AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!

ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಅಂತಿಮ ಹಂತಕ್ಕೆ ಬಂದಿದೆ ಎನ್ನಲಾಗಿದ್ದು, ಸಿಎಂ ಸಿದ್ದರಾಮಯ್ಯ ವಿಧಾನಸೌಧದ ಸಿಬ್ಬಂದಿಯಿಂದ ಭಾವುಕ ವಿದಾಯ ಪಡೆದು ಕಚೇರಿ ಖಾಲಿ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ. ಅಲ್ಲದೆ, ರಾಜ್ಯಪಾಲರ ಭೇಟಿಗೆ ಇಂದು ಸಮಯವನ್ನೂ ಕೇಳಿದ್ದಾರೆ. ಆದರೆ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬುಧವಾರ ರಾತ್ರಿ ದಿಢೀರನೆ ಮುಂಬೈಗೆ ಪ್ರಯಾಣ ಬೆಳೆಸಿರುವುದು ಕುತೂಹಲ ಮೂಡಿಸಿದೆ.

ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!
ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಪ್ರದೀಪ್​ ಚಿಕ್ಕಾಟಿ
| Edited By: |

Updated on: May 28, 2026 | 6:49 AM

Share

ಬೆಂಗಳೂರು, ಮೇ 28: ಕರ್ನಾಟಕ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಭಾರಿ ಮಹತ್ವದ ಹಾಗೂ ನಾಟಕೀಯ ಬೆಳವಣಿಗೆಗಳು ಜರುಗುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು (ಮೇ 28) ಬೆಳಗ್ಗೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿರುವ ಬೆನ್ನಲ್ಲೇ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬುಧವಾರ ಮಧ್ಯರಾತ್ರಿ ದಿಢೀರನೆ ಮುಂಬೈಗೆ ಪ್ರಯಾಣ ಬೆಳೆಸಿರುವುದು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಹಾಗೂ ಸಂಚಲನ ಮೂಡಿಸಿದೆ. ಸಂಬಂಧಿಕರ ಅನಾರೋಗ್ಯದ ಕಾರಣ ನೀಡಿ ರಾಜ್ಯಪಾಲರು ರಾತ್ರಿ 11.45ಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ತೆರಳಿದ್ದಾರೆ. ರಾತ್ರಿ ಮುಂಬೈನಲ್ಲಿ ತಂಗಿರುವ ಅವರು, ಬೆಳಗ್ಗೆ ಇಂದೋರ್‌ಗೆ ಪ್ರಯಾಣಿಸುತ್ತಿದ್ದಾರೆ ಎನ್ನಲಾಗಿದೆ. ಸಿಎಂ ರಾಜೀನಾಮೆ ಸಲ್ಲಿಕೆಯ ಸಮಯದಲ್ಲೇ ರಾಜ್ಯಪಾಲರ ಈ ದಿಢೀರ್ ಪ್ರವಾಸ ಹೊಸ ರಾಜಕೀಯ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ.

ಮುಖ್ಯಾಂಶಗಳು

  • ಸಿಎಂ ಸಿದ್ದರಾಮಯ್ಯ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ್ದರೂ ಬೆಂಗಳೂರು ತೊರೆದ ರಾಜ್ಯಪಾಲರು.
  • ಮಧ್ಯರಾತ್ರಿ 11.45ಕ್ಕೆ ಮುಂಬೈಗೆ ತೆರಳಿದ ಗವರ್ನರ್ ಥಾವರ್ ಚಂದ್ ಗೆಹ್ಲೋಟ್.
  • ವಿಧಾನಸೌಧದಲ್ಲಿ ಭಾವನಾತ್ಮಕ ವಿದಾಯ ಪಡೆದ ಮುಖ್ಯಮಂತ್ರಿ.

ವಿಧಾನಸೌಧದಲ್ಲಿ ಭಾವುಕ ವಿದಾಯ – ಕಣ್ಣೀರಿಟ್ಟ ಸಿಬ್ಬಂದಿ

ಮತ್ತೊಂದೆಡೆ, ಸಿದ್ದರಾಮಯ್ಯ ಅವರ ಅಧಿಕಾರದ ಕೊನೆಯ ದಿನಗಳು ಹತ್ತಿರವಾಗುತ್ತಿದ್ದಂತೆ ವಿಧಾನಸೌಧದ ಮೂರನೇ ಮಹಡಿಯ ಕೊಠಡಿ ಸಂಖ್ಯೆ 323ರ ಸಿಎಂ ಕಚೇರಿಯಲ್ಲಿ ಭಾವುಕ ಸನ್ನಿವೇಶ ಸೃಷ್ಟಿಯಾಯಿತು. ಮೂರು ವರ್ಷಗಳ ಹಿಂದೆ (ಮೇ 20, 2023) ಪೂಜೆ ನೆರವೇರಿಸಿ ಸಂಭ್ರಮದಿಂದ ಸಿದ್ದರಾಮಯ್ಯ ಅವರ ನಾಮಫಲಕ ಹೊತ್ತು ಸಜ್ಜಾಗಿದ್ದ ಸಿಎಂ ಕಚೇರಿ ಈಗ ಬಹುತೇಕ ಖಾಲಿಯಾಗಿದೆ. ನಿನ್ನೆ ಸಿಎಂ ಕಚೇರಿಯಿಂದ ಸಿದ್ದರಾಮಯ್ಯ ಹೊರನಡೆಯುತ್ತಿದ್ದಾಗ ಸಚಿವಾಲಯದ ನೂರಾರು ಸಿಬ್ಬಂದಿ ಕಣ್ಣೀರು ಹಾಕಿದ್ದಾರೆ. ಸಿಬ್ಬಂದಿಗೆ ಸಮಾಧಾನಪಡಿಸುತ್ತಾ ಸಿದ್ದರಾಮಯ್ಯ ಅವರು ಕೈಮುಗಿದು ಹೆಜ್ಜೆ ಹಾಕುತ್ತಿದ್ದಾಗ, ‘ಸಿದ್ದರಾಮಯ್ಯ ಸಾಹೇಬ್ರಿಗೆ ಜೈ, ಹುಲಿಗೆ ಜೈ’ ಎಂಬ ಘೋಷಣೆಗಳು ಮೊಳಗಿದವು.

ಈ ಭಾವುಕ ಕ್ಷಣಗಳ ನಡುವೆಯೇ ಸಿಎಂ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್ ಅವರಿಂದ ಬಹುನಿರೀಕ್ಷಿತ ‘ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ (ಜಾತಿಗಣತಿ)’ ವರದಿಯನ್ನು ಅಧಿಕೃತವಾಗಿ ಸ್ವೀಕರಿಸಿ ಕೊನೆಯ ಅವಧಿಯಲ್ಲೂ ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ.

ರಾಜ್ಯಾದ್ಯಂತ ಭುಗಿಲೆದ್ದ ಅಹಿಂದ ಆಕ್ರೋಶ

ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ರಾಜ್ಯಾದ್ಯಂತ ಅವರ ಅಭಿಮಾನಿಗಳು ಹಾಗೂ ಅಹಿಂದ ಸಂಘಟನೆಗಳ ಆಕ್ರೋಶದ ಜ್ವಾಲಾಮುಖಿ ಸ್ಫೋಟಿಸಿದೆ. ಬೆಂಗಳೂರಿನ ಕಾವೇರಿ ನಿವಾಸದ ಮುಂದೆ ವರುಣಾ ಮತ್ತು ಚಾಮುಂಡೇಶ್ವರಿ ಕ್ಷೇತ್ರ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಅಭಿಮಾನಿಗಳು ಜಮಾಯಿಸಿ ಆಕ್ರೋಶ ಹೊರಹಾಕಿದ್ದಾರೆ. ‘ಸಿದ್ದರಾಮಯ್ಯರನ್ನು ಕೆಳಗಿಳಿಸಿದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಸುದ್ದಿ ಅಲ್ಲಗಳೆದ ಸುರ್ಜೇವಾಲ: ಊಹಾಪೋಹಗಳಿಗೆ ಕಿವಿಗೊಡದಂತೆ ಮನವಿ

ರಾಜ್ಯ ಶೋಷಿತ ವರ್ಗಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಹಾಗೂ ಅಹಿಂದ ಮುಖಂಡ ಸಿದ್ದಣ್ಣ ತೇಜಿ ಅವರು ರಾಜ್ಯಾದ್ಯಂತ ಭಾರಿ ಹೋರಾಟಕ್ಕೆ ಕರೆ ನೀಡಿದ್ದಾರೆ. ಇತ್ತ ಮಂಡ್ಯದಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ಪಂಜಿನ ಮೆರವಣಿಗೆ ನಡೆಸಿ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟಿಸಿದರೆ, ಕಲಬುರಗಿಯಲ್ಲಿ ಎಸ್​ವಿಪಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಒಟ್ಟಿನಲ್ಲಿ, ಸಿಎಂ ಸ್ಥಾನದಿಂದ ‘ಟಗರು’ ಕೆಳಗಿಳಿಯುತ್ತಿದ್ದಾರೆ ಎನ್ನುವುದು ಅಹಿಂದ ವರ್ಗಕ್ಕೆ ಬರಸಿಡಿಲು ಬಡಿದಂತಾಗಿದೆ. ಇದರ ಮಧ್ಯೆ, ರಾಜ್ಯಪಾಲರು ಬೆಂಗಳೂರು ತೊರೆದಿರುವುದು ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Pradeep Chikkati
Pradeep Chikkati

ಕ್ರೈಂ ವರದಿಗಾರನಾಗಿ ಟಿವಿ9 ಕನ್ನಡದಲ್ಲಿ ಕೆಲಸ

Read More