ಮೈಸೂರು ದಸರಾ: ಕೆಎಸ್ಆರ್ಟಿಸಿಯಿಂದ 2300ಕ್ಕೂ ಹೆಚ್ಚು ವಿಶೇಷ ಬಸ್ ಸೌಲಭ್ಯ, ಪ್ರವಾಸಿಗರಿಗೆ ಸ್ಪೆಷಲ್ ಪ್ಯಾಕೇಜ್!
ಮೈಸೂರು ದಸರಾ ಕಣ್ತುಂಬಿಕೊಳ್ಳಲು ರಾಜ್ಯದಿಂದ ಸಾಕಷ್ಟು ಜನರು ತೆರಳುತ್ತಾರೆ. ಈ ಹಿನ್ನಲೆ ಕೆಎಸ್ಆರ್ಟಿಸಿ ಚಾಮುಂಡಿ ಭಕ್ತರಿಗೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ. ಕೇವಲ ಕರ್ನಾಟಕ ಮಾತ್ರ ಅಲ್ಲದೇ ಹೊರರಾಜ್ಯದಿಂದ ಬರುವ ಪ್ರಯಾಣಿಕರೂ ಸೌಲಭ್ಯ ಪಡೆಯಬಹುದಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು, ಸೆಪ್ಟೆಂಬರ್ 21: ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ರಾಜ್ಯದ ಜನತೆಗೆ ವಿಶೇಷ ಕೊಡುಗೆ ನೀಡಿದೆ. ದಸರಾ ಕಣ್ತುಂಬಿಕೊಳ್ಳಲು ರಾಜ್ಯದೆಲ್ಲೆಡೆಯಿಂದ ಆಗಮಿಸುವ ಪ್ರಯಾಣಿಕರಿಗಾಗಿ 2300ಕ್ಕೂ ಹೆಚ್ಚು ವಿಶೇಷ ಬಸ್ ಸೌಲಭ್ಯ ಒದಗಿಸಲಾಗಿದೆ. ಸೆಪ್ಟೆಂಬರ್ 26,27 ಮತ್ತು 30 ರಂದು ಬೆಂಗಳೂರಿನ ಕೆಂಪೇಗೌಡ ರಸ್ತೆ, ಶಾಂತಿನಗರ ಬಸ್ ನಿಲ್ಧಾಣ ಸೇರಿದಂತೆ ಮೈಸೂರು ರಸ್ತೆ ನಿಲ್ದಾಣದಿಂದ ರಾಜ್ಯ ಮತ್ತು ಅಂತರಾಜ್ಯದ ಹಲವಾರು ಭಾಗಗಳಿಗೆ ಬಸ್ ಸಂಚಾರ ನಡೆಯಲಿದೆ. ಅಕ್ಟೋಬರ್ 2 ಮತ್ತು 5 ರಂದು ಈ ಬಸ್ಸುಗಳು ಬೆಂಗಳೂರಿಗೆ ಮರಳಲಿವೆ ಎಂದು KSRTC ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಶೇಷ ಬಸ್ಸುಗಳ ಸಂಚರ ಎಲ್ಲೆಲ್ಲಿ?
ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು,ಮಡಿಕೇರಿ, ಮಂಗಳೂರು, ಶಿವಮೊಗ್ಗ, ಕಾರವಾರ, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಈ ಎಲ್ಲಾ ಸ್ಥಳಗಲ್ಲಿ ಸಂಚಾರ ನಡೆಸಲಿವೆ. ಕೇವಲ ಕರ್ನಾಟಕದೊಳಗೆ ಮಾತ್ರವಲ್ಲದೇ ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚಿರಾಪಳ್ಳಿ, ಪುದುಕೋಟೆ, ಪಣಜಿ, ಶಿರಡಿ, ಪೂಣೆ, ಏರ್ನಾಕುಲಂ, ಪಾಲಕ್ಕಾಡ್ ಮುಂತಾದ ತಾಣಗಳಿಗೂ ಈ ಸೌಲಭ್ಯ ದೊರೆಯಲಿದೆ.
ವಿವಿಧ ಭಾಗದಿಂದ ದಸರಾಕ್ಕೆ ಬರುವ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ 260 ಹೆಚ್ಚುವರಿ ಬಸ್ಸುಗಳ ಸೌಲಭ್ಯ ಕಲ್ಪಿಸಲಾಗಿದೆ. ಮೈಸೂರಿನ ಸುತ್ತಮುತ್ತಲಿರುವ ಪ್ರವಾಸಿ, ಪ್ರೇಕ್ಷಣೀಯ ಸ್ಥಾನಗಳಾದ ಚಾಮುಂಡಿ ಬೆಟ್ಟ, ಬೃಂದಾವನ ಉದ್ಯಾನ, ಶ್ರೀರಂಗಪಟ್ಟಣ, ನಂಜನಗೂಡು, ಮಡಿಕೇರಿ ಮತ್ತು ಚಾಮರಾಜನಗರದಂತ ತಾಣಗಳಿಗೆ ಇನ್ನೂ 350 ಬಸ್ಸುಗಳು ಸೇವೆ ಒದಗಿಸಲಿವೆ. ಹೀಗೆ ಮೈಸೂರಿಗೆ ಸೀಮಿತವಾಗಿಯೇ ಒಟ್ಟು 610 ವಿಶೇಷ ಬಸ್ಸುಗಳ ಸೌಲಭ್ಯ ನೀಡುವುದಾಗಿ ನಿಗಮದ ಅಧಿಕಾರಿಗಳು ಹೇಳಿದ್ದಾರೆ. ಇದರೊಂದಿಗೆ “ಫ್ಲೈ ಬಸ್” ಸೇವೆಯೂ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ನೇರವಾಗಿ ಸಂಪರ್ಕ ಕಲ್ಪಿಸಲಿದೆ.
ಇದನ್ನೂ ಓದಿ ಮೈಸೂರು ದಸರಾ: ಎರಡು ದಿನ ಹೊರತು ಪಡಿಸಿ 18 ದಿನ ರಜೆ, ಮಕ್ಕಳಿಗೆ ಹಬ್ಬವೋ ಹಬ್ಬ!
ದಸರಾ ಪ್ರಯುಕ್ತ ವಿಶೇಷ ಪ್ಯಾಕೇಜ್!
ಪ್ರಯಾಣಿಕರ ಅನುಕೂಲಕ್ಕಾಗಿ ಒಂದು ದಿನದ ವಿಶೇಷ ಪ್ಯಾಕೇಜ್ ಟೂರ್ಗಳನ್ನು ಸಹ KSRTC ವ್ಯವಸ್ಥೆ ಮಾಡಿದೆ. ಅದರಲ್ಲಿ “ಗಿರಿದರ್ಶಿನಿ’ ಪ್ರವಾಸ ಪ್ಯಾಕೇಜ್ನಲ್ಲಿ ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗ ಬೆಟ್ಟ, ನಂಜನಗೂಡು, ಚಾಮುಂಡಿ ಬೆಟ್ಟಕ್ಕೆ ಪ್ರಯಾಣಿಸಬಹುದು. ಇದರಲ್ಲಿ ವಯಸ್ಕರಿಗೆ ರೂ. 450 ಮತ್ತು ಮಕ್ಕಳಿಗೆ ರೂ.300 ಶುಲ್ಕವಿರಲಿದೆ.
ಅದೇ ರೀತಿ ಇನ್ನೊಂದು ಜಲದರ್ಶಿನಿ ಪ್ಯಾಕೇಜ್ ಇದ್ದು, ಇದು ಗೋಲ್ಡನ್ ಟೆಂಪಲ್ (ಬೈಲಕುಪ್ಪೆ), ದುಬಾರೆ, ರಾಜಾಸೀಟ್, ಹಾರಂಗಿ, ಕೆ.ಆರ್.ಎಸ್.ಗೆ ಇದರಲ್ಲಿ ವಯಸ್ಕರಿಗೆ ರೂ.500 ಮತ್ತು ಮಕ್ಕಳಿಗೆ ರೂ.350 ಶುಲ್ಕವಿರಲಿದೆ.ಅದರೊಂದಿಗೆ “ದೇವದರ್ಶಿನಿ’ ಪ್ಯಾಕೇಜ್ನಲ್ಲಿ ನಂಜನಗೂಡು, ಬ್ಲಫ್, ಮುಡುಕುತೊರೆ, ತಲಕಾಡು, ಸೋಮನಾಥಪುರ, ಶ್ರೀರಂಗಪಟ್ಟಣ ಇದರಲ್ಲಿ ವಯಸ್ಕರಿಗೆ ರೂ.330 ಮತ್ತು ಮಕ್ಕಳಿಗೆ ರೂ.225 ಶುಲ್ಕವಿರಲಿ. ಸೆಪ್ಟೆಂಬರ್ 27ರಿಂದ ಅಕ್ಟೋಬರ್ 7ರವರೆಗೆ ಮಾತ್ರ ಇವುಗಳ ಸೇವೆ ದೊರೆಯಲಿವೆ.




