ಆಗಸ್ಟ್ 15 ಅಲ್ಲ, 11ಕ್ಕೇ ಧ್ವಜಾರೋಹಣ; ಭಾರತದ ಈ 2 ಪ್ರಸಿದ್ಧ ದೇವಾಲಯಗಳಲ್ಲಿ ಮುಂಚಿತವಾಗಿಯೇ ಸ್ವಾತಂತ್ರ್ಯ ದಿನಾಚರಣೆ!
ದೇಶಾದ್ಯಂತ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತಿದ್ದರೆ, ಮಧ್ಯಪ್ರದೇಶದ ಮಂದಸೌರ್ನ ಪಶುಪತಿನಾಥ ಮತ್ತು ಉಜ್ಜಯಿನಿಯ ಬಡೇ ಗಣೇಶ ದೇವಾಲಯಗಳಲ್ಲಿ ಆಗಸ್ಟ್ 11 ರಂದೇ ಆಚರಿಸಲಾಗಿದೆ. ಹಿಂದೂ ಪಂಚಾಂಗದ(ಉತ್ತರ ಭಾರತ) ಶ್ರಾವಣ ಕೃಷ್ಣ ಚತುರ್ದಶಿ ತಿಥಿಗೆ ಆದ್ಯತೆ ನೀಡಿ ಈ ಅಪರೂಪದ ಸಂಪ್ರದಾಯವನ್ನು ಪಾಲಿಸಲಾಗುತ್ತಿದೆ. ಇದು ಸಂಪ್ರದಾಯ ಮತ್ತು ದೇಶಭಕ್ತಿಯ ಅನನ್ಯ ಸಂಗಮಕ್ಕೆ ಉತ್ತಮ ನಿದರ್ಶನವಾಗಿದೆ.

ಇಂದು ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆ ನಡೆಯುತ್ತಿದ್ದರೆ, ಮಧ್ಯಪ್ರದೇಶದ ಎರಡು ಪ್ರಸಿದ್ಧ ದೇವಾಲಯಗಳಲ್ಲಿ ಮಾತ್ರ ಎರಡು ಮೂರು ದಿನ ಮುಂಚಿತವಾಗಿಯೇ ಆಚರಿಸಲಾಗಿದೆ. ಅಂದರೆ ಆಗಸ್ಟ್ 11ರಂದು ಇಲ್ಲಿ ಅತ್ಯಂತ ವಿಜೃಂಭಣೆಯಿಂದ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗಿದೆ. ಮಧ್ಯಪ್ರದೇಶದ ಮಂದಸೌರ್ನಲ್ಲಿರುವ ಪಶುಪತಿನಾಥ ದೇವಾಲಯ ಮತ್ತು ಉಜ್ಜಯಿನಿಯ ಬಡೇ ಗಣೇಶ ದೇವಾಲಯಗಳಲ್ಲಿ ವಿಶೇಷ ಪೂಜೆ, ತಿರಂಗಾ ಯಾತ್ರೆ ಹಾಗೂ ಧ್ವಜಾರೋಹಣ ನೆರವೇರಿಸುವ ಮೂಲಕ ಈ ಅಪರೂಪದ ಸಂಪ್ರದಾಯವನ್ನು ಮುಂದುವರಿಸಲಾಗಿದೆ.
4 ದಿನ ಮುಂಚಿತವಾಗಿ ಆಚರಿಸಲು ಕಾರಣವೇನು?
ನಮಗೆಲ್ಲರಿಗೂ ತಿಳಿದಿರುವಂತೆ ಇಂಗ್ಲಿಷ್ (ಗ್ರೆಗೋರಿಯನ್) ಕ್ಯಾಲೆಂಡರ್ ಪ್ರಕಾರ ಆಗಸ್ಟ್ 15, 1947 ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಆದರೆ ಹಿಂದೂ ಪಂಚಾಂಗದ ಪ್ರಕಾರ ಅಂದು ಶ್ರಾವಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಾಗಿತ್ತು. ಈ ಎರಡೂ ದೇವಾಲಯಗಳಲ್ಲಿ ಗ್ರೆಗೋರಿಯನ್ ದಿನಾಂಕಕ್ಕಿಂತ ಹೆಚ್ಚಾಗಿ ಹಿಂದೂ ತಿಥಿ ಮತ್ತು ಕ್ಯಾಲೆಂಡರ್ಗೆ ಆದ್ಯತೆ ನೀಡಿ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವ ದಶಕಗಳ ಸಂಪ್ರದಾಯವಿದೆ. ಈ ವರ್ಷ ಶ್ರಾವಣ ಕೃಷ್ಣ ಚತುರ್ದಶಿಯು ಆಗಸ್ಟ್ 11ಕ್ಕೆ ಬಂದಿದ್ದರಿಂದ, ಅಂದೇ ಇಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.
ಪಶುಪತಿನಾಥ ದೇವಾಲಯದಲ್ಲಿ ನಡೆದ ವಿಶೇಷ ಪೂಜೆ:
ಮಂದಸೌರ್ನ ಶಿವನಾ ನದಿ ದಡದಲ್ಲಿರುವ ಪ್ರಾಚೀನ ಪಶುಪತಿನಾಥ ದೇವಾಲಯದಲ್ಲಿ ಆಗಸ್ಟ್ 11 ರಂದು ವಿಶೇಷ ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆದವು. 1985 ರಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯದಂತೆ, ದೇವಾಲಯದ ಅಷ್ಟಮುಖಿ ಶಿವಲಿಂಗಕ್ಕೆ ದೂರ್ವಾ (ಗರಿಕೆ) ಹುಲ್ಲು ಬೆರೆಸಿದ ನೀರಿನಿಂದ ವಿಶೇಷ ಅಭಿಷೇಕ ಮಾಡಿ ವೇದಮಂತ್ರಗಳನ್ನು ಪಠಿಸಲಾಯಿತು. ಈ ಸಂದರ್ಭದಲ್ಲಿ 2047ರ ವೇಳೆಗೆ ಭಾರತವು ಸಂಪೂರ್ಣ ಅಭಿವೃದ್ಧಿ ಹೊಂದಿದ ದೇಶವಾಗಬೇಕು ಎಂದು ಪ್ರಾರ್ಥಿಸಲಾಯಿತು. ಸುಮಾರು 250ಕ್ಕೂ ಹೆಚ್ಚು ಭಕ್ತರು ಈ ಸಂಭ್ರಮದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.
ಇದನ್ನೂ ಓದಿ: ತಿರುಮಲ ಶ್ರೀವಾರಿ ಪವಿತ್ರೋತ್ಸವ: ಆಗಸ್ಟ್ 23ರಿಂದ 25ರವರೆಗೆ ವಿಶೇಷ ಪೂಜೆ; ಹಲವು ಸೇವೆಗಳು ರದ್ದು
ಬಡೇ ಗಣೇಶ ದೇವಸ್ಥಾನದಲ್ಲಿ ವಿಜೃಂಭಿಸಿದ ತಿರಂಗಾ ಯಾತ್ರೆ:
ಉಜ್ಜಯಿನಿಯ ಪ್ರಸಿದ್ಧ ಬಡೇ ಗಣೇಶ ದೇವಸ್ಥಾನದಲ್ಲಿ ಗಣೇಶನನ್ನು ‘ಗಣರಾಜ್ಯದ ದೇವರು’ ಎಂದು ಆರಾಧಿಸುವ ವಿಶೇಷ ಪದ್ಧತಿಯಿದೆ. ಆಗಸ್ಟ್ 11 ರಂದು ನಾಸಿಕ್ ಢೋಲ್, ವಾದ್ಯಮೇಳಗಳು ಹಾಗೂ ದೇಶಭಕ್ತಿಯ ಜಯಘೋಷಗಳ ನಡುವೆ ದೇವಸ್ಥಾನದ ಆವರಣದಲ್ಲಿ ವಿಜೃಂಭಣೆಯ ತಿರಂಗಾ ಯಾತ್ರೆ ನಡೆಯಿತು. ನಂತರ ಗಣಪತಿಗೆ ರಾಷ್ಟ್ರಧ್ವಜವನ್ನು ಸಮರ್ಪಿಸಿ ಮಹಾ ಆರತಿ ಬೆಳಗಲಾಯಿತು. ಕೊನೆಯಲ್ಲಿ ದೇವಾಲಯದ ಮುಖ್ಯ ಶಿಖರದ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿ, ಭಕ್ತರು ತಮ್ಮ ದೇಶಭಕ್ತಿಯನ್ನು ಪ್ರದರ್ಶಿಸಿದರು.
ಸಂಪ್ರದಾಯ ಮತ್ತು ದೇಶಭಕ್ತಿಯ ಅನನ್ಯ ಸಂಗಮ:
ದೇಶಾದ್ಯಂತ ಆಗಸ್ಟ್ 15 ರಂದು ತ್ರಿವರ್ಣ ಧ್ವಜ ಹಾರಿಸುತ್ತಿದ್ದರೆ, ಧರ್ಮ ಮತ್ತು ದೇಶಭಕ್ತಿಯನ್ನು ಸಮ್ಮಿಳನಗೊಳಿಸಿ ತಿಥಿಯ ಪ್ರಕಾರ ಮುಂಚಿತವಾಗಿಯೇ ಆಚರಿಸುವ ಮಧ್ಯಪ್ರದೇಶದ ಈ ದೇವಾಲಯಗಳ ಸಂಪ್ರದಾಯವು ಭಾರತದ ವೈವಿಧ್ಯಮಯ ಸಂಸ್ಕೃತಿಗೆ ಉತ್ತಮ ನಿದರ್ಶನವಾಗಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




