Weather Forecast: ಉತ್ತರ ಮತ್ತು ದಕ್ಷಿಣ ಒಳನಾಡಿನ ಜನರೇ ಎಚ್ಚರ!: ಮುಂದಿನ 5 ದಿನ ರಾಜ್ಯದಲ್ಲಿ ವರುಣನ ಆರ್ಭಟ ಜೋರು
ಭಾರತೀಯ ಹವಾಮಾನ ಇಲಾಖೆ (IMD) ಮೇ 25 ರಿಂದ 29 ರವರೆಗೆ ರಾಜ್ಯದಲ್ಲಿ ಭಾರೀ ಮಳೆ, ಗುಡುಗು, ಸಿಡಿಲು ಹಾಗೂ ತೀವ್ರ ಬಿರುಗಾಳಿ ಬೀಸುವ ಸಾಧ್ಯತೆ ಬಗ್ಗೆ ಮುನ್ನೆಚ್ಚರಿಕೆ ನೀಡಿದೆ. ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ 50-60 ಕಿ.ಮೀ ವೇಗದ ಗಾಳಿ ನಿರೀಕ್ಷಿಸಲಾಗಿದೆ. ಬೆಂಗಳೂರಿನಲ್ಲಿ ಇಡೀ ವಾರ ವ್ಯಾಪಕ ಮಳೆಯಾಗಲಿದ್ದು, ತಾಪಮಾನ ಗಣನೀಯವಾಗಿ ಇಳಿಯಲಿದೆ. ಹಳೆಯ ಕಟ್ಟಡ ಹಾಗೂ ಮರಗಳ ಬಳಿ ನಿಲ್ಲದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.

ಬೆಂಗಳೂರು, ಮೇ.25: ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಹವಾಮಾನದಲ್ಲಿ ಭಾರಿ ಏರುಪೇರಾಗಲಿದ್ದು, ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಹಾಗೂ ತೀವ್ರ ವೇಗದ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ನೆಚ್ಚರಿಕೆ ನೀಡಿದೆ. ಮೇ 25 ರಿಂದ ಮೇ 29ರ ವರೆಗಿನ ಪ್ರಸ್ತುತ ಪರಿಸ್ಥಿತಿಯ ಕಂಪ್ಲೀಟ್ ವಿವರ ಇಲ್ಲಿದೆ.
ಹವಾಮಾನ ಇಲಾಖೆಯ ವರದಿಯ ಪ್ರಕಾರ, ಮೇ 25, 26 ಮತ್ತು 29 ರಂದು ಉತ್ತರ ಒಳನಾಡಿನ (NIK) ಒಂದೆರಡು ಕಡೆಗಳಲ್ಲಿ ಗುಡುಗು ಮತ್ತು ಸಿಡಿಲು ಸಹಿತ ಮಳೆಯಾಗಲಿದೆ. ಆದರೆ, ಮೇ 27 ಮತ್ತು 28 ರಂದು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಅತ್ಯಂತ ಭೀಕರ ಪರಿಸ್ಥಿತಿ ಇರಲಿದ್ದು, ಗಂಟೆಗೆ ಭರೋಬ್ಬರಿ 50 ರಿಂದ 60 ಕಿ.ಮೀ ವೇಗದಲ್ಲಿ ಭೀಕರ ಬಿರುಗಾಳಿ (Gusty Wind) ಬೀಸುವ ಸಾಧ್ಯತೆ ಇದೆ. ಸಾರ್ವಜನಿಕರು ಹಳೆಯ ಕಟ್ಟಡ ಹಾಗೂ ಮರಗಳ ಬಳಿ ನಿಲ್ಲದಂತೆ ಸೂಚಿಸಲಾಗಿದೆ.
ಇತ್ತ ದಕ್ಷಿಣ ಒಳನಾಡಿನ (SIK) ಜಿಲ್ಲೆಗಳಲ್ಲಿಯೂ ಸಹ ಮೇ 25 ರಿಂದ ಮೇ 29 ರವರೆಗೆ ಕಠಿಣ ಹವಾಮಾನ ಇರಲಿದ್ದು, ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ. ಇದರೊಂದಿಗೆ ಕರಾವಳಿ ಕರ್ನಾಟಕದ (Coastal Karnataka) ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೇ 26 ರಿಂದ ಮೇ 29 ರವರೆಗೆ ಸತತ ನಾಲ್ಕು ದಿನಗಳ ಕಾಲ ಭಾರಿ ಗುಡುಗು ಮತ್ತು ಸಿಡಿಲಿನ ಆರ್ಭಟ ಇರಲಿದೆ ಎಂದು ಇಲಾಖೆ ಎಚ್ಚರಿಸಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಶುಕ್ರವಾರದವರೆಗೆ ಗುಡುಗು ಸಹಿತ ಭಾರೀ ಮಳೆ
ಬೆಂಗಳೂರಿನಲ್ಲಿ ಮೇ 29 ರವರೆಗೆ ಗುಡುಗು ಸಹಿತ ಮಳೆ:
ತೀವ್ರ ಉಷ್ಣಾಂಶ ಹಾಗೂ ಸುಡುವ ಬಿಸಿಲಿನಿಂದ ಕಂಗಾಲಾಗಿದ್ದ ರಾಜಧಾನಿ ಬೆಂಗಳೂರಿನ ಜನತೆಗೆ ಭಾರತೀಯ ಹವಾಮಾನ ಇಲಾಖೆ (IMD) ಅತ್ಯಂತ ತಂಪಾದ ಮುನ್ಸೂಚನೆಯೊಂದನ್ನು ನೀಡಿದೆ. ನಗರದಲ್ಲಿ ಮುಂದಿನ ಇಡೀ ವಾರ ಅಂದರೆ ಮೇ 29 ರವರೆಗೆ ವ್ಯಾಪಕ ಮಳೆಯಾಗುವ (Widespread Rains) ಬಲವಾದ ಸಾಧ್ಯತೆ ಇದ್ದು, ವರುಣನ ಆಗಮನದಿಂದ ತಾಪಮಾನ ಗಣನೀಯವಾಗಿ ಕುಸಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಐಎಂಡಿ ಭಾನುವಾರ ಹೊರಡಿಸಿರುವ ಇತ್ತೀಚಿನ ವರದಿಯ ಪ್ರಕಾರ, ಮೇ ಕೊನೆಯ ವಾರದಾದ್ಯಂತ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಹವಾಮಾನ ಕಂಪ್ಲೀಟ್ ಬದಲಾಗಲಿದೆ. ನಗರದಾದ್ಯಂತ ನಿರಂತರವಾಗಿ ದಟ್ಟ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿಯ ಅವಧಿಯಲ್ಲಿ ಗುಡುಗು, ಸಿಡಿಲು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಈ ಮಳೆಯ ಮಾರುತಗಳು ಇಡೀ ನಗರದ ವಾತಾವರಣವನ್ನು ಕೂಲ್ ಮಾಡಲಿವೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:39 pm, Mon, 25 May 26





