
ಬೆಂಗಳೂರು, (ಏಪ್ರಿಲ್ 17): ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಜಾತಿಗಣತಿ ವರದಿ(Karnataka caste census report) ವಿವಾದದ ಬೆಂಕಿ ಹೊತ್ತಿಸಿದೆ. ಈ ಬಗ್ಗೆ ಸಚಿವ ಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಇದೆ ಹೊತ್ತಲ್ಲಿ ಪ್ರಬಲ ಸಮುದಾಯಗಳ ವಿರೋಧಕ್ಕೆ ಪುಷ್ಟಿ ನೀಡುವಂತೆ ವರದಿಯಲ್ಲಿ ಮತ್ತಷ್ಟು ಗೊಂದಲಕಾರಿ ಅಂಶಗಳಿರುವುದು ಬಯಲಾಗಿದೆ. ಹಿಂದುಳಿದ ವರ್ಗಗಳ ಆಯೋಗ ಸಚಿವರಿಗೆ ನೀಡಲಾಗಿರುವ ಜಾತಿಗಣತಿ ವರದಿಯ 53ನೇ ಪುಟದಿಂದ ಮುಸ್ಲಿಂ (Muslim) ಸಮುದಾಯದ ಬಗ್ಗೆ ಅಂಕಿ ಅಂಶಗಳನ್ನು ನೀಡಲಾಗಿದ್ದು, ಮುಸ್ಲಿಮರ 93 ಉಪ ಪಂಗಡಗಳನ್ನು ಗುರುತಿಸಲಾಗಿದೆ. ಆದ್ರೆ ಮುಸ್ಲಿಂ ಉಪ ಪಂಗಡಗಳನ್ನು ಒಟ್ಟಾಗಿ ಪರಿಗಣಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಜಾತಿ ಗಣತಿ ವರದಿಯಲ್ಲಿ ಮುಸ್ಲಿಮರ 93 ಉಪ ಪಂಗಡಗಳನ್ನು ಗುರುತಿಸಲಾಗಿದೆ. ಆದ್ರೆ ಮುಸ್ಲಿಂ ಉಪ ಪಂಗಡಗಳನ್ನು ಒಟ್ಟಾಗಿ ಪರಿಗಣಿಸಲಾಗಿದೆ. ಮುಸ್ಲಿಂ ಉಪಪಂಡಗಳೆಲ್ಲವೂ ಒಂದೇ ಕೆಟಗರಿ ಅಂದ್ರೆ ಕೆಟಗರಿ 2Bಅಡಿಯಲ್ಲೇ ಎಲ್ಲ ಮುಸ್ಲಿಂ ಉಪ ಪಂಗಡಗಳ ಪರಿಗಣಿಸಲಾಗಿದೆ. ಆದರೆ ಉಳಿದ ಹಿಂದೂ ಜಾತಿಗಳಲ್ಲಿ ಕೆಟಗರಿ ಪ್ರಕಾರ ಬೇರೆ ಬೇರೆ ವರ್ಗೀಕರಿಸಲಾಗಿದೆ. ಒಂದೇ ಜಾತಿಯಾದರೂ ಬೇರೆ ಬೇರೆ ಕೆಟಗರಿಯಲ್ಲಿ ಪರಿಗಣಿಸಲಾಗಿದೆ. ಪ್ರವರ್ಗ 1, ಪ್ರವರ್ಗ 2, ಪ್ರವರ್ಗ 3ರಲ್ಲಿ ಬೇರೆ ಬೇರೆ ಜಾತಿಗಳು ಹಂಚಿಹೋಗಿವೆ. ಲಿಂಗಾಯತರಲ್ಲೇ 95ಕ್ಕೂ ಹೆಚ್ಚು ಉಪ ಪಂಗಡಗಳು ವಿಂಗಡಣೆ ಮಾಡಲಾಗಿದ್ದು, ಹಲವು ಉಪ ಪಂಗಡಗಳು ಬೇರೆ ಬೇರೆ ಕೆಟಗರಿಯಲ್ಲಿ ಸೇರ್ಪಡೆಯಾಗಿವೆ. ಅತ್ಯಂತ ಹಿಂದುಳಿದ, ಅತಿ ಹಿಂದುಳಿದ ಹಾಗೂ ಹಿಂದುಳಿದ ವರ್ಗಗಳಾಗಿ ವಿಭಜನೆಯಾಗಿವೆ. ಈ ವಿಭಜನೆಯಿಂದ ಒಟ್ಟು ಜಾತಿಯ ಸಂಖ್ಯೆಯಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆ.
ಆದ್ರೆ ಈ ವರದಿಯನ್ನು ಸಮರ್ಥಿಸಿಕೊಂಡಿರುವ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಮುಸ್ಲಿಂಮರಲ್ಲಿ ಒಳಪಂಗಡಗಳಿರುವುದು ನಿಜ. ಆದ್ರೆ ಕೆಲ ಲಿಂಗಾಯತರೇ ಕೇವಲ ಉಪಪಂಗಡಗಳನ್ನು ಮಾತ್ರ ಉಲ್ಲೇಖಿಸಿದ್ದಾರೆ ಎಂದು ತಿಳಿಸಿದ್ದಾರೆ. ಮತ್ತೊಂದೆಡೆ ಸಚಿವ ಜಮೀರ್ ಅಹಮ್ಮದ್ ಖಾನ್ ಪ್ರತಿಕ್ರಿಯಿಸಿ, 2011ರಲ್ಲೇ ಮುಸ್ಲಿಮರ ಜನಸಂಖ್ಯೆ 75 ಲಕ್ಷ ಇತ್ತು. ಆದ್ರೆ ಈಗಿನ ಜಾತಿಗಣತಿ ವರದಿಯಲ್ಲಿ ಮುಸ್ಲಿಂ ಸಂಖ್ಯೆ ಕಡಿಮೆಯಿದೆ ಎಂದು ಹೇಳಿದ್ದರೆ, ಎನ್.ಎ.ಹ್ಯಾರಿಸ್, ನಮ್ಮಲ್ಲಿ ಒಳಪಂಗಡ ಇಲ್ಲ ಎಂದಿದ್ದಾರೆ.
ಮತ್ತೊಂದೆಡೆ ಜಾತಿ ಜನಗಣತಿ ವಿಚಾರವಾಗಿ ಮುಸ್ಲಿಂ ಸಮುದಾಯದ ನಾಯಕರು ಸಹ ಸಭೆ ನಡೆಸಿದ್ದಾರೆ.. ಬೆಂಗಳೂರಿನ ಸಬೀಲ್ ಉರ್ ರಶಾದ್ ಅರೇಬಿಕ್ ಕಾಲೇಜಿನಲ್ಲಿ ವರದಿಯ ಸಾಧಕ-ಬಾಧಕಗಳ ಚರ್ಚೆ ಆಗಿದೆ.. ಈ ಸಭೆಯಲ್ಲಿ ಸಚಿವ ಜಮೀರ್ ಅಹ್ಮದ್, ಸಗೀರ್ ಅಹ್ಮದ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮಾಜಿ ಸಚಿವ ಆರ್ ರೋಷನ್ ಬೇಗ್ ಉಪಸ್ಥಿತರಿದ್ದರು.
ಒಟ್ಟಾರೆ ಈ ಜಾತಿ ಗಣತಿ ಭವಿಷ್ಯ ನಿರ್ಣಾಯಕ ಹಂತ ತಲುಪಿದ್ದು, ಇಂದಿನ ಸಚಿವ ಸಂಪುಟದಲ್ಲಿ ಏನೆಲ್ಲಾ ಆಗಲಿದೆ ಎನ್ನುವುದು ಕುತೂಹಲಕ ಮೂಡಿಸಿದೆ.
Published On - 5:48 pm, Thu, 17 April 25