ಕನ್ನಡಿಗರ ಎಚ್ಚರಿಕೆಯಿಂದ ರದ್ದಾಗಿದ್ದ ರೈಲ್ವೆ ಬಡ್ತಿ ಪರೀಕ್ಷೆಗೆ ಮರುದಿನಾಂಕ ನಿಗದಿ, ಈ ಬಾರಿಯೂ ಕನ್ನಡಕ್ಕೆ ಕೊಕ್
ರೈಲ್ವೆ ಇಲಾಖೆಯ ಮುಂಬಡ್ತಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಿರುವುದನ್ನು ವಿರೋಧಿಸಿ ನಡೆದ ಕನ್ನಡಿಗರ ಹೋರಾಟಕ್ಕೆ ಮಣಿದಿದ್ದು, ಪರೀಕ್ಷೆಯನ್ನು ರೈಲ್ವೆ ಇಲಾಖೆ ದಿಢೀರ್ ರದ್ದುಗೊಳಿಸಿ ಆದೇಶಿಸಿತ್ತು. ಆದ್ರೆ, ಇದೀಗ ಮತ್ತೆ ಪ್ರಮೋಷನ್ ಎಕ್ಸಾಂಗೆ ರೈಲ್ವೆ ಇಲಾಖೆ ಮರುದಿನಾಂಕ ನಿಗದಿ ಮಾಡಿದ್ದು, ಈ ಬಾರಿಯೂ ಸಹ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ಹೀಗಾಗಿ ರೈಲ್ವೆ ಇಲಾಖೆ ಮತ್ತೆ ಕನ್ನಡ ಸಂಘಟೆಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಎಕ್ಸಾಂ ದಿನದಂದು ನಡೆಯುವ ಅನಾಹುತಗಳಿಗೆ ನಾವು ಹೊಣೆ ಅಲ್ಲ ಎಂದು ಎಚ್ಚರಿಕೆ ನೀಡಿವೆ.

ಬೆಂಗಳೂರು, (ಜೂನ್ 16): ರೈಲ್ವೆ ಇಲಾಖೆ (Railway department) ತನ್ನ ಹಠಮಾರಿತನ ಮುಂದುವರೆಸಿದೆ. ಹೌದು.. ನೈಋತ್ಯ ರೈಲ್ವೆ (Southwestern Railway) ಮೈಸೂರು ವಿಭಾಗದ ಗೂಡ್ಸ್ ಟ್ರೇನ್ ಮ್ಯಾನೇಜರ್ ಹುದ್ದೆಯ ಪದೋನ್ನತಿ ಪರೀಕ್ಷೆಯಲ್ಲಿ ಮತ್ತೊಮ್ಮೆ ಕನ್ನಡವನ್ನು (Kannada) ಕಡೆಗಣಿಸಲಾಗಿದೆ. ಈ ಹಿಂದೆ ಕನ್ನಡದಲ್ಲಿ ಪರೀಕ್ಷೆಗೆ ಅವಕಾಶ ನೀಡಿಲ್ಲವೆಂದು ಕನ್ನಡಪರ ಸಂಘಟನೆಗಳ ಖಡಕ್ ಎಚ್ಚರಿಕೆ ಬೆನ್ನಲ್ಲೇ ಎಕ್ಸಾಂ ರದ್ದುಗೊಳಿಸಿತ್ತು. ಇದೀಗ ಮತ್ತೊಮ್ಮೆ ಕನ್ನಡಕ್ಕೆ ಕೊಕ್ ನೀಡಿ ಜೂನ್ 25ರಂದು ಪರೀಕ್ಷೆಗೆ ಮರುದಿನಾಂಕ ನಿಗದಿ ಮಾಡಿದ್ದು, ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನು ಖಂಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆಯು ಜೂನ್ 25ರಂದು ನಿಗದಿಯಾಗಿರುವ ಪರೀಕ್ಷೆಯನ್ನು ಯಾವುದೇ ಕಾರಣಕ್ಕೂ ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.
ಮುಖ್ಯಾಂಶಗಳು
- ಕನ್ನಡಿಗರ ಎಚ್ಚರಿಕೆಗೆ ರದ್ದಾಗಿದ್ದ ರೈಲ್ವೆ ಬಡ್ತಿ ಪರೀಕ್ಷೆಗೆ ಮರುದಿನಾಂಕ ನಿಗದಿ
- ಇದೇ ಜೂನ್ 25ರಂದು ಪರೀಕ್ಷೆಗೆ ಅಧಿಸೂಚನೆ
- ಈ ಬಾರಿಯೂ ಕನ್ನಡಕ್ಕೆ ಅವಕಾಶ ನೀಡದೇ ಪರೀಕ್ಷೆಗೆ ಮರುದಿನಾಂಕ ನಿಗದಿ
- ರೈಲ್ವೆ ಇಲಾಖೆ ನಡೆಗೆ ಮತ್ತೆ ಸಿಡಿದೆದ್ದ ಕರವೇ ನಾರಾಯಣಗೌಡ
ಕಳೆದ ಬಾರಿಯೂ ರೈಲ್ವೆ ಬಡ್ತಿ ಪರೀಕ್ಷೆಯಲ್ಲೂ ಇಂಗ್ಲಿಷ್, ಹಿಂದಿಯಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಆದ್ರೆ, ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿರಲಿಲ್ಲ. ಇದರಿಂದ ಬೆಂಗಳೂರು, ಹುಬ್ಬಳ್ಳಿ, ಮೈಸೂರಿನಲ್ಲಿ ನಡೆಯುತ್ತಿದ್ದ ಪರೀಕ್ಷಾ ಕೇಂದ್ರಗಳಿಗೆ ಕರವೇ ಕಾರ್ಯಕರ್ತರು ನುಗ್ಗಿದ್ರು, ನಂತರ ರೈಲ್ವೆ ಇಲಾಖೆ ಪರೀಕ್ಷೆಯನ್ನು ಮುಂದೂಡಿದ್ದರು. ಇದೀಗ ರೈಲ್ವೆ ಇಲಾಖೆ ತನ್ನ ಹಠಮಾರಿತನ ಮುಂದುವರೆಸಿದೆ.
ಇದನ್ನೂ ನೋಡಿ: ಕರವೇ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ: ಗೂಡ್ಸ್ ಮ್ಯಾನೇಜರ್ ಎಲ್ಡಿಸಿ ಹುದ್ದೆಗಳ ಮುಂಬಡ್ತಿ ಪರೀಕ್ಷೆ ಮುಂದೂಡಿಕೆ
ಕರವೇ ನಾರಾಯಣಗೌಡ ಖಡಕ್ ಎಚ್ಚರಿಕೆ
ನೈರುತ್ಯ ರೈಲ್ವೆಯ ಆಫೀಸ್ ಸೂಪರಿಂಟೆಂಡೆಂಟ್-39ಪೋಸ್ಟ್,ಸೀನಿಯರ್ ಕ್ಲರ್ಕ್- 25 ಮತ್ತು ಇಂಟರ್ಮೀಡಿಯೆಟ್ ಅಪ್ರೆಂಟಿಸ್ ಮೆಕ್ಯಾನಿಕ್ಸ್- 9 ಪೋಸ್ಟ್ ಸೇರಿದಂತೆ ಒಟ್ಟು 73 ಬಡ್ತಿ ಪೋಸ್ಟ್ ಗಾಗಿ ಎಕ್ಸಾಂ ನಡೆಯುತ್ತಿದೆ. ಆದರೆ ನೈರುತ್ಯ ರೈಲ್ವೆ ವಿಭಾಗ ಎಕ್ಸಾಂ ಅನ್ನು ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತ್ರ ಬರೆಯಲು ಅವಕಾಶ ನೀಡಿದ್ದಾರೆ. ನೈಋತ್ಯ ರೈಲ್ವೆ ಮುಖ್ಯಸ್ಥರು ಈ ಮೂರು ಸುತ್ತೋಲೆಯ ದೋಷವನ್ನು ಸರಿಪಡಿಸಿ, ಪರೀಕ್ಷೆಗಳನ್ನು ಕನ್ನಡದಲ್ಲೂ ನಡೆಸುವಂತೆ ಆದೇಶ ಹೊರಡಿಸಬೇಕು. ಇಲ್ಲದಿದ್ದರೆ ಜೂನ್ 25 ರಂದು ಪರೀಕ್ಷೆಯನ್ನು ಯಾವುದೇ ಕಾರಣಕ್ಕೂ ನಡೆಸಲು ಬಿಡುವುದಿಲ್ಲ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಖಡಕ್ ಆಗಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು, ಕನ್ನಡಿಗರ ಹಕ್ಕುಗಳನ್ನು ಹೊಸಕಿ ಹಾಕುವ ರೈಲ್ವೆ ಇಲಾಖೆಯ ಈ ನಿರ್ಧಾರದ ವಿರುದ್ಧ ಕರವೇ ಉಗ್ರ ಹೋರಾಟ ನಡೆಸಲಿದೆ. ಜೂ. 25ರಂದು ಬೆಂಗಳೂರು, ಮೈಸೂರು, ಹುಬ್ಬಳ್ಳಿ ಸೇರಿದಂತೆ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಂಘಟನೆ ಕಾರ್ಯಕರ್ತರು ಉಗ್ರ ಹೋರಾಟ ನಡೆಸಲಿದ್ದಾರೆ. ಅಲ್ಲಿ ಆಗುವ ಅನಾಹುತಗಳಿಗೆ ಕರವೇ ಜವಾಬ್ದಾರಿಯಲ್ಲ. ರೈಲ್ವೆ ಆಡಳಿತವು ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಪರಿಣಾಮಗಳು ತೀವ್ರವಾಗಿರುತ್ತವೆ ಎಂದು ಎಚ್ಚರಿಸಿದ್ದಾರೆ.
ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಜೂ.4ರಂದು ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಗೂಡ್ಸ್ ಟ್ರೇನ್ ಮ್ಯಾನೇಜರ್ ಹುದ್ದೆಯನ್ನು ಲೆವೆಲ್-5ರಲ್ಲಿ ಶೇ.15 ಎಲ್ಡಿಸಿಇ ಕೋಟಾ ಅಡಿಯಲ್ಲಿ ಭರ್ತಿ ಮಾಡಲಾಗುತ್ತಿದೆ. ಅದಕ್ಕಾಗಿ ಜೂ.25ರಂದು ಕಂಪ್ಯೂಟರ್ ಬೇಸ್ಡ್ ಟೆಸ್ಟ್ (ಸಿಬಿಟಿ) ಪದೋನ್ನತಿ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಸಿದ್ಧಪಡಿಸಲಾಗುತ್ತಿದ್ದು, ಕನ್ನಡ ಭಾಷೆಗೆ ಅವಕಾಶ ನೀಡಿಲ್ಲ. ಇದು ಕರ್ನಾಟಕದ ಕನ್ನಡಿಗರ ಮೇಲೆ ನಡೆಸುತ್ತಿರುವ ಘೋರ ಅನ್ಯಾಯ ಮತ್ತು ಭಾಷಾ ಹಕ್ಕುಗಳನ್ನು ಕಿತ್ತುಕೊಳ್ಳುವ ದೊಡ್ಡ ಸಂಚಾಗಿದೆ ಎಂದು ನಾರಾಯಣಗೌಡ ಕಿಡಿಕಾರಿದ್ದಾರೆ.




