ಪೂಜೆಗೆಂದು ಹೋದ ಅರ್ಚಕ ನಾಲೆಯಲ್ಲಿ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ
ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಅರ್ಚಕರೊಬ್ಬರ ನಿಗೂಢ ಸಾವು ಸಂಭವಿಸಿದೆ. ಪೂಜೆಗೆ ಹೋಗಿದ್ದ ವ್ಯಕ್ತಿ ನಾಲೆಯಲ್ಲಿ ನಗ್ನ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳದಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದು, ಇದು ಆಕಸ್ಮಿಕ ಸಾವೋ ಅಥವಾ ಕೊಲೆಯೋ ಎಂಬ ಸಂಶಯ ಮೂಡಿಸಿದೆ. ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಮಂಡ್ಯ, ಮಾರ್ಚ್ 08: ಪಕ್ಕದ ಊರಿಗೆ ಪೂಜೆಗೆ ಹೋಗುತ್ತಿರೋದಾಗಿ ತಿಳಿಸಿ ಹೊರಟಿದ್ದ ಅರ್ಚಕರೋರ್ವರ ಶವ ನಗ್ನ ಸ್ಥಿತಿಯಲ್ಲಿ ನಾಲೆಯಲ್ಲಿ ಪತ್ತೆಯಾಗಿರುವ ಘಟನೆ ಮಂಡ್ಯದ ಶ್ರೀರಂಗಪಟ್ಟಣದ ಮರಳಗಾಲ ಗ್ರಾಮದಲ್ಲಿ ನಡೆದಿದೆ. ಸಿದ್ದಲಿಂಗಪ್ಪ (46) ಮೃತ ವ್ಯಕ್ತಿ. ಪಕ್ಕದ ಶೆಟ್ಟಿಹಳ್ಳಿ ಗ್ರಾಮಕ್ಕೆ ಪೂಜೆಗೆ ಹೋಗುತ್ತಿದ್ದೇನೆ ಎಂದು ಮನೆಯಲ್ಲಿ ಹೇಳಿ ಹೊರಟಿದ್ದ ಸಿದ್ದಲಿಂಗಪ್ಪ ಅವರ ಸ್ಕೂಟರ್ ಸಿಡಿಎಸ್ ನಾಲೆಯಲ್ಲಿ ತೇಲುತ್ತಿರೋದನ್ನು ಕಂಡ ಗ್ರಾಮಸ್ಥರು, ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದರು. ಹೀಗಾಗಿ ನಾಪತ್ತೆಯಾದ ಸಿದ್ದಲಿಂಗಪ್ಪಗಾಗಿ ಹುಡುಕಾಟ ನಡೆಸಿದಾಗ ಮೈಮೇಲೆ ಬಟ್ಟೆ ಇಲ್ಲದ ರೀತಿ ಮೃತದೇಹ ಪತ್ತೆಯಾಗಿದೆ. ಅಲ್ಲದೆ ನಾಲೆ ಬಳಿ ರಕ್ತದ ಕಲೆಗಳು ಕಂಡುಬಂದ ಕಾರಣ, ಯಾರೋ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಎನ್ನುವ ಸಂಶಯ ವ್ಯಕ್ತವಾಗಿದೆ.
ದೇವಸ್ಥಾನವೊಂದರ ಅರ್ಚಕರಾಗಿದ್ದ ಸಿದ್ದಲಿಂಗಪ್ಪ, ತಾನಾಯ್ತು, ತನ್ನ ವೃತ್ತಿ ಆಯ್ತು ಅಂತ ಪೂಜೆ-ಪುನಸ್ಕಾರ ಮಾಡಿಕೊಂಡು ಇದ್ದವರು. ಹೀಗಿರುವಾಗ ಪೂಜೆಗೆಂದು ಪಕ್ಕದ ಊರಿಗೆ ಹೋಗಿದ್ದ ಅವರಿಗೆ ಆಗಿದ್ದೇನು ಎಂಬ ಪ್ರಶ್ನೆ ಗ್ರಾಮಸ್ಥರನ್ನು ಕಾಡತೊಡಗಿದೆ. ಇನ್ನು ಘಟನೆ ಬಗ್ಗೆ ಮಾಹಿತಿ ನೀಡಿದ ಕುಟುಂಬಸ್ಥರು, ಏನಾಯ್ತು ಅಂತ ಗೊತ್ತಿಲ್ಲ. ಪೂಜೆಗೆ ಎಂದು ಹೋದವರು ಈ ಸ್ಥಿತಿಯಲ್ಲಿ ಸಿಕ್ಕಿದ್ದಾರೆ. ಸಿದ್ದಲಿಂಗಪ್ಪ ಅವರಿಗೆ ಯಾರು ಕೂಡ ವೈರಿಗಳು ಇರಲಿಲ್ಲ ಎಂದಿದ್ದಾರೆ. ಸದ್ಯ ಶ್ರೀರಂಗಪಟ್ಟಣದ ಗ್ರಾಮಾಂತರ ಠಾಣಾ ಪೊಲೀಸರು, ಮಂಡ್ಯ ಮಿಮ್ಸ್ನಲ್ಲಿ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಅರ್ಚಕರದ್ದು ಆಕಸ್ಮಿಕ ಸಾವೋ ಅಥವಾ ಹತ್ಯೆಯೋ ಎನ್ನುವುದು ತನಿಖೆಯಿಂದ ಬಯಲಾಗಬೇಕಿದೆ.
ಇದನ್ನೂ ಓದಿ: ಕ್ಷುಲ್ಲಕ ವಿಚಾರಕ್ಕೆ ಗಲಾಟೆ; ಪ್ರೇಯಸಿ ಸೇರಿ ಮೂವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭೂಪ
ಹಾಸ್ಟೆಲ್ನಲ್ಲಿ ಗಲಾಟೆ: ಓರ್ವ ವಿದ್ಯಾರ್ಥಿ ಸಾವು
ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬಳ್ಳಾರಿಯ ಖಾಸಗಿ ಶಾಲೆಗೆ ಸೇರಿದ ಹಾಸ್ಟೆಲ್ನಲ್ಲಿ ನಡೆದಿದೆ. ಗಲಾಟೆ ವೇಳೆ 9ನೇ ತರಗತಿ ವಿದ್ಯಾರ್ಥಿ ಹಲವರ ಮೇಲೆ ರಾಡ್ನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದರೆ, 7 ವಿದ್ಯಾರ್ಥಿಗಳಿಗೆ ಗಾಯವಾಗಿದೆ. ಹಾಸ್ಟೆಲ್ ವಾರ್ಡನ್ ಮೇಲೂ ಹಲ್ಲೆ ನಡೆಸಿ ಬಾಲಕ ಪರಾರಿಯಾಗಿದ್ದು, ಗಾಯಾಳುಗಳನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಳ್ಳಾರಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:41 am, Sun, 8 March 26