ಯಾವುದೇ ವ್ಯಕ್ತಿಯ ಖಾಸಗಿ ಆಸ್ತಿಯನ್ನು ವಕ್ಫ್​ಗೆ ವರ್ಗಾಯಿಸಲಾಗುತ್ತಿಲ್ಲ: ಡಿಸಿ ಟಿ.ಭೂಬಾಲನ್​ ಸ್ಪಷ್ಟನೆ

ವಿಜಯಪುರ ಜಿಲ್ಲೆಯಲ್ಲಿ ವಕ್ಫ್‌ ಬೋರ್ಡ್ ಆಸ್ತಿಗಳ ಇಂದೀಕರಣ ವಿಚಾರವಾಗಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ವಿಡಿಯೋ ಹೇಳಿಕೆ ನೀಡಿದ್ದು, ಯಾವುದೇ ಆಸ್ತಿಯ ಹಕ್ಕನ್ನು ನಿರ್ಣಯ ಮಾಡುವ ಅಧಿಕಾರ ಕಂದಾಯ ಇಲಾಖೆ ಅಧಿಕಾರಿಗಳಿಗೆ ಇರಲ್ಲ. ಹಾಗಾಗಿ ಯಾವುದೇ ವದಂತಿಗಳಿಗೆ ರೈತರು ಮತ್ತು ಆಸ್ತಿ ಮಾಲೀಕರು ಕಿವಿಗೊಡಬಾರದು ಎಂದು ಸ್ಪಷ್ಟನೆ ನೀಡಿದ್ದಾರೆ.

ಯಾವುದೇ ವ್ಯಕ್ತಿಯ ಖಾಸಗಿ ಆಸ್ತಿಯನ್ನು ವಕ್ಫ್​ಗೆ ವರ್ಗಾಯಿಸಲಾಗುತ್ತಿಲ್ಲ: ಡಿಸಿ ಟಿ.ಭೂಬಾಲನ್​ ಸ್ಪಷ್ಟನೆ
ಯಾವುದೇ ವ್ಯಕ್ತಿಯ ಖಾಸಗಿ ಆಸ್ತಿಯನ್ನು ವಕ್ಫ್​ಗೆ ವರ್ಗಾಯಿಸಲಾಗುತ್ತಿಲ್ಲ: ಡಿಸಿ ಟಿ.ಭೂಬಾಲನ್​ ಸ್ಪಷ್ಟನೆ
Edited By:

Updated on: Oct 26, 2024 | 9:44 PM

ವಿಜಯಪುರ, ಅಕ್ಟೋಬರ್​ 26: ವಕ್ಫ್ (Waqf Board) ಕಿಚ್ಚು ಜಿಲ್ಲೆಯಲ್ಲಿ ಕಡಿಮೆಯಾಗುತ್ತಿಲ್ಲ. ಜಮೀನುಗಳನ್ನು ವಕ್ಪ್ ಬೋರ್ಡಿಗೆ ಒಳಪಡಿಸಲಾಗುತ್ತಿದೆ ಎಂಬ ಭಯ ರೈತರನ್ನು ಕಾಡುತ್ತಿದೆ. ಹೀಗಿರುವಾಗ ರೈತರಿಗೆ ಸೇರಿದ ಜಮೀನಲ್ಲಿ ಒಂದಿಂಚು ಕೂಡ ಯಾರ ವಶವೂ ಆಗಲು ಬಿಡುವುದಿಲ್ಲ ಎಂದು ಸಚಿವ ಎಂ.ಬಿ ಪಾಟೀಲ್​ ಹೇಳಿದ್ದಾರೆ. ಇದರ ಬೆನ್ನಲ್ಲೇ ಜಿಲ್ಲೆಯ ವಕ್ಫ್ ಆಸ್ತಿ ಇಂದಿಕರಣಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿ ರವಾನೆಯಾಗುತ್ತಿದ್ದು, ಯಾವುದೇ ವದಂತಿಗಳಿಗೆ ರೈತರು-ಆಸ್ತಿ ಮಾಲೀಕರು ಕಿವಿಗೊಡಬಾರದೆಂದು ಡಿಸಿ ಟಿ ಭೂಬಾಲನ್​ ಸ್ಪಷ್ಟನೆ ನೀಡಿದ್ದಾರೆ.

ಆಸ್ತಿಯ ಹಕ್ಕನ್ನು ನಿರ್ಣಯ ಮಾಡುವ ಅಧಿಕಾರ ಕಂದಾಯ ಇಲಾಖೆ ಅಧಿಕಾರಿಗಳಿಗೆ ಇರಲ್ಲ: ಡಿಸಿ ಟಿ ಭೂಬಾಲನ್

ವಿಡಿಯೋ ಮೂಲಕ ಹೇಳಿಕೆ ನೀಡಿರುವ ಡಿಸಿ ಟಿ ಭೂಬಾಲನ್, ಯಾವುದೇ ಆಸ್ತಿಯ ಹಕ್ಕನ್ನು ನಿರ್ಣಯ ಮಾಡುವ ಅಧಿಕಾರ ಕಂದಾಯ ಇಲಾಖೆ ಅಧಿಕಾರಿಗಳಿಗೆ ಇರಲ್ಲ. ಯಾವುದೇ ಖಾಸಗಿ ವ್ಯಕ್ತಿ, ಖಾಸಗಿ ಸಂಸ್ಥೆ, ಸರ್ಕಾರಿ ಸಂಸ್ಥೆಯವರು ಅವರ ಬಳಿಯ ಸೂಕ್ತ ದಾಖಲಾತಿ ಕಂದಾಯ ಇಲಾಖೆಗೆ ನೀಡಬೇಕು. ಸಂಬಂಧಿಸಿದವರಿಗೆ ಕಂದಾಯ ಇಲಾಖೆ ಅಧಿಕಾರಿಗಳು ನೋಟಿಸ್‌ ನೀಡುತ್ತಾರೆ. ನಂತರ ಹಕ್ಕನ್ನು ಖಚಿತಪಡಿಸಿಕೊಂಡು ದಾಖಲಾತಿಗಳನ್ನು ಇಂದೀಕರಣ ಮಾಡುವುದು ಕಂದಾಯ ಇಲಾಖೆ ಅಧಿಕಾರಿಗಳ ಜವಾಬ್ದಾರಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿಜಯಪುರದಲ್ಲಿ ವಕ್ಫ್​ ಕಾಯ್ದೆ ವಿರುದ್ಧ ಹೊತ್ತಿದ ಕಿಚ್ಚು: ಕಾಯ್ದೆಯನ್ನೇ ರದ್ದು ಮಾಡುವಂತೆ ಕೇಂದ್ರಕ್ಕೆ ರೈತರು ಒತ್ತಾಯ

1974ರಲ್ಲಿ ವಕ್ಫ್‌ ಬೋರ್ಡ್ ಗೆಜೆಟ್ ನೋಟಿಫಿಕೇಷನ್‌ ಹೊರಡಿಸಿತ್ತು. ವಕ್ಫ್‌ ಆಸ್ತಿಗಳ ಕಂದಾಯ ಇಲಾಖೆಗೆ ಇಂದೀಕರಣ ಮಾಡಲು ಪಟ್ಟಿ ನೀಡಿದ್ದಾರೆ. ವಿಜಯಪುರ ಜಿಲ್ಲಾ ವಕ್ಫ್‌ ಬೋರ್ಡ್ ಅಧಿಕಾರಿಗಳು ನೀಡಿದ್ದಾರೆ. ದಾಖಲಾತಿ ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ಪ್ರಕ್ರಿಯೆಗಾಗಿ ರೈತರಿಗೆ, ಮಾಲೀಕರಿಗೆ ನೋಟಿಸ್‌ ನೀಡಲಾಗುತ್ತದೆ. ನೋಟಿಸ್‌ಗೆ ಭಯಪಡುವ ಅಗತ್ಯವಿಲ್ಲವೆಂದು ಡಿಸಿ ಧೈರ್ಯ ತುಂಬಿದ್ದಾರೆ.

ಸೂಕ್ತ ದಾಖಲಾತಿ ಕಂದಾಯ ಇಲಾಖೆಯ ಆಧಿಕಾರಿಗಳಿಗೆ ಸಲ್ಲಿಸಲು ಸಲಹೆ ನೀಡಿದ್ದು, ದಾಖಲಾತಿ ಆಧರಿಸಿ ಅಧಿಕಾರಿಗಳು ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ. ಒಂದು ವೇಳೆ ತಹಶೀಲ್ದಾರ್ ನೋಟಿಸ್‌ ನೀಡದೇ ಇಂದೀಕರಣ ಮಾಡಿದರೆ, ರೈತರು-ಮಾಲೀಕರು ಎಸಿಗೆ, ನಂತರ ಡಿಸಿಗೆ ಮೇಲ್ಮನವಿಯನ್ನು ಸಲ್ಲಿಸಬಹುದು. ನೋಟಿಸ್ ಬಂದ ತಕ್ಷಣ ಯಾರ ಹಕ್ಕೂ ತಕ್ಷಣ ಬದಲಾವಣೆಯಾಗಲ್ಲ. ಸೂಕ್ತ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಬೇಕು ಎಂದಿದ್ದಾರೆ.

ರೈತರಿಗೆ ಸೇರಿದ ಜಮೀನಲ್ಲಿ ಒಂದಿಂಚು ಕೂಡ ಯಾರ ವಶವೂ ಆಗಲು ಬಿಡುವುದಿಲ್ಲ: ಸಚಿವ ಎಂ.ಬಿ ಪಾಟೀಲ್​

ಇನ್ನು ಸಚಿವ ಎಂ.ಬಿ ಪಾಟೀಲ್​ ಈ ಬಗ್ಗೆ ಟ್ವೀಟ್ ಮಾಡಿದ್ದು, ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ 10 ಸರ್ವೇ ನಂಬರುಗಳ 11 ಎಕರೆ ಆಸ್ತಿ ಮಾತ್ರ ವಕ್ಫ್ ಆಸ್ತಿ ಎಂದು ಗೆಜೆಟ್ ನೋಟಿಫಿಕೇಷನ್ ಆಗಿದ್ದು, ಅದರಲ್ಲಿ 10 ಎಕರೆ 14 ಗುಂಟೆ ಖಬರಸ್ತಾನ ಇದೆ. ಉಳಿದದ್ದು ಈದ್ಗಾ, ಮಸೀದಿ ಇತ್ಯಾದಿ ಕಟ್ಟಡಗಳಿವೆ ಹಾಗೂ ಈ ಭೂಮಿಯು ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಸೇರಿದ್ದು, ಯಾವುದೇ ರೈತರ ಖಾಸಗಿ ಜಮೀನು ಒಳಪಟ್ಟಿಲ್ಲ ಎಂಬುದನ್ನು ಗಮನಿಸಬೇಕು ಎಂದಿದ್ದಾರೆ.

ಹಜರತ್ ಪೀರ ದಸ್ತಿಗೀರ ಸಾಬ್ ಮೊಹಮ್ಮದ ಚಿಂಗ್ ಸಿಯಾ ತಖಿಯಾ ದರ್ಗಾ ವಿಜಯಪುರ ಮಹಾಲಬಾಗಯತ ಸೇರಿದ ಆಸ್ತಿಯಾಗಿದ್ದು, ಕೆಳಗಡೆ ತಪ್ಪಾಗಿ ಹೊನವಾಡ ಎಂದು ಸೇರಿದೆ. ಇದು ಗೊಂದಲಕ್ಕೆ ಕಾರಣವಾಗಿದೆ. ಇದು ಗೊಂದಲಕ್ಕೆ ಕಾರಣವಾಗಿದೆ. ಈ ಯಾವ ರೈತರಿಗೂ ವಕ್ಫ ಸಮಿತಿ ಅಥವಾ ಸರ್ಕಾರದ ಇಲಾಖೆಯಿಂದ ಯಾವುದೇ ನೋಟಿಸಗಳು ಬಂದಿಲ್ಲ.

ಇದನ್ನೂ ಓದಿ: ವಿಜಯಪುರ ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್​ ಹೆಸರು: ಕಂಗಾಲಾದ ಅನ್ನದಾತ

ಈಗಾಗಲೇ ಜಿಲ್ಲೆಯಲ್ಲಿ ಹಲವು ರೈತರಿಗೆ ವಕ್ಫ್ ಆಸ್ತಿ ನೋಟಿಸು ಬಂದಿದೆ ಎಂಬ ದೂರುಗಳಿದ್ದು, ವಕ್ಫ್ ಸಮಿತಿ ಮತ್ತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಂದಾಯ ಇಲಾಖೆಯಲ್ಲಿ ಎಲ್ಲ ದಾಖಲೆಗಳನ್ನು ಕೂಲಕುಂಷವಾಗಿ ಪರಿಶೀಲಿಸುತ್ತಾರೆ. ಒಂದೇ ಒಂದು ಇಂಚು ರೈತರ ಜಾಗವು ಅನಗತ್ಯವಾಗಿ, ಆಧಾರ, ದಾಖಲೆಗಳಿಲ್ಲದೆ ವಕ್ಫ ಆಸ್ತಿ ಎಂದು ಸೇರಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಈ ಕುರಿತು ಶೀಘ್ರದಲ್ಲೇ ಸಭೆ ನಡೆಸಿ, ಎಲ್ಲ ಗೊಂದಲಗಳಿಗೆ ಉತ್ತರ ನೀಡಲಾಗುವುದು. ಈ ನಿಟ್ಟಿನಲ್ಲಿ ಸಂಸದ ತೇಜಸ್ವಿ ಸೂರ್ಯ ಅವರಾಗಲಿ ಮತ್ತೊಬ್ಬರಾಗಲಿ ರಾಜಕಾರಣ ಮಾಡಿ ಜನಸಾಮಾನ್ಯರಲ್ಲಿ ಇಲ್ಲದ ಗೊಂದಲ, ಆತಂಕ ಮೂಡಿಸುವುದು ಬೇಡ ಎಂದು ಕಿಡಿಕಾರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Ashok Yadalli

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More
Follow Us