ಕರ್ನಾಟಕದಲ್ಲೇ ಅತಿ ಎತ್ತರದ ಶ್ರೀಕೃಷ್ಣ ಮೂರ್ತಿ ಅಪಾಯದಲ್ಲಿ! ಐತಿಹಾಸಿಕ ಲಕ್ಕುಂಡಿ ಬಳಿಯೇ ಇದ್ದರೂ ನಿರ್ಲಕ್ಷ್ಯ
ಜಂತ್ಲಿಶಿರೂರದ ಐತಿಹಾಸಿಕ ಶ್ರೀಕೃಷ್ಣ ದೇಗುಲ ಕರ್ನಾಟಕದ ಅತಿ ಎತ್ತರದ ಕೃಷ್ಣ ಮೂರ್ತಿ ಹೊಂದಿದೆ. ಕಲ್ಯಾಣ ಚಾಲುಕ್ಯರ ಕಾಲದ ಈ ದೇವಾಲಯ ಪ್ರಸ್ತುತ ನಿರ್ಲಕ್ಷ್ಯದಿಂದ ಶಿಥಿಲಾವಸ್ಥೆಗೆ ತಲುಪಿದ್ದು, ಅಪರೂಪದ ಶಿಲ್ಪಕಲೆ ಹೊಂದಿರುವ ಕೃಷ್ಣನ ಮೂರ್ತಿ ಕೂಡ ಅಪಾಯದಲ್ಲಿದೆ. ಈ ಕೃಷ್ಣ ಮೂರ್ತಿಯ ವಿಶೇಷವೇನು? ಉಡುಪಿ ಕೃಷ್ಣನಿಗಿಂತಲೂ ಅಪರೂಪ ಎನ್ನುವುದೇಕೆ? ಮಾಹಿತಿ ಇಲ್ಲಿದೆ.

ಗದಗ, ಫೆಬ್ರವರಿ 2: ಗದಗ (Gadag) ಜಿಲ್ಲೆ ಮುಂಡರಗಿ ತಾಲೂಕಿನ ಜಂತ್ಲಿಶಿರೂರ ಗ್ರಾಮದಲ್ಲಿರುವ ಐತಿಹಾಸಿಕ ಶ್ರೀಕೃಷ್ಣ ದೇವಾಲಯ ಅವ್ಯವಸ್ಥೆಯ ಆಗರವಾಗಿದ್ದು, ಆಡಳಿತದ ನಿರ್ಲಕ್ಷ್ಯದಿಂದ ನಲುಗಿ ಹೋಗಿದೆ. ಇದೀಗ ಗ್ರಾಮಸ್ಥರು ದೇಗುಲದ ಜೀರ್ಣೋದ್ಧಾರಕ್ಕೆ ಆಗ್ರಹಿಸಿದ್ದಾರೆ. ಇಡೀ ಕರ್ನಾಟಕದಲ್ಲೇ ಅತೀ ಎತ್ತರದ ಕೃಷ್ಣನ ಮೂರ್ತಿ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾದ ದೇವಸ್ಥಾನ ಇದಾಗಿದೆ. ಸುಮಾರು ಐದು ಅಡಿ ಎತ್ತರದ ಅಪರೂಪದ ಶ್ರೀ ಕೃಷ್ಣ ಮೂರ್ತಿಯನ್ನು ಹೊಂದಿರುವ ಈ ದೇವಾಲಯವನ್ನು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸೂಕ್ಷ್ಮ ಕೆತ್ತನೆಯ ಕಿರೀಟ, ಕಿವಿಯೋಲೆ, ಹಾರ, ಉದರಬಂಧ, ವಸ್ತ್ರ ಅಲಂಕಾರಗಳು ಶಿಲ್ಪಕಲೆಯ ಅದ್ಭುತವನ್ನು ಸಾರುತ್ತವೆ. ಶಂಖ, ಚಕ್ರ, ಗದಾ, ಪದ್ಮ ಹಿಡಿದಿರುವ ಈ ಕೃಷ್ಣ ಮೂರ್ತಿ ವಿಷ್ಣುವಿನ ಅವತಾರ ರೂಪವೆಂದು ಇತಿಹಾಸಜ್ಞರು ಗುರುತಿಸಿದ್ದಾರೆ.
ಬೀಳುವ ಹಂತದಲ್ಲಿ ಅಪರೂಪದ ಕೃಷ್ಣ ಮೂರ್ತಿ
ಆದರೆ, ಇಷ್ಟೊಂದು ಅಪರೂಪದ ದೇವಾಲಯ ಇಂದು ಸಂಪೂರ್ಣ ಅವನತಿ ಹಾದಿಯಲ್ಲಿದೆ. ದೇವಾಲಯದ ಸುತ್ತಮುತ್ತ ಕಸ, ಗಿಡಗಂಟಿಗಳು ಬೆಳೆದಿದ್ದು, ಮಳೆಗಾಲದಲ್ಲಿ ದೇವಸ್ಥಾನ ಸೋರುತ್ತಿರುವುದು ಶಿಲ್ಪ ಮತ್ತು ವಾಸ್ತುಶಿಲ್ಪಕ್ಕೆ ಗಂಭೀರ ಹಾನಿಯಾಗುವ ಭೀತಿ ಹುಟ್ಟುಹಾಕಿದೆ. ಅತೀ ಸುಂದರವಾದ ಕೃಷ್ಣನ ಮೂರ್ತಿ ಬಿಳುವ ಹಂತಕ್ಕೆ ತಲುಪುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಐತಿಹಾಸಿಕ ಲಕ್ಕುಂಡಿ ಸಮೀಪದಲ್ಲೇ ಇದೆ ದೇಗುಲ
ಐತಿಹಾಸಿಕ ಲಕ್ಕುಂಡಿ ಗ್ರಾಮದಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿರುವ ಈ ಕೃಷ್ಣ ದೇವಾಲಯವನ್ನು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಿ ಸಮಗ್ರ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಪಕ್ಕದಲ್ಲೇ ಲಕ್ಕುಂಡಿಯಲ್ಲಿ ಪುರಾತನ ಕಾಲದ ದೇವಸ್ಥಾನಗಳ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವಾಗ, ನಮ್ಮ ಗ್ರಾಮದ ಐತಿಹಾಸಿಕ ದೇವಸ್ಥಾನ ನಿರ್ಲಕ್ಷ್ಯಕ್ಕೆ ಒಳಗಾಗಿರುವುದಕ್ಕೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಅಪರೂಪದ ಕೃಷ್ಣ ಮೂರ್ತಿಗೆ ಮನಸೋತಿದ್ದ ಪೇಜಾವರ ಶ್ರೀಗಳು
ಈ ಹಿಂದೆ ಉಡುಪಿಯ ಪೇಜಾವರ ಶ್ರೀಗಳು ಜಂತ್ಲಿಶಿರೂರ ಗ್ರಾಮಕ್ಕೆ ಭೇಟಿ ನೀಡಿ ಶ್ರೀ ಕೃಷ್ಣ ದೇವಾಲಯವನ್ನು ವೀಕ್ಷಿಸಿದ್ದರು. ಅಪರೂಪದ ಕೃಷ್ಣನ ಮೂರ್ತಿಯನ್ನು ನೋಡಿ ಪೇಜಾವರ ಶ್ರೀಗಳೇ ಬೆರಗಾಗಿದ್ದು, ಮೂರ್ತಿಯನ್ನು ಉಡುಪಿಯ ಕೃಷ್ಣ ಮಠಕ್ಕೆ ನೀಡುವಂತೆ ಕೇಳಿಕೊಂಡಿದ್ದರು. ಆದರೆ ಮೂರ್ತಿಯ ಐತಿಹಾಸಿಕ ಮಹತ್ವವನ್ನು ಗಮನಿಸಿ ಗ್ರಾಮಸ್ಥರು ಅದನ್ನು ನೀಡಲು ನಿರಾಕರಿಸಿದ್ದರು ಎನ್ನಲಾಗಿದೆ.
ಇದ್ನನೂ ಓದಿ: ಶಾಲಾ ಮಕ್ಕಳ ಮೇಲೆ ಲಕ್ಕುಂಡಿ ಉತ್ಖನನದ ಎಫೆಕ್ಟ್: ಧೂಳಿನ ಅಬ್ಬರಕ್ಕೆ ಪುಟಾಣಿಗಳು ಹೈರಾಣು
ಇಷ್ಟೊಂದು ಅಪರೂಪದ ಮತ್ತು ಐತಿಹಾಸಿಕ ಮಹತ್ವ ಹೊಂದಿರುವ ಶ್ರೀ ಕೃಷ್ಣ ದೇವಾಲಯವನ್ನು ಉಳಿಸಿ ಅಭಿವೃದ್ಧಿಪಡಿಸಬೇಕೆಂದು ಗ್ರಾಮಸ್ಥರು ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್ ಹಾಗೂ ಪ್ರವಾಸೋದ್ಯಮ ಸಚಿವ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ಈ ಪುರಾತನ ಧಾರ್ಮಿಕ ಪರಂಪರೆಯನ್ನು ಉಳಿಸಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:32 am, Mon, 2 February 26