‘ಥಗ್ ಲೈಫ್’ ಚಿತ್ರಕ್ಕಿಂದು ನಿರ್ಣಾಯಕ ದಿನ; ಕರ್ನಾಟಕದಲ್ಲಿ ಸಿನಿಮಾ ಪ್ರದರ್ಶನ ಬಹುತೇಕ ಅನುಮಾನ
ಕಮಲ್ ಹಾಸನ್ ಅವರ ವಿವಾದಾತ್ಮಕ ಹೇಳಿಕೆಯಿಂದಾಗಿ ಅವರ ನಟನೆಯ ‘ಥಗ್ ಲೈಫ್’ ಚಿತ್ರದ ಕರ್ನಾಟಕದಲ್ಲಿನ ಬಿಡುಗಡೆ ಅನಿಶ್ಚಿತತೆಯಲ್ಲಿದೆ. ಕನ್ನಡ ಪರ ಸಂಘಟನೆಗಳ ಆಕ್ರೋಶದ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆಗೆ ವಿರೋಧ ವ್ಯಕ್ತವಾಗಿದೆ. ಕಮಲ್ ಹಾಸನ್ ಕ್ಷಮೆ ಯಾಚಿಸದಿರುವುದು ಇನ್ನಷ್ಟು ಸಂಕಷ್ಟ ಉಂಟುಮಾಡಿದೆ. ಚಿತ್ರದ ಭವಿಷ್ಯ ಇಂದು ಫಿಲ್ಮ್ ಚೇಂಬರ್ನ ನಿರ್ಧಾರದ ಮೇಲೆ ಅವಲಂಬಿತವಾಗಿದೆ.

ಕನ್ನಡದ ಬಗ್ಗೆ ಅಜ್ಞಾನದ ಹೇಳಿಕೆ ನೀಡಿದ ಕಮಲ್ ಹಾಸನ್ ಅವರು ಮೊಂಡುವಾದ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಅವರ ನಟನೆಯ ಸಿನಿಮಾ ರಿಲೀಸ್ಗೆ ವಿರೋಧ ವ್ಯಕ್ತವಾಗಿದೆ. ಆದರೆ, ಪಟ್ಟು ಬಿಡದ ಕಮಲ್ ಹಾಸನ್ (Kamal Haasan) ಕ್ಷಮೆ ಕೇಳಿಲ್ಲ. ಕರ್ನಾಟಕದಲ್ಲಿ ಈ ಸಿನಿಮಾ ರಿಲೀಸ್ ಆಗುತ್ತದೆಯೋ ಅಥವಾ ಇಲ್ಲವೋ ಎನ್ನುವ ಬಗ್ಗೆ ಪ್ರಶ್ನೆ ಮೂಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು (ಜೂನ್ 2) ಫಿಲ್ಮ್ ಚೇಂಬರ್ನಲ್ಲಿ ಮಹತ್ವದ ನಿರ್ಧಾರ ಆಗಲಿದೆ. ಹೀಗಾಗಿ ‘ಥಗ್ ಲೈಫ್’ ಚಿತ್ರಕ್ಕೆ ಇಂದು ಮಹತ್ವದ ದಿನ.
ಮಣಿರತ್ನಂ ನಿರ್ದೇಶನದ ‘ಥಗ್ ಲೈಫ್’ ಚಿತ್ರ ಜೂನ್ 5ರಂದು ರಿಲೀಸ್ ಆಗಬೇಕಿದೆ. ಈ ಚಿತ್ರದ ಪ್ರೀ-ರಿಲೀಸ್ ಈವೆಂಟ್ನಲ್ಲಿ ಶಿವರಾಜ್ಕುಮಾರ್ ಉದ್ದೇಶಿಸಿ ಮಾತನಾಡುವಾಗ, ‘ಕನ್ನಡ ಹುಟ್ಟಿದ್ದು ತಮಿಳಿನಿಂದ’ ಎಂಬ ಮಾತನ್ನು ಕಮಲ್ ಹಾಸನ್ ಹೇಳಿದ್ದರು. ಆ ಬಳಿಕ ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದ ಅವರು, ‘ನಾನು ಪ್ರೀತಿಯಿಂದ ಹಾಗೆ ಹೇಳಿದ್ದೇನೆ. ಈ ವಿಚಾರದಲ್ಲಿ ಕ್ಷಮೆಯೇ ಇಲ್ಲ’ ಎಂದಿದ್ದರು.
ಇದಾದ ಬಳಿಕ ಸಿನಿಮಾ ರಿಲೀಸ್ಗೆ ಅಡಚಣೆ ಉಂಟು ಮಾಡೋದಾಗಿ ಕಮಲ್ ಹಾಸನ್ಗೆ ಬೆದರಿಕೆ ಹಾಕಲಾಯಿತು. ಆದರೆ, ಬೆದರಿಕೆಗೆ ಹೆದರೋ ಮಾತೇ ಇಲ್ಲ ಎಂದು ಕಮಲ್ ಹಾಸನ್ ಅವರು ಖಡಕ್ ಆಗಿ ಹೇಳಿದ್ದರು. ಸಿನಿಮಾ ರಿಲೀಸ್ ಹತ್ತಿರವಾದರೂ ಅವರು ಕ್ಷಮೆ ಕೇಳಿಲ್ಲ.
ಕಮಲ್ ಹಾಸನ್ ಕ್ಷಮೆ ಕೇಳದೇ ಇದ್ದರೆ ಕನ್ನಡ ಪರ ಹೋರಾಟಗಾರರ ಕಿಚ್ಚು ಮುಂದುವರೆಯಲಿದೆ. ಥಗ್ ಲೈಫ್ ಸಿನಿಮಾ ರಿಲೀಸ್ ವಿಚಾರದಲ್ಲಿ ಕರ್ನಾಟಕದ ವಿತರಕರ ನಿರ್ಧಾರ ಏನು ಅನ್ನೋ ಕುತೂಹಲ ಕೂಡ ಇದೆ.
ಇದನ್ನೂ ಓದಿ: ಕಮಲ್ ಹಾಸನ್ ವಿವಾದದ ಬಳಿಕ ಮೊದಲ ಬಾರಿಗೆ ವೇದಿಕೆ ಮೇಲೆ ಮಾತನಾಡಿದ ಶಿವಣ್ಣ
ಈ ನಡುವೆ ಕನ್ನಡ ಭಾಷೆ ವಿಚಾರಕ್ಕೆ ಕಮಲ್ ಹೆಳಿರೋ ಮಾತಿಗೆ ತೀವ್ರ ಆಕ್ರೋಶ ಮುಂದುವರೆದಿದೆ. ಇಂದು ಸಭೆ ನಡೆಯಲಿದ್ದು ಆ ಬಳಿಕ ಅಂತಿಮ ನಿರ್ಧಾರ ಆಗಲಿದೆ. ಸಿನಿಮಾ ಪ್ರದರ್ಶನ ಮಾಡಿದರೆ ಥಿಯೇಟರ್ಗೆ ಬೆಂಕಿ ಹಚ್ಚುವ ಎಚ್ಚರಿಕೆ ನೀಡಾಗಿದೆ. ಇನ್ನು ಬುಕ್ ಮೈ ಶೋನಲ್ಲಿ ಸಿನಿಮಾ ಬುಕಿಂಗ್ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಚೆನ್ನೈನಲ್ಲಿ ಸಿನಿಮಾ ಬುಕಿಂಗ್ ಓಪನ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








