ಪೆನ್​​ಡ್ರೈವ್​​​ ವಿಚಾರಕ್ಕೂ ನನಗೂ ಸಂಬಂಧವಿಲ್ಲ: ಎಲ್​ಆರ್​ ಶಿರಾಮೇಗೌಡ

ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಅವರದ್ದು ಎನ್ನಲಾಗಿರುವ ಪೆನ್​​ಡ್ರೈವ್ ರೆಡಿ ಮಾಡಿದ್ದೇ ಡಿ.ಕೆ.ಶಿವಕುಮಾರ್‌. ​ಎಲ್.ಆರ್. ಶಿವರಾಮೇಗೌಡ ಮೂಲಕ ನನಗೆ 100 ಕೋಟಿ ರೂಪಾಯಿ ಆಫರ್ ಮಾಡಿದ್ದರು ಎಂದು ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಆರೋಪಕ್ಕೆ, ಎಲ್.ಆರ್. ಶಿವರಾಮೇಗೌಡ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

ಪೆನ್​​ಡ್ರೈವ್​​​ ವಿಚಾರಕ್ಕೂ ನನಗೂ ಸಂಬಂಧವಿಲ್ಲ: ಎಲ್​ಆರ್​ ಶಿರಾಮೇಗೌಡ
ಎಲ್​ ಆರ್ ಶಿವರಾಮೇಗೌಡ
Follow us
| Updated By: ವಿವೇಕ ಬಿರಾದಾರ

Updated on: May 19, 2024 | 12:22 PM

ಬೆಂಗಳೂರು, ಮೇ 19: ಹಾಸನ ಸಂಸದ ಪ್ರಜ್ವಲ್​ ರೇವಣ್ಣ (Prajwal Revanna) ಅವರದ್ದು ಎನ್ನಲಾಗಿರುವ ಪೆನ್​​ಡ್ರೈವ್ (Pen Drive)​​​ ವಿಚಾರಕ್ಕೂ ನನಗೂ ಸಂಬಂಧವಿಲ್ಲ. ಯಾವುದೋ ವಿಚಾರದಲ್ಲಿ ನನ್ನ ಹೆಸರು ಹೇಳಿದ್ದಾರೆ. ಪ್ರಕರಣದ ತನಿಖೆಗೆ ಎಸ್​ಐಟಿ ರಚನೆ ಮಾಡಲಾಗಿದೆ. ಪ್ರಕರಣದ ತನಿಖೆ ಬೇರೆ ಬೇರೆ ದಿಕ್ಕು ಪಡೆಯುತ್ತಿದೆ. ಪ್ರಕರಣ ಎಲ್ಲೆಲ್ಲೋ ಹೋಗುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar)​ ಅವರು ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ (Devaraje gowda) ​ತಮ್ಮ ಬಳಿ ಕರೆದುಕೊಂಡು ಬನ್ನಿ ಎಂದು ಹೇಳಿರಲಿಲ್ಲ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿದರು.

“ನಾಲ್ಕು ಮಂತ್ರಿಗಳ ಕಮಿಟಿ ಮಾಡಿ, ಪೆನ್‌ಡ್ರೈವ್‌ ರೆಡಿ ಮಾಡಿದ್ದೇ ಡಿ.ಕೆ.ಶಿವಕುಮಾರ್‌. ಮೋದಿ, ಬಿಜೆಪಿ, ಕುಮಾರಸ್ವಾಮಿಗೆ ಕೆಟ್ಟ ಹೆಸರು ತರಲು ನನಗೆ ಎಲ್.ಆರ್. ಶಿವರಾಮೇಗೌಡ ಮೂಲಕ ನನಗೆ 100 ಕೋಟಿ ರೂಪಾಯಿ ಆಫರ್ ಮಾಡಿದ್ದರು. ಡಿ.ಕೆ. ಶಿವಕುಮಾರ್ ನೇರವಾಗಿ ನನ್ನ ಜೊತೆಗೆ ಮಾತನಾಡಿಲ್ಲ” ಎಂದು ವಕೀಲ ದೇವರಾಜೇಗೌಡ ಆರೋಪ ಮಾಡಿದ್ದರು”

ದೇವರಾಜೇಗೌಡ ಆರೋಪಕ್ಕೆ ಎಲ್​. ಆರ್.​ ಶಿವರಾಮೇಗೌಡ ಸುದ್ದಿಗೋಷ್ಠಿ ನಡೆಸಿ, ದೇವರಾಜೇಗೌಡ ಜೊತೆ ವ್ಯವಹರಿಸುವಾಗ ಎಚ್ಚರ. ಆತ ನಾಲಾಯಕ್ ವ್ಯಕ್ತಿ, ಒಬ್ಬ ಫ್ರಾಡ್. ಪೆನ್​​ಡ್ರೈವ್​ ವ್ಯಾಪಾರಕ್ಕಿಟ್ಟವನೇ ಈ ದೇವರಾಜೇಗೌಡ. ನನಗೂ ಈ ದೇವರಾಜೇಗೌಡಗೂ ಸಂಬಂಧ ಇಲ್ಲ. ಪ್ರಾಮಾಣಿಕವಾಗಿ ಈ ವಿಚಾರದಲ್ಲಿ ತನಿಖೆಯಾಗಲಿ ಎಂದರು.

ಪೆನ್​​ಡ್ರೈವ್​​​ ಹೊರಗಿಟ್ಟಿದ್ದು ದೇವರಾಜೇಗೌಡ ಮತ್ತು ಕಾರ್ತಿಕ್. ಹೀಗಾಗಿ ಈ ಇಬ್ಬರನ್ನೂ ​ವಿಚಾರಣೆ ನಡೆಸಬೇಕು. ಈ ಪ್ರಕರಣಕ್ಕೂ ಡಿಕೆ ಶಿವಕುಮಾರ್​ ಅವರಿಗಾಗಲಿ ಮತ್ತು ನನಗಾಗಲಿ ಯಾವುದೆ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಕೇಸ್: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅರೆಸ್ಟ್ ವಾರಂಟ್

ದೇವರಾಜೇಗೌಡ ನನಗೆ ಫೋನ್ ಮಾಡಿ, ಡಿಕೆ ಶಿವಕುಮಾರ್​ ಅವರನ್ನು ಭೇಟಿ ಮಾಡಿಸುವಂತೆ ಹೇಳಿದ್ದ. ನಾನು ಆಗಲಿ ಎಂದು ಫೋನ್​ನಲ್ಲಿ ಹೇಳಿದ್ದೆ. ಈ ಮಾತನ್ನೇ ಇಟ್ಟುಕೊಂಡು ದೇವರಾಜೇಗೌಡ ಸುಳ್ಳು ಮಾಹಿತಿ ನೀಡಿದ್ದಾನೆ. ದೇವರಾಜೇಗೌಡ ಏ.29ರಂದು ಬೆಂಗಳೂರಿನ ಎಂ.ಜಿ.ರಸ್ತೆಯ ಬೌರಿಂಗ್​ ಕ್ಲಬ್​ನಲ್ಲಿ ನಮ್ಮನ್ನು ಭೇಟಿ ಮಾಡಿದ್ದ ಎಂದು ತಿಳಿಸಿದರು.

ಒಕ್ಕಲಿಗ ನಾಯಕತ್ವಕ್ಕಾಗಿ ಡಿಕೆ ಶಿವಕುಮಾರ್​ ಈ ರೀತಿ ಮಾಡುತ್ತಿದ್ದಾರೆ ಎಂಬ ಹೆಚ್​ಡಿ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರಿಗೆ ಈಗಲೂ ಗೌರವ ಕೊಡುತ್ತೇನೆ. ಹೆಚ್​ಡಿ ದೇವೇಗೌಡರು ಮತ್ತು ಕುಮಾರಸ್ವಾಮಿ ಮೇಲೆ ನನಗೆ ಅಧಿಕಾರವಿದೆ. ಒಕ್ಕಲಿಗ ನಾಯಕ ವಿಚಾರ ಬರುವುದಿಲ್ಲ. ಒಂದು ಕಡೆ ಕುಮಾರಸ್ವಾಮಿ, ಮತ್ತೊಂದು ಕಡೆ ಡಿಕೆ ಶಿವಕುಮಾರ್​ ಪರ ಒಕ್ಕಲಿಗರು ಇದ್ದಾರೆ. ಅಧಿಕಾರದಲ್ಲಿ‌ ಇದ್ದಾಗ ಬೇಕಾದವರ ಕಡೆ ಹೋಗುತ್ತಾರೆ ಇದು ಸಾಮಾನ್ಯ. ಇಬ್ಬರೂ ನಾಯಕರುಗಳೇ, ಒಕ್ಕಲಿಗ ನಾಯಕ ವಿಚಾರ ಈ ಪ್ರಕರಣದಲ್ಲಿ ತರುವುದು ಬೇಡ ಎಂದರು.

ಬಿಜೆಪಿಗೆ ರಾಜೀನಾಮೆ

ಬಿಜೆಪಿಗೆ ರಾಜೀನಾಮೆ ನೀಡಿದ್ದೇನೆ. ಮುಂದೆ ಯಾವ ಪಕ್ಷಕ್ಕೆ ಸೇರುತ್ತೇನೆ ಅಂತ ಹೇಳುತ್ತೇನೆ. ಅಧಿಕಾರ ಕೊಡುತ್ತಾರೆ ಅಂತ ಜೆಡಿಎಸ್​ಗೆ ಸೇರಿದೆ. ಆಮೇಲೆ ರುಬ್ಬಿ ಹೊರಗಡೆಯೂ ಕಳುಹಿಸಿದ್ದಾರೆ. 25 ವರ್ಷ ಆಯ್ತು ಶಾಸಕ ಗಿರಿ ಹೋಗಿ. ನಾನು ಮೂಲತಃ ಕಾಂಗ್ರೆಸ್ ವ್ಯಕ್ತಿ. ಯೂಥ್ ಕಾಂಗ್ರೆಸ್​ನಲ್ಲೂ ಇದ್ದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ರಾಜೀನಾಮೆ ಸಲ್ಲಿಸಿದ್ದೇನೆ. ಸದ್ಯದರಲ್ಲೇ ನನ್ನ ನಿರ್ಣಯ ತಿಳಿಸುತ್ತೇನೆ ಎಂದು ತಿಳಿಸಿದರು.

ನಾನು‌ ಮಾಜಿ‌ ಸಂಸದ. ರಾಜ್ಯದಲ್ಲಿ ನಾನಾ ಸಮಸ್ಯೆ ಇದೆ. ಬಹಳ ಕಿತ್ತು ತಿನ್ನುವ ವಿಚಾರ ಇದೆ. ಸಂಕ್ಷಿಪ್ತವಾಗಿ ತನಿಖೆ ಆಗ್ಬೇಕಾದರೆ ನಿಮ್ಮ ಸಹಕಾರ ಬೇಕು. ಈ ಪ್ರಕರಣಕ್ಕೂ‌ ಮುನ್ನವೇ ರಾಜೀನಾಮೆ ಕೊಟ್ಟಿದ್ದೇನೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬರುವುದಿಲ್ಲ ಅಂತ ಬಸವರಾಜ ಬೊಮ್ಮಾಯಿಗೆ ಹೇಳಿದ್ದೆ. ಚುನಾವಣೆ ಬಳಿಕ‌ ಸರ್ಕಾರವೂ ಹೋಯ್ತು, ಅವರು ಹೋದರು. ಆ ಕಡೆ ಕಾಂಗ್ರೆಸ್ ಮತ್ತು ಜೆಡಿಎಸ್ ಇಲ್ಲ. ಬಿಎಸ್​ ಯಡಿಯೂರಪ್ಪ ಅವರು ಪಕ್ಷಕ್ಕೆ‌ ಕರೆದುಕೊಂಡು ಹೋಗಿ ಸಂಸದ ಮಾಡಿದರು. ಮೈತ್ರಿಯಿಂದ ಅಲ್ಲಿ ಪಾರ್ಟಿ ಕಟ್ಟೋಕೆ ಆಗುತ್ತಾ? ಎಂದು ಪ್ರಶ್ನಿಸಿದರು.

ನಾಗಮಂಲದಲ್ಲಿ ನನ್ನ ಪತ್ನಿಗೆ ಬೇಡ ಅಂದ್ರೂ ಟಿಕೆಟ್ ಕೊಟ್ಟರು. ಮಗನಿಗೆ ಟಿಕೆಟ್ ಕೊಡಿ ಅಂದ್ರೆ ಕೊಡಲಿಲ್ಲ. ಪುಕ್ಸಟ್ಟೆ ಕೊಲೆ ಕೇಸ್ ಹಾಕಿಸಿಕೊಂಡು ಜೈಲಿಗೆ ಹೋಗಿ ಬಂದವನು. ನಾನು ಯಾರಿಗೂ ಹೆದರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ