
ಬೆಂಗಳೂರು, ಸೆಪ್ಟೆಂಬರ್ 04: ‘ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಸಂಪೂರ್ಣ ಭ್ರಷ್ಟಾಚಾರದ ಕೇಂದ್ರವಾಗಿ ಮಾರ್ಪಟ್ಟಿದೆ’ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಕೈಗಾರಿಕೆ ಸ್ಥಾಪಿಸಲು ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದರೂ ದಲಿತ ಉದ್ಯಮಿಗಳಿಗೆ ನಿವೇಶನ ಸಿಗುತ್ತಿಲ್ಲ. ಆದರೆ ಅಧಿಕಾರ ಮತ್ತು ಹಣದ ಪ್ರಭಾವ ಬಳಸಿ ಒಬ್ಬನೇ ವ್ಯಕ್ತಿ ಕುಟುಂಬಸ್ಥರ ಹೆಸರಿನಲ್ಲಿ ಕೋಟ್ಯಂತರ ರೂ ಬೆಲೆಬಾಳುವ ಜಮೀನು ಕಬಳಿಸಿದ್ದಾನೆ’ ಎಂದು ದಾಖಲೆ ಸಮೇತ ವಾಗ್ದಾಳಿ ಮಾಡಿದರು.
‘ದೇವನಹಳ್ಳಿ ಏರೋಸ್ಪೇಸ್ ಪಾರ್ಕ್ನಲ್ಲಿ ಸಿಎ ನಿವೇಶನ ಘೋಷಣೆ ಮಾಡಿದ್ದರೂ ಸುಮಾರು 71 ಅರ್ಹ ಎಸ್ಸಿ, ಎಸ್ಟಿ ಅರ್ಜಿದಾರರಿಗೆ ಕಳೆದ ಐದು ವರ್ಷಗಳಿಂದ ಜಮೀನು ಹಂಚಿಕೆ ಮಾಡಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡದ ಉದ್ಯಮಿಗಳಿಗೆ ಶೇ. 75 ರಷ್ಟು ರಿಯಾಯಿತಿ ದರದಲ್ಲಿ ಜಮೀನು ನೀಡಲು ನಿಯಮಾವಳಿಗಳಿದ್ದರೂ, ಅರ್ಹರಿಗೆ ಕೊಡದೆ ಹರಾಜು ಪ್ರಕ್ರಿಯೆಯನ್ನೂ ನಡೆಸದೆ ಬೇಕಾಬಿಟ್ಟಿಯಾಗಿ ಹಂಚಿಕೆ ಮಾಡಲಾಗುತ್ತಿದೆ. ಕೆಐಎಡಿಬಿ ಸಾರ್ವಜನಿಕ ಸಂಸ್ಥೆಯಂತೆ ಕೆಲಸ ಮಾಡದೆ, ಕೇವಲ ಲಾಭಕೋರ ರಿಯಲ್ ಎಸ್ಟೇಟ್ ಕಂಪನಿಯಂತೆ ವರ್ತಿಸುತ್ತಿದೆ. ಪದ್ಮಾವತಿ ಇನ್ಫ್ರಾ ಸಂಸ್ಥೆಗೆ ನಿಯಮಬಾಹಿರವಾಗಿ 15 ಎಕರೆ ಮಂಜೂರು ಮಾಡಿರುವ ಬಗ್ಗೆ ಸ್ಪಷ್ಟನೆ ಕೇಳಿದರೂ ಸರ್ಕಾರ ಯಾವುದೇ ಉತ್ತರ ನೀಡಿಲ್ಲ’ ಅವರು ಎಂದು ಕಿಡಿಕಾರಿದರು.
‘ದಲಿತರಿಗೆ ಅನ್ಯಾಯ ಮಾಡಿ ಎಂ. ಮಂಜುನಾಥ್ ಎಂಬ ಪ್ರಭಾವಿ ವ್ಯಕ್ತಿಗೆ ಹಂತಹಂತವಾಗಿ ಸುಮಾರು 17 ಎಕರೆ ಜಮೀನು ಪರಭಾರೆ ಮಾಡಲಾಗಿದೆ’ ಎಂದು ದಾಖಲೆ ಸಮೇತ ವಿವರಿಸಿದರು. ‘ಮೊದಲು ಎಸ್ಟಿ ಹೆಸರಿನಲ್ಲಿ 2 ಎಕರೆ ಪಡೆದ ಮಂಜುನಾಥ್, ನಂತರ ಎಸ್ಸಿ ಎಂದು ಹೇಳಿ ಮತ್ತಷ್ಟು ನಿವೇಶನ ಪಡೆದುಕೊಂಡು, ಸಿಕ್ಕಿಬೀಳುವ ಭಯದಿಂದ ಅದನ್ನು ಪತ್ನಿಯ ಹೆಸರಿಗೆ ವರ್ಗಾಯಿಸಿದ್ದಾರೆ. ಸಹಿ ಹಾಕಲೂ ಬಾರದ ತನ್ನ ತಾಯಿ ಸಾವಿತ್ರಮ್ಮ ಹೆಸರಿನಲ್ಲಿ ಕೈಗಾರಿಕೆ ನೆಪವೊಡ್ಡಿ ಎಸ್ಸಿ ಕೋಟಾದಡಿ 1 ಎಕರೆ ಪಡೆದಿದ್ದಾರೆ’ ಎಂದರು.
‘ಕಲ್ಯಾಣ ನಗರದಲ್ಲಿ ಗುಡ್ ವೈವ್ಸ್ ಕಂಪನಿಗೆ ಮಂಜೂರಾಗಿದ್ದ ನಿವೇಶನದಲ್ಲಿ ತಾನು ಪಾಲುದಾರನಾಗಿ ಸೇರಿಕೊಂಡು, ರದ್ದಾಗಿದ್ದ ಜಾಗವನ್ನು ಮರುಹಂಚಿಕೆ ಮಾಡಿಸಿಕೊಂಡು ಒಟ್ಟು 7 ಎಕರೆ ಕಬಳಿಸಿದ್ದಾನೆ. ಆದ್ವಿಕ್ ಟೆಕ್ ಪಾರ್ಕ್ ಹೆಸರಿನಲ್ಲಿ ಅತ್ತೆ ಗಂಗಮ್ಮಳನ್ನು ಎಸ್ಟಿ ಎಂದು ಬಿಂಬಿಸಿ 2 ಎಕರೆ ಹಾಗೂ ಆದ್ವಿಕ್ ಗೇಟ್ವೇ ಹೆಸರಿನಲ್ಲಿ ಸ್ವತಃ ತಾನೇ ಮತ್ತೊಂದು 2 ಎಕರೆ ಪಡೆದಿದ್ದಾನೆ. ಸಾನ್ವಿ ಕಂಪನಿ ಮೂಲಕ ಅಣ್ಣನ ಹೆಸರಿನಲ್ಲಿ 1.5 ಎಕರೆ ಹಾಗೂ ಇತರ ಪಾಲುದಾರರ ಹೆಸರಿನಲ್ಲಿ ಭೂಮಿ ಪಡೆದಿದ್ದಾರೆ’ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: B. Nagendra Resignation: ವಾಲ್ಮೀಕಿ ನಿಗಮದ ಹಗರಣ; ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಬಿ. ನಾಗೇಂದ್ರ
‘ಸರ್ಕಾರಿ ಲೆಕ್ಕದಲ್ಲಿ 50 ಕೋಟಿ ಮೌಲ್ಯದ ಈ ಜಮೀನಿನ ಇಂದಿನ ಮುಕ್ತ ಮಾರುಕಟ್ಟೆ ಮೌಲ್ಯ 200 ಕೋಟಿಗೂ ಅಧಿಕವಾಗಿದೆ. ಅಷ್ಟೇ ಅಲ್ಲದೆ, ಹಂಚಿಕೆಯಾದ ಸಾಮಾನ್ಯ ಜಾಗವನ್ನು ಪ್ರಭಾವ ಬಳಸಿ ಆಯಕಟ್ಟಿನ ಬೆಲೆಬಾಳುವ ಸ್ಥಳಕ್ಕೆ ಶಿಫ್ಟ್ ಮಾಡಿಸಿಕೊಳ್ಳಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಬಾಗಮನೆ ಎಸ್ಟೇಟ್ ಕಂಪನಿಯಿಂದ ಸಚಿವ ಎಂ.ಬಿ. ಪಾಟೀಲ್ ಸಾಲ ಪಡೆದಿರುವುದು ಚುನಾವಣಾ ಅಫಿಡವಿಟ್ನಲ್ಲೇ ಸಾಬೀತಾಗಿದೆ. ಹರಾಜು ಪ್ರಕ್ರಿಯೆಯೇ ಇಲ್ಲದೆ ವೈಗೈ ಕಂಪನಿಗೆ ಜಮೀನು ನೀಡಲಾಗಿದ್ದು, ಇವೆಲ್ಲದರ ಹಿಂದೆ ನಿಕಟ ಸಂಪರ್ಕವಿದೆ. ಈ ಅಕ್ರಮ ಸೈಟ್ ಹಂಚಿಕೆಯ ಮೂಲಕ ಬಂದ ಕೋಟ್ಯಂತರ ರೂಪಾಯಿ ಹಣ ತೆಲಂಗಾಣಕ್ಕೆ ಹರಿದು ಹೋಗಿದೆ. ಸಚಿವ ಸಂಪುಟ ಪುನಾರಚನೆಯಲ್ಲಿ ಹಲವರ ಖಾತೆ ಬದಲಾದರೂ ಎಂ.ಬಿ. ಪಾಟೀಲ್ ಖಾತೆಯನ್ನು ಯಾಕೆ ಬದಲಿಸಿಲ್ಲ’ ಎಂದು ಪ್ರಶ್ನಿಸಿದರು. ‘ಭ್ರಷ್ಟಾಚಾರ ಕಂಡರೆ ತಕ್ಷಣ ಫೋನ್ ಮಾಡಿ ಎಂದು ಸಿಎಂ ಹೇಳುತ್ತಾರೆ, ಆದರೆ ಜನ ದೂರು ಕೊಡಲು ಯಾವ ನಂಬರ್ಗೆ ಕರೆ ಮಾಡಬೇಕು?’ ಎಂದು ವ್ಯಂಗ್ಯವಾಡಿದರು.
‘ಇನ್ನು ಪರಿಶಿಷ್ಟ ಸಮುದಾಯದವರೆಂದರೆ ಸರ್ಕಾರಕ್ಕೆ ಕಾಲಕಸವೇ’ ಎಂದು ಆಕ್ರೋಶ ಹೊರಹಾಕಿದ ನಾರಾಯಣಸ್ವಾಮಿ, ‘71 ಜನರಲ್ಲಿ ಬೆರಳೆಣಿಕೆಯಷ್ಟು ಮಂದಿಗೆ ನೀಡಲಾಗಿರುವ ಜಾಗವೂ ತಕರಾರಿನಿಂದ ಕೂಡಿದೆ. ಕೇವಲ ಅರ್ಧ ಎಕರೆ ನೀಡಿದ್ದರೂ ಎರಡು ವರ್ಷವಾದರೂ ಅದನ್ನು ಸರಿಪಡಿಸಿಕೊಟ್ಟಿಲ್ಲ. ಕೆಐಎಡಿಬಿಯಲ್ಲಿ ನಡೆದಿರುವ ಈ ಬೃಹತ್ ಹಗರಣವನ್ನು ಹಾಲಿ ನ್ಯಾಯಾಧೀಶರ ಮೂಲಕ ತನಿಖೆ ನಡೆಸಬೇಕು ಅಥವಾ ಸಿಬಿಐ, ಇಡಿ ತನಿಖೆಗೆ ವಹಿಸಬೇಕು. ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ತಾವು ಸುಮ್ಮನಿರುವುದಿಲ್ಲ, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮೆಟ್ಟಿಲೇರಿ ಹೋರಾಟ’ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:18 pm, Fri, 4 September 26