ಕರ್ನಾಟಕದಲ್ಲಿ ಕಡಿಮೆಯಾಯ್ತು ಉಷ್ಣ ವಿದ್ಯುತ್ ಮೇಲಿನ ಅವಲಂಬನೆ; ಎಲ್ಲಿಂದ ಬರುತ್ತಿದೆ ಹೆಚ್ಚಿನ ವಿದ್ಯುತ್?

ಇತರ ಮೂಲಗಳಿಂದ ಉತ್ಪಾದನೆಯು ಹೆಚ್ಚುತ್ತಿರುವ ಹೊರತಾಗಿಯೂ, ರಾಜ್ಯಕ್ಕೆ ಇನ್ನೂ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳು ಬೇಕಾಗುತ್ತವೆ. ಏಕೆಂದರೆ ಅವುಗಳನ್ನು ಸಂಪೂರ್ಣವಾಗಿ ಮುಚ್ಚಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಕಡಿಮೆಯಾಯ್ತು ಉಷ್ಣ ವಿದ್ಯುತ್ ಮೇಲಿನ ಅವಲಂಬನೆ; ಎಲ್ಲಿಂದ ಬರುತ್ತಿದೆ ಹೆಚ್ಚಿನ ವಿದ್ಯುತ್?
ಸಾಂದರ್ಭಿಕ ಚಿತ್ರ
Follow us
|

Updated on:Aug 05, 2023 | 11:44 AM

ಬೆಂಗಳೂರು: ಕರ್ನಾಟಕವು (Karnataka) ತನ್ನ ವಿದ್ಯುತ್ ಉತ್ಪಾದನೆಯ ಹೆಚ್ಚಿನ ಭಾಗವನ್ನು ನವೀಕರಿಸಬಹುದಾದ ಇಂಧನ (Renewable Energy) ಮೂಲಗಳ ಮೂಲಕ ಪಡೆಯುತ್ತಿದೆ. ಆ ಮೂಲಕ ಉಷ್ಣ ವಿದ್ಯುತ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದೆ ಎಂದು ವರದಿಯಾಗಿದೆ. ರಾಜ್ಯದಲ್ಲಿ ಈಗ 3.05 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ದಾಸ್ತಾನು ಇದ್ದು, ಇದು ಸುಮಾರು ಆರು ದಿನಗಳವರೆಗೆ ಇರುತ್ತದೆ. ಇತರೆ ರಾಜ್ಯಗಳಿಗಿಂತ ಇಲ್ಲಿನ ಪರಿಸ್ಥಿತಿ ಉತ್ತಮವಾಗಿದೆ, ಆದರೆ ಜನರು ವಿವೇಚನೆಯಿಂದ ವಿದ್ಯುತ್ ಬಳಸಬೇಕು ಎಂದು ಇಂಧನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಆಗಸ್ಟ್ 3 ರಂತೆ, ನವೀಕರಿಸಬಹುದಾದ ಇಂಧನ ಮೂಲಗಳ ಉತ್ಪಾದನೆಯು 4,126mw ಆಗಿತ್ತು, ಇದು ರಾಜ್ಯದ 8,682mw ನ ಬೇಡಿಕೆಯ ಶೇ 47.52 ಆಗಿದೆ. ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (KPCL) ಪ್ರಕಾರ ರಾಜ್ಯವು 2,455mw ಅನ್ನು ಉತ್ಪಾದಿಸುತ್ತದೆ, ಅದರಲ್ಲಿ ಥರ್ಮಲ್ 1,122mw ಮತ್ತು ಉಳಿದವು ಜಲಮೂಲಗಳಿಂದ ಉತ್ಪಾದನೆಯಾಗುತ್ತಿವೆ ಎಂದು ‘ದಿ ನ್ಯೂ ಇಂಡಿಯನ್​ ಎಕ್ಸ್​​ಪ್ರೆಸ್’ ವರದಿ ಮಾಡಿದೆ.

ಪ್ರಸ್ತುತ ಮೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ಒಟ್ಟು 13 ಘಟಕಗಳ ಪೈಕಿ ಆರು ಘಟಕಗಳು ವಿದ್ಯುತ್ ಉತ್ಪಾದಿಸುತ್ತಿವೆ. ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ (ಆರ್‌ಟಿಪಿಎಸ್) ಎಂಟು ಘಟಕಗಳ ಪೈಕಿ ಎರಡು, ಬಳ್ಳಾರಿಯ (ಬಿಟಿಪಿಎಸ್) ಮೂರು ಘಟಕಗಳಲ್ಲಿ ಎರಡು ಮತ್ತು ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದ (ವೈಟಿಪಿಎಸ್) ಒಂದು ಘಟಕದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಎಲ್ಲಾ ಮೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲಿ ಸರಾಸರಿ ದೈನಂದಿನ ಕಲ್ಲಿದ್ದಲು ಬಳಕೆ 25,000 MT ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವಾರ ಸುರಿದ ಭಾರಿ ಮಳೆಯಿಂದ ಜಲವಿದ್ಯುತ್ ಉತ್ಪಾದನೆ ಸುಧಾರಿಸಿದೆ. ಮಳೆಯಿಂದಾಗಿ ಒಟ್ಟಾರೆ ವಿದ್ಯುತ್ ಬೇಡಿಕೆ ದಿನಕ್ಕೆ 260-270 ಮಿಲಿಯನ್ ಯುನಿಟ್‌ಗಳಿಂದ 200-210 ಮಿಲಿಯನ್ ಯುನಿಟ್‌ಗೆ ಇಳಿಕೆಯಾಗಿದೆ.

ಇದನ್ನೂ ಓದಿ: Gruha Jyothi Scheme: ಫ್ರೀ ವಿದ್ಯುತ್​ ಬಿಲ್ ನಿರೀಕ್ಷೆಯಲ್ಲಿದ್ದವರಿಗೆ ಶಾಕ್!

ಇತರ ಮೂಲಗಳಿಂದ ಉತ್ಪಾದನೆಯು ಹೆಚ್ಚುತ್ತಿರುವ ಹೊರತಾಗಿಯೂ, ರಾಜ್ಯಕ್ಕೆ ಇನ್ನೂ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳು ಬೇಕಾಗುತ್ತವೆ. ಏಕೆಂದರೆ ಅವುಗಳನ್ನು ಸಂಪೂರ್ಣವಾಗಿ ಮುಚ್ಚಲು ಸಾಧ್ಯವಿಲ್ಲ. ಸೌರಶಕ್ತಿಯನ್ನು ಹಗಲಿನಲ್ಲಿ ಮಾತ್ರ ಉತ್ಪಾದಿಸಬಹುದಾಗಿರುವುದರಿಂದ ಉಷ್ಣ ವಿದ್ಯುತ್ ಕೂಡ ಅಗತ್ಯವಿದೆ, ಆದರೆ ಪವನ ವಿದ್ಯುತ್ ಉತ್ಪಾದನೆಯ ಬಗ್ಗೆ ನಿಖರ ಲೆಕ್ಕಾಚಾರ ಹಾಕುವುದು ಕಷ್ಟ. ಏಕೆಂದರೆ ಅದು ಅನಿರೀಕ್ಷಿತ ಮೂಲ ಎಂದು ಕೆಪಿಸಿಎಲ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:43 am, Sat, 5 August 23