ಆಧಾರವಿಲ್ಲದೇ ಬೆಂಕಿ ಹಚ್ಚುವ ಮಾತುಗಳನ್ನಾಡಬಾರದು: ಕಮಲ್ ಹಾಸನ್ ವಿರುದ್ಧ ಪ್ರಲ್ಹಾದ್ ಜೋಶಿ ಕಿಡಿ
ತಮಿಳಿಂದ ಕನ್ನಡ ಹುಟ್ಟಿದೆ ಅಂತೇಳಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿರುವ ಕಮಲ್ ಹಾಸನ್ ಅಭಿನಯದ ಥಗ್ ಲೈಫ್ ಚಿತ್ರದ ಮೇಲೆ ಬ್ಯಾನ್ ತೂಗುಗತ್ತಿ ನೇತಾಡುತ್ತಿದೆ. ಕರ್ನಾಟಕದಲ್ಲಿ ಎಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಸದ್ಯ ಈ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿದ್ದು, ಕಮಲ್ ಹಾಸನ್ ಮಾತನಾಡಿದ್ದು ತಪ್ಪು ಎಂದಿದ್ದಾರೆ.

ಹುಬ್ಬಳ್ಳಿ, ಜೂನ್ 02: ಕನ್ನಡ ಭಾಷೆಯ ಬಗ್ಗೆ ನಟ ಕಮಲ ಹಾಸನ್ (kamal haasan) ನೀಡಿದ ಹೇಳಿಕೆಯಿಂದ ಹರಡಿದ ಕಿಚ್ಚು ಕರುನಾಡಿನಾದ್ಯಂತ ವ್ಯಾಪಿಸುತ್ತಲೇ ಇದೆ. ಎಲ್ಲೆಡೆ ಅಸಮಾಧಾನದ ಕಿಡಿ ಹೊತ್ತಿದೆ. ಪ್ರತಿಯೊಬ್ಬರು ಕೂಡ ಕಮಲ ಹಾಸನ್ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಸದ್ಯ ಈ ಬಗ್ಗೆ ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿಕೆ ನೀಡಿದ್ದು, ಕಮಲ್ ಹಾಸನ್ ಮಾತನಾಡಿದ್ದು ತಪ್ಪು. ವೈಜ್ಞಾನಿಕ ಆಧಾರವಿಲ್ಲದೇ ಬೆಂಕಿ ಹಚ್ಚುವ ಮಾತುಗಳನ್ನಾಡಬಾರದು ಎಂದು ವಾಗ್ದಾಳಿ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕನ್ನಡ ಹಾಗೂ ತಮಿಳು ಎರಡೂ ಭಾಷೆ ಪುರಾತನ ಭಾಷೆಗಳಾಗಿವೆ. ತಮಿಳು ಬಗ್ಗೆ ನಾವು ಕೆಟ್ಟದಾಗಿ ಮಾತನಾಡಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ಕರ್ನಾಟಕ ಬಂದ್ಗೆ ಕರೆ ಕೊಡ್ತಿವಿ: ವಾಟಾಳ್
ಕಮಲ್ ಹಾಸನ್ ಹೇಳಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಈವರೆಗೂ ಮಾತಾಡಿಲ್ಲ. ಕಾಂಗ್ರೆಸ್ನ ಯಾರು ಕೂಡ ನಟನ ಹೇಳಿಕೆಯನ್ನು ಖಂಡಿಸಿ ಮಾತನಾಡುತ್ತಿಲ್ಲ. ಈ ಬಗ್ಗೆ ಕನ್ನಡ ಪರ ಹೋರಾಟಗಾರರು ಗಮನಹರಿಸಬೇಕು ಎಂದಿದ್ದಾರೆ.
ಭಯೋತ್ಪಾದಕರಿಗೆ ಕರ್ನಾಟಕ ಸುರಕ್ಷಿತ ರಾಜ್ಯವಾಗಿದೆ: ಜೋಶಿ
ಇನ್ನು ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರು ಟಾರ್ಗೆಟ್ ಆಗುತ್ತಿದ್ದಾರೆ. ಭಯೋತ್ಪಾದಕರಿಗೆ ಕರ್ನಾಟಕ ಸುರಕ್ಷಿತ ರಾಜ್ಯವಾಗಿದೆ. ಬಾಯಿಗೆ ಬಂದಂಗೆ ಮಾತನಾಡೋರಿಗೆ ಏನೂ ಮಾಡುವುದಿಲ್ಲ. ಅವರಿಗೆ ವೋಟ್ ಹಾಕದೆ ಇರೋರ ಮೇಲೆ ಕೇಸ್ ಹಾಕುತ್ತಾರೆ ಎಂದು ಅವರು ವಾಗ್ದಾಳಿ ಮಾಡಿದ್ದಾರೆ.
ಆರ್ಸಿಬಿ ಗೆಲ್ಲಲಿ ಅಂತ ನಾನು ಹಾರೈಸುತ್ತೇನೆ
ಆರ್ಸಿಬಿ ಫೈನಲ್ಗೆ ತಲುಪಿದರ ಬಗ್ಗೆ ಮಾತನಾಡಿದ ಅವರು, ಬಹಳ ವರ್ಷದ ನಂತರ ಆರ್ಸಿಬಿ ಫೈನಲ್ಗೆ ಬಂದಿದೆ. ಈ ಬಾರಿ ಆರ್ಸಿಬಿ ಗೆಲ್ಲಲಿ ಅಂತ ನಾನು ಹಾರೈಸುತ್ತೇನೆ. ಮೊದಲ ಕಪ್ ನಮಗೆ ಬರಲಿ ಅಂತ ಹಾರೈಸುತ್ತೇನೆ ಎಂದು ಹೇಳಿದ್ದಾರೆ.
ಕಮಲ್ ಹಾಸನ್ ವಿಚಾರದಲ್ಲಿ ಯಾವುದೇ ಮೃದು ಧೋರಣೆ ಇಲ್ಲ: ಸಚಿವ ಶಿವರಾಜ್ ತಂಗಡಗಿ
‘ತಮಿಳಿನಿಂದ ಕನ್ನಡ ಹುಟ್ಟಿದ್ದು’ ಕಮಲ್ ಹಾಸನ್ ಹೇಳಿಕೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಕನ್ನಡ-ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ನಟ ಕಮಲ್ ಹಾಸನ್ ವಿಚಾರದಲ್ಲಿ ಯಾವುದೇ ಮೃದು ಧೋರಣೆ ಇಲ್ಲ. ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆ ಈಗಾಗಲೇ ಮಾತನಾಡಿದ್ದೇನೆ. ಥಗ್ ಲೈಫ್ ಚಿತ್ರ ಬ್ಯಾನ್ ಮಾಡುತ್ತೇವೆ ಎಂದು ಮಂಡಳಿ ಹೇಳಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಕಮಲ್ ಹಾಸನ್ ಸಿನಿಮಾವೇನಾದರೂ ಬಿಡುಗಡೆ ಮಾಡಿದರೆ ಥೇಟರ್ಗಳಿಗೆ ಬೆಂಕಿ ಹಾಕ್ತೀವಿ: ಟಿಎ ನಾರಾಯಣಗೌಡ, ಕರವೇ
ಕ್ಷಮೆ ಕೇಳದಿದ್ದರೆ ಥಗ್ ಲೈಫ್ ಚಿತ್ರ ನಿಷೇಧ ಮಾಡೋದು ಅನಿವಾರ್ಯ. ಸರ್ಕಾರಕ್ಕಿಂತ ವಾಣಿಜ್ಯ ಮಂಡಳಿ ಕೈಗೊಳ್ಳುವ ನಿರ್ಧಾರವೇ ಅಂತಿಮ. ವಾಣಿಜ್ಯ ಮಂಡಳಿ ಕೈಕೊಳ್ಳುವ ನಿರ್ಧಾರಕ್ಕೆ ಸರ್ಕಾರದ ಬೆಂಬಲವಿದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







