ಸಿಎಂ ಡಿ.ಕೆ. ಶಿವಕುಮಾರ್ ಭೇಟಿಯಾದ ಕನ್ನಡಪರ ಹೋರಾಟಗಾರರು: ಪ್ರಮುಖ ಬೇಡಿಕೆಗಳೇನು?
ಕರ್ನಾಟಕ ಬಂದ್ಗೆ ಕರೆಯ ನಡುವೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಕರವೇ ಶಿವರಾಮೇಗೌಡ ಬಣದ ಮುಖಂಡರು ನೇತೃತ್ವದ ಕನ್ನಡಪರ ಹೋರಾಟಗಾರರ ನಿಯೋಗವು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ತಮಿಳುನಾಡಿಗೆ ನೀರು ತಡೆ ಹಿಡಿಯುವುದು ಹಾಗೂ ಮೇಕೆದಾಟು ಯೋಜನೆ ಆರಂಭ ಸೇರಿದಂತೆ ಪ್ರಮುಖ ಬೇಡಿಕೆಗಳ ಮನವಿ ಸಲ್ಲಿಸಿದೆ. ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಿಎಂ ಡಿಕೆಶಿ ಭೇಟಿಯಾದ ಕನ್ನಡಪರ ಹೋರಾಟಗಾರರುImage Credit source: Tv9 Kannada
ಮುಖ್ಯಾಂಶಗಳು
- ಸಿಎಂ ಡಿಕೆಶಿ ಭೇಟಿಯಾದ ಕನ್ನಡಪರ ಹೋರಾಟಗಾರರು
- ಕೋಡಿಹಳ್ಳಿ, ಕರವೇ ಶಿವರಾಮೇಗೌಡ ಬಣದ ಮುಖಂಡರು
- ಹಲವು ಪ್ರಮುಖ ವಿಚಾರಗಳ ಸಂಬಂಧ ಸಿಎಂಗೆ ಮನವಿ
ಬೆಂಗಳೂರು, ಆಗಸ್ಟ್ 13: ಕಾವೇರಿ ಜಲ ವಿವಾದ ಸಂಬಂಧ ಕರ್ನಾಟಕ ಬಂದ್ಗೆ ಕರೆ ನೀಡಿರುವ ನಡುವೆ ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸದಾಶಿವನಗರದ ನಿವಾಸದಲ್ಲಿ ಕನ್ನಡಪರ ಹೋರಾಟಗಾರು ಭೇಟಿಯಾಗಿದ್ದಾರೆ. ಕಾವೇರಿ ನೀರನ್ನು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಬಿಡಬಾರದು ಎಂಬ ಆಗ್ರಹದ ಜೊತೆಗೆ ಮೇಕೆದಾಟು ಯೋಜನೆ ಆರಂಭ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮುಖ್ಯಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಕರವೇ ಶಿವರಾಮೇಗೌಡ ಬಣದ ಮುಖಂಡರು ಈ ವೇಳೆ ಉಸಪಸ್ಥಿತರಿದ್ದರು.
ಕನ್ನಡಪರ ಹೋರಾಟಗಾರರ ಆಗ್ರಹಗಳೇನು?
- ಕಾವೇರಿ ನದಿ ನೀರಿನ ಹಂಚಿಕೆಯ ವಿಷಯದಲ್ಲಿ ಕರ್ನಾಟಕಕ್ಕೆ ನಿರಂತರವಾದ ಅನ್ಯಾಯವಾಗುತ್ತಿರುವುದರಿಂದ ಕರ್ನಾಟಕ ಸರಕಾರವು ದಿಟ್ಟ ನಿರ್ಧಾರವನ್ನು ಕೈಗೊಳ್ಳಬೇಕು. ಭಾರತ ಒಕ್ಕೂಟದ ವ್ಯವಸ್ಥೆಯಲ್ಲಿ ಕರ್ನಾಟಕ ರಾಜ್ಯ ಇದೆಯೇ ? ಎಂಬ ಪ್ರಶ್ನೆ ಕಾಡುತ್ತಿದೆ. ಒಕ್ಕೂಟದ ವ್ಯವಸ್ಥೆಯಲ್ಲಿ ನಾಡಿಗೆ ಅನ್ಯಾಯ ವಾಗುತ್ತಿರುವುದನ್ನು ಕನ್ನಡಿಗರು ಎಷ್ಟು ಕಾಲ ಸಹಿಸಲು ಸಾಧ್ಯ? ಈ ನಿಟ್ಟಿನಲ್ಲಿ ರಾಜ್ಯ ಸರಕಾರವು ತನ್ನ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು.
- ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಕರ್ನಾಟಕವು ಪ್ರತಿದಿನ 12,000 ಕ್ಯುಸೆಕ್ಸ್ ಕಾವೇರಿ ನೀರು ತಮಿಳುನಾಡಿಗೆ ಹರಿಸಬೇಕೆಂಬ ನಿರ್ದೇಶನವು ಕರ್ನಾಟಕಕ್ಕೆ ಘೋರ ಅನ್ಯಾಯ ಮಾಡಿದೆ. ಕಾವೇರಿ ನೀರು ನಿಯಂತ್ರಣಾ ಸಮಿತಿ ಮತ್ತು ಕಾವೇರಿ ನಿರ್ವಹಣಾ ಪ್ರಾಧಿಕಾರದ ಶಿಫಾರಸು, ನಿರ್ದೇಶನ ಮತ್ತು ನಡವಳಿಕೆಗಳ ಬಗ್ಗೆ ಕನ್ನಡಿಗರಲ್ಲಿ ಅನುಮಾನ ಮೂಡುತಿದೆ. ಪಕ್ಷಪಾತ ಧೋರಣೆ, ಅವೈಜ್ಞಾನಿಕ ನಿರ್ಧಾರಗಳ ಹಿನ್ನೆಲೆ ಇರುವುದರಿಂದ ತಾವು ಕರ್ನಾಟಕ ವಿಧಾನ ಮಂಡಲದ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಟ್ಟು ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಎತ್ತಿ ಹಿಡಿಯಬೇಕೆಂದು.
- ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಸಲುವಾಗಿ “ಮೇಕೆದಾಟು ಅಣೆಕಟ್ಟು” ಯೋಜನೆಯನ್ನು ಕೈಗೆತ್ತಿಕೊಂಡು ಕಾಮಗಾರಿಯನ್ನು ಆರಂಭಿಸಬೇಕು.
- ತಮಿಳುನಾಡು ಕಾವೇರಿ ನದಿ ನೀರಿನ ಹಕ್ಕಿಗಾಗಿ ಮತ್ತೆ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿರುವುದರಿಂದ ರಾಜ್ಯ ಸರಕಾರ ನಾಡಿನ ಹಿತ ಕಾಪಾಡಲು ಕಾನೂನು ಮತ್ತು ನೀರಾವರಿ ತಜ್ಞರ ತಂಡವನ್ನು ರಚಿಸಬೇಕು.
- ಉತ್ತರ ಕರ್ನಾಟಕದ ಬಹು ವರ್ಷದ ಬೇಡಿಕೆಯಾದ ಮಹದಾಯಿ, ಕಳಸ-ಬಂಡೂರಿ ನದಿ ನೀರಿನ ಹಕ್ಕಿಗಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು.
- ಆಲಮಟ್ಟಿ ಜಲಾಶಯದ ಅಣೆಕಟ್ಟನ್ನು ಎತ್ತರಿಸಬೇಕು. ಭದ್ರಾ ಯೋಜನೆಯನ್ನು ಅನುಷ್ಠಾನಗೊಳಿಸಲು ತ್ವರಿತ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರಕ್ಕೆ ಒತ್ತಾಯಿಸ ಬೇಕು.
- ರಾಜ್ಯದ ಕಾವೇರಿ ಮತ್ತು ಕೃಷ್ಣ ಜಲಾನಯನ ಪ್ರದೇಶಗಳ ನೀರಾವರಿ ಯೋಜನೆಗಳ ಕಾಮಗಾರಿಗಳು ಕುಂಠಿತವಾಗಿವೆ. ಈ ಬಗ್ಗೆ ಜಲ ಸಂಪನ್ಮೂಲ ಇಲಾಖೆಗೆ ಚುರುಕು ಮುಟ್ಟಿಸುವ ಕಾರ್ಯವಾಗಬೇಕು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:27 am, Thu, 13 August 26
Follow Us




