AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ-ಜೆಡಿಎಸ್​ ಮೊದಲ ದಿನದ ಪಾದಯಾತ್ರೆ ಅಂತ್ಯ: ಆರಂಭದಿಂದ ಮುಕ್ತಾಯದವರೆಗೆ ಏನೆಲ್ಲಾ ನಡೀತು? ಇಲ್ಲಿದೆ ವಿವರ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಅಕ್ರಮವಾಗಿ 14 ನಿವೇಶಗಳನ್ನು ಹಂಚಲಾಗಿದೆ ಎಂಬ ಆರೋಪ ಬಿಜೆಪಿ, ಜೆಡಿಎಸ್‌ಗೆ ಬ್ರಹ್ಮಾಸ್ತ್ರವಾಗಿದೆ. ಈ ಹಗರಣದ ಆರೋಪದ ಮುಂದಿಟ್ಟು ಇಂದಿನಿಂದ ದೋಸ್ತಿ ಪಕ್ಷಗಳು ಬೆಂಗಳೂರಿನಿಂದ ಮೈಸೂರುವರೆಗೆ ಹಮ್ಮಿಕೊಂಡಿದ್ದ ಮೊದಲ ದಿನದ ಪಾದಯಾತ್ರೆ ಇದೀಗ ಬಿಡದಿಯಲ್ಲಿ ಮುಕ್ತಾಯವಾಗಿದೆ. ಮೊದಲ ದಿನದ ಪಾದಯಾತ್ರೆಯಲ್ಲಿ ಏನೆಲ್ಲಾ ನಡೆಯಿತು ಎಂಬ ಮಾಹಿತಿ ಇಲ್ಲಿದೆ.

ಬಿಜೆಪಿ-ಜೆಡಿಎಸ್​ ಮೊದಲ ದಿನದ ಪಾದಯಾತ್ರೆ ಅಂತ್ಯ: ಆರಂಭದಿಂದ ಮುಕ್ತಾಯದವರೆಗೆ ಏನೆಲ್ಲಾ ನಡೀತು? ಇಲ್ಲಿದೆ ವಿವರ
ಬಿಜೆಪಿ-ಜೆಡಿಎಸ್​ ಮೊದಲ ದಿನದ ಪಾದಯಾತ್ರೆ ಅಂತ್ಯ: ಆರಂಭದಿಂದ ಮುಕ್ತಾಯದವರೆಗೆ ಏನೆಲ್ಲಾ ನಡೀತು? ಇಲ್ಲಿದೆ ವಿವರ
ಕಿರಣ್​ ಹನಿಯಡ್ಕ
| Edited By: |

Updated on: Aug 03, 2024 | 7:56 PM

Share

ಬೆಂಗಳೂರು, ಆಗಸ್ಟ್​ 03: ಮುಡಾ ಸೈಟ್ ಹಂಚಿಕೆ ಹಗರಣ ಖಂಡಿಸಿ ಬಿಜೆಪಿ-ಜೆಡಿಎಸ್ (bjp-jds) ಇಂದಿನಿಂದ ಆರಂಭಿಸಿದ್ದ ಮೊದಲ ದಿನದ ಪಾದಯಾತ್ರೆ (Padayatra) ಇದೀಗ ಮುಕ್ತಾಯವಾಗಿದೆ. ಮೊದಲ ದಿನವೇ ನಾಯಕರು 16 ಕಿ.ಮೀ ಪಾದಯಾತ್ರೆ ನಡೆಸಿದರು. ಬಿಡದಿಯಲ್ಲಿ ಪಾದಯಾತ್ರೆ ಅಂತ್ಯವಾಗಿದ್ದು, ಇಂದು ರಾತ್ರಿ ಬಿಡದಿಯ ಈಗಲ್ಟನ್ ರೆಸಾರ್ಟ್​ನಲ್ಲಿ ಬಿಜೆಪಿ, ಜೆಡಿಎಸ್ ನಾಯಕರ ವಾಸ್ತವ್ಯ ಹೂಡಲಿದ್ದಾರೆ. ಮಂಜುನಾಥ ಕನ್ವೆನ್ಷನ್ ಹಾಲ್​ನಲ್ಲಿ ಕಾರ್ಯಕರ್ತರಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.

ಮೊದಲ ದಿನದ ಪಾದಯಾತ್ರೆ ಹೇಗಿತ್ತು?

ಬಿಡದಿಯಲ್ಲಿ ಮೊದಲ ದಿನದ ಪಾದಯಾತ್ರೆ ಅಂತ್ಯಕ್ಕೂ ಮುನ್ನ ಸಭೆ ಮಾಡಲಾಗಿದೆ. ತೆರೆದ ವಾಹನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಸಾರ್ವಜನಿಕ ಭಾಷಣ ಮಾಡಿದರು.

ಇದನ್ನೂ ಓದಿ: ನಾವು ಕೇಳುವ ಪ್ರಶ್ನೆಗೆ ವಿಪಕ್ಷದವರು ಉತ್ತರ ಕೊಡಲಿ: ಡಿಕೆ ಶಿವಕುಮಾರ್ ಆಗ್ರಹ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಅಂತಾ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಇಂದಿನಿಂದ ಪಾದಯಾತ್ರೆ ಆರಂಭಿಸಿದೆ. ಬೆಂಗಳೂರಿನ ಕೆಂಗೇರಿಯಲ್ಲಿರೋ ಕೆಂಪಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ದೋಸ್ತಿ ನಾಯಕರು ಹಾಗೂ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ನಗಾರಿ ಬಾರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ‘ದೋಸ್ತಿ’ ನಾಯಕರ ದಂಗಲ್

ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಬಿ.ಎಸ್ ಯಡಿಯೂರಪ್ಪ, ಸಿಎಂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಇನ್ನೊಂದು ಹೆಜ್ಜೆ ಮುಂದಿಟ್ಟ ಹೆಚ್‌ಡಿ ಕುಮಾರಸ್ವಾಮಿ, ಮುಡಾ ಹಗರಣದ ದಾಖಲೆ ಕೊಟ್ಟಿದ್ದು ಯಾರಪ್ಪ ಅಂತಾ ಡಿಕೆ ಶಿವಕುಮಾರ್​ ಕಡೆಗೆ ಬಾಂಬ್ ಎಸೆದಿದ್ದಾರೆ.

ಕರ್ಮ ರಿಟರ್ನ್ ಎಂದ ಮಾಜಿ ಸಚಿವ ಜನಾರ್ದನ ರೆಡ್ಡಿ!

ಕಾಲಚಕ್ರ ಅಂದರೆ ಇದೇ ನೋಡಿ. ಬಳ್ಳಾರಿ ಗಣಿಧಣಿಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ತೊಡೆ ತಟ್ಟಿ, ಬಳ್ಳಾರಿ ಪಾದಯಾತ್ರೆ ಮಾಡಿದ್ದರು. ಆದರೆ ಇಂದು ಅದೇ ಸಿದ್ದರಾಮಯ್ಯ ವಿರುದ್ಧ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅಬ್ಬರಿಸಿದ್ದಾರೆ. ಕರ್ಮ ರಿಟರ್ನ್ಸ ಆಗಿದೆ ಅಂತಾ ರೆಡ್ಡಿ ಕುಟುಕಿದರು. ಇನ್ನೂ ಆರ್‌.ಅಶೋಕ್, ವಿಜಯೇಂದ್ರ ಸಹ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದರು.

ಹೆಚ್‌ಡಿ ಕುಮಾರಸ್ವಾಮಿ ವಿರೋಧದ ಮಧ್ಯೆಯೂ ಪಾದಯಾತ್ರೆಗೆ ಪ್ರೀತಂಗೌಡ ಎಂಟ್ರಿ!

ಪ್ರೀತಂಗೌಡಗೆ ಪಾದಯಾತ್ರೆ ಜವಾಬ್ದಾರಿ ಕೊಟ್ಟಿದ್ದರ ಬಗ್ಗೆ ಹೆಚ್‌.ಡಿ ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದರು. ಆದರೂ, ಬಿಡದಿ ಬಳಿ ಪ್ರೀತಂಗೌಡ ಪಾದಯಾತ್ರೆಗೆ ಎಂಟ್ರಿ ಕೊಟ್ಟಿದ್ದಾರೆ. ವಿಜಯೇಂದ್ರ ಜೊತೆಗೆ ಪಾದಯಾತ್ರೆ ಮಾಡಿದ್ದಾರೆ.

ಬಿಜೆಪಿ ಪಾದಯಾತ್ರೆಗೆ ಕಾಂಗ್ರೆಸ್‌ನಿಂದ ‘ಜನಾಂದೋಲನ’ ಕೌಂಟರ್

ಕೆಂಗೇರಿಯಿಂದ ಬಿಡದಿವರೆಗೂ ಪಾದಯಾತ್ರೆ ನಡೆಸಿ ದೋಸ್ತಿಗಳು ಅಬ್ಬರಿಸಿದ್ದರು. ಅತ್ತ ಪಾದಯಾತ್ರೆಗೆ ಕೌಂಟರ್ ಆಗಿ ರಾಮನಗರದಲ್ಲಿ ಕಾಂಗ್ರೆಸ್ ಕಲಿಗಳು ಜನಾಂದೋಲನ ಸಭೆ ನಡೆಸಿದರು. ಬಿಜೆಪಿ ಕಾಲದಲ್ಲಿ ನಡೆದಿದ್ದು ಎನ್ನಲಾದ ಹಗರಣಗಳ ಪೋಸ್ಟರ್ ಹಿಡಿದು ಆಕ್ರೋಶ ಹೊರಹಾಕಿದ್ದು, ಸಮಾವೇಶದಲ್ಲಿ ಡಿಸಿಎಂ ಡಿಕೆ ಶಿವಕುಮಾರ್​ ಬಿಜೆಪಿ ವಿರುದ್ಧ ಗುಡುಗಿದ್ದಾರೆ.

ಇದನ್ನೂ ಓದಿ: ಬಿಜೆಪಿ ಜೆಡಿಎಸ್ ಪಾದಯಾತ್ರೆ: ಹೆಚ್​ಡಿ ಕುಮಾರಸ್ವಾಮಿ ಮುನಿಸು ತಣಿಸಿದ್ದೇ ಪ್ರಲ್ಹಾದ್ ಜೋಶಿ!

ಅತ್ತ ಹಾಸನದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ-ಜೆಡಿಎಸ್‌ನವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದಿದ್ದಾರೆ.

ಮುಡಾ ಹಗರಣದ ಮೊದಲ ದಿನದ ಯುದ್ಧ ಇಂದಿಗೆ ಮುಕ್ತಾಯವಾಗಿದೆ. ಮೊದಲ ದಿನವೇ ನಾಯಕರು ಅಬ್ಬರಿಸಿದ್ದಾರೆ. ಇನ್ನೂ ಆರೇಳು ದಿನ ಪಾದಯಾತ್ರೆ ಮುಂದುವರೆಯಲಿದ್ದು, ಕ್ಲೈಮ್ಯಾಕ್ಸ್‌ನಲ್ಲಿ ಏನಾಗಲಿದೆ ಅನ್ನೋದು ಕುತೂಹಲ ಮೂಡಿಸಿದೆ.

ವರದಿ: ರಾಮನಗರದಿಂದ ಸೈಯದ್ ಜೊತೆ ಕಿರಣ್, ಸುನಿಲ್, ಅನಿಲ್ ಟಿವಿ9 ಬೆಂಗಳೂರು

ರಾಜ್ಯದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us