ಅಧಿಕಾರ ಹಂಚಿಕೆ ಮುಸುಕಿನ ಗುದ್ದಾಟದ ನಡುವೆ ರಾಜ್ಯ ಬಜೆಟ್​​ಗೆ ಅಧಿಕೃತ ಮುಹೂರ್ತ ಫಿಕ್ಸ್

Karnataka Budget 2026: ಕರ್ನಾಟಕ ಕಾಂಗ್ರೆಸ್​ನಲ್ಲಿ ಅಧಿಕಾರ ಹಂಚಿಕೆ ಮುಸುಕಿನ ಗುದ್ದಾಟ ಜೋರಾಗಿದೆ. ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿರುವ ಡಿಸಿಎಂ ಡಿಕೆ ಶಿವಕುಮಾರ್ ಹೈಕಮಾಂಡ್ ನಾಯಕರ ಮನವೊಲಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಮತ್ತೊಂದೆಡೆ ಸಿದ್ದರಾಮಯ್ಯನವರೇ ಸಿಎಂ ಆಗಿ ಐದು ವರ್ಷ ಪೂರ್ಣಗೊಳಿಸಲಿದ್ದಾರೆ ಎನ್ನುವುದು ಅವರ ಬಣದ ನಾಯಕರ ಮಾತು. ಹೀಗೆ ಎರಡು ಬಣಗಳ ಕಿತ್ತಾಟದ ಮಧ್ಯೆ 2026-27ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್​​ ಆಗಿದೆ.

ಅಧಿಕಾರ ಹಂಚಿಕೆ ಮುಸುಕಿನ ಗುದ್ದಾಟದ ನಡುವೆ ರಾಜ್ಯ ಬಜೆಟ್​​ಗೆ ಅಧಿಕೃತ ಮುಹೂರ್ತ ಫಿಕ್ಸ್
Karnataka Budget 2026

Updated on: Feb 16, 2026 | 7:32 PM

ಬೆಂಗಳೂರು, (ಫೆಬ್ರವರಿ 16): ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹಾಗೂ ಸಿಎಂ ಸಿದ್ದರಾಮಯ್ಯ (Siddaramaiah) ನಡುವಿನ ಅಧಿಕಾರ ಹಂಚಿಕೆ ಮುಸುಕಿನ ಗುದ್ದಾಟದ ಮಧ್ಯೆ 2026-27ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ (Karnataka Budget 2026) ದಿನಾಂಕ ಫಿಕ್ಸ್​​ ಆಗಿದೆ. ಹಣಕಾಸು ಖಾತೆಯನ್ನ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾರ್ಚ್ 6ರಂದು ಬೆಳಗ್ಗೆ 10:15ಕ್ಕೆ ತಮ್ಮ ದಾಖಲೆಯ 17ನೇ ಬಜೆಟ್ ಮಂಡಿಸಲಿದ್ದಾರೆ. ಈ ಬಗ್ಗೆ ವಿಧಾನಸಭೆ ಕಾರ್ಯದರ್ಶಿ ಇಂದು (ಫೆಬ್ರವರಿ 16) ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.

ದಾಖಲೆಯ 17ನೇ ಬಜೆಟ್​ ಮಂಡಿಸಲಿರುವ ಸಿದ್ದರಾಮಯ್ಯ

ಮಾರ್ಚ್ 6 ಬೆಳಗ್ಗೆ 10:15ಕ್ಕೆ ಬಜೆಟ್​ ಅಧಿವೇಶನ ಆರಂಭವಾಗಲಿದ್ದು, ಮಾರ್ಚ್ 27ಕ್ಕೆ ಅಂತ್ಯವಾಗಲಿದೆ. ಒಟ್ಟು 14 ದಿನ ನಡೆಯಲಿರುವ ಬಜೆಟ್ ಅಧಿವೇಶನ ನಡೆಯಲಿದೆ ಎಂದು ವಿಧಾನಸಭೆ ಕಾರ್ಯದರ್ಶಿ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಈಗಾಗಲೇ 2026-27ನೇ ಸಾಲಿನ ಬಜೆಟ್​​​ ಮಂಡಿಸಲು ಸಕಲ ಸಿದ್ಧತೆ ನಡೆಸುತ್ತಿದ್ದು, ಸರಣಿ ಬಜೆಟ್ ಪೂರ್ವಭಾವಿ ಸಭೆ ನಡೆಸುತ್ತಿದ್ದಾರೆ. ಇನ್ನು ಈ ಬಾರಿ 17ನೇ ಸಲ ಬಜೆಟ್ ಮಂಡಿಸುವ ಮೂಲಕ ರಾಜ್ಯದಲ್ಲಿಯೇ ಅತಿಹೆಚ್ಚು ಬಜೆಟ್​ ಮಂಡಿಸಿದ ಸಿಎಂ ಅನ್ನೋ ಹೆಗ್ಗಳಿಕೆಗೆ ಸಿದ್ದರಾಮಯ್ಯ ಪಾತ್ರರಾಗಲಿದ್ದಾರೆ.

ಇದನ್ನೂ ಓದಿ: ಹರ್ ಘರ್ ಜಲ್ ಯೋಜನೆ ಹಳ್ಳ ಹಿಡಿಸಿದ ಅಧಿಕಾರಿಗಳು: ಕಾಮಗಾರಿ ಮುಗಿಸಿ 5 ವರ್ಷವಾದ್ರೂ ಬಾರದ ನೀರು

ರಾಜ್ಯದಲ್ಲಿ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಹೊಂದಿದ್ದ ದೇವರಾಜ​ ಅರಸು ಅವರ​ ದಾಖಲೆಯನ್ನು ಸಿದ್ದರಾಮಯ್ಯ ಮುರಿದಿದ್ದಾರೆ. ದೇವರಾಜ ಅರಸು ಅವರು ಸತತವಾಗಿ ಏಳೂವರೆ ವರ್ಷಗಳ ಕಾಲ ಅಧಿಕಾರದಲ್ಲಿದ್ದರು. ದೇವರಾಜ ಅರಸು ಅವರು 2,789 ದಿನ ಅಂದ್ರೆ 7 ವರ್ಷ- 239 ದಿನಗಳ (ಎರಡು ಅವಧಿ) ಕಾಲ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಸಿದ್ದರಾಮಯ್ಯ ಕೂಡ ಈಗಾಗಲೇ 7 ವರ್ಷ 239 ದಿನ ಪೂರೈಸಿ ಅರಸು ದಾಖಲೆ ಮುರಿದಿದ್ದಾರೆ.

ಕಾಂಗ್ರೆಸ್​ ಪಕ್ಷದ ಪ್ರಬಲ ನಾಯಕ ಸಿದ್ದರಾಮಯ್ಯ ಅವರು ತಮ್ಮದೇ ವರ್ಚಸ್ಸು, ಚಾತುರ್ಯತೆಯಿಂದ ಬೆಳೆದು ಬಂದಿದ್ದಾರೆ. 2013 ರಿಂದ 2018 ರವರ ಅವಧಿಯಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ರು. ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರೈಸಿದ್ದರು. ಬಳಿಕ ಮೇ 20, 2023 ರಂದು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.