AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka SSLC Result 2026: ಆಂಬುಲೆನ್ಸ್‌ನಲ್ಲಿ ಬಂದು, ಸ್ಟ್ರೆಚರ್ ಮೇಲೆ ಮಲಗಿಯೇ ಪರೀಕ್ಷೆ ಬರೆದಿದ್ದ ಕುಸುಮಾ ಉತ್ತಮ ಸಾಧನೆ

ಕೋಲಾರ ಜಿಲ್ಲೆಯ ಕುಸುಮಾ ತೀವ್ರ ಅನಾರೋಗ್ಯದ ನಡುವೆಯೂ ಆಂಬುಲೆನ್ಸ್‌ನಲ್ಲಿ ಬಂದು, ಸ್ಟ್ರೆಚರ್ ಮೇಲೆ ಮಲಗಿಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. ದೃಢ ಸಂಕಲ್ಪ ಮತ್ತು ಛಲದಿಂದ ಪರೀಕ್ಷೆ ಎದುರಿಸಿದ ಅವರು ಪ್ರಥಮ ದರ್ಜೆಯಲ್ಲಿ (First Class) ಉತ್ತೀರ್ಣರಾಗಿದ್ದಾರೆ. ಅವರ ಈ ಅಸಾಧಾರಣ ಸಾಧನೆ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಶಿಕ್ಷಣ ಇಲಾಖೆ ಹಾಗೂ ಇತರರ ಸಹಕಾರವೂ ಇದಕ್ಕೆ ಕಾರಣ.

Karnataka SSLC Result 2026: ಆಂಬುಲೆನ್ಸ್‌ನಲ್ಲಿ ಬಂದು, ಸ್ಟ್ರೆಚರ್ ಮೇಲೆ ಮಲಗಿಯೇ ಪರೀಕ್ಷೆ ಬರೆದಿದ್ದ ಕುಸುಮಾ ಉತ್ತಮ ಸಾಧನೆ
ಕೋಲಾರ ಕುಸುಮಾ
TV9 Web
| Edited By: |

Updated on:Apr 23, 2026 | 1:52 PM

Share

ಕೋಲಾರ, ಏ.23: ಸಂಕಷ್ಟಗಳು ಎದುರಾದಾಗ ಎದೆಗುಂದದೆ ಹೋರಾಡಿದರೆ ಯಶಸ್ಸು ಖಂಡಿತ ಎಂಬ ಮಾತನ್ನು ಕೋಲಾರ ಜಿಲ್ಲೆಯ ಕುಸುಮಾ ನಿಜವಾಗಿಸಿದ್ದಾರೆ. ಆಂಬುಲೆನ್ಸ್‌ನಲ್ಲಿ ಬಂದು, ಸ್ಟ್ರೆಚರ್ ಮೇಲೆ ಮಲಗಿಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ಈ ಪ್ರತಿಭಾವಂತ ವಿದ್ಯಾರ್ಥಿನಿ ಇಂದು ಪ್ರಕಟವಾದ ಫಲಿತಾಂಶದಲ್ಲಿ ಉತ್ತಮ ಫಲಿತಾಂಶದಿಂದ ತೇರ್ಗಡೆಯಾಗುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಚಿನ್ನನಾಗಹಳ್ಳಿ ನಿವಾಸಿಯಾಗಿರುವ ಕುಸುಮಾ, ಪರೀಕ್ಷೆಯ ಸಮಯದಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಆದರೆ ಪರೀಕ್ಷೆ ತಪ್ಪಿಸಿಕೊಳ್ಳಬಾರದು ಎಂಬ ದೃಢ ಸಂಕಲ್ಪ ಮಾಡಿದ ಆಕೆ, ಆಂಬುಲೆನ್ಸ್ ಮೂಲಕ ಪರೀಕ್ಷಾ ಕೇಂದ್ರಕ್ಕೆ ಆಗಮಿಸುತ್ತಿದ್ದರು. ಎದ್ದುನಿಲ್ಲಲು ಸಾಧ್ಯವಾಗದ ಸ್ಥಿತಿಯಲ್ಲೂ ಸ್ಟ್ರೆಚರ್ ಮೇಲೆ ಮಲಗಿಕೊಂಡೇ ಪರೀಕ್ಷೆ ಬರೆದು ಎಲ್ಲರ ಗಮನ ಸೆಳೆದಿದ್ದರು.

ಕುಸುಮಾ ಅಪಘಾತದಲ್ಲಿ ಗಂಭೀರವಾಗಿ ಗಾಯ

ಕೆಜಿಎಫ್ ತಾಲೂಕಿನ ಚಿನ್ನನಾಗನಹಳ್ಳಿ ನಿವಾಸಿಯಾದ ಸೆಂಟ್ ಮೇರಿಸ್ ಹೈಸ್ಕೂಲ್ ವಿದ್ಯಾರ್ಥಿನಿ 16 ವರ್ಷದ ಕುಸುಮಾ, ಇತ್ತೀಚೆಗೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಒಂದು ಕಾಲು ಕಳೆದುಕೊಂಡಿದ್ದಳು. ನಂತರ ಆಕೆಯನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿತ್ತು.ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗದಿದ್ದರೂ, ವಿದ್ಯಾಭ್ಯಾಸದ ಮೇಲೆ ಆಸಕ್ತಿ ಕಳೆದುಕೊಳ್ಳದ ಕುಸುಮಾ, ತನ್ನ ತಾಯಿಯೊಂದಿಗೆ ಆಂಬ್ಯುಲೆನ್ಸ್ ಮೂಲಕ ಕೆಜಿಎಫ್‌ನ ಸೆಂಟ್ ಜೋಸೆಫ್ ಶಾಲೆಗೆ ಬಂದು ಪರೀಕ್ಷೆಗೆ ಹಾಜರಾಗಿದ್ದಳು. ಪರೀಕ್ಷಾ ಕೇಂದ್ರದಲ್ಲಿ ಸ್ಟ್ರೆಚರ್ ಬೆಡ್ ಮೇಲೆ ಮಲಗಿಕೊಂಡೇ ಆಕೆ ಪರೀಕ್ಷೆ ಬರೆದಿದ್ದು, ಆಕೆಯ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.

ಇಂದು ಹೊರಬಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಕುಸುಮಾ 625 ಅಂಕಗಳಿಗೆ 374 ಅಂಕಗಳನ್ನು ಗಳಿಸಿದ್ದಾರೆ. ದೈಹಿಕ ಯಾತನೆಯ ನಡುವೆಯೂ ಆಕೆ ಗಳಿಸಿರುವ ಈ ಅಂಕಗಳು ಆಕೆಯ ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿವೆ. ಸದ್ಯ ಕುಸುಮಾ ಬೆಂಗಳೂರಿನ ವೈಟ್ ಫೀಲ್ಡ್‌ನ ಹಾಸ್ಟರ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: SSLC District Wise Result: ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ

ಕುಸುಮಾಳ ಈ ಅಸಾಧಾರಣ ಛಲಕ್ಕೆ ಕೋಲಾರದ ಶಿಕ್ಷಣ ಇಲಾಖೆ, ಸ್ಥಳೀಯ ಶಾಸಕಿ ಮತ್ತು ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಿದ್ದವು. ವಿಶೇಷವಾಗಿ ಮಾಜಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಕುಸುಮಾಳ ಬೆಂಬಲಕ್ಕೆ ನಿಂತು, ಆಕೆಗೆ ಬೇಕಾದ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:12 pm, Thu, 23 April 26

Follow Us