AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಸದರ ಆಹ್ವಾನಿಸದೇ ಆರೋಗ್ಯ ಕೇಂದ್ರದ ಕಟ್ಟಡ ಉದ್ಘಾಟನೆ: ಹೆಚ್​​.ಡಿ. ರೇವಣ್ಣ ವಿರುದ್ಧ ಸಿಡಿದ ಕಾಂಗ್ರೆಸಿಗರು

ಹೊಳೆನರಸೀಪುರದ ದೊಡ್ಡಕುಂಚೇವು ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡವನ್ನು ಸಂಸದ ಶ್ರೇಯಸ್ ಪಟೇಲ್ ಅವರಿಗೆ ಆಹ್ವಾನ ನೀಡದೆ ಜೆಡಿಎಸ್​ ಶಾಸಕ ಹೆಚ್.ಡಿ. ರೇವಣ್ಣ ಉದ್ಘಾಟಿಸಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಭಾರಿ ಗಲಾಟೆಗೆ ಕಾರಣವಾಗಿದೆ. ರೇವಣ್ಣ ನಡೆಗೆ ಸಂಸದ ಶ್ರೇಯಸ್​​ ಪಟೇಲ್​​ ಆಕ್ರೋಶ ವ್ಯಕ್ತಪಡಿಸಿರುವ ಸಂಸದರು, ಹಿರಿಯ ಶಾಸಕರಾಗಿ ಅವರಿಗೆ ಉದಾರ ಭಾವನೆ ಇರಬೇಕಿತ್ತು. ನಮಗೆ ‌ಮಾರ್ಗದರ್ಶನ ಮಾಡಿ ಜೊತೆಯಲ್ಲಿ ಕರೆದೊಯ್ಯುವ ಕೆಲಸ ಮಾಡಬೇಕಿತ್ತು. ಆದರೆ ಅವರೇ ಕಾನೂನು ಗಾಳಿಗೆ ತೂರಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಸದರ ಆಹ್ವಾನಿಸದೇ ಆರೋಗ್ಯ ಕೇಂದ್ರದ ಕಟ್ಟಡ ಉದ್ಘಾಟನೆ: ಹೆಚ್​​.ಡಿ. ರೇವಣ್ಣ ವಿರುದ್ಧ ಸಿಡಿದ ಕಾಂಗ್ರೆಸಿಗರು
ಕಾರ್ಯಕರ್ತರ ಪ್ರತಿಭಟನೆImage Credit source: Tv9 Kannada
ಮಂಜುನಾಥ ಕೆಬಿ
| Edited By: |

Updated on: Jul 10, 2026 | 4:55 PM

Share

ಹಾಸನ, ಜುಲೈ 10: ಹೊಳೆನರಸೀಪುರ ತಾಲೂಕಿನ ದೊಡ್ಡಕುಂಚೇವು ಗ್ರಾಮದಲ್ಲಿನ ಸಮುದಾಯ ಅರೋಗ್ಯ ಕೇಂದ್ರದದ ನೂತನ ಕಟ್ಟಡ ಉದ್ಘಾಟನೆ ವಿಚಾರವಾಗಿ ದೊಡ್ಡ ಹೈಡ್ರಾಮಾವೇ ನಡೆದಿದೆ. ಸಂಸದರಿಗೆ ಆಹ್ವಾನ ನೀಡದೆಯೇ ಶಾಸಕ ಹೆಚ್​​. ಡಿ. ರೇವಣ್ಣ ಪೂಜೆ‌ಸಲ್ಲಿಸಿ ಕಟ್ಟಡ ಉದ್ಘಾಟನೆ ನೆರವೇರಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್​​ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಈ ವೇಳೆ ಸ್ಥಳಕ್ಕೆ ಜೆಡಿಎಸ್​​ ಕಾರ್ಯಕರ್ತರೂ ಆಗಮಿಸಿದ ಕಾರಣ ಪರಿಸ್ಥಿತಿ ಬಿಗಡಾಯಿಸಿದೆ. ಕಾರ್ಯಕರ್ತರ ನಡುವೆ ವಾಗ್ವಾದವೂ ಆರಂಭವಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿರುವ ಘಟನೆ ನಡೆದಿದೆ.

ರೇವಣ್ಣ ನಡೆಗೆ ಶ್ರೇಯಸ್ ಪಟೇಲ್ ಆಕ್ರೋಶ

ತಮಗೆ ಆಹ್ವಾನ ನೀಡದೆ ಆಸ್ಪತ್ರೆ ಕಟ್ಟಡ ಉದ್ಘಾಟನೆ ನೆರವೇರಿಸಿದ ಸ್ಥಳೀಯ ಶಾಸಕ ಹೆಚ್​​.ಡಿ. ರೇವಣ್ಣ ನಡೆಗೆ ಸಂಸದ ಶ್ರೇಯಸ್​​ ಪಟೇಲ್​​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾನೂನು ಗಾಳಿಗೆ ತೂರಿ, ನಿಯಮ ಉಲ್ಲಂಘನೆ ಮಾಡಿ ಕಟ್ಟಡ ಉದ್ಘಾಟನೆ ಮಾಡಿರೋದು ಖಂಡನೀಯ. ಹೊಳೆನರಸೀಪುರ ಶಾಸಕರು ಇದು ಇನ್ನೂ ಹತ್ತು, ಹದಿನೈದು ವರ್ಷ ಹಿಂದಿನ ವ್ಯವಸ್ಥೆ ಅಂದುಕೊಂಡಿದ್ದಾರೆ. ಕೇಂದ್ರ ಪುರಸ್ಕೃತ ಹಣ ಕೂಡ ಈ ಕಾಮಗಾರಿಯಲ್ಲಿ ಬಳಕೆಯಾಗಿದೆ. ಆದರೂ ಯಾವ ಅಧಿಕಾರಿಗಳೂ ತನಗೆ ಈ ಬಗ್ಗೆ ಮಾಹಿತಿ ನೀಡಿಲ್ಲ. ಅವರ ವಿರುದ್ದ ಕಠಿಣ ಕ್ರಮ ಆಗಬೇಕು ಎಂದವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿದ ಆಸಾಮಿ!

‘ದ್ವೇಷ ರಾಜಕಾರಣ ಯಾಕೆಂಬುದು ಗೊತ್ತಿಲ್ಲ’

ಘಟನೆ ಸಂಬಂಧ ಸಂಸತ್ತಿನಲ್ಲಿ ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ದೂರು‌ಕೊಡ್ತೇನೆ. ಇದು ಎಲ್ಲರಿಗು ಪಾಠ ಆಗಬೇಕು. ಅವರು ಹತಾಶರಾಗಿ ಕದ್ದು ಮುಚ್ಛಿ ಬೆಳಿಗ್ಗೆಯೇ ಬಂದು ಕಟ್ಟಡದ ಉದ್ಘಾಟನೆ ಮಾಡಿದ್ದಾರೆ. ಹಿರಿಯ ಶಾಸಕರಾಗಿ ಅವರಿಗೆ ಉದಾರ ಭಾವನೆ ಇರಬೇಕಿತ್ತು. ನಮಗೆ ‌ಮಾರ್ಗದರ್ಶನ ಮಾಡಿ ಜೊತೆಯಲ್ಲಿ ಕರೆದೊಯ್ಯುವ ಕೆಲಸ ಮಾಡಬೇಕಿತ್ತು. ಚುನಾವಣೆಯಲ್ಲಿ ರಾಜಕೀಯ ಮಾಡೋಣ, ಆದರೆ ಹಿರಿಯ ಶಾಸಕರಾಗಿ ಅವರೇ ಕಾನೂನು ಗಾಳಿಗೆ ತೂರಿದ್ದಾರೆ. ಉದ್ಘಾಟನೆ ಕಲ್ಲಿಗೆ ಎಲ್ಲಿ ನನ್ನ‌ ಹೆಸರು ಬೀಲುತ್ತೋ ಎಂದು ಹೀಗೆ ಮಾಡಿದ್ದಾರೆ. ನಾವು ದ್ವೇಷ ರಾಜಕಾರಣ ಮಾಡಲ್ಲ. ಅವರು ಯಾಕೆ‌ ಅದನ್ನ ಇನ್ನೂ ಬಿಟ್ಟಿಲ್ಲವೋ ಗೊತ್ತಿಲ್ಲ. ಈ ಬಗ್ಗೆ ಕಾನೂನು ಪ್ರಕಾರ ತನಿಖೆಗೆ ಡಿಸಿ ಅವರಿಗೆ ತಿಳಿಸುತ್ತೇನೆ. ಇಂತಹ ಘಟನೆಗಳು ಮರುಕಳಿಸಿದರೆ ನಾವೂ ನಮ್ಮ ಅಸ್ತಿತ್ವ ತೊರಿಸಬೇಕಾಗುತ್ತೆ ಎಂದು ಸಂಸದರು ಎಚ್ಚರಿಕೆ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us