ಸರ್ಕಾರ, ರಾಜ್ಯಪಾಲರ ನಡುವೆ ಮೂಡದ ಒಮ್ಮತ: 6 ವಿಧೇಯಕಗಳು ಬಾಕಿ ಉಳಿಸಿಕೊಂಡ ಗವರ್ನರ್
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅನುಮತಿ ನೀಡಿದ ನಂತರ ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಸಂಘರ್ಷ ಜೋರಾಗಿದೆ. ಇದರ ಪರಿಣಾಮವೋ ಎಂಬಂತೆ ರಾಜ್ಯಪಾಲರು 2024ರಲ್ಲಿ 11 ಮತ್ತು 2025ರಲ್ಲಿ 6 ವಿಧೇಯಕಗಳಿಗೆ ಅಂಕಿತ ಹಾಕಿಲ್ಲ. ಹೆಚ್ಚಿನ ಮಾಹಿತಿ ಕೋರಿ ಸರ್ಕಾರಕ್ಕೆ ಕಳುಹಿಸಿದ್ದಾರೆ. ಯಾವ್ಯಾವ ವಿಧೇಯಕಗಳಿಗೆ ಸಹಿ ಹಾಕಿಲ್ಲ? ಇಲ್ಲಿದೆ ವಿವರ

ಬೆಂಗಳೂರು, ಏಪ್ರಿಲ್ 08: ರಾಜ್ಯಗಳ ಅಧಿವೇಶನದಲ್ಲಿ ಅಂಗೀಕೃತಗೊಂಡ ವಿಧೇಯಕಗಳು (Bill) ಆಯಾ ರಾಜ್ಯಪಾಲರ (Governor) ಅಂಕಿತ ಅತ್ಯ ಅವಶ್ಯಕವಾಗಿದೆ. ಆದರೆ, ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸಂಘರ್ಷ ಏರ್ಪಟ್ಟರೆ ವಿಧಯೇಕಗಳು ಪಾಸಾಗದೆ ಬಾಕಿ ಉಳಿದುಕೊಳ್ಳುತ್ತವೆ. ಇದಕ್ಕೆ ಸೂಕ್ತ ಉದಾಹರಣೆ ತಮಿಳುನಾಡು ಮತ್ತು ಕರ್ನಾಟಕ (Karnataka). ತಮಿಳುನಾಡಿನಲ್ಲಿ ರಾಜ್ಯಪಾಲರು 10 ಪ್ರಮುಖ ಮಸೂದೆಗಳಿಗೆ ಅಂಕಿತ ಹಾಕದೆ ತಡೆ ಹಿಡಿದ್ದರು. ಈ ಸಂದರ್ಭದಲ್ಲಿ ಅಲ್ಲಿನ ಸರ್ಕಾರ ಸುಪ್ರೀಂಕೋರ್ಟ್ನ ಮೆಟ್ಟಿಲು ಏರಿತು. ಆಗ ಸುಪ್ರೀಂಕೋರ್ಟ್, ಮಸೂದೆಗಳಿಗೆ ಅಂಕಿತ ಹಾಕದೆ ತಡೆಹಿಡಿದ ತಮಿಳುನಾಡು ರಾಜ್ಯಪಾಲರ ನಿರ್ಧಾರ ಕಾನೂನುಬಾಹಿರ ಮತ್ತು ನಿರಂಕುಶಯುತವಾದದು ಎಂದು ಹೇಳಿತ್ತು.
ಇದೀಗ, ಕರ್ನಾಟಕ ರಾಜ್ಯದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬಿಬಿಎಂಪಿ ವಿಭಜನೆ ಮಾಡಿ ಬೆಂಗಳೂರು ನಗರ ವಿಸ್ತೀರ್ಣ ಮಾಡುವ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಸೇರಿದಂತೆ ಒಟ್ಟು 6 ವಿಧೇಯಕಗಳಿಗೆ ಅಂಕಿತ ಹಾಕಿಲ್ಲ. ಈ ಆರು ವಿಧೇಯಕಗಳಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕಕ್ಕೆ ಹೆಚ್ಚಿನ ಸ್ಪಷ್ಟನೆ ಕೋರಿ ರಾಜ್ಯ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ.
ಬಾಕಿ ಇರುವ ವಿಧೇಯಕಗಳು
- ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ವಿಧೇಯಕ.
- ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ.
- ಮುಸ್ಲಿಂ ಗುತ್ತಿಗೆದಾರರಿಗೆ ಶೇ.4 ಮೀಸಲಾತಿ ನೀಡುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ
- ಪಾರದರ್ಶಕತೆ ಅಧಿನಿಯಮ ( ತಿದ್ದುಪಡಿ) ವಿಧೇಯಕ 2025
- ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ. ಮತ್ತು ಪಂಚಾಯತ್ರಾಜ್. ವಿಶ್ವವಿದ್ಯಾಲಯ ವಿಧೇಯಕ
- ಕೃಷಿ ವಿಜ್ಞಾನಗಳ (ತಿದ್ದುಪಡಿ) ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕ
- ಕರ್ನಾಟಕ ವೃತ್ತಿ, ಕಸುಬು, ಉದ್ಯೋಗಗಳ ಮೇಲಿನ ತೆರಿಗೆ ತಿದ್ದುಪಡಿ ವಿಧೇಯಕ-2025
ರಾಜ್ಯಪಾಲರು ಕೋರಿದ ಸ್ಪಷ್ಟನೆ ಏನು?
ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ವಿರುದ್ಧ ನಾಗರಿಕ ಸಂಘಟನೆಗಳು ನನಗೆ ದೂರು ನೀಡಿವೆ. ಜೊತೆಗೆ, ವಿಧಾನಸಭೆ ಮತ್ತು ವಿಧಾನ ಪರಿಷತ್ ಪ್ರತಿಪಕ್ಷ ನಾಯಕರು, ಬಿಜೆಪಿ ಸದಸ್ಯರು ವಿಧೇಯಕ ವಿರೋಧಿಸಿ ಮನವಿ ಪತ್ರ ಸಲ್ಲಿಸಿದ್ದಾರೆ. ಅವರು ಸಲ್ಲಿಸಿರುವ ಆಕ್ಷೇಪಗಳಿಗೆ ಸ್ಪಷ್ಟನೆ ಅಗತ್ಯವಿದೆ ಎಂದು ರಾಜ್ಯಪಾಲರು ಸರ್ಕಾರಕ್ಕೆ ಹೇಳಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ಮೀಸಲಾತಿ ವಿಧೇಯಕ ಪಾಸು ಮಾಡಿಕೊಳ್ಳಲು ಬಿಜೆಪಿಯ 18 ಶಾಸಕರನ್ನು ಸಸ್ಪೆಂಡ್ ಮಾಡಲಾಗಿದೆ: ಯತ್ನಾಳ್
ಈ ವಿಧೇಯಕದಲ್ಲಿ ಬಿಬಿಎಂಪಿಯನ್ನು ಏಳು ಪಾಲಿಕೆಗಳಾಗಿ ವಿಭಜಿಸಲು ಅವಕಾಶ ನೀಡಲಾಗಿದೆ. ಈ ಮಾದರಿ ದೆಹಲಿಯಲ್ಲಿ ವಿಫಲವಾಗಿದೆ. ವಿಧೇಯಕದಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಪ್ರಾಧಿಕಾರ ರಚಿಸಲು ಉದ್ದೇಶಿಸಲಾಗಿದೆ. ಇದು ಚುನಾಯಿತ ಪಾಲಿಕೆಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಸಾಧ್ಯತೆ ಇದ್ದು ಮರುಪರಿಶೀಲಿಸುವಂತೆ ಸೂಚಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:37 pm, Tue, 8 April 25