ದಕ್ಷಿಣ ಕನ್ನಡ ಹಿಂದೂ ಮುಖಂಡರಿಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್
ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸುವಂತೆ ಹಿಂದೂ ಮುಖಂಡ ಶರಣ್ ಪಂಪ್ವೆಲ್ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯ ಅವರ ಬಂಧನಕ್ಕೆ ತಡೆಯಾಜ್ಞೆ ನೀಡಿದೆ ಮತ್ತು ಪೊಲೀಸ್ ತನಿಖೆಗೆ ಸಹಕರಿಸುವಂತೆ ಸೂಚಿಸಿದೆ. ಇದೇ ರೀತಿ, ವಿಹೆಚ್ಪಿ ಕಾರ್ಯಕರ್ತ ನವೀನ್ ನೆರಿಯ ವಿರುದ್ಧದ ಎಫ್ಐಆರ್ಗೆ ಕೂಡ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಬೆಂಗಳೂರು, ಜುಲೈ 09: ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ (FIR) ರದ್ದು ಕೋರಿ ಹಿಂದೂ ಮುಖಂಡ ಶರಣ್ ಪಂಪ್ವೆಲ್ (Sharan Pumpwell) ಅವರು ಹೈಕೋರ್ಟ್ಗೆ (High Court) ಅರ್ಜಿ ಸಲ್ಲಿಸಿದ್ದಾರೆ. ಹಿಂದೂ ಮುಖಂಡ ಶರಣ್ ಪಂಪ್ವೆಲ್ ಅವರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು. “ವಿನಾಕಾರಣ ದ್ವೇಷ ಭಾಷಣದ ಆರೋಪ ಹೊರಿಸಲಾಗಿದೆ” ಎಂದು ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು. ವಾದ ಆಲಿಸಿದ ನ್ಯಾ.ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಹೈಕೋರ್ಟ್ ಪೀಠ, “ಶರಣ್ ಪಂಪ್ವೆಲ್ ಬಂಧನ ಸೇರಿದಂತೆ ಅವರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶ ಹೊರಡಿಸಿದೆ. ಹಾಗೆ, ಪೊಲೀಸರ ವಿಚಾರಣೆಗೆ ಸಹಕರಿಸುವಂತೆ ಶರಣ್ ಪಂಪ್ವೆಲ್ ಅವರಿಗೆ ಸೂಚನೆ ನೀಡಿದೆ.
ಏನಿದು ಪ್ರಕರಣ?
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಖಂಡಿಸಿ ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಕದ್ರಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಶರಣ್ ಪಂಪ್ವೆಲ್ ಅವರನ್ನು ಬಂಧಿಸಲಾಗಿತ್ತು. ಶರಣ್ ಪಂಪ್ವೆಲ್ ಅವರ ಬಂಧನ ತಿಳಿಯುತ್ತಿದ್ದಂತೆ ಕದ್ರಿ ಪೊಲೀಸ್ ಠಾಣೆ ಮುಂದೆ ಹಿಂದೂ ಸಂಘಟನೆ ಕಾರ್ಯಕರ್ತರು ಜಮಾಯಿಸಿದ್ದರು.
ಎಫ್ಐಆರ್ಗೆ ಮಧ್ಯಂತರ ತಡೆಯಾಜ್ಞೆ
ಕಡಬ ಪೊಲೀಸರು ತಮ್ಮ ದಾಖಲಿಸಿರುವ ಎಫ್ಐಆರ್ ಪ್ರಶ್ನಿಸಿ ವಿಹೆಚ್ಪಿಯ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ನೆರಿಯ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ನವೀನ್ ನೆರಿಯ ಅವರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು. “ಯಾವುದೇ ಅಪರಾಧದ ಅಂಶಗಳಿಲ್ಲದಿದ್ದರೂ ಎಫ್ಐಆರ್ ದಾಖಲಿಸಿದ್ದಾರೆಂದು” ವಾದ ಮಂಡಿಸಿದರು. ವಾದ ಆಲಿಸಿದ ಹೈಕೋರ್ಟ್ ಎಫ್ಐಆರ್ಗೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ಇದನ್ನೂ ಓದಿ: VHP ಮುಖಂಡ ಶರಣ್ ಪಂಪ್ವೆಲ್ ಅರೆಸ್ಟ್: ಹಿಂದೂ ಕಾರ್ಯಕರ್ತರ ಜಮಾವಣೆ
ಎಫ್ಐಆರ್ಗೆ ಕಾರಣ
ಕಡಬ ಪೊಲೀಸರು ರಾತ್ರಿ ವೇಳೆ ಮನೆಗೆ ಪ್ರವೇಶಿಸಿ ಜಿಪಿಎಸ್ ಫೋಟೋ ತೆಗೆದಿರುವುದು ಏಕೆಂದು ಪ್ರಶ್ನಿಸಿದ್ದಕ್ಕೆ ನಮ್ಮ ಮುಖಂಡರ ಮೇಲೆ ಸ್ವಯಂಪ್ರೇರಿತ ಕೇಸ್ ದಾಖಲಿಸಿದ್ದರೆ ಎಂದು ಆರೋಪಿಸಿ ಕಡಬ ಪೊಲೀಸ್ ಠಾಣೆಯ ಎದುರು ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.
ಈ ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ ದಕ್ಷಿಣ ಕನ್ನಡ ಕಾರ್ಯದರ್ಶಿ ನವೀನ್ ನೆರಿಯ ಪೊಲೀಸರನ್ನು ಉದ್ದೇಶಿಸಿ ದ್ವೇಷದ ಭಾಷಣ ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದಾರೆ ಎಂದು ದೂರು ದಾಖಲಾಗಿತ್ತು. ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:10 pm, Wed, 9 July 25







