ರಾಮನಗರದಲ್ಲಿ ನಕಲಿ ಖಾಸಗಿ ಶಾಲೆಗಳ ಹಾವಳಿ: ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ, ಪೋಷಕರು ಆಕ್ರೋಶ
ರಾಮನಗರದಲ್ಲಿ ಅನುಮತಿ ಪಡೆಯದ ಖಾಸಗಿ ಶಾಲೆಗಳು ಹೆಚ್ಚುತ್ತಿವೆ. ಅಕ್ರಮವಾಗಿ ಹೆಚ್ಚುವರಿ ತರಗತಿಗಳನ್ನು ನಡೆಸುತ್ತಿವೆ ಮತ್ತು ಸರಿಯಾದ ದಾಖಲೆಗಳನ್ನು ನೀಡುತ್ತಿಲ್ಲ. ಪೋಷಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯ ಒಂದು ಶಾಲೆಯನ್ನು ಮುಚ್ಚಿಸಲಾಗಿದ್ದು, ಇನ್ನೊಂದು ಶಾಲೆಯ ವಿರುದ್ಧ ಎಫ್ಐಆರ್ ದಾಖಲಾಗಿದೆ.

ರಾಮನಗರ, ಜೂನ್ 19: ಶಾಲೆ ಅಂದರೆ ಮಕ್ಕಳ ಪಾಲಿನ ದೇವಸ್ಥಾನವಿದ್ದಂತೆ. ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಕೇಂದ್ರ. ಆದರೆ ಕೆಲವು ಶಿಕ್ಷಣ ಸಂಸ್ಥೆಗಳು (Educational institutions) ಹಣದಾಸೆಗೆ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿವೆ. ಅದರಲ್ಲೂ ರೇಷ್ಮೆನಗರಿ ರಾಮನಗರದಲ್ಲಿ ಅನುಮತಿ ಪಡೆಯದೇ ನಕಲಿ ಖಾಸಗಿ ಶಾಲೆಗಳನ್ನ (private schools) ನಡೆಸಲಾಗುತ್ತಿದೆ.
ಅನುಮತಿ ಪಡೆಯದೇ ಆರು, ಏಳನೇ ತರಗತಿ ನಡೆಸುತ್ತಿರುವ ಶಾಲೆ
ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ಅನಧಿಕೃತ ಖಾಸಗಿ ಶಾಲೆಗಳು ತಲೆ ಎತ್ತಿದ್ದು, ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿವೆ. ಕೆಲವು ಶಿಕ್ಷಣ ಸಂಸ್ಥೆಗಳ ಹಣದಾಸೆಗೆ ಸಾಕಷ್ಟು ಅಕ್ರಮ ಎಸಗುತ್ತಿವೆ. ಅದಕ್ಕೆ ಸ್ವಷ್ಟ ನಿದರ್ಶನವೆಂಬಂತೆ ರಾಮನಗರದ ಜಿಯಾವುಲ್ಲಾ ಬ್ಲಾಕ್ನ ಸುಲೆಮಾನ ಹಾಗೂ ಶಬ್ರಿನ್ ತಾಜ್ ಎಂಬುವವರು ತಮ್ಮ ಮಗಳನ್ನ ತಮ್ಮ ಏರಿಯಾದಲ್ಲೇ ಇದ್ದ ನೊಬೆಲ್ ಇಂಗ್ಲಿಷ್ ಶಾಲೆಗೆ ಸೇರಿಸಿದ್ದರು. ಕೇಲವ ಐದನೇ ತರಗತಿವರೆಗೆ ಮಾತ್ರ ಅನುಮತಿಯನ್ನು ಪಡೆದಿರುವ ಶಾಲೆ ಅಕ್ರಮವಾಗಿ ಆರು ಮತ್ತು ಏಳನೇ ತರಗತಿಗಳನ್ನ ನಡೆಸುತ್ತಿರುವುದಾಗಿ ತಮ್ಮ ಮಗಳು ಆರನೇ ತರಗತಿಗೆ ಬಂದ ನಂತರ ಗೊತ್ತಾಗಿದೆ.
ಇದನ್ನೂ ಓದಿ: ರಾಮನಗರದಲ್ಲಿ ನಕಲಿ ಕ್ಲಿನಿಕ್ಗಳ ಹಾವಳಿ: ನಕಲಿ ವೈದ್ಯನ ಚಿಕಿತ್ಸೆಯಿಂದ 6 ತಿಂಗಳ ಮಗು ಸಾವು
ಹೀಗಾಗಿ ಬೇರೆ ಶಾಲೆಗೆ ಸೇರಿಸಲು ಶಾಲೆಯ ಟಿ.ಸಿಯನ್ನ ಕೇಳಿದರೆ ಬೇರೊಂದು ಸರ್ಕಾರಿ ಉರ್ದು ಶಾಲೆಯ ಟಿಸಿ ಕೊಟ್ಟು ಕಳುಹಿಸಿದ್ದಾರೆ. ನಮ್ಮ ಮಗಳು ಐದನೇ ತರಗತಿವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ್ದು ಅದಕ್ಕೆ ಯಾವುದೇ ದಾಖಲೆಗಳನ್ನ ಕೊಟ್ಟಿಲ್ಲವೆಂದು ಶಬ್ರಿನ್ ತಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅದೇ ರೀತಿ ನಗರದ ಗುಡ್ ಹೋಪ್ ಎಂಬ ಖಾಸಗಿ ಶಾಲೆ ಸರ್ಕಾರದಿಂದ ಅನುಮತಿಯನ್ನು ಪಡೆಯದೇ ಕಳೆದ ಹಲವು ವರ್ಷದಿಂದ ಶಾಲೆಯನ್ನ ನಡೆಸುತ್ತಿದೆ. ಈ ಶಾಲೆಗೆ ಸೇರಿದ ಪೋಷಕರು ತಮ್ಮ ಮಕ್ಕಳನ್ನ ಬೇರೊಂದು ಶಾಲೆಗೆ ಸೇರಿಸಲು ಆ ಶಾಲೆಯಿಂದ ಆನ್ ಲೈನ್ ಟಿ.ಸಿ ಯನ್ನು ಸಹ ಕೊಟ್ಟಿಲ್ಲ. ಹಣದಾಸೆಗೆ ಸಂಬಂಧಪಟ್ಟ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆಯದೇ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಪೋಷಕರಾದ ಸಲಿಂ ಪಾಷ ಆರೋಪಿಸಿದ್ದಾರೆ.
ಇದನ್ನೂ ಓದಿ: ಮರುನಾಮಕರಣಗೊಂಡರೂ ಬದಲಾಗಿಲ್ಲ ರಾಮನಗರದ ಸರ್ಕಾರಿ ಕಚೇರಿಗಳ ನಾಮಫಲಕ
ಇನ್ನು ಈ ಬಗ್ಗೆ ಬಿಇಒ ಸೋಮಲಿಂಗಯ್ಯ ಅವರನ್ನ ಕೇಳಿದರೆ, ಈಗಾಗಲೇ ನೊಬಲ್ ಶಾಲೆಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹುಡ್ ಹೋಪ್ ಶಾಲೆಯನ್ನ ಮುಚ್ಚಿಸಲಾಗಿದೆ ಎಂದು ಹೇಳಿದ್ದಾರೆ. ನಕಲಿ ಖಾಸಗಿ ಶಾಲೆಗಳ ಹಣದಾಹಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರು ಪರದಾಡುವಂತೆ ಆಗಿದೆ. ಈಗಲಾದರೂ ಶಿಕ್ಷಣ ಇಲಾಖೆ ಹಾಗೂ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮವಹಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







