ಕೊಪ್ಪಳದಲ್ಲಿ ಅಚ್ಚರಿ ಘಟನೆ: ಗವಿಮಠದಲ್ಲಿ ಧ್ಯಾನಕ್ಕೆ ಕುಳಿತ ಮುಸ್ಲಿಂ ಮಹಿಳೆ
ಹಿಂದೂಗಳೇ ಹೆಚ್ಚಾಗಿ ಭೇಟಿ ನೀಡುವ ಕೊಪ್ಪಳದ ಗವಿಸಿದ್ದೆಶ್ವರ ಮಠದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಕಳೆದ ಎಂಟು ದಿನಗಳಿಂದ ಧ್ಯಾನ ಮಾಡುತ್ತಿದ್ದಾರೆ. ಆ ಮೂಲಕ ಗವಿಮಠ ಸದ್ಯ ವಿಶಿಷ್ಟ ಕ್ಷಣಕ್ಕೆ ಸಾಕ್ಷಿ ಆಗಿದೆ. ಮಾನಸಿಕ ನೆಮ್ಮದಿಗಾಗಿ ಧ್ಯಾನ ಮಾಡುತ್ತಿರುವುದಾಗಿ ಮಹಿಳೆ ಟಿವಿ9 ಬಳಿ ಹೇಳಿಕೊಂಡಿದ್ದಾರೆ.

ಕೊಪ್ಪಳ, ಜುಲೈ 26: ಕೊಪ್ಪಳದ ಗವಿಮಠ (Gavisiddeshwar Math) ಶಿಕ್ಷಣ ಸೇರಿದಂತೆ ಹತ್ತು ಹಲವು ವಿಚಾರಗಳಿಗೆ ಸುಪ್ರಸಿದ್ಧವಾಗಿದೆ. ಗವಿಮಠದ ಜಾತ್ರೆಯನ್ನು ದಕ್ಷಿಣದ ಕುಂಭಮೇಳ ಎಂದು ಕರೆಯುತ್ತಾರೆ. ಸದ್ಯ ಇದೇ ಗವಿಮಠ ವಿಶಿಷ್ಟ ಕ್ಷಣಕ್ಕೆ ಸಾಕ್ಷಿಯಾಗಿದೆ. ಅದೇನೆಂದರೆ ಕಳೆದ ಎಂಟು ದಿನಗಳಿಂದ ಮಠಕ್ಕೆ ಬರುತ್ತಿರುವ ಮಹಿಳೆ ನಾಗದೇವರ ಮುಂದೆ ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದಾರೆ. ಹೀಗೆ ಧ್ಯಾನಕ್ಕೆ ಕುಳಿತುಕೊಳ್ಳುತ್ತಿರುವುದು ಮುಸ್ಲಿಂ ಮಹಿಳೆ (Muslim woman) ಎಂಬುವುದು ಸದ್ಯ ಅಚ್ಚರಿಗೆ ಕಾರಣವಾಗಿದೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುದರಿ ಮೋತಿ ನಿವಾಸಿ ಹಸೀನಾ ಬೇಗಂ ಅವರು ಗವಿ ಮಠದಲ್ಲಿ ನಿರಂತರ ಒಂದು ಗಂಟೆಗಳ ಕಾಲ ಧ್ಯಾನ ಮಾಡುತ್ತಿದ್ದಾರೆ. ಬಹುತೇಕ ಶೇಕಡಾ 90 ರಷ್ಟು ಹಿಂದೂ ಧರ್ಮದವರು ಗವಿ ಮಠಕ್ಕೆ ಬರುತ್ತಾರೆ. ಆದರೆ ಆವರಣದಲ್ಲಿ ಮೊದಲ ಬಾರಿಗೆ ಮುಸ್ಲಿಂ ಮಹಿಳೆಯೊಬ್ಬರಿಂದ ಧ್ಯಾನ ಮಾಡಲಾಗುತ್ತಿದೆ.
ಗವಿ ಮಠದ ಶ್ರೀಗಳು ನಿತ್ಯ ಸಂಜೆ ಹೊತ್ತಲ್ಲಿ ಕುಳಿತುಕೊಳ್ಳುವ ಜಾಗದ ಮುಂದೆಯೆ ಮಹಿಳೆಯಿಂದ ಧ್ಯಾನ ಮಾಡಲಾಗುತ್ತಿದ್ದು. ಮಾನಸಿಕ ನೆಮ್ಮದಿಗಾಗಿ ಒಟ್ಟು 11 ದಿನ ಧ್ಯಾನ ಮಾಡುವುದಾಗಿ ಹಸೀನಾ ಬೇಗಂ ಬೇಡಿಕೊಂಡಿದ್ದಾರೆ.
ನಾನು 13 ವರ್ಷದಿಂದ ಗವಿ ಮಠದ ಶ್ರೀಗಳನ್ನು ನಂಬಿದ್ದೇನೆ: ಹಸೀನಾ ಬೇಗಂ
ಈ ಕುರಿತಾಗಿ ಸ್ವತಃ ಹಸೀನಾ ಬೇಗಂ ಅವರು ಟಿವಿ9 ಜೊತೆ ಮಾತನಾಡಿದ್ದು, ‘ಮನಸ್ಸಿಗೆ ನೆಮ್ಮದಿ ಇರಲಿಲ್ಲ, ಬಹಳ ಕಷ್ಟ ಇತ್ತು. ಹೀಗಾಗಿ ಶ್ರೀಗಳ ಬಳಿ ಕೇಳಿಕೊಂಡು ಎಂಟು ದಿನದಿಂದ ಧ್ಯಾನ ಮಾಡುತ್ತಿದ್ದೇನೆ. ನಾನು ಮುಸ್ಲಿಂ ಆದರೂ ಎಲ್ಲಾ ಧರ್ಮ ಒಂದೇ’ ಎಂದರು.
ಇದನ್ನೂ ಓದಿ: ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
‘ನಾನು 13 ವರ್ಷದಿಂದ ಗವಿ ಮಠದ ಶ್ರೀಗಳನ್ನು ನಂಬಿದ್ದೇನೆ. ಮಠದಲ್ಲಿ ಮುಸ್ಲಿಂ ಎಂಬ ಬೇಧ-ಭಾವ ಇಲ್ಲ. ನನಗೆ ಒಬ್ಬರಿಂದ ನೋವು ಆಗಿದೆ. ಹಾಗಾಗಿ ನಿತ್ಯ ಒಂದು ಗಂಟೆ ಧ್ಯಾನಕ್ಕೆ ಕೂತಿದ್ದೇನೆ. ನನಗೆ ಬಹಳ ಕಷ್ಟ ಇದೆ, ಪರಿಹಾರ ಆಗತ್ತೆ. ನನ್ನ ಮಕ್ಕಳ ಮೇಲೂ ಅಜ್ಜರ ಆಶೀರ್ವಾದ ಇದೆ. ನಾಗಪ್ಪ, ಬಸವಣ್ಣ ಎಲ್ಲರನ್ನೂ ಪೂಜೆ ಮಾಡುತ್ತೇನೆ. ಮನಸ್ಸಿಗೆ ನೆಮ್ಮದಿ ಸಿಗುತ್ತೆ ಎಂಬ ನಂಬಿಕೆ ಇದೆ’ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:52 am, Sat, 26 July 25



