ಸುಳ್ಳು ಕೇಸ್, ಸುದೀರ್ಘ ಹೋರಾಟ: ಸರ್ಕಾರಿ ನೌಕರಿಯಲ್ಲಿದ್ದ ಮಹಿಳೆಗೆ ಬಾಕಿ ಭತ್ಯೆ ಸಿಕ್ಕಿದ್ದು ಸತ್ತು 3 ವರ್ಷಗಳ ಬಳಿಕ!
ಸುಳ್ಳು ಪ್ರಕರಣ ಮತ್ತು ಸುದೀರ್ಘ ಕಾನೂನು ಪ್ರಕ್ರಿಯೆ ಓರ್ವ ವ್ಯಕ್ತಿಯ ಜೀವನದ ಮೇಲೆ ಯಾವರೀತಿ ಪರಿಣಾಮ ಬೀರಬಲ್ಲದು ಎಂಬುದಕ್ಕೆ ಮೈಸೂರಿನಲ್ಲಿ ನಡೆದಿರುವ ಘಟನೆಯೊಂದು ನಿದರ್ಶನದಂತಿದೆ. ಒಂದೆರಡಲ್ಲ ಬರೋಬ್ಬರಿ ಒಂದೂವರೆ ದಶಕಕ್ಕೂ ಹೆಚ್ಚು ಕಾಲ ಆ ಕುಟುಂಬ ನ್ಯಾಯಕ್ಕಾಗಿ ಹೋರಾಡಿದೆ. ಅದರ ಪ್ರತಿಫಲವೆಂಬಂತೆ ಕೋರ್ಟ್ ಆದೇಶವೂ ಬಂದಿದೆ. ಆದರೆ ಆ ಕುಟುಂಬಕ್ಕೆ ಏನು ಸಿಗಬೇಕಿತ್ತೋ ಅದು ಸಿಕ್ಕಿದ್ದು ಮಾತ್ರ ಸಂತ್ರಸ್ತೆ ಸತ್ತು ಮೂರು ವರ್ಷಗಳ ಬಳಿಕ!

ಮೈಸೂರು, ಫೆಬ್ರವರಿ 16: ತಮ್ಮದಲ್ಲದ ತಪ್ಪಿಗೆ, ತಾವು ಮಾಡದ 200 ರೂ. ಲಂಚದ ಆರೋಪದಿಂದ 17 ವರ್ಷಗಳ ಕಾಲ ನ್ಯಾಯಕ್ಕಾಗಿ ಹೋರಾಡಿದ ಮೈಸೂರಿನ ಪ್ರಾಮಾಣಿಕ ಮಹಿಳಾ ಸರ್ಕಾರಿ ಅಧಿಕಾರಿ ಮಾಲಿನಿ ಪ್ರಕರಣ ಇದೀಗ ಮತ್ತೆ ಚರ್ಚೆಗೆ ಬಂದಿದೆ. ಲೋಕಾಯುಕ್ತ ಮಾಡಿದ ಲಂಚದ ಆರೋಪದಿಂದಾಗಿ ಅಮಾನತು, ಉದ್ಯೋಗ ಕಳೆದುಕೊಳ್ಳುವಿಕೆ, ಆರೋಗ್ಯ ಸಮಸ್ಯೆಗಳು ಸೇರಿದಂತೆ ಹಲವು ಸಂಕಷ್ಟಗಳನ್ನು ಅನುಭವಿಸಿದ ಬಳಿಕ ಹಲವು ವರ್ಷಗಳ ನಂತರ ನ್ಯಾಯಾಲಯದಿಂದ ನಿರಪರಾಧಿ ಎಂದು ಘೋಷಿಸಲ್ಪಟ್ಟರೂ ಅವರ ಬದುಕಿಗೆ ಆಗಿದ್ದ ಗಂಭೀರ ಹಾನಿಗೆ ಮಾತ್ರ ನ್ಯಾಯ ಸಿಗಲೇ ಇಲ್ಲ. ಮಾಲಿನಿ ಮೃತಪಟ್ಟು ಮೂರು ವರ್ಷಗಳ ನಂತರ ಸರ್ಕಾರದಿಂದ ಬಾಕಿ ಹಣ ಬಿಡುಗಡೆ ಮಾಡಿರುವುದು ಪ್ರಕರಣವನ್ನು ಮತ್ತೆ ಮುನ್ನೆಲೆಗೆ ತಂದಿದೆ.
200 ರೂ. ಆರೋಪದಿಂದ ಆರಂಭವಾದ ಸಂಕಷ್ಟ
ಮೈಸೂರಿನ ತಾಲೂಕು ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಮಾಲಿನಿ ವಿರುದ್ಧ 200 ರೂಪಾಯಿ ಲಂಚದ ಆರೋಪ ಕೇಳಿಬಂದಿತ್ತು. ಅಲ್ಪಸಂಖ್ಯಾತರ ಪ್ರಮಾಣಪತ್ರ ನೀಡುವ ವಿಚಾರದಲ್ಲಿ ನಿಯಮಾನುಸಾರ ಅರ್ಜಿ ತಿರಸ್ಕರಿಸಿದ್ದ ಹಿನ್ನೆಲೆ, ಬಳಿಕ ನಡೆದ ಲೋಕಾಯುಕ್ತ ದಾಳಿ ಸಂದರ್ಭದಲ್ಲಿ ಈ ಪ್ರಕರಣ ತೀವ್ರತೆ ಪಡೆದಿತ್ತು. ಲಂಚ ಸ್ವೀಕರಿಸಿದ್ದ ವ್ಯಕ್ತಿ ಬೇರೆ ಆಗಿದ್ದರೂ, ತನಿಖೆಯಲ್ಲಿ ಮಾಲಿನಿ ಅವರನ್ನು ಸಹ ಆರೋಪಿಯಾಗಿ ಸೇರಿಸಲಾಗಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದರು.
ಇದನ್ನೂ ಓದಿ: 4 ಲಕ್ಷ ರೂ ಲಂಚ ಸ್ವೀಕರಿಸುವಾಗ ಲೋಕಾ ಬಲೆಗೆ ಬಿದ್ದ ಇನ್ಸ್ಪೆಕ್ಟರ್
ಲಂಚ ಪ್ರಕರಣದಿಂದಾಗಿ ಅಮಾನತು, ಸೇವೆಯಿಂದ ವಜಾ
ಪ್ರಕರಣದ ನಂತರ ಮಾಲಿನಿ ಅಮಾನತುಗೊಂಡು, ಪದೋನ್ನತಿ ಹಾಗೂ ವೇತನ ಹೆಚ್ಚಳ ನಿಂತುಹೋಯಿತು. 2007ರಲ್ಲಿ ಸರ್ಕಾರಿ ಸೇವೆಯಿಂದಲೇ ವಜಾಗೊಂಡರು. ಈ ನಡುವೆ ಕುಟುಂಬ ಆರ್ಥಿಕ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಯಿತು.
ಸುದೀರ್ಘ ಕಾನೂನು ಹೋರಾಟ
ಸ್ಥಳೀಯ ನ್ಯಾಯಾಲಯ ಅವರನ್ನು ಅಪರಾಧಿ ಎಂದೇ ಘೋಷಿಸಿ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ ಮಾಲಿನಿ ಹಾಗೂ ಅವರ ಪತಿ ದೇವ ಪ್ರಕಾಶ್, ಹಲವು ವರ್ಷಗಳ ಕಾಲ ನ್ಯಾಯಕ್ಕಾಗಿ ಹೋರಾಟ ನಡೆಸಿದರು. ಪ್ರಕರಣದಲ್ಲಿ 300ಕ್ಕೂ ಹೆಚ್ಚು ವಿಚಾರಣೆಗಳು ನಡೆದಿದ್ದು, ದಶಕಕ್ಕಿಂತ ಹೆಚ್ಚು ಕಾಲ ಕಾನೂನು ಪ್ರಕ್ರಿಯೆ ಮುಂದುವರಿಯಿತು.
ಹೈಕೋರ್ಟ್ನಲ್ಲಿ ನಿರಪರಾಧಿ ಎಂದು ತೀರ್ಪು!
ಕೊನೆಗೆ ಕರ್ನಾಟಕ ಹೈಕೋರ್ಟ್ 2012ರಲ್ಲಿ ನೀಡಿದ ತೀರ್ಪಿನಲ್ಲಿ, ಮಾಲಿನಿ ವಿರುದ್ಧ ಲಂಚ ಪಡೆದ ಅಥವಾ ಕೇಳಿದ್ದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಹೇಳಿ ಅವರನ್ನು ನಿರಪರಾಧಿ ಎಂದು ಘೋಷಿಸಿತು. ಈ ತೀರ್ಪಿನ ಬಳಿಕ ಅವರ ಉದ್ಯೋಗ, ಬಡ್ತಿ ಹಾಗೂ ಸಂಬಳ ಸೇರಿದಂತೆ ಹಲವಾರು ಹಕ್ಕುಗಳನ್ನು ಮರುಸ್ಥಾಪಿಸುವಂತೆ ಆದೇಶಿಸಲಾಗಿತ್ತು.
ಆರೋಗ್ಯ ಹದಗೆಟ್ಟು ಮರಣ
ಪ್ರಕರಣದಿಂದ ಉಂಟಾದ ಮಾನಸಿಕ ಒತ್ತಡದಿಂದ ಮಾಲಿನಿ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದರು. ಕಿಡ್ನಿ ಸಮಸ್ಯೆ ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಅನೇಕ ಬಾರಿ ಡಯಾಲಿಸಿಸ್ ಮಾಡಿಸಿಕೊಂಡಿದ್ದರು. ಬಳಿಕ ಅವರು 2023ರಲ್ಲಿ ನಿಧನರಾದರು.
ಸಾವಿನ ವರೆಗೂ ಬಾರದ ಬಾಕಿ ಹಣ!
ನ್ಯಾಯಾಲಯದ ತೀರ್ಪಿನ ನಂತರವೂ ಬಾಕಿ ಉಳಿದಿದ್ದ ಸಂಬಳ ಹಾಗೂ ಭತ್ಯೆಗಳನ್ನು ಸರ್ಕಾರ ವರ್ಷಗಳ ನಂತರ, ಅವರ ಸಾವಿನ ಬಳಿಕ ಬಿಡುಗಡೆ ಮಾಡಿದೆ. ಇನ್ನೂ ಕೆಲವು ಭತ್ಯೆಗಳು ಬಾಕಿಯಿರುವುದಾಗಿ ಕುಟುಂಬ ಮೂಲಗಳು ತಿಳಿಸಿವೆ. ಈ ಪ್ರಕರಣವು ಸುಳ್ಳು ಆರೋಪ ಮತ್ತು ದೀರ್ಘ ಕಾನೂನು ಪ್ರಕ್ರಿಯೆ ಸರ್ಕಾರಿ ನೌಕರರ ಜೀವನದ ಮೇಲೆ ಯಾವ ರೀತಿಯ ಪರಿಣಾಮ ಉಂಟು ಮಾಡಬಹುದು ಎಂಬ ಚರ್ಚೆ ಹುಟ್ಟುಹಾಕಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:08 pm, Mon, 16 February 26