ಘನಘೋರ ಕೃತ್ಯಕ್ಕೆ ಸಾಕ್ಷಿಯಾದ ಕಲಬುರಗಿ: ಪತ್ನಿ, ಮಕ್ಕಳನ್ನು ಕೊಂದು, ಸರ್ಕಾರಿ ನೌಕರ ಆತ್ಮಹತ್ಯೆ
ಕಲಬುರಗಿಯಲ್ಲಿ ಭೀಕರ ಘಟನೆ ನಡೆದಿದೆ. ಸರ್ಕಾರಿ ನೌಕರನೋರ್ವ ತನ್ನ ಪತ್ನಿ ಸೇರಿದಂತೆ ಇಬ್ಬರು ಮಕ್ಕಳನ್ನು ಕೊಂದು ನಂತರ ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಕೌಟುಂಬಿಕ ಕಲಹದಿಂದ ಕೃತ್ಯವೆಸಗಲಾಗಿದೆ ಎಂದು ಮೇಲ್ನೋಟಕ್ಕೆ ಶಂಕಿಸಲಾಗಿದೆ. ಸ್ಟೇಷನ್ ಬಜಾರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಕಲಬುರಗಿ, ಏಪ್ರಿಲ್ 03: ಆತ ಸರ್ಕಾರಿ ನೌಕರ. ಮದುವೆಯಾಗಿ ಸುಖಃ ಸಂಸಾರ ನಡೆಸುತ್ತಿದ್ದ. ಅದಕ್ಕೆ ಸಾಕ್ಷಿವೆಂಬಂತೆ ಎರಡು ಮಕ್ಕಳು ಸಹ ಇದ್ದರು. ಆದರೆ ಅದೇನಾಯ್ತೋ ಗೊತ್ತಿಲ್ಲ, ಡೆತ್ನೋಟ್ (Death Note) ಬರೆದಿಟ್ಟು ತನ್ನ ಪತ್ನಿ ಸೇರಿದಂತೆ ಇಬ್ಬರು ಮಕ್ಕಳನ್ನು ಕೊಂದು (kill) ತಾನು ಕೂಡ ನೇಣಿಗೆ ಶರಣಾಗಿರುವಂತಹ ಘಟನೆ ನಗರದ ಗಾಬರೆ ಲೇಔಟ್ನ ಅಪಾರ್ಟ್ಮೆಂಟ್ನಲ್ಲಿ ಘಟನೆ ನಿನ್ನೆ ನಡೆದಿದೆ. ಈ ಘನಘೋರ ಕೃತ್ಯ ಕಂಡು ಇಡೀ ಕಲಬುರಗಿ ಬೆಚ್ಚಿಬಿದ್ದಿದೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕಲಬುರಿಗಿ ಘನಘೋರ ಮತ್ತು ಕರಳು ಹಿಂಡುವ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಇಂತಹದೊಂದು ದೊಡ್ಡ ಅನಾಹುತಕ್ಕೆ ಕಾರಣವಾಗಿದ್ದು, ಸಂತೋಷ್ ಕೊರಳಿ ಎಂಬ ವ್ಯಕ್ತಿ. ಕಲಬುರಗಿಯ ಟೆಸ್ಕಾಂನಲ್ಲಿ ಸೀನಿಯರ್ ಅಕೌಂಟೆಂಟ್ ಆಗಿದ್ದ ಸಂತೋಷ್ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನ ಕೊಂದು ತಾನೂ ನೇಣಿಗೆ ಶರಣಾಗಿದ್ದಾನೆ. ಕೌಟುಂಬಿಕ ಕಲಹ ಹಿನ್ನಲೆ ಪತ್ನಿ ಇಬ್ಬರು ಮಕ್ಕಳ್ಳನ್ನ ಕೊಲೆ ಮಾಡಿರುವ ಸಂತೋಷ್ ಕೊನೆಗೆ ತಾನೂ ಕೂಡ ಮನೆಯ ಫ್ಯಾನ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ತಂದೆಯನ್ನೇ ಕೊಂದು ಅಪಘಾತ ಕಥೆ ಕಟ್ಟಿದ: ತನಿಖೆಯಲ್ಲಿ ಮಗನ ಅಸಲಿ ಸತ್ಯ ಬಟಾಬಯಲು
ಕಲಬುರಗಿ ನಗರದ ಗಾಬರೆ ಲೇಔಟ್ನ ಅಪಾರ್ಟ್ಮೆಂಟ್ನಲ್ಲಿರುವ ತಮ್ಮ ಫ್ಲ್ಯಾಟ್ನಲ್ಲಿ ಸಂಜೆ ಆಫೀಸ್ನಿಂದ ಬುರತ್ತಿದ್ದಂತೆಯೇ ಪತ್ನಿ ಜೊತೆ ಕಿರಿಕ್ ತೆಗೆದಿದ್ದ ಸಂತೋಷ್, ನೋಡ ನೋಡುತ್ತಿದ್ದಂತಯೇ ಶೃತಿ (35), ಮಕ್ಕಳಾದ ಮುನಿಶ್(09) ಹಾಗೂ ನಾಲ್ಕು ತಿಂಗಳ ಮಗು ಅನಿಶ್ ನನ್ನ ಕೊಲೆ ಮಾಡಿ ತಾನೂ ನೇಣಿಗೆ ಶರಣಾಗಿದ್ದಾರೆ. ಇನ್ನೂ ನಾಲ್ವರ ಸಾವಿನ ವಿಷಯ ಕಾಡ್ಗಿಚ್ಚಿನಂತೆ ಕ್ಷಣಾರ್ಧದಲ್ಲಿ ಇಡೀ ಕಲಬುರಗಿ ನಗರಕ್ಕೆ ಹಬ್ಬಿತ್ತು. ಹೀಗಾಗಿ ಜನ ಗಾಬರಿಯಿಂದ ಧಾವಿಸಿ ಬಂದಿದ್ದರು. ಅಷ್ಟೆ ಅಲ್ಲದೇ ಘಟನೆ ಗಂಭೀರತೆ ಅರಿತ ಪೊಲೀಸ್ ಕಮೀಷನರ್ ಕೂಡ ಸ್ಥಳಕ್ಕೆ ಧಾವಿಸಿ ಪರೀಶಿಲನೆ ಮಾಡಿದ್ದು, ಸದ್ಯ ಮೇಲ್ನೋಟಕ್ಕೆ ಕೌಟುಂಬಿಕ ಕಲಹದಿಂದಲೇ ಸಂತೋಷ್ ತನ್ನ ಪತ್ನಿ, ಮಕ್ಕಳನ್ನ ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನೋದು ಗೊತ್ತಾಗಿದೆ. ನಾಲ್ವರ ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಜಿಮ್ಸ್ ಆಸ್ಪತ್ರೆಯ ಶವಗಾರಕ್ಕೆ ಕಳುಹಿಸಲಾಗಿದೆ.
ಇನ್ನು ಜೆಸ್ಕಾಂನಲ್ಲಿ ಒಳ್ಳೆಯ ಕೆಲಸದಲ್ಲಿದ್ದ ಸಂತೋಷ್, ಕಳೆದ ಹತ್ತು ವರ್ಷದ ಹಿಂದೂ ಬೀದರ್ ಮೂಲದ ಶೃತಿ ಎಂಬುವವರನ್ನು ವಿವಾಹವಾಗಿದ್ದ. ಮದುವೆಯಾದ ಹೊಸದರಲ್ಲಿ ಗಂಡ ಹೆಂಡತಿ ಚೆನ್ನಾಗಿಯೇ ಇದ್ದರಂತೆ. ಆದರೆ ಇತ್ತೀಚೆಗೆ ಅದೇನಾಯ್ತೋ ಗೊತ್ತಿಲ್ಲ ಹೆಂಡತಿಯನ್ನ ತವರು ಮನೆಗೂ ಕಳುಹಿಸದೇ ಕಿರುಕುಳ ನೀಡುತ್ತಿದ್ದನಂತೆ. ಪ್ರತಿಯೊಂದು ವಿಚಾರಕ್ಕೂ ಪತ್ನಿಯೊಂದಿಗೆ ಕಿರಿಕ್ ಮಾಡ್ತಿದ್ದ ಸಂತೋಷ್, ನಿನ್ನೆ ಸಂಜೆ ಆಫೀಸ್ನಿಂದ ಬರುತ್ತಿದ್ದಂತಯೇ ಮತ್ತೆ ಗಲಾಟೆ ಶುರು ಮಾಡಿದ್ದಾರೆ.
ಅಲ್ಲದೇ ತನ್ನ ಪತ್ನಿಯ ತಂದೆಗೆ ಫೋನ್ ಮಾಡಿ ಗಲಾಟೆ ವಿಚಾರ ತಿಳಿಸಿದ್ದಾನೆ. ಅತ್ತ ಶೃತಿ ತಂದೆ ಕೂಡ ಫೋನ್ನಲ್ಲಿ ಆಯ್ತೂ ಇಷ್ಟು ದಿನ ತಡೆದಿದ್ದರೀ ಇನ್ನೊಂದು ದಿನ ತಾಳಿ ಅಂತ ಸಮಾಧಾನ ಮಾಡಿದ್ದಾರೆ. ಆದರೆ ಅದಕ್ಕೆ ಡೋಂಟ್ ಕೇರ್ ಎಂದಿರುವ ಸಂತೋಷ್, ತನ್ನ ಹಸುಗೂಸನ್ನ ಕೂಡ ಲೆಕ್ಕಸಿದೇ ಮೂವರನ್ನು ಕೊಂದು ತಾನೂ ನೇಣಿಗೆ ಶರಣಾಗಿದ್ದಾರೆ.
ಇದನ್ನೂ ಓದಿ: ಕಲಬುರಗಿ: ಓದಿದ್ದು 4ನೇ ತರಗತಿ, ಮಾಡಿದ್ದು 11 ಮಂದಿಗೆ ನಂಬಿಸಿ 14 ಲಕ್ಷ ರೂ. ಪಡೆದು, ವಂಚಿಸಿದ ಆರೋಪಿಗಳು
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಸ್ಟೇಷನ್ ಬಜಾರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಾಲ್ವರ ಸಾವಿನ ಹಿಂದಿನ ಅಸಲಿ ರಹಸ್ಯ ಕೆದಕುತ್ತಿದ್ದಾರೆ. ಡೆತ್ ನೋಟ್ ಬರೆದಿಟ್ಟಿರುವ ಸಂತೋಷ್, ನಿಜವಾಗಿಯೂ ಮಾನಸಿಕವಾಗಿ ನೊಂದಿದ್ದರಾ ಎನ್ನೋ ವಿಚಾರ ಅದೇ ಡೆತ್ ನೋಟ್ ಬಹಿರಂಗ ಪಡಿಸಬೇಕಿದೆ. ಒಟ್ಟಿನಲ್ಲಿ ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನೋ ಗಾದೆ ಮಾತನ್ನ ಪಾಲಿಸಬೇಕಿದ್ದ ಸಂತೋಷ್, ಇಡೀ ಕುಟುಂಬವನ್ನ ಸರ್ವನಾಶ ಮಾಡಿದ್ದು ನಿಜಕ್ಕೂ ದುರಂತವೇ ಸರಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.