ಕೇಳೋರಿಲ್ಲ ಅತಿಥಿ ಉಪನ್ಯಾಸಕರ ಗೋಳು: ಕೆಲಸ ಕಳೆದುಕೊಳ್ಳುವ ಭೀತಿ; ಕಾನೂನು ಹೋರಾಟಕ್ಕೆ ಸಜ್ಜು
Dharwad Guest Lecturers: ಕರ್ನಾಟಕದ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 20-25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಾವಿರಾರು ಅತಿಥಿ ಉಪನ್ಯಾಸಕರಿಗೆ ಇದೀಗ ತಮ್ಮ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಏಕೆಂದರೆ ಸರಕಾರ ಹೊಸದಾಗಿ 2000 ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಹೀಗಾಗಿ ಅತಿಥಿ ಉಪನ್ಯಾಸಕರು ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ.

ಧಾರವಾಡ, ಆಗಸ್ಟ್ 23: ರಾಜ್ಯದಲ್ಲಿ ಬಹುತೇಕ ಕಡೆಗಳಲ್ಲಿ ಸರಕಾರಿ ಹುದ್ದೆಗಳ ಭರ್ತಿಗಾಗಿ ಹೋರಾಟ ಶುರುವಾಗಿವೆ. ಇದರಿಂದಾಗಿ ಎಚ್ಚೆತ್ತುಕೊಂಡಿರುವ ರಾಜ್ಯ ಸರಕಾರ ಅನೇಕ ಇಲಾಖೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ತಯಾರಿ ನಡೆಸಿದೆ. ಇದೇ ವೇಳೆ ಅನೇಕ ಸರಕಾರಿ ಕಾಲೇಜುಗಳಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರಿಗೆ (Guest Lecturers) ಆತಂಕ ಶುರುವಾಗಿದೆ. ಕಳೆದ ಎರಡೂವರೆ ದಶಕಗಳಿಂದ ಕೆಲಸ ಮಾಡುತ್ತಿರುವ ಅವರಿಗೆ ಇದೀಗ ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅವರು ಕಾನೂನಿನ ಮೊರೆ ಹೋಗಲು ನಿರ್ಧರಿಸಿದ್ದಾರೆ.
ಏಳೆಂಟು ಸಾವಿರ ರೂ ಶುರುವಾದ ಸೇವೆ; ಇಂದಿಗೂ ಸಿಗುತ್ತಿಲ್ಲ ಭದ್ರತೆ
ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಳೆದ 20 ರಿಂದ 25 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವವರು ಅತಿ ಕಡಿಮೆ ಸಂಬಳವನ್ನು ಪಡೆಯುತ್ತಿದ್ದಾರೆ. ಎರಡೂವರೆ ದಶಕಗಳ ಹಿಂದೆಯೇ ಕೇವಲ ಏಳೆಂಟು ಸಾವಿರ ರೂ ಗೌರವಧನ ಪಡೆದು ಕೆಲಸ ಶುರು ಮಾಡಿದವರು ಸದ್ಯಕ್ಕೆ ಗರಿಷ್ಟ 39 ಸಾವಿರ ರೂ ಗೌರವಧನ ಪಡೆಯುತ್ತಿದ್ದಾರೆ. ಇದೀಗ ಈ ಗೌರವ ಧನಕ್ಕೆ ಕತ್ತರಿ ಬೀಳುವ ಪರಿಸ್ಥಿತಿ ಎದುರಾಗಿದೆ. ಏಕೆಂದರೆ ಇದೀಗ ಖಾಲಿ ಇರುವ ಉಪನ್ಯಾಸಕ ಹುದ್ದೆಗಳನ್ನು ತುಂಬಲು ರಾಜ್ಯ ಸರಕಾರ ನಿರ್ಧರಿಸಿದ್ದು, ಒಂದು ವೇಳೆ ಹುದ್ದೆಗಳು ಭರ್ತಿಯಾದರೆ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಒಂದು ಕಾಲಕ್ಕೆ ಅತ್ಯಂತ ಕಡಿಮೆ ಗೌರವಧನಕ್ಕೆ ಕೆಲಸ ಶುರು ಮಾಡಿದ್ದ ಇವರು ಕೆಲಸ ಖಾಯಮಾತಿಗೆ ಹೋರಾಟ ಮಾಡುತ್ತಲೇ ಬಂದಿದ್ದರು. ಇದರೊಂದಿಗೆ ಸೇವಾ ಭದ್ರತೆ ನೀಡಿ ಎಂದು ಆಗ್ರಹಿಸುತ್ತಲೇ ಬಂದಿದ್ದರು. ಆದರೆ ಇದೀಗ ಅವರ ಆತಂಕದಂತೆ ಇವರ ಪೈಕಿ ಬಹುತೇಕರು ಕೆಲಸ ಕಳೆದುಕೊಳ್ಳಲಿದ್ದಾರೆ.
ಕೋರ್ಟ್ ಮೆಟ್ಟಿಲೇರಲು ಮುಂದಾದ ಅತಿಥಿ ಉಪನ್ಯಾಸಕರು
ಇದೀಗ ಸರಕಾರ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಪ್ರಕ್ರಿಯೆ ಶುರುವಾಗಿದೆ. ಇದೀಗ ಸುಮಾರು 2000 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಸದ್ಯಕ್ಕೆ ರಾಜ್ಯದಲ್ಲಿ ಸುಮಾರು 4000 ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ವೇಳೆ ಹುದ್ದೆಗಳ ಭರ್ತಿ ಕಾರ್ಯ ಮುಗಿದರೆ, ಅರ್ಧದಷ್ಟು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳಲಿದ್ದಾರೆ. ಇದರಿಂದಾಗಿ ಅವರ ಕುಟುಂಬ ಬೀದಿಗೆ ಬೀಳಲಿದ್ದು, ಆತಂಕಕ್ಕೆ ಕಾರಣವಾಗಿದೆ. ಆದ್ದರಿಂದ ಸರಕಾರ ಈ ನೇಮಕಾತಿಯಲ್ಲಿ ತಮಗೆ ಆದ್ಯತೆ ನೀಡಬೇಕು ಅನ್ನೋದು ಇವರ ಆಗ್ರಹವಾಗಿವೆ. ಇನ್ನು ಸೇವೆಯೇ ಅರ್ಹತೆ ಅಂತಾ ಸುಪ್ರಿಂ ಕೋರ್ಟ್ ಪ್ರಕರಣವೊಂದರಲ್ಲಿ ಅಭಿಪ್ರಾಯಪಟ್ಟಿದೆ. ಅದೇ ಅಂಶವನ್ನು ಮುಂದಿಟ್ಟುಕೊಂಡು ಇದೀಗ ಈ ಅತಿಥಿ ಉಪನ್ಯಾಸಕರು ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಧಾರವಾಡದಲ್ಲಿ ಮತ್ತೆ ಹೋರಾಟಕ್ಕೆ ಮುಂದಾದ ಉದ್ಯೋಗಾಕಾಂಕ್ಷಿಗಳು; ಅನುಮತಿ ನಿರಾಕರಿಸಿದ ಖಾಕಿ
ಇವೆರೆಲ್ಲಾ ತಮ್ಮ ಜೀವನದ ಬಹುಮುಖ್ಯ ವೇಳೆಯನ್ನು ಇದೇ ವೃತ್ತಿಯಲ್ಲಿ ಕಳೆದುಬಿಟ್ಟಿದ್ದಾರೆ. ಇದೀಗ ಬೇರೆ ಉದ್ಯೋಗದ ಅನುಭವವೂ ಇವರಿಗಿಲ್ಲ. ಹೀಗಾಗಿ ಬೇರೆ ಉದ್ಯೋಗವನ್ನು ಅರಸಿ ಹೋಗಲು ಕೂಡ ಇವರಿಂದ ಅಸಾಧ್ಯ. ಈ ಮುಂಚೆ ಇವರನ್ನ ಕೆಲಸಕ್ಕೆ ತೆಗೆದುಕೊಳ್ಳುವ ವೇಳೆಯಲ್ಲಿ ಯಾವುದನ್ನೂ ಗಮನಿಸದ ಸರಕಾರ ಇದೀಗ ಇವರ ಅರ್ಹತೆ, ಮಾನದಂಡಗಳ ಬಗ್ಗೆ ಮಾತನಾಡುತ್ತಿದೆ. ಸರಕಾರದ ಈ ನೀತಿಯೇ ಇವರನ್ನು ಕೋರ್ಟ್ ಮೆಟ್ಟಿಲೇರುವಂತೆ ಮಾಡಿದೆ. ಒಟ್ಟಿನಲ್ಲಿ ಇವರಿಗೆಲ್ಲಾ ಸರಕಾರ ಯಾವುದಾದರೊಂದು ಪರಿಹಾರ ಕಲ್ಪಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




