ಲೋಕಸಭೆ ಚುನಾವಣೆ ಸಮಯದಲ್ಲೇ ಬಿಜೆಪಿ ಎಂಎಲ್​ಸಿ ಕೆಪಿ ನಂಜುಂಡಿ ರಾಜೀನಾಮೆ, ನಾಳೆ ಕಾಂಗ್ರೆಸ್ ಸೇರ್ಪಡೆ

| Updated By: ಗಣಪತಿ ಶರ್ಮ

Updated on: Apr 23, 2024 | 10:09 AM

ಲೋಕಸಭೆ ಚುನಾವಣೆ ಮತದಾನಕ್ಕೆ ಕೆಲವೇ ದಿನಗಳಿರುವಾಗ ಬಿಜೆಪಿ ಎಂಎಲ್​ಸಿ ಕೆಪಿ ನಂಜುಂಡಿ ರಾಜೀನಾಮೆ ನೀಡಿದ್ದಾರೆ. ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿರುವ ಅವರು, ನಾಳೆ ಕಾಂಗ್ರೆಸ್ ಸೇರುವುದನ್ನು ಖಚಿತಪಡಿಸಿದ್ದಾರೆ. ಮತ್ತೊಂದೆಡೆ, ರಾಜೀನಾಮೆ ಅಂಗೀಕರಿಸಿರುವ ಸಭಾಪತಿ ಬಸವರಾಜ್ ಹೊರಟ್ಟಿ, ರಾಜಕಾರಣದಲ್ಲಿ ನೈತಿಕತೆ ಇಲ್ಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲೋಕಸಭೆ ಚುನಾವಣೆ ಸಮಯದಲ್ಲೇ ಬಿಜೆಪಿ ಎಂಎಲ್​ಸಿ ಕೆಪಿ ನಂಜುಂಡಿ ರಾಜೀನಾಮೆ, ನಾಳೆ ಕಾಂಗ್ರೆಸ್ ಸೇರ್ಪಡೆ
ಬಿಜೆಪಿ ಎಂಎಲ್​ಸಿ ಕೆಪಿ ನಂಜುಂಡಿ ರಾಜೀನಾಮೆ
Follow us on

ಹುಬ್ಬಳ್ಳಿ, ಏಪ್ರಿಲ್ 23: ಲೋಕಸಭೆ ಚುನಾವಣೆಯ (Lok Sabha Elections) ಸಮಯದಲ್ಲೇ ವಿಧಾನಪರಿಷತ್​ ಸದಸ್ಯ ಕೆಪಿ ನಂಜುಂಡಿ (KP Nanjundi) ರಾಜ್ಯ ಬಿಜೆಪಿಗೆ (BJP) ಶಾಕ್ ನೀಡಿದ್ದಾರೆ. ವಿಧಾನಪರಿಷತ್​ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅವರು, ಬುಧವಾರ ಕಾಂಗ್ರೆಸ್ (Congress) ಸೇರ್ಪಡೆಯಾಗುವುದಾಗಿ ಹೇಳಿದ್ದಾರೆ. ವಿಧಾನ ಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿಗೆ ಅವರ ಹುಬ್ಬಳ್ಳಿಯ ಮನೆಗೆ ತೆರಳಿ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ.

ನಂಜುಂಡಿ ಅವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದರು.

ರಾಜೀನಾಮೆ ನೀಡಿದ ಬಳಿಕ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಾಳೆ ಬೆಳಗ್ಗೆ 10 ಗಂಟೆಗೆ ಕಾಂಗ್ರೆಸ್ ಪಕ್ಷಕ್ಕೆ​ ಸೇರುತ್ತಿದ್ದೇನೆ. ನಿರ್ಲಕ್ಷ್ಯಕ್ಕೊಳಗಾದ‌ ಕಾಯಕ ಸಮಾಜದ ಏಳಿಗೆಗೆ ರಾಜಕೀಯಕ್ಕೆ ಬಂದೆ. ಕಾಯಕ ಸಮಾಜ ಉಳಿಸಿಕೊಳ್ಳುತ್ತಾರೆ ಎನ್ನುವ ಕಾರಣಕ್ಕೆ ಬಿಜೆಪಿಗೆ ಬಂದೆ. ಆದರೆ, ಪಕ್ಷದ ಮುಖಂಡರು ಒಂದು ದಿನವೂ ಕಾಯಕ ಸಮಾಜದ ಬಗ್ಗೆ ಮಾತಾಡಿಲ್ಲ. ಬಿಜೆಪಿ ಸರ್ಕಾರವಿದ್ದಾಗ ನಮ್ಮ ಸಮುದಾಯಕ್ಕೆ ಯಾವುದೇ ರೀತಿ ಸ್ಪಂದಿಸಿಲ್ಲ. ನನ್ನನ್ನು ಎಂಎಲ್‌ಸಿ ಮಾಡಿ ಸುಮ್ಮನಾದರು, ಏನೂ ಜವಾಬ್ದಾರಿ ಕೊಡಲಿಲ್ಲ ಎಂದು ಆರೋಪಿಸಿದರು.

ರಾಜೀನಾಮೆ ಕೊಡುವಂತೆ ಎರಡು ವರ್ಷದಿಂದ ನಮ್ಮ ಸಮಾಜದ ಒತ್ತಡವಿತ್ತು. ನನ್ನನ್ನು ನಿರ್ಲಕ್ಷ್ಯ ಮಾಡಿದ್ದಾರೆ, ನಮ್ಮ ಹೋರಾಟಕ್ಕೆ ಬೆಲೆ ಇಲ್ಲವಾಗಿದೆ. ಹೀಗಾಗಿ ನಾನು ಎಂಎಲ್‌ಸಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿದ್ದೇನೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಕೊಡುತ್ತೇನೆ ಎಂದು ಅವರು ಹೇಳಿದರು.

ಬಸವರಾಜ್ ಹೊರಟ್ಟಿ ಅಸಮಾಧಾನ

ಕೆಪಿ ನಂಜುಂಡಿ ರಾಜೀನಾಮೆ ಕುರಿತು ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಪ್ರತಿಕ್ರಿಯಿಸಿದ್ದು, ರಾಜಿನಾಮೆ ಅಂಗೀಕರಿಸಿದ್ದೇನೆ. ಮರ್ಯಾದೆ ಇದ್ದವರು ರಾಜಕಾರಣದಲ್ಲಿ ಇರಬಾರದು ಅನ್ನೋ ಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜತೆಗೆ, ಪರಿಸ್ಥಿತಿ ಸುಧಾರಣೆಗೆ ಕ್ರಮ ಕೈಗೊಳ್ಳುತ್ತೇನೆ ಎಂದರು.

ಇದನ್ನೂ ಓದಿ: ಲೋಕಸಭೆ ಚುನಾವಣೆ ಪ್ರಚಾರದ ಅಖಾಡದಲ್ಲಿ ಚೊಂಬು, ಚಿಪ್ಪು, ಟಾಯ್ಲೆಟ್ಟು: ಟೀಕೆಗಳಲ್ಲೂ ಕ್ರಿಯಾಶೀಲತೆ ಉಂಟು!

ನನ್ನ ಸಭಾಪತಿ ಅವಧಿಯಲ್ಲಿ 13 ಜನ ರಾಜಿನಾಮೆ ಕೊಟ್ಟಿದ್ದಾರೆ. ರಾಜಕೀಯದಲ್ಲಿ ನೈತಿಕತೆ ಈಗ ಕಡಿಮೆಯಾಗಿದೆ. ದುಡ್ಡೊಕೊಟ್ಟು, ತೆಗೆದುಕೊಂಡು ಓಟ್ ಹಾಕುವವರೆಗೆ ಪ್ರಜಾಪ್ರಭುತ್ವಕ್ಕೆ ಬೆಲೆಯಿಲ್ಲ. ಹಿಂದೆ ಸಂಗೀತಗಾರರು, ಸಾಹಿತಿಗಳು ಪರಿಷತ್‌ನಲ್ಲಿ ಇರುತ್ತಿದ್ದರು. ಈಗ ಹಣ, ತೋಳ್ಬಲದ ರಾಜಕೀಯ ನಡೆಯುತ್ತಿದೆ. ಯಾರಿಗೋ ಆಶ್ರಯ ಕಲ್ಪಿಸಲು ಎಮ್‌ಎಲ್‌ಸಿ ಮಾಡುತ್ತಾರೆ. ಸಂವಿಧಾನ ದುರುಪಯೋಗ ಆಗಬಾರದು, ಗೌರವಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ