ಡ್ರಗ್ಸ್ ಸಾಗಾಟ ಆರೋಪ: ಕಲಬುರಗಿ ಕಾಂಗ್ರೆಸ್ ಮುಖಂಡ ಮಹಾರಾಷ್ಟ್ರದಲ್ಲಿ ಅರೆಸ್ಟ್
ಡ್ರಗ್ಸ್ ಮಾರಾಟ ಆರೋಪದಲ್ಲಿ ಕಲಬುರಗಿ ದಕ್ಷಿಣ ಕ್ಷೇತ್ರ ಕಾಂಗ್ರೆಸ್ ಶಾಸಕ ಅಲ್ಲಮಪ್ರಭು ಆಪ್ತ, ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿಯನ್ನು ಮಹಾರಾಷ್ಟ್ರದ ಕಲ್ಯಾಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಣ್ಣಿಯಿಂದ ನಿಷೇಧಿತ 120 ಕೊಡೆನೈನ್ ಸಿರಪ್ ಬಾಟಲ್ ವಶಪಡಿಸಿರುವ ಪೊಲೀಸರು, ಎನ್ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.

ಕಲಬುರಗಿ, ಜುಲೈ 14: ಮಾದಕದ್ರವ್ಯ ಸಾಗಾಣೆ ಆರೋಪದಲ್ಲಿ ಕಾಂಗ್ರೆಸ್ ಮುಖಂಡ, ಕಲಬುರಗಿ (Kalaburagi) ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿ (Lingaraj Kanni) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಕಲಬುರಗಿ ದಕ್ಷಿಣ ಕ್ಷೇತ್ರ ಕಾಂಗ್ರೆಸ್ ಶಾಸಕ ಅಲ್ಲಮಪ್ರಭು ಆಪ್ತರೂ ಆಗಿದ್ದಾರೆ. ಮಹಾರಾಷ್ಟ್ರದ ಥಾಣೆ ನಗರದಲ್ಲಿ ಮಾದಕದ್ರವ್ಯ ಮಾರಾಟ ಮಾಡುವ ವೇಳೆ ಅಲ್ಲಿನ ಕಲ್ಯಾಣ ಠಾಣೆ ಪೊಲೀಸರು ಲಿಂಗರಾಜ್ ಕಣ್ಣಿಯನ್ನು ಬಂಧಿಸಿದ್ದಾರೆ. ಬಂಧಿತರ ಬಳಿ ನಿಷೇಧಿತ 120 ಕೊಡೆನೈನ್ ಸಿರಪ್ ಬಾಟಲ್ ಇತ್ತು ಎನ್ನಲಾಗಿದೆ. ಎನ್ಡಿಪಿಎಸ್ ಕಾಯ್ದೆ ಅಡಿ ಕಲ್ಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಿಂಗರಾಜ್ ಕಣ್ಣಿ ಈ ಹಿಂದೆ ಬಿಜೆಪಿಯಲ್ಲಿ ಇದ್ದರು. 2023 ರ ವಿಧಾನಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್ ಪಕ್ಷ ಸೇರಿದ್ದರು.
ಕಲ್ಯಾಣ ಕರ್ನಾಟಕದ ಮರ್ಯಾದೆ ತೆಗೆ ಕಣ್ಣಿ: ಆಂದೋಲಾ ಸ್ವಾಮೀಜಿ
ಡ್ರಗ್ಸ್ ಸಾಗಾಟ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಕಲಬುರಗಿ ದಕ್ಷಿಣ ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ಕಣ್ಣಿ ಕಲ್ಯಾಣ ಕರ್ನಾಟಕದ ಮರ್ಯಾದೆ ತಗೆದಿದ್ದಿದ್ದಾರೆ ಎಂದು ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಕಿಡಿಕಾರಿದ್ದಾರೆ. ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಲಿಂಗರಾಜ ಕಣ್ಣಿಗೆ ಕಲಬುರಗಿ ದಕ್ಷಿಣ ಕ್ಷೇತ್ರದ ಪ್ರಭಾವಿ ಶಾಸಕರ ಶ್ರೀರಕ್ಷೆಯಿದೆ. ಡೈಲಾಗ್ ಮಿನಿಸ್ಟರ್ ಇವರನ್ನು ಪಕ್ಕದಲ್ಲೇ ಕೂರಿಸಿಕೊಳ್ಳುತ್ತಾರೆ ಎಂದು ಆರೋಪಿಸಿದರು.
ಒಂದು ಕಡೆ ಡ್ರಗ್ಸ್ ಮುಕ್ತ ಮಾಡುತ್ತೇನೆ ಎನ್ನುತ್ತಾರೆ. ಡ್ರಗ್ಸ್ ಮಾರಾಟ ಮಾಡುವವರನ್ನೇ ಪಕ್ಷದಲ್ಲಿಟ್ಟುಕೊಂಡು ಡೈಲಾಗ್ ಹೊಡೆಯುತ್ತಾರೆ ಎಂದು ಪರೋಕ್ಷವಾಗಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಬೆಂಗಳೂರು: ಪಾರ್ಟಿಗಳಲ್ಲಿ ಡ್ರಗ್ಸ್ ಕಂಡುಬಂದರೆ ರೆಸಾರ್ಟ್, ಹೋಂ ಸ್ಟೇ, ಹೋಟೆಲ್ ಮಾಲೀಕರ ಮೇಲೂ ಕೇಸ್
ಲಿಂಗರಾಜ್ ಕಣ್ಣಿಗೆ ಎಐಸಿಸಿ ಅಧ್ಯಕ್ಷರ ಜೊತೆಯೂ ಸಂರ್ಪಕವಿದೆ. ಎಂದು ಆಂದೋಲಾದ ಸಿದ್ದಲಿಂಗ ಸ್ವಾಮೀಜಿ ಆರೋಪಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:38 am, Mon, 14 July 25







