ರಾಜ್ಯಪಾಲರ ನಡೆ ಸಂವಿಧಾನಬಾಹಿರ, ರಾಜೀನಾಮೆ ನೀಡಲ್ಲ: ಸಿಎಂ ಸಿದ್ದರಾಮಯ್ಯ ಖಡಕ್ ಮಾತು

| Updated By: ಗಣಪತಿ ಶರ್ಮ

Updated on: Aug 17, 2024 | 2:51 PM

ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್​ ಚಂದ್ ಗೆಹ್ಲೋಟ್ ಕ್ರಮವನ್ನು ಸಿಎಂ ಸಿದ್ದರಾಮಯ್ಯ ಬಲವಾಗಿ ಖಂಡಿಸಿದ್ದಾರೆ. ರಾಜ್ಯಪಾಲರು ಸಂವಿಧಾನಬಾಹಿರ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದ ಅವರು, ಕಾನೂನು ಹೋರಾಟ ಮಾಡುವುದಾಗಿ ಘೋಷಿಸಿದ್ದಾರೆ. ಜತೆಗೆ, ರಾಜ್ಯಪಾಲರು ಬಿಜೆಪಿ ಕೈಗೊಂಬೆಯಾಗಿದ್ದಾರೆ ಎಂದೂ ಟೀಕಿಸಿದರು.

ರಾಜ್ಯಪಾಲರ ನಡೆ ಸಂವಿಧಾನಬಾಹಿರ, ರಾಜೀನಾಮೆ ನೀಡಲ್ಲ: ಸಿಎಂ ಸಿದ್ದರಾಮಯ್ಯ ಖಡಕ್ ಮಾತು
ಸಿಎಂ ಸಿದ್ದರಾಮಯ್ಯ
Follow us on

ಬೆಂಗಳೂರು, ಆಗಸ್ಟ್ 17: ಮುಡಾ ಹಗರಣ ಸಂಬಂಧ ತಮ್ಮ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಡೆ ಸಂವಿಧಾನಬಾಹಿರ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು. ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಇದನ್ನು ನಾವು ನಿರೀಕ್ಷೆ ಮಾಡಿದ್ದೆವು. ದೂರು ಕೊಟ್ಟ ದಿನವೇ ಶೋಕಾಸ್ ನೋಟಿಸ್ ನೀಡುತ್ತಾರೆ ಎಂದರು.

ನಾನು‌ ನಿರೀಕ್ಷೆ ಮಾಡಿದ್ದೆ. ಯಾವಾಗ ರಾಜ್ಯಪಾಲರು 26 ರಂದು‌ ಶೋಕಾಸ್ ನೋಟಿಸ್ ಕೊಟ್ಟಿದ್ದರೋ ಆವಾಗಲೇ ನಿರೀಕ್ಷೆ ಇತ್ತು. ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಮೇಲೆ ನವೆಂಬರ್ ತಿಂಗಳಲ್ಲೇ ಪಿಟಿಷನ್ ಸಲ್ಲಿಕೆಯಾಗಿದೆ. ಶಿಶಿಕಲಾ ಜೊಲ್ಲೆ, ಜನಾರ್ದನ ರೆಡ್ಡಿ ಮೇಲೆಯೂ ಇದೆ. ನನಗೆ ಮಾತ್ರ ಶೋಕಾಸ್ ನೋಟಿಸ್ ‌ಕಳುಹಿಸಿದ್ದಾರೆ. ನನಗೆ ‌ಮಾತ್ರ ನೋಟಿಸ್ ಕೊಟ್ಟಿದ್ದಾರೆ. ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಅನೇಕ ರಾಜ್ಯಗಳಲ್ಲಿ ಇದೇ ತರಹ ಮಾಡಿದ್ದಾರೆ. ದೆಹಲಿ, ಜಾರ್ಖಾಂಡ್​​​ನಲ್ಲಿ ಕೂಡ ಇದೆ ರೀತಿ ಆಗಿದೆ. ಬಿಜೆಪಿ, ಜೆಡಿಎಸ್ ಎಲ್ಲ ಸೇರಿಕೊಂಡಿದ್ದಾರೆ. ರಾಜ್ಯಪಾಲರ ನಿರ್ಧಾರ ಸಂವಿಧಾನ ಬಾಹಿರ. ನಾನು ಕಾನೂನು ಹೋರಾಟ ಮಾಡುತ್ತೇವೆ. ಹೈಕಮಾಂಡ್, ಪಕ್ಷ, ಶಾಸಕರು ಎಲ್ಲರೂ ನನ್ನ ಜೊತೆ ಇದ್ದಾರೆ. ನಾನು ರಾಜೀನಾಮೆ ‌ಕೊಡುವ ತಪ್ಪು ಮಾಡಿಲ್ಲ. ಅವರು ಕಾನೂನುಬಾಹಿರ ಅಂದಿದ್ದಾರೆ. ರಾಜ್ಯಪಾಲರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯಪಾಲರು ಬಿಜೆಪಿಯ ಕೈಗೊಂಬೆಯಾಗಿದ್ದಾರೆ. ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ರಾಜ್ಯಪಾಲರ ನಡೆಗೆ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡುತ್ತಿದ್ದಂತೆಯೇ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಕಾನೂನು ತಜ್ಞರು, ಸಚಿವರು ಹಾಗೂ ಆಪ್ತರ ಜತೆ ಸಮಾಲೋಚನೆ ನಡೆಸಿದ ಸಿದ್ದರಾಮಯ್ಯ ನಂತರ ಈ ಹಿಂದಿನ ವೇಳಾಪಟ್ಟಿ ಪ್ರಕಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

‘ನಾನು ಯಾವಾಗಲೂ ಸರ್ಕಾರಿ ನೌಕರರ ಪರ’

ನಾನು ಯಾವಾಗಲೂ ಸರ್ಕಾರಿ ನೌಕರರ ಪರ ಇರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು. ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆದ ‘ನಮ್ಮ ಅಭಿಮಾನ ಅಭಿನಂದನೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 7ನೇ ವೇತನ ಆಯೋಗ ಜಾರಿಗೆ ನಮ್ಮ ಸರ್ಕಾರ ಶಿಫಾರಸು ಮಾಡಿದೆ. ನಾನು‌ ಎರಡು ಆಯೋಗಗಳ ಶಿಫಾರಸನ್ನು ಜಾರಿ ಮಾಡಿದ್ದೇನೆ. 4ನೇ ಆಯೋಗ ಜಾರಿ ವೇಳೆ ನಾನು ಹಣಕಾಸು ಸಚಿವನಾಗಿದ್ದೆ. 2018ರಲ್ಲಿ 6ನೇ ವೇತನ ಆಯೋಗ ಜಾರಿಗೆ ಶಿಫಾರಸು ಮಾಡಿದ್ದೇನೆ. 2024ರಲ್ಲಿ‌ 7ನೇ ವೇತನ ಆಯೋಗ ಜಾರಿ ಮಾಡಿದ್ದೇನೆ ಎಂದರು.

ಇದನ್ನೂ ಓದಿ: ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್: ಹೈಕೋರ್ಟ್ ಮೆಟ್ಟಿಲೇರಲು ಸಿದ್ದರಾಮಯ್ಯ ಪರ ವಕೀಲರ ಸಿದ್ಧತೆ

7ನೇ ವೇತನ ಅಯೋಗ ಜಾರಿಯಿಂದ 20 ಸಾವಿರ ಕೋಟಿ ರೂಪಾಯಿ ಹೊರೆಯಾಗುತ್ತದೆ ಎನ್ನುತ್ತಾರೆ. ನಾನು ಇದನ್ನು ಹೊರೆ ಎಂದು ಹೇಳುವುದಿಲ್ಲ. ನಮ್ಮ ಸರ್ಕಾರ ಯಾವಾಗಲೂ ಪಾಸಿಟಿವ್ ಆಗಿರುತ್ತದೆ. ಈ ಸರ್ಕಾರಕ್ಕೆ ದುಡ್ಡು ಕೊಡುವುದು ನೌಕರರು ಮತ್ತು ನಾಗರಿಕರು. ಜನರು ಟ್ಯಾಕ್ಸ್ ಕಟ್ಟುತ್ತಾರೆ, ಅದನ್ನು ನೋಡಿ ಖರ್ಚು ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ