು.
