ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ಗುಡ್ ನ್ಯೂಸ್: ಸುಗಮ ದರ್ಶನಕ್ಕೆ ಸೂಕ್ತ ವ್ಯವಸ್ಥೆ
ಆಷಾಢ ಮಾಸದ ಆರಂಭದಲ್ಲಿ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭಕ್ತರ ದಟ್ಟಣೆ ಹೆಚ್ಚಾಗಿದೆ. ಮೊದಲ ಶುಕ್ರವಾರದ ದಟ್ಟಣೆಯನ್ನು ಗಮನಿಸಿ, ಜಿಲ್ಲಾಡಳಿತವು ಮೆಟ್ಟಿಲು ಹತ್ತಿ ಬರುವ ಭಕ್ತರನ್ನೂ ಕೂಡ ಧರ್ಮದರ್ಶನ ಸರತಿಯಲ್ಲಿ ಸೇರಿಸುವ ಯೋಜನೆ ರೂಪಿಸಿದೆ. ಲಲಿತಮಹಲ್ನಿಂದ ಉಚಿತ ಬಸ್ ಸೌಲಭ್ಯವನ್ನೂ ಒದಗಿಸಲಾಗಿದೆ. ಇದರಿಂದ ಭಕ್ತರಿಗೆ ಸುಗಮ ದರ್ಶನ ಸಾಧ್ಯವಾಗಲಿದೆ.

ಮೈಸೂರು, ಜುಲೈ 01: ಆಷಾಢ ಮಾಸ (Ashada Masa) ಆರಂಭವಾಗಿದ್ದು, ಮೈಸೂರಿನ ಚಾಮುಂಡೇಶ್ವರಿ (Mysore Chamundeshwari Temple) ಅಮ್ಮನವರ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಆಷಾಢ ಮಾಸದ ಶುಕ್ರವಾರಗಳಂದು (Ashada Friday) ಲಕ್ಷಾಂತರ ಭಕ್ತರು ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆಯುತ್ತಾರೆ. ಆಷಾಢ ಮಾಸದ ಮೊದಲ ಶುಕ್ರವಾರ ಮೆಟ್ಟಿಲು ಹತ್ತಿ ಬಂದ ಭಕ್ತರಿಗೆ ಸಮಸ್ಯೆಯಾದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಡಳಿತ ಕೆಲವು ಸುಧಾರಿತ ಕ್ರಮಕ್ಕೆ ಮುಂದಾಗಿದೆ. ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನಕ್ಕೆ ಮೆಟ್ಟಿಲು ಹತ್ತಿ ಬರುವ ಭಕ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಹೊಸ ಯೋಜನೆಯನ್ನು ರೂಪಿಸಿದೆ.
ಮುಂದಿನ ಆಷಾಢ ಶುಕ್ರವಾರಗಳಂದು ಮೆಟ್ಟಿಲು ಹತ್ತಿ ಬರುವ ಭಕ್ತರನ್ನು ಧರ್ಮ ದರ್ಶನದ ಸರತಿ ಸಾಲಿನಲ್ಲೇ ದರ್ಶನಕ್ಕೆ ಕಳುಹಿಸಲು ತೀರ್ಮಾನಿಸಲಾಗಿದೆ ಎಂದು ಶ್ರೀ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಮೊದಲ ಆಷಾಢ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಹತ್ತಿ ನಿರೀಕ್ಷೆಗೂ ಮೀರಿ ಹೆಚ್ಚು ಭಕ್ತರು ಬಂದಿದ್ದರು. ಇದರಿಂದಾಗಿ ಜನಸಂದಣಿಯಿಂದಾಗಿ ಮೆಟ್ಟಿಲು ಹತ್ತಿ ಬಂದ ಭಕ್ತರು ದೇವಿಯ ದರ್ಶನ ಪಡೆಯಲು ವಿಳಂಬವಾಯಿತು. ಧರ್ಮ ದರ್ಶನ ಅಥವಾ ಟಿಕೆಟ್ ಪಡೆದವರಿಗೆ ತ್ವರಿತಗತಿಯಲ್ಲಿ ದೇವಿಯ ದರ್ಶನವಾಯಿತು.
ಇದನ್ನೂ ನೋಡಿ: ಈ ಬಾರಿ 11 ದಿನ ಮೈಸೂರು ದಸರಾ ಆಚರಣೆ: ವಿಶೇಷತೆ ಏನು ಗೊತ್ತಾ?
ಹೀಗಾಗಿ, ಧರ್ಮ ದರ್ಶನದ ಸರತಿ ಸಾಲಿನಲ್ಲೇ ಮೆಟ್ಟಿಲು ಹತ್ತಿ ಬರುವ ಭಕ್ತರನ್ನು ಕೂಡ ಕಳುಹಿಸಲು ನಿರ್ಧರಿಸಲಾಗಿದೆ. ಉಳಿದಂತೆ ಸುಗಮ ದರ್ಶನಕ್ಕಾಗಿ ಲಲಿತಮಹಲ್ ಪ್ಯಾಲೇಸ್ ಆವರಣದಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಭಕ್ತಾಧಿಗಳು ಉಚಿತ ಬಸ್ ಸೇವೆ ಪಡೆದು ಕಡಿಮೆ ಸಮಯದಲ್ಲಿ ಸುಗಮವಾಗಿ ದೇವರ ದರ್ಶನ ಪಡೆದುಕೊಳ್ಳಬಹುದು. ಆದುದರಿಂದ ಭಕ್ತಾಧಿಗಳು ಉಚಿತ ಬಸ್ ಸೇವೆಯ ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದೆ.
ವಿಶೇಷ ದರ್ಶನ
ಇದೇ ಮೊದಲ ಬಾರಿಗೆ ವಿಶೇಷ ದರ್ಶನಕ್ಕಾಗಿ 2,000 ರೂ.ಗಳ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಎಸಿ ಬಸ್ನಲ್ಲಿ ಬೆಟ್ಟಕ್ಕೆ ತೆರಳಬಹುದು. ಜತೆಗೆ ವಿಶೇಷ ದರ್ಶನದ ವ್ಯವಸ್ಥೆ ಇರಲಿದೆ. ಲಾಡು ಪ್ರಸಾದ, ಮರುಬಳಕೆ ಮಾಡಬಹುದಾದ ವಾಟರ್ ಬಾಟಲ್ ನೀಡಲಾಗುವುದು. ಸಾಮಾನ್ಯ (ಉಚಿತ) ಸರತಿ ಸಾಲು, 300 ರೂ. ಟಿಕೆಟ್ ಸಾಲು ಸಹ ಇರಲಿದೆ. ಯಾವುದೇ ತೊಂದರೆಯಾಗದಂತೆ ಹೊಸ ಕ್ಯೂ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್ಸಿ ಮಹದೇವಪ್ಪ ತಿಳಿಸಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:48 pm, Tue, 1 July 25